ಎಸಿಬಿ ವಿರುದ್ದ ಕಿಡಿ ಕಾರಿದ್ದ ಜಡ್ಜ್ಗೆ ವರ್ಗಾವಣೆ ಬೆದರಿಕೆ: ಮತ್ತೆ ಛೀಮಾರಿ ಹಾಕಿದ ಹೈಕೋರ್ಟ್
ಬೆಂಗಳೂರು,ಜು.4: ಭ್ರಷ್ಟಾಚಾರ ನಿಗ್ರಹ ದಳ ಕಲಕ್ಷನ್ ಸೆಂಟರ್ಗಳಾಗಿವೆ, ಎಸಿಬಿಯೇ ಭ್ರಷ್ಟಾಚಾರದ ಕೂಪವೆಂದು ಕಿಡಿಕಾರಿದ್ದ ಹೈಕೋರ್ಟ್ ನ್ಯಾಯಮೂರ್ತಿಗೆ ವರ್ಗಾವಣೆ ಬೆದರಿಕೆ ಹಾಕಲಾಗಿದೆ.
ಹೌದು, ಅಂತಹ ಸ್ಫೋಟಕ ಹೇಳಿಕೆಯನ್ನು ಸ್ವತಃ ಅದೇ ಹೈಕೋರ್ಟ್ ನ್ಯಾಯಮೂರ್ತಿ ಎಚ್.ಪಿ.ಸಂದೇಶ್ ನೀಡಿದ್ದಾರೆ. ಜನರ ಹಿತ ಮತ್ತು ನ್ಯಾಯಕ್ಕಾಗಿ ವರ್ಗಾವಣೆ ಬೆದರಿಕೆ ಎದುರಿಸಲು ಸಿದ್ಧನಿದ್ದೇನೆ ಎಂದು ಅವರು ಸೋಮವಾರ ಮತ್ತೆ ಎಸಿಬಿ ವಿರುದ್ಧ ಹರಿಹಾಯ್ದಿದ್ದಾರೆ.
ಲಂಚ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಬೆಂಗಳೂರು ನಗರ ಜಿಲ್ಲಾಧಿಕಾರಿ ಕಚೇರಿಯ ಉಪ ತಹಶೀಲ್ದಾರ್ ಪಿ.ಎಸ್. ಮಹೇಶ್ ಸಲ್ಲಿಸಿರುವ ಜಾಮೀನು ಅರ್ಜಿ ವಿಚಾರಣೆ ವೇಳೆ ನ್ಯಾಯಮೂರ್ತಿ ಎಚ್.ಪಿ. ಸಂದೇಶ್ ಅವರು ತರಾಟೆಗೆ ತೆಗೆದುಕೊಂಡಿದ್ದಾರೆ.
'ಬಿ' ರಿಪೋರ್ಟ್ ಸಲ್ಲಿಸದ್ದಕ್ಕೆ ಗರಂ:
ಕಳೆದ ಜೂ.29ರಂದು ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿಗಳು, ಎಸಿಬಿ ಕಚೇರಿಗಳು 'ವಸೂಲಿ ಕೇಂದ್ರ'ಗಳಾಗಿವೆ. ಸ್ವತಃ ಎಸಿಬಿ ಎಡಿಜಿಪಿ ಕಳಂಕಿತ ಅಧಿಕಾರಿಯಾಗಿದ್ದಾರೆ ಎಂದು ಜಾಡಿಸಿತ್ತಲ್ಲದೆ, ಎಷ್ಟು ಭ್ರಷ್ಟಾಚಾರ ಪ್ರಕರಣಗಳಲ್ಲಿ ಎಸಿಬಿ ದಾಳಿ ನಡೆಸಿದೆ? 2016ರಿಂದ ಈವರೆಗೆ ಎಷ್ಟು ಅಧಿಕಾರಿಗಳ ವಿರುದ್ಧ ಬಿ ರಿಪೋರ್ಟ್ ಸಲ್ಲಿಸಿದೆ ಎಂಬ ಬಗ್ಗೆ ವಸ್ತುಸ್ಥಿತಿ ವರದಿ ನೀಡಬೇಕು ಎಂದು ವಿಚಾರಣೆ ಮುಂದೂಡಿದ್ದರು. ಸೋಮವಾರ ಅರ್ಜಿ ವಿಚಾರಣೆಗೆ ಬಂದಾಗ ಹಿಂದಿನ ಸೂಚನೆಯಂತೆ ಎಸಿಬಿ ಸಲ್ಲಿಸಿರುವ ಬಿ ರಿಫೋರ್ಟ್ ವರದಿಗಳನ್ನು ಎಸಿಬಿ ಪರ ವಕೀಲರು ಹಾಜರುಪಡಿಸಲಿಲ್ಲ.
