ಕರ್ನಾಟಕ ಪತ್ರಕರ್ತರ ಮಾನ ಹರಾಜಿಗಿಟ್ಟ ಹೇಮಂತ್ ಕಶ್ಯಪ್ ಮತ್ತು ಹಫ್ತಾ ದಂಧೆ!
ಬೆಂಗಳೂರು, ಮಾರ್ಚ್ 22: ದೇಶದಾದ್ಯಂತ ಕರ್ನಾಟಕದ ಪತ್ರಕರ್ತರ ಮಾನ ಮೂರಾಬಟ್ಟೆಯಾಗಿದೆ. ಕಳೆದ ಮಂಗಳವಾರದಿಂದ ಯಾವುದಾದರೂ ಒಂದು ಸಾಮಾಜಿಕ ಮಾಧ್ಯಮಗಳ ಮೂಲಕ ಮುಖಕ್ಕೆ ರಾಚುವಂತೆ ಅದೇ ಸುದ್ದಿ ಎದುರಾಗುತ್ತಿದೆ. ಅಂದಹಾಗೆ ಪದ್ಮಶ್ರೀ ಪುರಸ್ಕೃತ ವೈದ್ಯರೊಬ್ಬರನ್ನು ಬ್ಲ್ಯಾಕ್ ಮೇಲೆ ಮಾಡಲು ಹೋಗಿ, ಬೆಂಗಳೂರಿನಲ್ಲಿ ಟೀವಿ ಪತ್ರಕರ್ತನೊಬ್ಬನ ಬಂಧನವಾಗಿದೆ.
ವೈದ್ಯರ ಖಾಸಗಿ ವಿಡಿಯೋ ತನ್ನ ಬಳಿ ಇದೆ. ಅದನ್ನು ಪ್ರಸಾರ ಆಗುವಂತೆ ಮಾಡುವುದಾಗಿ ಬೆದರಿಸಿದ್ದಾಗಿ ಆ ಪತ್ರಕರ್ತನ ಮೇಲಿರುವ ಆರೋಪ. ಪತ್ರಕರ್ತನ ಹೆಸರು ಹೇಮಂತ್ ಕಶ್ಯಪ್. ಆತ ಕನ್ನಡದ ನ್ಯೂಸ್ ಚಾನಲ್ ಪಬ್ಲಿಕ್ ಟಿವಿಯಲ್ಲಿ ಇನ್ ಪುಟ್ ಹೆಡ್ ಆಗಿದ್ದವನು. ಪತ್ರಕರ್ತ ಹೇಮಂತ್ ಹೆದರಿಸಿ, ಹಣ ವಸೂಲಿಗೆ ಮುಂದಾಗಿದ್ದು, ಕನ್ನಡದ ಹೆಸರಾಂತ ನಟ ಡಾ.ರಾಜ್ ಕುಮಾರ್ ಗೆ ವೈದ್ಯರಾಗಿದ್ದ ಬಿ.ರಮಣ್ ರಾವ್ ಅವರಿಂದ.
ವೈದ್ಯರಿಗೆ ಬ್ಲ್ಯಾಕ್ಮೇಲ್ ಪ್ರಕರಣ: ಸಿಬ್ಬಂದಿಯನ್ನು ವಜಾಗೊಳಿಸಿದ ಪಬ್ಲಿಕ್ ಟಿವಿ
ವೈದ್ಯರ ಅದೇ ಖಾಸಗಿ ವಿಡಿಯೋ ತನ್ನ ಬಳಿಯೂ ಇದೆ ಎಂದು ಮತ್ತೊಂದು ಸುದ್ದಿ ವಾಹಿನಿಯ ಪತ್ರಕರ್ತನೂ ಬ್ಲ್ಯಾಕ್ ಮೇಲ್ ಮಾಡಿದ್ದಾನೆ ಎಂದು ಸ್ವತಃ ವೈದ್ಯ ರಮಣ್ ರಾವ್ ಹೇಳಿದ್ದಾರೆ. ಮರ್ಯಾದೆಗೆ ಅಂಜಿದ ರಮಣ್ ರಾವ್, ಆರಂಭದಲ್ಲಿ ಐದು ಲಕ್ಷ ರುಪಾಯಿಯನ್ನು ಮೂರು ಕಂತಿನಲ್ಲಿ ನೀಡಿದ್ದಾರೆ.
