ಕುವೈತ್ನಲ್ಲಿ ಸಿಲುಕಿರುವ ಕದ್ರಿ ಗೋಪಾಲನಾಥ್ ಮಗ: ಅಂತ್ಯಸಂಸ್ಕಾರಕ್ಕೆ ಆಗಮಿಸಲು ಪರದಾಟ
Recommended Video
ಬೆಂಗಳೂರು, ಅಕ್ಟೋಬರ್ 11: ಶುಕ್ರವಾರ ಬೆಳಿಗ್ಗೆ ನಿಧನರಾದ ಖ್ಯಾತ ಸ್ಯಾಕ್ಸೋಫೋನ್ ವಾದಕ ಕದ್ರಿ ಗೋಪಾಲನಾಥ್ ಅವರ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಲು ಬರಬೇಕಿರುವ ಅವರ ಎರಡನೆಯ ಮಗ ಗುರುಪ್ರಸಾದ್ ಕದ್ರಿ ಅವರು ಕುವೈತ್ನಲ್ಲಿ ಸಿಲುಕಿದ್ದಾರೆ.
ಕದ್ರಿ ಗೋಪಾಲನಾಥ್ ಅವರ ದ್ವಿತೀಯ ಪುತ್ರ ಗುರುಪ್ರಸಾದ್ ಕದ್ರಿ ಅವರು ಕುವೈತ್ನಲ್ಲಿ ವಾಸಿಸುತ್ತಿದ್ದು, ತಂದೆಯ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳಲು ಮಂಗಳೂರಿನ ನಿವಾಸಕ್ಕೆ ಆಗಮಿಸಬೇಕಿದೆ. ಆದರೆ ಅವರು ಪಾಸ್ಪೋರ್ಟ್ ಸ್ಟ್ಯಾಂಪಿಂಗ್ಗೆ ಹೋಗಿರುವುದರಿಂದ ಅವರು ತಕ್ಷಣವೇ ಭಾರತಕ್ಕೆ ಮರಳಲು ಸಾಧ್ಯವಾಗುತ್ತಿಲ್ಲ ಎನ್ನುವುದು ತಿಳಿದುಬಂದಿದೆ.
ಸ್ಯಾಕ್ಸೋಫೋನ್ ಮಾಂತ್ರಿಕ ಕದ್ರಿ ಗೋಪಾಲ್ ನಾಥ್ ವಿಧಿವಶ
ಈ ಬಗ್ಗೆ ವಿದೇಶಾಂಗ ವ್ಯವಹಾರಗಳ ಸಚಿವ ಡಾ. ಎಸ್ . ಜೈಶಂಕರ್ ಅವರಿಗೆ ಪತ್ರ ಬರೆದಿರುವ ಗೋಪಾಲನಾಥ್ ಅವರ ಮೊದಲ ಮಗ ಮಣಿಕಾಂತ್ ಕದ್ರಿ, ತಮ್ಮ ಸಹೋದರ ಗುರುಪ್ರಸಾದ್ ಕದ್ರಿ ಅವರಿಗೆ ಕೂಡಲೇ ವೀಸಾ ವ್ಯವಸ್ಥೆ ಕಲ್ಪಿಸಲು ಸಹಾಯ ಮಾಡುವಂತೆ ಕೋರಿದ್ದಾರೆ. ಗೋಪಾಲನಾಥ್ ಅವರ ಅಂತ್ಯಸಂಸ್ಕಾರ ಶುಕ್ರವಾರವೇ ನಡೆಯಲಿದ್ದು, ಅದಕ್ಕಾಗಿ ನೆರವು ನೀಡುವಂತೆ ಅವರು ಮನವಿ ಮಾಡಿದ್ದಾರೆ.
ಪ್ರಖ್ಯಾತ ಸ್ಯಾಕ್ಸೋಫೋನ್ ಕಲಾವಿದ ಕದ್ರಿ ಗೋಪಾಲ್ ನಾಥ್ ಅವರು ಶುಕ್ರವಾರ ಬೆಳಿಗ್ಗೆ ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಮಂಗಳೂರಿನ ಎ.ಜೆ. ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಬೆಳಗ್ಗಿನ ಜಾವ ಅವರು ಕೊನೆಯುಸಿರೆಳೆದರು.
ಖ್ಯಾತ ಸ್ಯಾಕ್ಸೋಫೋನ್ ವಾದಕ ಕದ್ರಿ ಗೋಪಾಲನಾಥ್ ವ್ಯಕ್ತಿಚಿತ್ರ
1950ರ ಡಿಸೆಂಬರ್ 11 ರಂದು ದಕ್ಷಿಣ ಕನ್ನಡ ಜಿಲ್ಲೆಯ ಸಜೀಪ ಮೂಡ ಗ್ರಾಮದ ಮಿತ್ತಿಕೆರೆ ಎಂಬಲ್ಲಿ ಜನಿಸಿದ್ದರು. ದೇಶ ವಿದೇಶಗಳಲ್ಲಿ ಅನೇಕ ಕಾರ್ಯಕ್ರಮಗಳನ್ನು ನೀಡಿದ್ದ ಅವರು ಜನಮನ್ನಣೆ ಪಡೆದ ಕಲಾವಿದರಲ್ಲಿ ಒಬ್ಬರು. ಅವರ ಸಾಧನೆಗೆ ಪದ್ಮಶ್ರೀ ಪುರಸ್ಕಾರ ಲಭಿಸಿದೆ.