ವರ್ಗಾವಣೆ ಬೆದರಿಕೆ:
ಸಿಟ್ಟಾದ ನ್ಯಾಯಮೂರ್ತಿ, ಎಸಿಬಿಯಲ್ಲಿನ ಅಕ್ರಮಗಳ ಪ್ರಶ್ನಿಸಿರುವುದಕ್ಕೆ ನನಗೆ ವರ್ಗಾವಣೆಯ ಬೆದರಿಕೆ ಬಂದಿದೆ. ಈ ಹಿಂದೆ ನ್ಯಾಯಾಧೀಶರೊಬ್ಬರನ್ನು ವರ್ಗಾಯಿಸಲಾಗಿದೆ ಎಂದು ಹೇಳುವ ಮೂಲಕ ನನಗೇ ವರ್ಗಾವಣೆಯ ಬೆದರಿಕೆ ಹಾಕಲಾಗಿದೆ. ಎಸಿಬಿಯ ಎಡಿಜಿಪಿ ಪವರ್ ಫುಲ್ ಅಂತೆ. ವ್ಯಕ್ತಿಯೊಬ್ಬ ನೀಡಿದ ಮಾಹಿತಿ ಆಧರಿಸಿ ಹೈಕೋರ್ಟ್ನ ನನ್ನ ಸಹೋದ್ಯೋಗಿ ನ್ಯಾಯಮೂರ್ತಿಗಳೇ ನನಗೆ ವರ್ಗಾವಣೆಯ ಬೆದರಿಕೆಯಿದೆ ಎಂದು ತಿಳಿಸಿದ್ದಾರೆ. ವರ್ಗಾವಣೆ ಮಾಡಿಸುವ ಬೆದರಿಕೆಯನ್ನೂ ಆದೇಶದಲ್ಲಿ ಬರೆಸುತ್ತೇನೆ. ಜನರ ಒಳಿತಾಗಿ ವರ್ಗಾವಣೆ ಬೆದರಿಕೆ ಎದುರಿಸಲು ಸಿದ್ಧನಿದ್ದೇನೆ ಎಂದರು.
ಅಲ್ಲದೆ, ನನಗೆ ಯಾರ ಹೆದರಿಕೆಯೂ ಇಲ್ಲ. ಬೆಕ್ಕಿಗೆ ಗಂಟೆ ಕಟ್ಟಲು ಸಿದ್ಧನಿದ್ದೇನೆ. ನ್ಯಾಯಮೂರ್ತಿಯಾದ ಮೇಲೆ ನಾನು ಒಂದಿಂಚೂ ಆಸ್ತಿ ಮಾಡಿಲ್ಲ. ನ್ಯಾಯಮೂರ್ತಿ ಹುದ್ದೆ ಹೋದರೂ ಚಿಂತೆ ಮಾಡುವುದಿಲ್ಲ. ನಾನು ರೈತನ ಮಗ. ಉಳುಮೆ ಮಾಡಿ ಜೀವನ ಸಾಗಿಸಲೂ ಸಿದ್ಧನಿದ್ದೇನೆ. 50 ರುಪಾಯಿಯಲ್ಲಿ ಜೀವನ ನಡೆಸುವುದು ಗೊತ್ತು; 50 ಸಾವಿರ ಹಣದಲ್ಲೂ ಜೀವನ ನಡೆಸುವುದು ಗೊತ್ತಿದೆ. ನಾನು ಯಾವುದೇ ರಾಜಕೀಯ ಪಕ್ಷಕ್ಕೂ ಸೇರಿಲ್ಲ. ಸಂವಿಧಾನ ಮಾತ್ರ ಬದ್ಧನೇ ಹೊರತು ಯಾವುದೇ ಪಕ್ಷದ ಸಿದ್ಧಾಂತಕ್ಕೂ ಬದ್ಧನಲ್ಲ ಎಂದು ನುಡಿದರು.
