ಉಗ್ರಪ್ಪ ರಕ್ಷಣೆಗೆ ಮುಂದಾದ ಕಾಂಗ್ರೆಸ್?: ರೆಹಮಾನ್ ಖಾನ್ ಸ್ಪಷ್ಟನೆ!
ಬೆಂಗಳೂರು, ಅ. 16: ರಾಜ್ಯ ಕಾಂಗ್ರೆಸ್ನಲ್ಲಿ ಇತ್ತೀಚೆಗೆ ನಡೆದಿದ್ದ ಪ್ರಕರಣದ ಕುರಿತು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಕೊಟ್ಟಿದ್ದ ಪ್ರತಿಕ್ರಿಯೆ ಬಿರುಗಾಳಿ ಎಬ್ಬಿಸಿದೆ. ಅದಕ್ಕೆ ಕೆಪಿಸಿಸಿ ಶಿಸ್ತುಪಾಲನಾ ಸಮಿತಿ ಅಧ್ಯಕ್ಷ ರೆಹಮಾನ್ ಖಾನ್ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಹಾಗೂ ಈಗ ಕಾಂಗ್ರೆಸ್ನಿಂದ ಉಚ್ಛಾಟಿಗೊಂಡಿರುವ ಎಂ.ಎ. ಸಲೀಂ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕುರಿತು ಕುರಿತು ಅವಹೇಳನಕಾರಿಯಾಗಿ ಮಾತನಾಡಿದ್ದ ಪ್ರಕರಣ ನಡೆದಿತ್ತು.
ಪ್ರಕರಣದ ಕುರಿತು ಮಾತನಾಡಿರುವ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ, "ಈ ಎಲ್ಲ ಬೆಳವಣಿಗೆಯ ಹಿಂದೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಇದ್ದಾರೆ" ಎಂಬ ಗಂಭೀರ ಆರೋಪವನ್ನು ಮಾಡಿದ್ದರು. ಜೊತೆಗೆ "ಇಡೀ ಪ್ರಕರಣದಲ್ಲಿ ವಿ.ಎಸ್. ಉಗ್ರಪ್ಪ ಅವರನ್ನು ರಕ್ಷಣೆ ಮಾಡಲಾಗಿದ್ದು, ಅಲ್ಪಸಂಖ್ಯಾತ ನಾಯಕ ಸಲೀಂ ಅವರ ಬಲಿ ಪಡೆಯಲಾಗಿದೆ" ಎಂದಿದ್ದರು.
ಈ ಎಲ್ಲ ಆರೋಪಗಳ ಬಗ್ಗೆ 'ಒನ್ ಇಂಡಿಯಾ ಕನ್ನಡ'ಕ್ಕೆ ಕಾಂಗ್ರೆಸ್ ಶಿಸ್ತುಪಾಲನಾ ಸಮಿತಿ ಅಧ್ಯಕ್ಷ ಕೆ. ರೆಹಮಾನ್ ಖಾನ್ ಅವರು ಪ್ರತಿಕ್ರಿಯೆ ಕೊಟ್ಟಿದ್ದಾರೆ. ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಅವರನ್ನು ರಕ್ಷಣೆ ಮಾಡಲಾಗಿದೆಯಾ? ಜೊತೆಗೆ ಉಗ್ರಪ್ಪ ಅವರಿಗೆ ಕೊಟ್ಟಿರುವ ಶೋಕಾಸ್ ನೋಟೀಸ್ಗೆ ಉತ್ತರ ಕೊಟ್ಟಿದ್ದಾರಾ? ಎಂಬುದರ ಬಗ್ಗೆ ಕೆ. ರೆಹಮಾನ್ ಖಾನ್ ಕೊಟ್ಟಿರುವ ಪ್ರತಿಕ್ರಿಯೆ ಮುಂದಿದೆ.
ಶೋಕಾಸ್ ನೋಟೀಸ್ಗೆ ಉಗ್ರಪ್ಪ ಉತ್ತರ ಕೊಟ್ಟಿದ್ದಾರಾ?
"ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮೇಲೆ ಕಾಂಗ್ರೆಸ್ ನಾಯಕ ಉಗ್ರಪ್ಪ ಹಾಗೂ ಉಚ್ಛಾಟಿತ ನಾಯಕ ಸಲೀಂ ಮಾತನಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಶೋಕಾಸ್ ನೋಟೀಸ್ಗೆ ಇನ್ನೂ ಉತ್ತರ ಕೊಟ್ಟಿಲ್ಲ. ಅವರಿಗೆ ಉತ್ತರ ಕೊಡಲು ಇನ್ನೂ ಕಾಲಾವಕಾಶವಿದೆ. ಈ ಬಗ್ಗೆ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಸೇರಿದಂತೆ ಬೇರೆ ಪಕ್ಷಗಳ ನಾಯಕರು ಮಾತನಾಡುವ ಅಗತ್ಯವಿಲ್ಲ. ಇದು ಕಾಂಗ್ರೆಸ್ ಪಕ್ಷದ ಆಂತರಿಕ ವಿಚಾರ. ಕಾಂಗ್ರೆಸ್ ಪಕ್ಷದಲ್ಲಿ ಶಿಸ್ತು ಸಮಿತಿಯಿದೆ, ಅದು ಗಮನ ಹರಿಸಲಿದೆ" ಎಂದು "ಒನ್ಇಂಡಿಯಾ ಕನ್ನಡ'ಕ್ಕೆ ಕೆಪಿಸಿಸಿ ಶಿಸ್ತುಪಾಲನಾ ಸಮಿತಿ ಅಧ್ಯಕ್ಷ ಕೆ. ರೆಹಮಾನ್ ಖಾನ್ ಪ್ರತಿಕ್ರಿಯೆ ಕೊಟ್ಟಿದ್ದಾರೆ. ಜೊತೆಗೆ ಮತ್ತೊಂದು ಮಹತ್ವದ ಮಾತನ್ನೂ ಹೇಳಿದ್ದಾರೆ.
ಎಚ್ಡಿಕೆ ಆರೋಪಕ್ಕೆ ರೆಹಮಾನ್ ಖಾನ್ ಸ್ಪಷ್ಟನೆ!
"ಕಾಂಗ್ರೆಸ್ ಪಕ್ಷದಲ್ಲಿ ಅಲ್ಪಸಂಖ್ಯಾರ ನಾಯಕರನ್ನು ಟಾರ್ಗೆಟ್ ಮಾಡುವುದು ಅಥವಾ ಬೇರೆಯದ್ದು ಏನೂ ಇಲ್ಲ. ವಿ.ಎಸ್. ಉಗ್ರಪ್ಪ ಅವರು ಶೋಕಾಸ್ ನೋಟೀಸ್ಗೆ ಕೊಡುವ ಉತ್ತರದ ಬಳಿಕ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ. ಅವರು ಏನು ಉತ್ತರ ಕೊಡುತ್ತಾರೆ ಎಂಬುದನ್ನು ನೋಡಿಕೊಂಡು ಶಿಸ್ತು ಸಮಿತಿ ಮುಂದಿನ ಕ್ರಮ ಕೈಗೊಳ್ಳಲಿದೆ. ಅವರಿಗೆ ಉತ್ತರ ಕೊಡಲು 7 ದಿನಗಳ ಕಾಲಾವಕಾಶ ಕೊಟ್ಟಿದ್ದೇವೆ. ಕೆಪಿಸಿಸಿ ಶಿಸ್ತುಪಾಲನಾ ಸಮಿತಿ ಸಭೆ ನಡೆಸಿ ಸಲೀಂ ಅವರನ್ನು ಪಕ್ಷದಿಂದ ಉಚ್ಛಾಟಿಸಲು ಕ್ರಮಕೈಗೊಂಡಿದೆ. ಉಗ್ರಪ್ಪ ಕೊಡುವ ಉತ್ತರ ಆಧರಿಸಿ ಸಮಿತಿ ಕ್ರಮ ಕೈಗೊಳ್ಳುತ್ತದೆ" ಎಂದು ರೆಹಮಾನ್ ಖಾನ್ ಅವರು ಮಾಜಿ ಸಿಎಂ ಎಚ್ಡಿಕೆಗೆ ತಿರುಗೇಟು ಕೊಟ್ಟಿದ್ದಾರೆ.
ಉತ್ತರ ಕೊಡಲು ಕಾಲಾವಕಾಶ ವಿಸ್ತರಣೆ?
