ಜೂ.26 ಕೊರೊನಾ ವೈರಸ್ ಅಪ್ ಡೇಟ್; ಏಳು ಜಿಲ್ಲೆಗಳ ವರದಿ...
ಬೆಂಗಳೂರು, ಜೂನ್ 26: ರಾಜ್ಯದಲ್ಲಿ ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ ದಿನೇ ದಿನೇ ಏರಿಕೆ ಕಾಣುತ್ತಿದೆ. ಇಂದು ಹೊಸದಾಗಿ 445 ಜನರಲ್ಲಿ ಕೊರೊನಾ ವೈರಸ್ ಸೋಂಕು ಇರುವುದು ದೃಢಪಟ್ಟಿದೆ. ಒಟ್ಟಾರೆ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 11,005ಕ್ಕೆ ಏರಿಕೆಯಾಗಿದೆ.
ಕೊರೊನಾ ವೈರಸ್ ನಿಂದ ಗುಣಮುಖರಾಗಿ 246 ಮಂದಿ ಬಿಡುಗಡೆಯಾಗಿದ್ದಾರೆ. ಇಂದು ಹತ್ತು ಮಂದಿ ವೈರಸ್ ನಿಂದಾಗಿ ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಕೊರೊನಾ ವೈರಸ್ ನಿಂದ ಮೃತಪಟ್ಟವರ ಸಂಖ್ಯೆ 178 ಕ್ಕೆ ಏರಿದೆ. ಯಾವ ಜಿಲ್ಲೆಗಳಲ್ಲಿ ಎಷ್ಟು ಕೊರೊನಾ ವೈರಸ್ ಪ್ರಕರಣಗಳಿವೆ ಎಂಬುದರ ವಿವರ ಇಲ್ಲಿದೆ...
ಹರಿಹರಕ್ಕೆ ಕೊರೊನಾ ಹೊತ್ತು ತಂದ ಮಹಿಳೆ
ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನಲ್ಲಿ ಕೊರೊನಾ ವೈರಸ್ ಪ್ರಕರಣ ಪತ್ತೆಯಾಗಿದೆ. ಈ ಸೋಂಕು ಜಿಂದಾಲ್ ಮೂಲದ್ದು ಎನ್ನಲಾಗಿದೆ. ಕ್ವಾರಂಟೈನ್ ನಲ್ಲಿದ್ದ 35 ವರ್ಷದ ಮಹಿಳೆಯೊಬ್ಬರಲ್ಲಿ ಸೋಂಕು ಕಾಣಿಸಿಕೊಂಡಿದೆ. ಮಹಿಳೆ, ಮಹಿಳೆಯ ಪತಿಗೆ ಸೋಂಕು ದೃಢಪಟ್ಟಿದೆ. ಕ್ವಾರಂಟೈನ್ ನಲ್ಲಿ ಇದ್ದರೂ ಹರಿಹರದ ತಮ್ಮ ಮನೆಗೆ ಮಹಿಳೆ ಬಂದಿದ್ದರು. ಇದೀಗ ಮಹಿಳೆಯಿಂದಾಗಿ ಹರಿಹರಕ್ಕೆ ಕಂಟಕ ಎದುರಾಗಿದೆ.
ಕೋಲಾರದಲ್ಲಿ ಕೊರೊನಾ ಸೋಂಕಿಗೆ ಮೊದಲ ಬಲಿ
ಹೀಗಾಗಿ ಸ್ವಯಂಪ್ರೇರಿತವಾಗಿ ಲಾಕ್ ಡೌನ್ ಮಾಡಬೇಕು ಎಂದು ಹರಿಹರದ ಶಾಸಕ ಎಸ್ ರಾಮಪ್ಪ ಮುಂದಾಗಿದ್ದಾರೆ. ಈ ಬಗ್ಗೆ ಅಧಿಕಾರಿಗಳ ಹಾಗೂ ವರ್ತಕರ ಜೊತೆ ಸಭೆ ನಡೆಸಿದ್ದು, ಕೆಲವರು ಸ್ವಯಂ ಪ್ರೇರಿತವಾಗಿ ಲಾಕ್ ಡೌನ್ ಮಾಡಿದ್ದಾರೆ. ಬಹುತೇಕ ಮಂದಿ ಸ್ಪಂದಿಸುತ್ತಿಲ್ಲ. ನಾಳೆ ಮತ್ತೊಮ್ಮೆ ಅಧಿಕಾರಿಗಳ ಜೊತೆ ಸಭೆ ನಡೆಸುತ್ತೇನೆ ಎಂದು ತಿಳಿಸಿದ್ದಾರೆ ಅವರು.