ಭ್ರಷ್ಟಾಚಾರ ಕ್ಯಾನ್ಸರ್:
ಅಲ್ಲದೆ, ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದವರ ಪರವಾಗಿ ಬಿ ರಿಪೋರ್ಟ್ ಹಾಕುತ್ತಿರುವ ಬಗ್ಗೆ ಇದೇ ವೇಳೆ ಚಾಟಿ ಬೀಸಿದ ನ್ಯಾಯಮೂರ್ತಿಗಳು, ನಮ್ಮಲ್ಲಿ ಭ್ರಷ್ಟಾಚಾರ ಎಂಬ ಕ್ಯಾನ್ಸರ್ ೨ನೇ ಹಂತ ತಲುಪಿದೆ. ಕ್ಯಾನ್ಸರ್ ೩ ಮತ್ತು ೪ನೇ ಹಂತ ತಲುಪುವ ಮುನ್ನವೇ ಗುಣಪಡಿಸಬೇಕಿದೆ. ಹೈಕೋರ್ಟ್ ನಿರ್ದೇಶನದ ಹೊರತಾಗಿಯೂ ಏಕೆ ಎಸಿಬಿ ಸಲ್ಲಿಸಿರುವ ಬಿ ರಿಪೋರ್ಟ್ ಗಳ ಮಾಹಿತಿ ನೀಡಿಲ್ಲ? ಎಂದು ಪ್ರಶ್ನಿಸಿತಲ್ಲದೆ, ಜು.7ರೊಳಗೆ ಸಲ್ಲಿಸುವಂತೆ ಎಸಿಬಿಗೆ ತಾಕೀತು ಮಾಡಿ ವಿಚಾರಣೆ ಮುಂದೂಡಿತು.
ಯಾರನ್ನು ರಕ್ಷಿಸುತ್ತಿದೆ?
ಎಸಿಬಿಯು ಯಾರನ್ನು ರಕ್ಷಣೆ ಮಾಡುತ್ತಿದೆ. ಸಾರ್ವಜನಿಕರನ್ನು ರಕ್ಷಿಸುತ್ತಿದೆಯೇ ಅಥವಾ ಕಳಂಕಿತರನ್ನು ರಕ್ಷಿಸುತ್ತಿದೆಯೇ? ಭ್ರಷ್ಟಾಚಾರದಲ್ಲಿ ಇಡೀ ರಾಜ್ಯವೇ ಹತ್ತಿ ಉರಿಯುತ್ತಿರುವಾಗ ಎಸಿಬಿ ಏನು ಮಾಡುತ್ತಿದೆ. ಬಿ ರಿಪೋರ್ಟ್ ಮಾಹಿತಿ ಬಹಿರಂಗಪಡಿಸಲು ಹಿಂಜರಿಕೆ ಏಕೆ ಎಂದು ಪ್ರಶ್ನಿಸಿತಲ್ಲದೆ, ಬಿ ರಿಪೋರ್ಟ್ ಸಲ್ಲಿಸದ್ದಕ್ಕೆ ಮಧ್ಯಾಹ್ನ 2.30ಕ್ಕೆ ರಾಜ್ಯ ಡಿಪಿಆರ್ ಕಾರ್ಯದರ್ಶಿ ಖುದ್ದು ಹಾಜರಿರಬೇಕು. ಎಸಿಬಿ ಎಡಿಜಿಪಿ ಸರ್ವೀಸ್ ರೆಕಾರ್ಡ್ ಹಾಜರುಪಡಿಸಬೇಕು. ಡಿಜಿ ಕಚೇರಿಯಲ್ಲಿ ಪ್ರಕರಣ 3ನೇ ಆರೋಪಿಯನ್ನು ಗುತ್ತಿಗೆ ನೌಕರನ್ನಾಗಿ ಯಾರು ನೇಮಿಸಿರುವುದು ಎಂಬುದುನ್ನು ತಿಳಿಸುವಂತೆ ರಾಜ್ಯ ಸರ್ಕಾರ ಹಾಗೂ ಎಸಿಬಿಗೆ ಸೂಚಿಸಿತು.
ಮಧ್ಯಾಹ್ನ ವಿಚಾರಣೆ ಆರಂಭವಾದಾಗ ರಾಜ್ಯ ಸರ್ಕಾರದ ಅಡ್ವೋಕೇಟ್ ಜನರಲ್ ಪ್ರಭುಲಿಂಗ್ ನಾವದಗಿ ಹಾಜರಾಗಿ, ಎಸಿಬಿ ಎಡಿಜಿಪಿ ವಿವರ ಸರ್ವಿಸ್ ರೆಕಾರ್ಡ್ಗಳನ್ನು ಸಂಜೆ ನೀಡುವುದಾಗಿ ತಿಳಿಸಿದರು.
