ಹೈಕೋರ್ಟ್ ಹಂಗಾಮಿ ಸಿಜೆಯಾಗಿ ನ್ಯಾ.ಅಲೋಕ್ ಅರಾಧೆ ನೇಮಕ
ಬೆಂಗಳೂರು, ಜೂ.30, ಕರ್ನಾಟಕ ಹೈಕೋರ್ಟ್ನ ಮುಖ್ಯ ನ್ಯಾಯಮೂರ್ತಿಯಾಗಿರುವ ರಿತುರಾಜ್ ಅವಸ್ತಿ ನಾಡಿದ್ದು ನಿವೃತ್ತಿಯಾಗುತ್ತಿರುವ ಹಿನ್ನೆಲೆಯಲ್ಲಿ ಹೈಕೋರ್ಟ್ ನ ಹಂಗಾಮಿ ಮುಖ್ಯ ನ್ಯಾಯಮೂರ್ತಿಯನ್ನಾಗಿ ಅಲೋಕ್ ಅರಾಧೆ ಅವರನ್ನು ನೇಮಕ ಮಾಡಲಾಗಿದೆ. ಸದ್ಯ ಅವರು ಕರ್ನಾಟಕ ಹೈಕೋರ್ಟ್ ನಲ್ಲಿ ಎರಡನೇ ಹಿರಿಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಹೈಕೋರ್ಟ್ ನ್ಯಾಯಮೂರ್ತಿಗಳ ಸೇವಾ ಅವಧಿ 62 ವರ್ಷ ಇದೆ. ಹಾಲಿ ಸಿಜೆ ಜು.2ಕ್ಕೆ 62 ವರ್ಷ ಪೂರೈಸಲಿದ್ದಾರೆ. ಹಾಗಾಗಿ ಸೇವಾ ವಧಿ ಪೂರೈಸಿ ಅವರು ನಿವೃತ್ತರಾಗಲಿದ್ದಾರೆ. ಅವಸ್ಥೊ 2021ರ ಅ.10ರಿಂದ ಕರ್ನಾಟಕ ಹೈಕೋರ್ಟ್ ಸಿಜೆಯಾಗಿ ಅಧಿಕಾರ ಸ್ವೀಕರಿಸಿದ್ದರು.
ನಾಳೆ ಹೈಕೋರ್ಟ್ ನಲ್ಲಿ ಸಿಜೆ ರಿತುರಾಜ್ ಅವಸ್ಥಿ ಅವರಿಗೆ ಕರ್ನಾಟಕ ರಾಜ್ಯ ವಕೀಲರ ಪರಿಷತ್ ಮತ್ತು ಬೆಂಗಳೂರು ವಕೀಲರ ಸಂಘದ ವತಿಯಿಂದ ಪ್ರತ್ಯೇಕ ಬೀಳ್ಕೊಡುಗೆ ಆಯೋಜಿಸಲಾಗಿದೆ. ಹಂಗಾಮಿ ಸಿಜೆಯಾಗಿ ನೇಮಕಗೊಂಡಿರುವ ಅಲೋಕ್ ಅರಾಧೆ ಭಾನುವಾರ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಈ ನೇಮಕದ ಕುರಿತು ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಅವರು ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.
ಅಲೋಕ್ ಅರಾಧೆ ಹಿನ್ನೆಲೆ:
ಅರಾಧೆ ಅವರು ಚತ್ತೀಸ್ ಗಢದ ರಾಯ್ ಪುರದಲ್ಲಿ 1964ರ ಏ.13ರಂದು ಜನಿಸಿದರು. ಬಿಎಸ್ ಸಿ, ಎಲ್ ಎಲ್ ಬಿ ಮುಗಿಸಿದ ನಂತರ 1988ರಲ್ಲಿ ವಕೀಲಿಕೆ ಆರಂಭಿಸಿದರು.
ಸಿವಿಲ್, ಕಂಪನಿ ಕಾಯ್ದೆ ಮತ್ತಿತರ ವಿಷಯಗಳನ್ನು ಪಾಂಡಿತ್ಯ ಹೊಂದಿರುವ ಅವರು 2009ರಲ್ಲಿ ಮಧ್ಯಪ್ರದೇಶ ಹೈಕೋರ್ಟ್ ನ ನ್ಯಾಯಮೂರ್ತಿಯಾಗಿ ನೇಮಕಗೊಂಡರು.
ಬಳಿಕ ಅವರು 2016ರಲ್ಲಿ ಜಮ್ಮು ಮತ್ತು ಕಾಶ್ಮೀರ ಹೈಕೋರ್ಟ್ ಗೆ ವರ್ಗಾವಣೆಯಾಗಿದ್ದರು. ಅರಾಧೆ ಅವರು 2018ರ ನ.17ರಂದು ಕರ್ನಾಟಕದ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
Recommended Video