ದೈವಬಲವಿದ್ದರೆ ಶ್ರೀಕೃಷ್ಣನನ್ನು ನಿಮ್ಮ ಕಡೆ ತಿರುಗಿಸಿ ಶ್ರೀಗಳೇ
ರಾಣೆಬೆನ್ನೂರು, ಅ 28: ಕುರುಬರಿಗೂ ವೈಷ್ಣವ ದೀಕ್ಷೆ ನೀಡಲು ಸಿದ್ದ ಎನ್ನುವ ಉಡುಪಿ ಪೇಜಾವರ ಶ್ರೀಗಳ ಹೇಳಿಕೆ ಹಲವು ಆಯಾಮಗಳಲ್ಲಿ ಟೀಕೆಯನ್ನು ಎದುರಿಸುವಂತಾಗಿದೆ. ವೈಷ್ಣವರೆಂದು ಜಂಬ ಕೊಚ್ಚಿಕೊಳ್ಳುವ ನಿಮಗೆ ದೈವಬಲವಿದೆಯೇ ಎಂದು ಕಾಗಿನೆಲೆ ಪೀಠದ ನಿರಂಜನಾನಂದಪುರಿ ಸ್ವಾಮೀಜಿ ತಿರುಗೇಟು ನೀಡಿದ್ದಾರೆ.
ಕುರುಬರಿಗೆ ವೈಷ್ಣವ ದೀಕ್ಷೆ ನೀಡಲು ನೀವು ಯಾರು? ಬನ್ನಿ ನಿಮಗೇ ನಾವು ಶೈವ ದೀಕ್ಷೆಯನ್ನು ನೀಡುತ್ತೇವೆ. ಅಂದು ನಿಮ್ಮ ಸಮುದಾಯದವರ ಅವಹೇಳನದಿಂದ ಬೇಸತ್ತು ದೇವಾಲಯದ ಹೊರಗಡೆಯಿಂದ ಕನಕದಾಸರು ಶ್ರೀಕೃಷ್ಣನ ದರ್ಶನ ಮಾಡಿದರು. ಕನಕನ ಭಕ್ತಿಗೆ ಮೆಚ್ಚಿದ ಪರಮಾತ್ಮ ನಿಮಗೆ ಬೆನ್ನು ಹಾಕಿ ಕನಕನ ಕಡೆ ತಿರುಗಿದ.
ನಿಮಗೆ ದೈವಬಲ ಇದ್ದರೆ ಕನಕನ ಕಡೆ ಮುಖ ಮಾಡಿದ ಶ್ರೀಕೃಷ್ಣನನ್ನು ನಿಮ್ಮ ಕಡೆ ತಿರುಗಿಸಿ ನೋಡೋಣ ಎಂದು ಕಾಗಿನೆಲೆ ಕನಕ ಪೀಠದ ನಿರಂಜನಾನಂದಪುರಿ ಸ್ವಾಮೀಜಿ ತಿರುಗೇಟು ನೀಡಿದ್ದಾರೆ.
ವಿವಿಧ ಕುರುಬ ಸಂಸ್ಥೆಗಳ ಆಶ್ರಯದಲ್ಲಿ ಭಾನುವಾರ (ಅ 27) ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸುತ್ತಾ ಮಾತನಾಡುತ್ತಿದ್ದ ಕಾಗಿನೆಲೆ ಶ್ರೀಗಳು, ನಿಮಗೆ ಗೊತ್ತಿಲ್ಲದ ವಿಚಾರವನ್ನು ಮತ್ತು ಪದ್ದತಿಯನ್ನು ಮೊದಲು ತಿಳಿದು ಕೊಳ್ಳಲು ಪ್ರಯತ್ನಿಸಿ ಎಂದು ಪೇಜಾವರ ಶ್ರೀಗಳಿಗೆ ಸಲಹೆ ನೀಡಿದ್ದಾರೆ.
ಪೇಜಾವರರೇ ನೀವು ಸಾವಿಗೆ ಸಮೀಪವಾಗಿದ್ದೀರಿ....
