'ಪ್ರೇಮಪತ್ರ' ಬರೆದು ಹತ್ಯೆಯಾದವನಿಗೆ ನ್ಯಾಯ ಎಲ್ಲಿದೆ?
ಇದೊಂದು ವಿಚಿತ್ರವಾದ ಮತ್ತು ವಿಶಿಷ್ಟವಾದ ಪ್ರಕರಣ. ತಾನು ಬರೆದಿಲ್ಲದ 'ಪ್ರೇಮಪತ್ರ'ದಿಂದಾಗಿ ಹತ್ಯೆಯಾದ ದಲಿತನೊಬ್ಬನ ಕುಟುಂಬ ನ್ಯಾಯಕ್ಕಾಗಿ ಪರಿತಪಿಸುತ್ತಿರುವ ಕಥೆ. ಮೇಲ್ಜಾತಿಯವರಿಂದ ಸಾಮಾಜಿಕ ಬಹಿಷ್ಕಾರಕ್ಕೊಳಗಾಗಿ ಕೆಲಸವಿಲ್ಲದೆ ಬದುಕಿಗಾಗಿ ಹೋರೋಡುತ್ತಿರುವ ಕಥೆ. ಈ 'ಪ್ರೇಮ' ಪ್ರಕರಣದ ಫ್ಲಾಶ್ಬ್ಯಾಕ್ ಮುಂದಿದೆ ಓದಿರಿ.
ಬಾಗಲಕೋಟೆ ಜಿಲ್ಲೆಯ ಮಿರ್ಜಿ ಗ್ರಾಮದ ಹದಿನೇಳು ವರ್ಷದ ಅನಿಲ್ ಪರಶುರಾಮ್ ಮೇತ್ರಿ ಹತ್ಯೆಯಾಗಿ ಹೆಚ್ಚೂಕಡಿಮೆ ಏಳು ತಿಂಗಳು. ಆತನನ್ನು ಹಿಗ್ಗಾಮುಗ್ಗಾ ಥಳಿಸಿ, ವಿಷವುಣಿಸಿ ಹತ್ಯೆಗೈಯಲಾಗಿತ್ತು. ಆ ದಲಿತ ಯುವಕನ ವಿರುದ್ಧ ಮಾಡಿದ ಆರೋಪವೇನು ಗೊತ್ತಾ? ಮೇಲ್ಜಾತಿಯ ಯುವತಿಗೆ 'ಪ್ರೇಮ' ಪತ್ರ ಬರೆದದ್ದು!
ಯುವಕನ ಕುಟುಂಬದವರು ದೂರಿರುವ ಪ್ರಕಾರ, ಹುಡುಗನ ತಂದೆ, ಸಹೋದರ ಮತ್ತೊಬ್ಬ ಮೊದಲು ಅನಿಲ್ ನನ್ನು ಸಿಕ್ಕಾಪಟ್ಟೆ ಹೊಡೆದಿದ್ದಾರೆ. ನಂತರ ಗ್ರಾಮದ ಕೆಲ ಯುವಕರು ಪ್ರೇಮಿ ಅನಿಲನನ್ನು ಅಪಹರಿಸಿಕೊಂಡು ಹೋಗಿ, ಕಬ್ಬಿನ ಗದ್ದೆಯಲ್ಲಿ ಬಲವಂತವಾಗಿ ವಿಷವುಣಿಸಿದ್ದಾರೆ. [ದಲಿತ ವಿದ್ಯಾರ್ಥಿ ಆತ್ಮಹತ್ಯೆ : ಜಾತಿ ಬೆಂಕಿಗೆ ರಾಜಕೀಯ ತುಪ್ಪ]
ಘಟನೆಯ ವಿವರ : ಈ ಘಟನೆ ಸಂಭವಿಸಿದ್ದು 2015ರ ಜುಲೈ 1ರಂದು. ಬಿಜಾಪುರದ BLDE ಆಸ್ಪತ್ರೆಗೆ ಆತನನ್ನು ದಾಖಲಾಯಿಸಲಾಯಿತಾದರೂ ಜುಲೈ 6ರಂದು ಆತ ಕಣ್ಮುಚ್ಚಿದ. ಅನಿಲನ ಸಹೋದರ ವಿಠಲ ಬಾಗಲಕೋಟೆ ಜಿಲ್ಲೆಯ ಮುಧೋಳದಲ್ಲಿ ಆರೋಪಿಗಳ ವಿರುದ್ಧ ದೂರು ಸಲ್ಲಿಸಿದ್ದರು.