ಇಂದಿನಿಂದ ಹುಣಸೂರಿನಲ್ಲಿ ಮಧ್ಯಾಹ್ನದ ನಂತರ ವಹಿವಾಟು ಬಂದ್
ಇಂದಿನಿಂದ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನಲ್ಲಿ ಮಧ್ಯಾಹ್ನದ ನಂತರ ವಹಿವಾಟು ಬಂದ್ ಮಾಡಲು ನಿರ್ಧರಿಸಲಾಗಿದೆ. ಶಾಸಕ ಎಚ್.ಪಿ. ಮಂಜುನಾಥ್ ಅಧ್ಯಕ್ಷತೆಯಲ್ಲಿ ಕೊವಿಡ್ 19 ಟಾಸ್ಕ್ ಫೋರ್ಸ್ ಸಭೆ ನಡೆದಿದ್ದು, ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ವ್ಯಾಪಾರಿಗಳ ಸಂಘದ ಮನವಿ ಮೇರೆಗೆ ನಗರಸಭೆ ಸಭಾಂಗಣದಲ್ಲಿ ಕೊವಿಡ್ ಟಾಸ್ಕ್ ಫೋರ್ಸ್ ಸಭೆ ನಡೆದಿತ್ತು. ಮೆಡಿಕಲ್ ಸ್ಟೋರ್, ಹಾಲಿನ ಕೇಂದ್ರ, ಆಸ್ಪತ್ರೆ ಹೊರತಾಗಿ ಎಲ್ಲವನ್ನೂ ಬಂದ್ ಮಾಡಿ ಸಹಕಾರ ನೀಡುವಂತೆ ಮನವಿ ಮಾಡಲಾಗಿತ್ತು. ಮಧ್ಯಾಹ್ನ 3ರ ನಂತರ ಸಾರ್ವಜನಿಕರು, ಬೈಕ್ ಸವಾರರು ಅನವಶ್ಯಕವಾಗಿ ತಿರುಗಾಡಬಾರದು ಎನ್ನಲಾಗಿದೆ. ತಾಲೂಕು ಆಡಳಿತದೊಂದಿಗೆ ಸಹಕರಿಸುವಂತೆ ಪೊಲೀಸ್ ಇಲಾಖೆ ಮನವಿ ಮಾಡಿದೆ.
ಬಳ್ಳಾರಿ ಬ್ಯಾಂಕ್ ಮ್ಯಾನೇಜರ್ ಗಳಿಗೆ ಸೋಂಕು
ಸಿಂಡಿಕೇಟ್ ಬ್ಯಾಂಕ್ ಮ್ಯಾನೇಜರ್ ಗೆ ಕೊರೊನಾ ಪಾಸಿಟಿವ್ ಧೃಡವಾಗಿದ್ದು, ಬ್ಯಾಂಕ್ ನ ಸಹಾಯಕ ವ್ಯವಸ್ಥಾಪಕನಲ್ಲೂ ಸೋಂಕು ಕಾಣಿಸಿಕೊಂಡಿದೆ. ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲೂಕಿನ ತೆಕ್ಕಲಕೋಟೆ ಪಟ್ಟಣದ ಸಿಂಡಿಕೇಟ್ ಬ್ಯಾಂಕ್ ನ ಉದ್ಯೋಗಿಗಳಲ್ಲಿ ಈ ಪ್ರಕರಣ ಕಾಣಿಸಿಕೊಂಡಿದ್ದು, ಸಿರುಗುಪ್ಪ ತಹಶೀಲ್ದಾರ್ ಸೇರಿದಂತೆ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಬ್ಯಾಂಕ್ ಸೀಲ್ ಡೌನ್ ಮಾಡಿದ್ದಾರೆ. ಬ್ಯಾಂಕ್ ಸಹಾಯಕ ವ್ಯವಸ್ಥಾಪಕನ ಪ್ರಾಥಮಿಕ ಸಂಪರ್ಕ ಹೊಂದಿರುವವರನ್ನು ಪತ್ತೆ ಹಚ್ಚಿ ಹೋಂ ಕ್ವಾರೆಂಟೆನ್ ಗೆ ಸೂಚಿಸಲಾಗಿದೆ.