ಫೋನ್ ಕರೆಗಳ ಮಾಹಿತಿ ಕಲೆ ಹಾಕುತ್ತಿರುವ ಪೊಲೀಸರು
ಆದರೆ, ನಾನು ಸುಮ್ಮನಾಗಬೇಕು ಅಂದರೆ ಐವತ್ತು ಲಕ್ಷ ಕೊಡಬೇಕು ಎಂದು ಯಾವಾಗ ಒತ್ತಾಯ ಕೇಳಿಬಂತೋ, ಆಗ ಪೊಲೀಸರಿಗೆ ದೂರು ನೀಡಿದ್ದಾರೆ. ಕಳೆದ ಬುಧವಾರದಂದು ಹೇಮಂತ್ ಕಶ್ಯಪ್ ನನ್ನು ನಾಲ್ಕು ದಿನದ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಆತನ ಮೊಬೈಲ್ ಫೋನ್ ಅನ್ನು ಸೈಬರ್ ಕ್ರೈಂ ಸೆಲ್ ಗೆ ಕಳುಹಿಸಲಾಗಿದೆ. ಈ ಹಿಂದೆ ಕೂಡ ಹೇಮಂತ್ ಇದೇ ರೀತಿಯ ಕೃತ್ಯಗಳಲ್ಲಿ ಪಾಲ್ಗೊಂಡಿರುವ ಶಂಕೆ ಇದೆ. ಆತನ ಫೋನ್ ಕರೆಗಳ ಸಂಪೂರ್ಣ ವಿವರಗಳನ್ನು ಕಲೆ ಹಾಕುತ್ತಿರುವ ಪೊಲೀಸರು, ಆ ಮೂಲಕ ಅವೆಲ್ಲ ಬಯಲಾಗುತ್ತವೆ ಎಂಬ ನಂಬಿಕೆಯಲ್ಲಿದ್ದಾರೆ. ಈ ಹೇಮಂತ್ ಜತೆಗೆ ಸಹಾಯಕನಂತೆ ಕೆಲಸ ಮಾಡಿರುವ ಮತ್ತೊಬ್ಬ ಪತ್ರಕರ್ತ, ಸಮಯ ಚಾನಲ್ ನ ಮಂಜುನಾಥ್ ಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಸಾಕ್ಷ್ಯವಾಗಿ ಸಿಸಿಟಿವಿ ಫೂಟೇಜ್ ಇದೆ
ಈ ಬ್ಲ್ಯಾಕ್ ಮೇಲ್ ಹಾಗೂ ಹಫ್ತಾ ವಸೂಲಿ ದಂಧೆಯಲ್ಲಿ ಮಂಜುನಾಥ್ ಕೂಡ ಭಾಗಿ ಎಂದು ಶಂಕಿಸಲಾಗಿದ್ದು, ಇನ್ನೂ ಹಲವರು ಈ ಜಾಲದಲ್ಲಿ ಇರುವ ಬಗ್ಗೆ ಅನುಮಾನಗಳಿವೆ. ಇನ್ನು ಹೇಮಂತ್ ಕಶ್ಯಪ್ ಬಳಿ ಇದ್ದದ್ದು ಖಾಸಗಿ ವಿಡಿಯೋ. ಅದು ಹೇಗೆ ಆತನಿಗೆ ಸಿಕ್ಕಿತು ಎಂಬ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. ವಿವಿಧ ದಿನದಂದು ಸದಾಶಿವನಗರದಲ್ಲಿನ ರಮಣ್ ರಾವ್ ಅವರ ಕ್ಲಿನಿಕ್ ಗೆ ತೆರಳಿ, ಹೇಮಂತ್ ಕಶ್ಯಪ್ ಹಣ ಪಡೆದುಕೊಂಡಿರುವುದಕ್ಕೆ ಪ್ರಬಲ ಸಾಕ್ಷ್ಯವಾಗಿ ಸಿಸಿಟಿವಿ ಫೂಟೇಜ್ ಇದೆ. ವೈದ್ಯರಿಂದ ಹಣ ಪಡೆಯುತ್ತಿರುವ ನಾಲ್ಕು ವಿಡಿಯೋ ಕ್ಲಿಪ್ ಗಳು ಪೊಲೀಸರ ಬಳಿ ಇದೆ. ಕಳೆದ ಮಂಗಳವಾರ ಸಂಜೆ ಹಣ ಪಡೆದುಕೊಂಡಿದ್ದು ಇತ್ತೀಚಿನ ವಿಡಿಯೋ ಕ್ಲಿಪ್ ಆಗಿದೆ.