ಹಾಲುಮತದವರು
ಹಾಲುಮತದವರು ಗರ್ಭದಲ್ಲೇ ದೀಕ್ಷೆ ಪಡೆದಿರುತ್ತಾರೆ. ನಮಗೆ ವೈಷ್ಣವ ಪದ್ದತಿಯನ್ನು ಹೇರಲು ಪ್ರಯತ್ನ ಮಾಡಬೇಡಿ. ಸಮಾಜದಲ್ಲಿ ಸಾಮರಸ್ಯದ ಬಾಳಿಗೆ ಆದ್ಯತೆ ಕೊಡಿ - ನಿರಂಜನಾನಂದಪುರಿ ಸ್ವಾಮೀಜಿ.
ನೀವು ಸಾವಿಗೆ ಸಮೀಪವಾಗಿದ್ದೀರಿ
ಪೇಜಾವರರೇ ನಿಮಗೀಗ 75 ವರ್ಷ ವಯಸ್ಸು, ಬಹಳಷ್ಟು ಸಾಧನೆಯನ್ನೂ ಮಾಡಿದ್ದೀರಿ. ನೀವು ಸಾವಿಗೆ ಸಮೀಪವಾಗಿದ್ದೀರಿ, ಕೆಟ್ಟ ಕೆಲಸ ಮಾಡಲು ಹೋಗಬೇಡಿ. ಇದ್ದಷ್ಟು ದಿನ ಒಳ್ಳೆಯದನ್ನು ಮಾಡಿ - ನಿರಂಜನಾನಂದಪುರಿ ಸ್ವಾಮೀಜಿ.
ದೇಶಭಕ್ತಿ ದೀಕ್ಷೆ ಮುಖ್ಯ
ಎಲ್ಲಾ ದೀಕ್ಷೆಗಿಂತ ಮಿಗಿಲಾಗಿದ್ದು ದೇಶಭಕ್ತಿ. ವೈಷ್ಣವ, ಶೈವ ಎನ್ನುವುದಕ್ಕಿಂತ ದೇಶದ ಐಕ್ಯತೆ ಮುಖ್ಯ. ಜಾತಿ ಭೇದ ಭಾವವನ್ನು ಅಳಿಸಿ ಹಾಕಿ ದೇಶದ ಪ್ರಗತಿಗೆ ಪಣ ತೊಡೋಣ - ಮಾಜಿ ರಾಜ್ಯಪಾಲ ರಾಮ ಜೋಯಿಸ್.
ಜನಪ್ರಿಯತೆ
ನಿಮಗೆ ಸದಾ ಸುದ್ದಿಯಲ್ಲಿ ಇರಬೇಕೆನ್ನುವ ಆಸೆಯೇ? ಹಾಗಿದ್ದರೆ ಸಮಾಜ ಸುಧಾರಣೆಯ ವಿಷಯಕ್ಕೆ ಮುಂದಾಗಿ. ಸುಮ್ಮನೆ ವೈಷ್ಣವ, ಶೈವ ಎಂದು ಸಮಾಜದಲ್ಲಿ ವಿಷಬೀಜ ಬಿತ್ತ ಬೇಡಿ - ನಿರಂಜನಾನಂದಪುರಿ ಸ್ವಾಮೀಜಿ.
ಎರಡೂ ಮುಖ್ಯ
ನಮ್ಮ ಸಮುದಾಯದವರಿಗೆ ವೈಷ್ಣವ ದೀಕ್ಷೆ ನೀಡುವ ಕಷ್ಟವನ್ನು ಪೇಜಾವರರು ತೆಗೆದು ಕೊಳ್ಳಬೇಕಾಗಿಲ್ಲ. ನಮಗೆ ಕಾಗಿನೆಲೆ ಮತ್ತು ಉಡುಪಿ ಮಠಗಳು ಎರಡೂ ಒಂದೇ - ಮಾಜಿ ಉಪಮುಖ್ಯಮಂತ್ರಿ ಕೆ ಎಸ್ ಈಶ್ವರಪ್ಪ