ಆಗ ಜಡ್ಜ್, ರಾಜ್ಯದಲ್ಲಿ ಏನು ನಡೆಯುತ್ತಿದೆ. ದುಡ್ಡು ಕಲೆಕ್ಷನ್ ಮಾಡಲು ಖಾಸಗಿ ವ್ಯಕ್ತಿಯನ್ನು ನೇಮಕ ಮಾಡಲಾಗಿದೆ. ಆ ಬಗ್ಗೆ ಫೋನ್ ನಲ್ಲಿ ಸಂಭಾಷಣೆ ಕೂಡಾ ರೆಕಾರ್ಡ್ ಆಗಿದೆ. ಜಿಲ್ಲಾಧಿಕಾರಿಯ ಒಪ್ಪಿಗೆಯಿಲ್ಲದೆ ಈತ 5 ಲಕ್ಷ ಲಂಚ ಪಡೆಯಲು ಸಾಧ್ಯವೇ ಎಂದು ತೀಕ್ಷ್ಣವಾಗಿ ಪ್ರಶ್ನಿಸಿದರು.
ನ್ಯಾಯಮೂರ್ತಿಗಳು ಪ್ರತಿಕ್ರಿಯಿಸಿ, ಲಂಚ ಸ್ವೀಕರಿಸುವಾಗ ಪ್ರತ್ಯಕ್ಷವಾಗಿ ಸಿಕ್ಕಬಿದ್ದವರಿಗೂ ಬಿ ರಿಪೋರ್ಟ್ ಹಾಕಲಾಗಿದೆ. ಅದು ಹೇಗೆ ಸಾಧ್ಯ? ನ್ಯಾಯಾಲಯದಿಂದ ಸರ್ಚ್ ವಾರೆಂಟ್ ಪಡೆದರೂ ಸರ್ಚ್ ಮಾಡುತ್ತಿಲ್ಲ. ಬದಲಿಗೆ ಸರ್ಚ್ ವಾರೆಂಟ್ ತೋರಿಸಿ ಬೆದರಿಸಲಾಗುತ್ತಿದೆ. ವಿಟಮಿನ್ ಎಂ ಇದ್ದರೆ ಎಲ್ಲರನ್ನೂ ರಕ್ಷಿಸುತ್ತೀರಿ. ಅಧಿಕಾರಿಗಳಿಂದ ದುಡ್ಡು ತಗೊಂಡು ಪೋಸ್ಟಿಂಗ್ ಕೊಡೋದು ನಿಲ್ಲಿಸಿದರೆ ಎಲ್ಲ ಸರಿಹೋಗುತ್ತದೆ. ನ್ಯಾಯಾಂಗದ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯಬೇಕಿದೆ ಎಂದು ನುಡಿದರು.
ಐಐಎಸ್ ಅಧಿಕಾರಿಗಳ ಲಾಭಿ:
ಐಎಎಸ್ ಅಧಿಕಾರಿಯ ಲಾಬಿ ಬಗ್ಗೆ ಪ್ರಸ್ತಾಪಿಸಿದ ನ್ಯಾಯಮೂರ್ತಿ, "ಐಎಎಸ್ ಅಧಿಕಾರಿಯೊಬ್ಬರ ಮೇಲೆ ನಡೆಸಿದ ದಾಳಿಯಲ್ಲಿ ನಾಲ್ಕೂವರೆ ಕೋಟಿ ಹಣ ಮತ್ತು 5 ಕೆ.ಜಿ. ಚಿನ್ನ ಸಿಕ್ಕಿತ್ತು. ಆದರೆ, ಎಸಿಬಿ ಮಾತ್ರ ಆ ಕೇಸಿನಲ್ಲಿ ಬಿ ರಿಪೋರ್ಟ್ ಹಾಕಿದೆ. ಬಿ ರಿಪೋರ್ಟ್ ಹಾಕಿದ್ದೇಕೆ ಎಂದು ಪ್ರಶ್ನಿಸಿದ ನ್ಯಾಯಾಧೀಶರು ವರ್ಗಾಯಿಸಲಾಗಿದೆ. ಇದನ್ನೆಲ್ಲಾ ನೋಡಿ ಕಣ್ಮುಚ್ಚಿ ಕೂರುವುದು ಹೇಗೆ? ಐಎಎಸ್ ಐಪಿಎಸ್ ಲಾಬಿ ಗೆ ಒಳಗಾಗುತ್ತಿದೆ. ರಾಜ್ಯಕ್ಕೆ ಅವಮಾನ ಆಗುತ್ತಿದ್ದರೂ ಕಳಂಕಿತ ಡಿಸಿಯನ್ನು ರಕ್ಷಿಸಲಾಗುತ್ತಿದೆ. ರಾಜ್ಯದಲ್ಲಿ ಅಧಿಕಾರಿಗಳೇ ದರ್ಬಾರ್ ಮಾಡಲು ಬಿಡಲಾಗಿದ್ದು, ಆ ಮೂಲಕ ಸರ್ಕಾರವೂ ಅಪರಾಧದ ಭಾಗವಾಗಿದೆ ಎಂದು ಹೇಳಿದರು.
Recommended Video