ಕಳೆದ ಅ. 13 ರಂದು ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡುವ ಮೊದಲು ವಿ.ಎಸ್. ಉಗ್ರಪ್ಪ ಹಾಗೂ ಸಲೀಂ ಗುಟ್ಟಾಗಿ ಡಿಕೆ ಶಿವಕುಮಾರ್ ಕುರಿತು ಮಾತನಾಡಿಕೊಂಡಿದ್ದರು. ಅದು ಮಾಧ್ಯಮಗಳಲ್ಲಿ ಅ. 14ರಂದು ಪ್ರಸಾರವಾಗಿತ್ತು. ತಕ್ಷಣ ಸಭೆ ಸೇರಿದ್ದ ಕೆಪಿಸಿಸಿ ಶಿಸ್ತು ಪಾಲನಾ ಸಮಿತಿ ಅಂದು ಮಧ್ಯಾಹ್ನ ಕೆಪಿಸಿಸಿ ಮಾಧ್ಯಮ ಸಂಯೋಜಕರಾಗಿದ್ದ ಎಂ.ಎ. ಸಲೀಂ ಅವರನ್ನು ಮುಂದಿನ ಆರು ವರ್ಷಗಳ ಕಾಲ ಉಚ್ಛಾಟಿಸಿತ್ತು.
ಜೊತೆಗೆ ಪ್ರಕರಣದ ಕುರಿತು ಮೂರು ದಿನಗಳಲ್ಲಿ ಉತ್ತರಿಸುವಂತೆ ವಿ.ಎಸ್. ಉಗ್ರಪ್ಪ ಅವರಿಗೆ ಶಿಸ್ತುಪಾಲನಾ ಸಮಿತಿ ಶೋಕಾಸ್ ನೋಟೀಸ್ ಕೊಟ್ಟಿತ್ತು. ಆದರೆ ಈ ವರೆಗೂ ವಿ.ಎಸ್. ಉಗ್ರಪ್ಪ ಶೋಕಾಸ್ ನೋಟೀಸ್ಗೆ ಉತ್ತರ ಕೊಟ್ಟಿಲ್ಲ ಎಂದು ರೆಹಮಾನ್ ಖಾನ್ ಅವರು 'ಒನ್ಇಂಡಿಯಾ ಕನ್ನಡ'ಕ್ಕೆ ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಉಗ್ರಪ್ಪ ಅವರಿಗೆ ಶೋಕಾಸ್ ನೋಟೀಸ್ಗೆ ಉತ್ತರಿಸಲು ಕೆಪಿಸಿಸಿ ಕಾಲಾವಕಾಶ ವಿಸ್ತರಿಸಿದೆ ಎಂಬುದು ತಿಳಿದು ಬಂದಿದೆ.
ಸಿದ್ದರಾಮಯ್ಯ ಮೇಲೆ ಕುಮಾರಸ್ವಾಮಿ ಗಂಭೀರ ಆರೋಪ!
ಇದೇ ವಿಚಾರವನ್ನು ಮಾಜಿ ಸಿಎಂ ಕುಮಾರಸ್ವಾಮಿ ಪ್ರಸ್ತಾಪಿಸಿದ್ದರು. ವಿ.ಎಸ್. ಉಗ್ರಪ್ಪ ಅವರು ಸಿದ್ದರಾಮಯ್ಯ ಆಪ್ತರು. ಹೀಗಾಗಿ ಅವರನ್ನು ರಕ್ಷಣೆ ಮಾಡಿ, ಅಲ್ಪಸಂಖ್ಯಾತ ನಾಯಕ ಸಲೀಂ ಅವರ ಮೇಲೆ ಮಾತ್ರ ಕೈಗೊಳ್ಳಲಾಗಿದೆ. ಇದನ್ನು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಮಾಡಿಸಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಅಲ್ಪ ಸಂಖ್ಯಾತ ನಾಯಕರಾದ ಇಕ್ಬಾಲ್ ಅಹ್ಮದ್ ಸರಡಗಿ, ತನ್ವೀರ್ ಸೇಠ್, ರೋಷನ್ ಬೇಗ್ ಸೇರಿದಂತೆ ಹಲವರನ್ನು ಸಿದ್ದರಾಮಯ್ಯ ಮುಗಿಸಿದ್ದಾರೆ. ಇಂಥ ನೀಚ ರಾಜಕಾರಣ ಮುಸ್ಲಿಂ ಬಾಂಧವರಿಗೆ ಈಗ ಗೊತ್ತಾಗಿಬಿಟ್ಟಿದೆ ಎಂದು ಸಿದ್ದರಾಮಯ್ಯ ಮೇಲೆ ಕುಮಾರಸ್ವಾಮಿ ಆರೋಪಿಸಿದ್ದರು
Recommended Video