ಕೊರೊನಾ ಫ್ರೀ ಆಗಿದ್ದ ಏಕೈಕ ಜಿಲ್ಲೆಯಲ್ಲೀಗ ಸೋಂಕಿತರ ಸಂಖ್ಯೆ ಏರಿಕೆ
ಜಿಲ್ಲೆಯಲ್ಲಿ ಇಂದು 47 ಪಾಸಿಟಿವ್ ಕೇಸ್ ಗಳು ಪತ್ತೆಯಾಗಿವೆ. ಈ ಮೂಲಕ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 610ಕ್ಕೇರಿದೆ. ಜೊತೆಗೆ ಇಂದು ಕೊರೊನಾ ವೈರಸ್ ಗೆ ಒಬ್ಬ ಮೃತಪಟ್ಟರುವ ಬಗ್ಗೆ ಜಿಲ್ಲಾಡಳಿತದ ಬುಲೆಟಿನ್ ನಲ್ಲಿ ಉಲ್ಲೇಖ ಮಾಡಿದೆ. 232 ಜನ ಗುಣಮುಖರಾಗಿದ್ದು, ಸದ್ಯಕ್ಕೆ 369 ಪ್ರಕರಣಗಳು ಸಕ್ರಿಯವಾಗಿವೆ.
ಕೊರೊನಾ ಫ್ರೀ ಆಗಿದ್ದ ಏಕೈಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಏರಿಕೆ
ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಕೊರೊನಾ ವೈರಸ್ ಸೋಂಕು ಪಸರಿಸಿದರೂ ಕೊರೊನಾ ಮುಕ್ತವಾಗಿದ್ದ ಏಕೈಕ ಜಿಲ್ಲೆಯಾಗಿತ್ತು ಗಡಿ ಜಿಲ್ಲೆ ಚಾಮರಾಜನಗರ. ಇದೀಗ ಚಾಮರಾಜನಗರದಲ್ಲೂ ದಿನೇ ದಿನೇ ಸೋಂಕಿತ ಪ್ರಕರಣಗಳು ಹೆಚ್ಚಾಗುತ್ತಿವೆ. ಚಾಮರಾಜನಗರದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 11ಕ್ಕೆ ಏರಿದೆ. ಬೆಂಗಳೂರು ಕೊಳ್ಳೆಗಾಲ ಮಾರ್ಗದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕೆಎಸ್ ಆರ್ ಟಿಸಿ ಕಂಡಕ್ಟರ್ ಕಂ ಡ್ರೈವರ್ ಗೆ ಸೋಂಕು ದೃಢಪಟ್ಟಿದ್ದು, ಆತನನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಂಡಕ್ಟರ್ ವಾಸವಿದ್ದ ಕೊಳ್ಳೆಗಾಲ ಪಟ್ಟಣದ ಮಂಜುನಾಥ ನಗರವನ್ನು ಸೀಲ್ ಡೌನ್ ಮಾಡಲಾಗಿದೆ. ಗುಂಡ್ಲುಪೇಟೆಯಲ್ಲಿ ಬಾಲಕನಲ್ಲೂ ಕೊರೊನಾ ವೈರಸ್ ಸೋಂಕು ಕಾಣಿಸಿಕೊಂಡಿದೆ. ಗುಂಡ್ಲುಪೇಟೆ ಪಟ್ಟಣದ ಕನಕದಾಸ ನಗರದ ಬಾಲಕನನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಗುಂಡ್ಲುಪೇಟೆ ಒಂದರಲ್ಲೇ ಪ್ರಕರಣಗಳ ಸಂಖ್ಯೆ 7ಕ್ಕೆ ಏರಿಕೆಯಾಗಿದೆ.