ಹುಡುಗಿಯ ತಂದೆ ಬಸಪ್ಪ ಹಣಮಂತ ಬಿಸನಕೊಪ್ಪ, ಅಣ್ಣ ಹಣಮಂತ ಬಸಪ್ಪ ಬಿಸನಕೊಪ್ಪ ಮತ್ತು ಅವರಿಬ್ಬರಿಗೂ ಪರಿಚಯವಿದ್ದ ಕಲ್ಲಪ್ಪ ಪಾಯಣ್ಣವರ್ ವಿರುದ್ಧ ಎಫ್ಐಆರ್ ದಾಖಲಾಗಿತ್ತು. ಒಂದು ತಿಂಗಳು ಜೈಲಲ್ಲಿದ್ದ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.
ಇಷ್ಟೆಲ್ಲಾ ನಡೆದಿದ್ದರೂ ಮೊಕದ್ದಮೆಯಲ್ಲಿ ಯಾವುದೇ ಬೆಳವಣಿಗಳಾಗಿಲ್ಲ. ಅಪ್ಡೇಟ್ ಮಾಡಿದ ಚಾರ್ಜ್ಶೀಟ್ ಅರ್ಜಿದಾರರ ಕೈಗೆ ಸಿಕ್ಕಿಲ್ಲ. ತಮ್ಮ ಪರವಾಗಿ ವಾದ ಮಂಡಿಸಲು ಪಬ್ಲಿಕ್ ಪ್ರಾಸಿಕ್ಯೂಟರನ್ನು ಇನ್ನೂ ನೇಮಿಸಿಲ್ಲ ಎಂದು ಅನಿಲನ ಸಹೋದರ ವಿಠಲ ಒನ್ಇಂಡಿಯಾ ಎದಿರು ಅಳಲು ತೋಡಿಕೊಂಡರು. [ಲೈಫ್ ಎಂಜಾಯ್ ಮಾಡೋಕೆ, ವೈಫ್ ಜಗಳ ಆಡೋಕೆ!]
ಈ ಕುರಿತು ಬಾಗಲಕೋಟೆ ಸುಪರಿಂಟೆಂಡೆಂಟ್ ಆಫ್ ಪೊಲೀಸ್ ಎಂಎನ್ ನಾಗರಾಜ್ ಅವರನ್ನು ಸಂಪರ್ಕಿಸಿದಾಗ, ಅವರು ಹೇಳಿದ್ದೇನು ಗೊತ್ತೆ? ಫೆಬ್ರವರಿ 13 ಮತ್ತು 20ರಂದು ನಡೆಯಲಿರುವ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆಯಲ್ಲಿ ಬಿಜಿಯಾಗಿದ್ದು, ಪ್ರಕರಣದ ಇತ್ತೀಚಿನ ಬೆಳವಣಿಗೆಗಳ ವಿವರಗಳನ್ನು ಯಾರಿಗೂ ನೀಡುವುದಿಲ್ಲ.
ಪ್ರಕರಣವನ್ನು ವಿಠಲ ಬಿಚ್ಚಿಡುವುದು ಹೀಗೆ : ಜು.1ರಂದು ಬಸಪ್ಪನ ಮನೆಯಲ್ಲಿ ಅನಿಲನನ್ನಿ ಹಿಗ್ಗಾಮುಗ್ಗಾ ಆರೋಪಿಗಳು ಥಳಿಸಿದ್ದಾರೆ. ತಡೆಯಲು ಹೋದ ತಂದೆ ತಾಯಿಯನ್ನು ಥಳಿಸಿದ್ದಾರೆ. ಅನಿಲನನ್ನು ಹಿಡಿದಿಟ್ಟುಕೊಂಡು ತಂದೆತಾಯಿಯನ್ನು ವಾಪಸ್ ಕಳಿಸಿದ್ದಾರೆ. ಆರೋಪಿಗಳ ಆರೋಪನೇನೆಂದರೆ ದಲಿತ ಸಮುದಾಯಕ್ಕೆ ಸೇರಿದ ಅನಿಲ ಮೇಲ್ಜಾತಿಯ ರೆಡ್ಡಿ ಸಮುದಾಯದ ಬಸಪ್ಪನ ಮಗಳಿಗೆ ಪ್ರೇಮಪತ್ರ ಬರೆದಿದ್ದು.
