ಪಿರಿಯಾಪಟ್ಟಣ : ವೆಂಕಟೇಶ್ಗೆ 6ನೇ ಗೆಲುವು ಸಾಧ್ಯವೇ?
ಮೈಸೂರು, ಜನವರಿ 23: ಪಿರಿಯಾಪಟ್ಟಣ ಹಳೆ ಮೈಸೂರು ಭಾಗದ ಹಿಂದುಳಿದ ಕ್ಷೇತ್ರಗಳಲ್ಲಿ ಒಂದು. ತೀರಾ ಇತ್ತೀಚಿನವರೆಗೂ ಪಟ್ಟಣ ಹಾಗು ತಾಲೂಕಿನ ಬಹುತೇಕ ರಸ್ತೆಗಳಿಗೆ ಡಾಂಬರೀಕರಣದ ಭಾಗ್ಯ ಸಿಕ್ಕಿರಲಿಲ್ಲ.
ಕ್ಷೇತ್ರದ ಜನರು ಶಿಕ್ಷಣ, ಆರೋಗ್ಯ, ವ್ಯಾಪಾರಕ್ಕಾಗಿ 70 ಕಿಲೋಮೀಟರ್ ದೂರದ ಮೈಸೂರಿನ ಮೇಲೆ ಅವಲಂಬಿತರಾಗಿದ್ದರು. ತಂಬಾಕು ಇಲ್ಲಿನ ಮೂಲ ಬೆಳೆ. ತಂಬಾಕು ಮಂಡಳಿಯೊಂದನ್ನು ಹೊರತು ಪಡಿಸಿದರೆ, ಬೇರೆ ಯಾವುದೇ ಸಂಸ್ಥೆ ಇಲ್ಲಿಲ್ಲ.
ಹುಣಸೂರು ಕ್ಷೇತ್ರ : ಮಂಜುಗೆ ಹ್ಯಾಟ್ರಿಕ್ ಗೆಲುವಿಗೆ ತಡೆ ಸಾಧ್ಯವೇ?
ಪಿರಿಯಾಪಟ್ಟಣ ಕ್ಷೇತ್ರದ ಜನರು ಜನರು ಒಮ್ಮೆ ಬಿಜೆಪಿ, ಕೆಲವು ಭಾರಿ ಜನತಾ ಪಕ್ಷ, ಜನತಾದಳ, ಜೆಡಿಎಸ್ ಮತ್ತೆ ಹಲವು ಭಾರಿ ಕಾಂಗ್ರೆಸ್ ಪಕ್ಷವನ್ನು ಚುನಾವಣೆಗಳಲ್ಲಿ ಬೆಂಬಲಿಸಿದ್ದಾರೆ. ಕ್ಷೇತ್ರದ ಬಹುಪಾಲು ಜನಸಂಖ್ಯೆಯಲ್ಲಿ ಒಕ್ಕಲಿಗರು, ಕುರುಬರು, ದಲಿತರು, ನಾಯಕರು, ಲಿಂಗಾಯುತರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.
ಯಾರಿಗೆ ಸಿಗಲಿದೆ ನಂಜನಗೂಡು ಶ್ರೀಕಂಠೇಶ್ವರನ ಕೃಪೆ?
ಕಳೆದೆರೆಡು ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ನೇರ ಸ್ಪರ್ಧೆ ಇತ್ತು. ಈಗ ಎರಡೂ ಪಕ್ಷಗಳು ಚುನಾವಣಾ ಸಮರಕ್ಕೆ ಸಜ್ಜಾಗಿದ್ದು, ಬಿಜೆಪಿ ತನ್ನ ಅಭ್ಯರ್ಥಿಯ ಹೆಸರನ್ನು ಅಂತಿಮಗೊಳಿಸುವ ಪ್ರಕ್ರಿಯೆಯಲ್ಲಿ ತೊಡಗಿದೆ.
5 ಬಾರಿ ಗೆದ್ದಿದ್ದಾರೆ ಕೆ.ವೆಂಕಟೇಶ್
ಪಿರಿಯಾಪಟ್ಟಣ ಕ್ಷೇತ್ರ ಹಾಲಿ ಶಾಸಕರು ಕಾಂಗ್ರೆಸ್ನ ಕೆ.ವೆಂಕಟೇಶ್. ವೆಂಕಟೇಶ್ ಬೇರೆ-ಬೇರೆ ಪಕ್ಷಗಳಿಂದ 7 ಭಾರೀ ಚುನಾವಣೆಗೆ ಸ್ಪರ್ಧಿಸಿದ್ದಾರೆ. 5 ಭಾರಿ ಗೆಲುವು ಸಾಧಿಸಿದ್ದಾರೆ. ಮುಖ್ಯಂತ್ರಿ ಸಿದ್ದರಾಮಯ್ಯ ಅವರ ಪರಮಾಪ್ತರು. ಸಿದ್ದರಾಮಯ್ಯ ಅವರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದಾಗ, ಅವರನ್ನು ಹಿಂಬಾಲಿಸಿದವರು. ವಿಶೇಷವೆಂದರೆ ಸಿದ್ದರಾಮಯ್ಯ ಅವರನ್ನು ಹಿಂಬಾಲಿಸಿದ ಒಕ್ಕಲಿಗ ಸಮಾಜದ ಏಕೈಕ ನಾಯಕ ವೆಂಕಟೇಶ್.