ಕೋಲಾರದಲ್ಲಿ ಕೊರೊನಾ ಸೋಂಕಿಗೆ ಮೊದಲ ಬಲಿ
ಕೋಲಾರದಲ್ಲಿ ಕೊರೊನಾಗೆ ಮೊದಲ ಬಲಿಯಾಗಿದೆ. ಕೊರೊನಾ ಪಾಸಿಟಿವ್ ಬಂದಿರುವ ಮಹಿಳೆ ನಿನ್ನೆ ತಡರಾತ್ರಿ ಸಾವನ್ನಪ್ಪಿದ್ದಾರೆ. ಕೋಲಾರ ಜಿಲ್ಲೆ ಕೆಜಿಎಫ್ ತಾಲೂಕಿನ ತೂಕಲ್ಲು ಗ್ರಾಮದ 43 ವರ್ಷದ ಮಹಿಳೆ ಕಳೆದ ಒಂದು ವಾರದಿಂದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಜೂನ್ 16ರಂದು ದೆಹಲಿಯಿಂದ ಕೆಜಿಎಫ್ ತಾಲೂಕಿನ ತೂಕಲ್ಲು ಗ್ರಾಮಕ್ಕೆ ಮದುವೆಗೆಂದು ಆಗಮಿಸಿದ್ದ ಈ ಮಹಿಳೆಯಲ್ಲಿ ಕೆಮ್ಮು, ಜ್ವರದ ಲಕ್ಷಣಗಳು ಕಾಣಿಸಿಕೊಂಡ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿದ್ದರು. ಜೂನ್ 19ರಂದು ಈ ಮಹಿಳೆಯಲ್ಲಿ ಸೋಂಕು ಇರುವುದು ದೃಢಪಟ್ಟಿತ್ತು. ಮಹಿಳೆಯ ಪತಿಗೂ ಕೊರೊನಾ ಸೋಂಕು ಇದ್ದು, ಅವರಿಗೂ ಚಿಕಿತ್ಸೆ ನೀಡಲಾಗುತ್ತಿತ್ತು. ತೀವ್ರ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಈ ಮಹಿಳೆ ನಿನ್ನೆ ರಾತ್ರಿ ಮೃತಪಟ್ಟಿರುವುದಾಗಿ ಕೋಲಾರ ಡಿಎಚ್ ಒ ಡಾ. ವಿಜಯ್ ಕುಮಾರ್ ಮಾಹಿತಿ ನೀಡಿದ್ದಾರೆ.
ಚಿತ್ರದುರ್ಗದಲ್ಲಿ ಮತ್ತೆರಡು ಕೊರೊನಾ ಸೋಂಕು ದೃಢ
ಚಿತ್ರದುರ್ಗ ಜಿಲ್ಲೆಯಲ್ಲಿ ಇಂದು ಮತ್ತೆರಡು ಕೊರೊನಾ ಪಾಸಿಟಿವ್ ಕೇಸ್ ದೃಢಪಟ್ಟಿವೆ. ಹಿರಿಯೂರಿನ ನೆಹರೂ ಮೈದಾನ ಸಮೀಪದಲ್ಲಿ ವಾಸಿಯಾಗಿರುವ 50 ವರ್ಷದ ವರ್ತಕನಿಗೆ, ಬೆಂಗಳೂರಿನಿಂದ ಹೊಳಲ್ಕೆರೆ ಪಟ್ಟಣಕ್ಕೆ ಬಂದಿದ್ದ 25 ವರ್ಷದ ಯುವಕನಿಗೆ ಸೋಂಕು ದೃಢಪಟ್ಟಿದೆ. ಜಿಲ್ಲೆಯಲ್ಲಿ ಇದುವರೆಗೂ ಒಟ್ಟು ಸೋಂಕಿತರ ಸಂಖ್ಯೆ 49ಕ್ಕೆ ಏರಿಕೆಯಾಗಿದೆ.
ಹಾವೇರಿಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 56
ಹಾವೇರಿ ಜಿಲ್ಲೆ ಶಿಗ್ಗಾಂವಿ ಪಟ್ಟಣದ 40 ವರ್ಷದ ಮಹಿಳೆ ಮತ್ತು ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಶಿರಬಡಗಿ ಗ್ರಾಮದ 27 ವರ್ಷದ ಯುವಕನಲ್ಲಿ ಇಂದು ಕೊರೊನಾ ವೈರಸ್ ಸೋಂಕು ಇರುವುದು ದೃಢಪಟ್ಟಿದೆ. ಈ ಮೂಲಕ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 56ಕ್ಕೆ ಏರಿದೆ.