ನನ್ನ ತಂದೆ ತಾಯಿ ಮನೆಗೆ ಬಂದು ಎಲ್ಲವನ್ನೂ ವಿವರಿಸಿದರು. ನಾವು ಮೂವರೂ ಬಸಪ್ಪನ ಮನೆಗೆ ಹೋಗಿ ಹುಡುಕಿದಾಗ ಆತ ಎಲ್ಲಿಯೂ ಸಿಗಲಿಲ್ಲ. ಮರುದಿನ ಜು.2ರಂದು ಕಬ್ಬಿನ ಗದ್ದೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದ, ಆದರೆ ಇನ್ನೂ ಬದುಕಿದ್ದ ಅನಿಲ ಸಿಕ್ಕಿದ್ದಾನೆ. ಆತನನ್ನು ಹೊಡೆದಿದ್ದು ಮಾತ್ರವಲ್ಲ, ಬಲವಂತವಾಗಿ ವಿಷವನ್ನೂ ಕುಡಿಸಲಾಗಿದೆ.
ಆತನನ್ನು ಮೊದಲು ಮಹಾಲಿಂಗಪುರ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಆತನ ಸ್ಥಿತಿ ಗಂಭೀರವಾಗಿದ್ದರಿಂದ ಹಿಂಚಿನಾಳ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ವೈದ್ಯರ ಶಿಫಾರಸಿನ ಮೇರೆಗೆ ಅಲ್ಲಿಂದ ರಬಕವಿಗೆ ಕರೆದೊಯ್ಯಲಾಯಿತು. ಆದರೆ ಪರಿಸ್ಥಿತಿ ವಿಷಮಿಸಿದ್ದರಿಂದ ಬಿಜಾಪುರದ BLDE ಆಸ್ಪತ್ರೆಗೆ ದಾಖಲಿಸಲಾಯಿತು. ಆತ ಜು.6ರಂದು ಅಲ್ಲಿಯೇ ಕೊನೆಯುಸಿರೆಳೆದಿದ್ದು.
ಸಾಯುವ ಮುನ್ನ ಆತ ನೀಡಿದ ಹೇಳಿಕೆಯೇನೆಂದರೆ, ಜುಲೈ 2ರ ಬೆಳಿಗ್ಗೆ ಕಷ್ಟಪಟ್ಟು ಮನೆ ಹತ್ತಿರ ಬಂದಿದ್ದೆ. ಅಷ್ಟರಲ್ಲಿ ಕೆಲ ಯುವಕರು ಅಪಹಸಿರಿಕೊಂಡು ಬೆಟ್ಟದ ಮೇಲಿಂದ ತಳ್ಳಿದ್ದಾರೆ ಮತ್ತು ಕಬ್ಬಿನ ಗದ್ದೆಯಲ್ಲಿ ಬಲವಂತವಾಗಿ ವಿಷವುಣ್ಣಿಸಿದ್ದಾರೆ.
ಪ್ರೇಮಕಥೆಗೆ ಟ್ವಿಸ್ಟ್ : ಅಸಲಿಯತ್ತೇನೆಂದರೆ, ಅನಿಲನನ್ನು ಕಿಡ್ನಾಪ್ ಮಾಡಿದ ಗ್ಯಾಂಗ್ ಲೀಡರ್ ಪ್ರವೀಣ ಕರಣ್ಣವರ್ ಬಸಪ್ಪನ ಮಗಳ ಹಿಂದೆ ಬಿದ್ದಿದ್ದ. ಅವರಿಬ್ಬರ ಮಧ್ಯೆ ಸಂಬಂಧವಿತ್ತು. ಪತ್ರ ಬರೆದು ಹುಡುಗಿಗೆ ತಲುಪಿಸೆಂದು ಆತ ಅನಿಲನಿಗೆ ನೀಡಿದ್ದ. ಪ್ರೇಮಪತ್ರ ನೀಡಲು ಹೋದಾಗ ಅನಿಲ ಸಿಕ್ಕಿಬಿದ್ದಿದ್ದ. ಪತ್ರ ಬರೆದದ್ದು ನಾನಲ್ಲ ಎಂದರೂ ಕೇಳದೆ ಆತನನ್ನು ಆರೋಪಿಗಳು ಹಿಗ್ಗಾಮುಗ್ಗಾ ಥಳಿಸಿದ್ದಾರೆ.
ಪ್ರವೀಣ ಕೂಡ ರೆಡ್ಡಿ ಸಮುದಾಯಕ್ಕೆ ಸೇರಿದವನಾಗಿದ್ದರೂ ಇದನ್ನು ಹುಡುಗಿಯ ಕುಟುಂಬದವರು ಒಪ್ಪಿರಲಿಲ್ಲ. ಈ ಸುದ್ದಿ ಊರಲ್ಲೆಲ್ಲ ಗುಲ್ಲಾಗಿ ಮಾನ ಹರಾಜಾಗುತ್ತದೆಂದು ಪ್ರವೀಣ ಮತ್ತು ಅವರ ಸ್ನೇಹಿತರು ಅನಿಲನನ್ನು ಕಿಡ್ನಾಪ್ ಮಾಡಿದ್ದಾರೆ. ನಂತರ ವಿಷವಿಕ್ಕಿ ಕೊಂದು ಹಾಕಿದ್ದಾರೆ ಎಂದು ವಿಠಲ ಕಣ್ಣೀರಾಗುತ್ತಾರೆ.