ಸಚಿವ ಸ್ಥಾನ ಸಿಗಲಿಲ್ಲ
ವೆಂಕಟೇಶ್ ಅವರು 1996ರಲ್ಲಿ ಜೆ.ಹೆಚ್.ಪಟೇಲ್ ಸರ್ಕಾರದಲ್ಲಿ ಸಚಿವರಾಗಿದ್ದರು. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದರೂ ವೆಂಕಟೇಶ್ ಅವರಿಗೆ ಸಚಿವ ಸ್ಥಾನ ಸಿಗಲಿಲ್ಲ. ಆದರೆ, ಅವರು ಬಹಿರಂಗವಾಗಿ ಅಸಮಧಾನ ಹೊರಹಾಕಲಿಲ್ಲ. ಕಳೆದ ವರ್ಷ ಕೊನೆಗೂ ಅವರಿಗೆ ನಿಗಮ ಮಂಡಳಿಗಳ ಪ್ರತಿಷ್ಠಿತ ಹುದ್ದೆಗಳಲ್ಲಿಒಂದಾದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಅಧ್ಯಕ್ಷ ಸ್ಥಾನ ಸಿಕ್ಕಿತು.
ಜೆಡಿಎಸ್ನಿಂದ ಮಹದೇವು ಅಭ್ಯರ್ಥಿ
ಜೆಡಿಎಸ್ನ ಮಹದೇವು ಅವರು ಕಳೆದೆರಡು ಚುನಾವಣೆಗಳಲ್ಲಿ ವೆಂಕಟೇಶ್ ವಿರುದ್ಧ ಸ್ಪರ್ಧಿಸಿ, ಗೆಲುವಿನ ಹೊಸ್ತಿಲಿಗೆ ಬಂದು ಸೋಲುಂಡವರು. ಇವರು ಈ ಹಿಂದೆ ವೆಂಕಟೇಶ್ ಅವರ ಬೆಂಬಲಿಗರಾಗಿದ್ದರು. ವೆಂಕಟೇಶ್ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದರು. ಆದರೆ, ಮಹದೇವು ಅವರು ಜೆಡಿಎಸ್ ಪಕ್ಷದಲ್ಲಿಯೇ ಉಳಿದರು. 2013ರ ಚುನಾವಣೆಯಲ್ಲಿ ಕೇವಲ 2088 ಮತಗಳ ಅಂತರದಿಂದ, 2008 ರಲ್ಲಿ 879 ಮತಗಳ ಅಂತರದಿಂದ ಸೋಲು ಕಂಡವರು. ಈ ಭಾರಿಯೂ ಗೆಲ್ಲುವ ವಿಶ್ವಾಸದಿಂದ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ.
ಬಿಜೆಪಿ ಅಭ್ಯರ್ಥಿ ಅಂತಿಮವಾಗಿಲ್ಲ
ಟಿ.ಡಿ. ಗಣೇಶ್ ಹಾಗು ಯುವ ಉದ್ಯಮಿ ಎಸ್. ಮಂಜುನಾಥ್ ಅವರು ಬಿಜೆಪಿ ಟಿಕೆಟ್ ಆಕಾಂಕ್ಷಿಗಳು. ಗಣೇಶ್ ಸ್ಥಳೀಯ ಉದ್ಯಮಿಯಾಗಿದ್ದರೆ, ಮಂಜುನಾಥ್ ಬೆಂಗಳೂರಿನಲ್ಲಿ, ವಿದೇಶದಲ್ಲಿ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸಿದ್ದಾರೆ. ಕಳೆದೆರಡು ವರ್ಷಗಳಿಂದ ಪಿರಿಯಾಪಟ್ಟಣದ ಚುನಾವಣೆಯನ್ನು ದೃಷ್ಠಿಯಲ್ಲಿಟ್ಟುಕೊಂಡು ಅನೇಕ ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ. ತಮ್ಮ ಹುಟ್ಟುಹಬ್ಬದ ಆಚರಣೆಯ ಕಾರ್ಯಕ್ರಮವೊಂದರಲ್ಲಿ ಹೆಲಿಕಾಪ್ಟರ್ನಿಂದ ಹೂವಿನ ಮಳೆ ಸುರಿಸಿ ಪಟ್ಟಣದ ಜನರ ಗಮನ ಸೆಳೆದು, ಹೆಲಿಕಾಪ್ಟರ್ ಮಂಜು ಎಂದೇ ಗುರುತಿಸಿಕೊಂಡಿದ್ದಾರೆ. (ಚಿತ್ರ : ಮಂಜುನಾಥ್)