ವೈದ್ಯರಿಗೆ 50 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದ ಪತ್ರಕರ್ತನಿಗೆ 4 ದಿನ ನ್ಯಾಯಾಂಗ ಬಂಧನ
ಪಬ್ಲಿಕ್ ಟಿವಿ ರಂಗನಾಥ್ ವಿಡಿಯೋ ಹೇಳಿಕೆ
ಮೂಲಗಳ ಪ್ರಕಾರ, ಈ ವಿಡಿಯೋ ಬಗ್ಗೆ ಹಲವು ಪತ್ರಕರ್ತರಿಗೆ ವಿಡಿಯೋ ಕ್ಲಿಪ್ ಬಗ್ಗೆ ತಿಳಿದಿದೆ ಎಂದು ಹೇಮಂತ್ ಕಶ್ಯಪ್ ಹೇಳಿದ್ದಾನೆ. ಆದ್ದರಿಂದ ಹಣಕ್ಕಾಗಿ ಒತ್ತಾಯಿಸಿ, ವಸೂಲಿ ಮಾಡಲು ಮುಂದಾಗಿದ್ದಾಗಿ ತಿಳಿಸಿದ್ದಾನೆ. ಆತನ ಹೇಳಿಕೆ ಸತ್ಯಾಸತ್ಯತೆ ಬಗ್ಗೆ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಹೇಮಂತ್ ಕಶ್ಯಪ್ ಸಿಕ್ಕಿಬಿದ್ದ ಮರು ದಿನವೇ ಪಬ್ಲಿಕ್ ಟಿವಿ ಸಂಪಾದಕರಾದ ಎಚ್.ಆರ್.ರಂಗನಾಥ್ ವಿಡಿಯೋ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು, ಕೆಲಸದಿಂದ ಆತನನ್ನು ವಜಾ ಮಾಡಲಾಗಿದೆ. ಈ ತನಿಖೆಯಲ್ಲಿ ಪೊಲೀಸರಿಗೆ ಅಗತ್ಯ ಇರುವ ಎಲ್ಲ ಸಹಕಾರ ನೀಡುವುದಾಗಿ ತಿಳಿಸಿದ್ದಾರೆ.
ಹೇಮಂತ್ ಕಶ್ಯಪ್ ವಿರುದ್ಧ ಐಪಿಸಿ ಸೆಕ್ಷನ್ ಗಳಡಿ ಕೇಸ್
ಪತ್ರಕರ್ತ ಹೇಮಂತ್ ಕಶ್ಯಪ್ ವಿರುದ್ಧ ಐಪಿಸಿ ಸೆಕ್ಷನ್ 506, 507, 384, 385, 120B ಹಾಗೂ 34 ಹೀಗೆ ವಿವಿಧ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಇನ್ನು ವೈದ್ಯರ ಖಾಸಗಿ ವಿಡಿಯೋ ಎಂದು ಹೇಳಲಾಗುತ್ತಿರುವುದರ ಸಾಚಾತನದ ಪರೀಕ್ಷೆ ಕೂಡ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಸಮಯ ಚಾನಲ್ ನ ಬೂಕನಕೆರೆ ಮಂಜುನಾಥ್ ತಲೆ ತಪ್ಪಿಸಿಕೊಂಡಿದ್ದು, ಆತನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಬ್ಲ್ಯಾಕ್ ಮೇಲ್, ಹಫ್ತಾ ವಸೂಲಿಯ ಆರೋಪದ ಹಿನ್ನೆಲೆಯಲ್ಲಿ ಯಾವುದೇ ಒತ್ತಡಕ್ಕೆ ಮಣಿಯದೆ ಪೊಲೀಸರು ತನಿಖೆ ನಡೆಸಬೇಕು ಎಂದು ಎಲ್ಲ ವಲಯದಿಂದ ಕೇಳಿಬರುತ್ತಿರುವ ಒತ್ತಾಯ.