ಪೋಸ್ಟ್ ಮಾರ್ಟಂ ರಿಪೋರ್ಟ್ ಪ್ರಕಾರ, ಅನಿಲ ಸತ್ತಿತ್ತು ವಿಷಪ್ರಾಶನದಿಂದ ಅಂತ ಇದ್ದರೂ, ಪೊಲೀಸರು ಪ್ರವೀಣ ಮತ್ತು ಸ್ನೇಹಿತರನ್ನು ಬೆಂಬಲಿಸುತ್ತಿದ್ದು, ಅವರನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸಲು ನಿರಾಕರಿಸಿದ್ದಾರೆ. ದಲಿತ ಚಳವಳಿಗಾರ ಮರಿಸ್ವಾಮಿ ಸಲ್ಲಿಸಿರುವ ದೂರು ಸಲ್ಲಿಸಿದ್ದರು.
ಅನಿಲನಿಗೆ ನ್ಯಾಯ ಸಿಗಬೇಕು. ಎಲ್ಲ ತಪ್ಪಿಸತ್ಥರಿಗೆ ಶಿಕ್ಷೆಯಾಗಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಜನಾಂಗ (ದೌರ್ಜನ್ಯ ತಡೆ) ಕಾಯ್ದೆ 1989 ಪ್ರಕಾರ, ಸಂತ್ರಸ್ತ ಕುಟುಂಬಕ್ಕೆ ಪರಿಹಾರ ಸಿಗಬೇಕು. ಇತರರ ಹೊಲದಲ್ಲಿ ಕೂಲಿ ಮಾಡುತ್ತಿರುವ ಅನಿಲನ ಕುಟುಂಬದವರು ಬಡವರಾಗಿದ್ದರಿಂದ ಒಬ್ಬರಿಗೆ ಸರಕಾರಿ ಕೆಲಸ ಸಿಗಬೇಕು ಎಂಬುದು ಅವರ ಬೇಡಿಕೆ.
"ಹೊಲಗಳು ಮೇಲ್ಜಾತಿಯವರಿಗೆ ಸೇರಿರುವುದರಿಂದ, ಅನಿಲನ ಕೊಲೆಯ ನಂತರ ಮೇಲ್ಜಾತಿಯವರು ಸಾಮಾಜಿಕ ಬಹಿಷ್ಕಾರ ಹಾಕಿದ್ದಾರೆ. ಯಾವ ಹೊಲದಲ್ಲಿಯೂ ಕೂಲಿ ಕೆಲಸ ಸಿಗುತ್ತಿಲ್ಲ. ನ್ಯಾಯ ದೊರಕಿಸಿಕೊಡಲು ಪೊಲೀಸರನ್ನು ಸಂಪರ್ಕಿಸಿದ್ದರೂ ಪ್ರಯೋಜನವಾಗಿಲ್ಲ. ಇಷ್ಟು ಮಾತ್ರವಲ್ಲ, ಇತರ ದಲಿತರೂ ನಮ್ಮ ಜೊತೆ ಮಾತಾಡುತ್ತಿಲ್ಲ" ಅಂತ ವಿಠಲ ಗದ್ಗದಿತರಾದರು.
ಸಾಮಾಜಿಕ ಪರಿವರ್ತನಾ ಆಂದೋಲನ ಸಂಘಟನೆಯ ಕರ್ನಾಟಕದ ಅಧ್ಯಕ್ಷರಾಗಿರುವ ವೈ. ಮರಿಸ್ವಾಮಿ ಅವರ ನೇತೃತ್ವದಲ್ಲಿ ಗ್ರಾಮದಲ್ಲಿ ಭಾರೀ ಪ್ರತಿಭಟನೆ ಮಾಡಲಾಯಿತು. ಆದರೂ ಯಾವುದೇ ಪ್ರಯೋಜನವಾಗಿಲ್ಲ. ಅಕ್ಷರಶಃ ಈ ದುರಂತವನ್ನು ಎಲ್ಲರೂ ಮರೆತುಬಿಟ್ಟಿದ್ದಾರೆ. ಆದರೆ, ಅಪರಾಧಿಗಳಿ ಶಿಕ್ಷೆಯಾಗುವವರೆಗೆ ನಾನು ಹೋರಾಟ ಮಾಡುತ್ತೇನೆ ಎನ್ನುತ್ತಾರೆ ವಿಠಲ.