ಕಾಳಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಿಂದ ಜೋಯಿಡಾ ಹೊರಕ್ಕೆ
ಕಾರವಾರ, ಆಗಸ್ಟ್ 11: ಉತ್ತರ ಕನ್ನಡ ಜಿಲ್ಲೆಯ ಕಾಳಿ ಹುಲಿ ಸಂರಕ್ಷಿತ ಅರಣ್ಯದ ಪರಿಸರ ಸೂಕ್ಷ್ಮ ಪ್ರದೇಶದಿಂದ ಜೋಯಿಡಾ ತಾಲೂಕನ್ನು ಹೊರಗಿಡಲು ಪ್ರಸ್ತಾವನೆ ಸಲ್ಲಿಕೆಯಾಗಿದೆ. ರಾಜ್ಯ ಅರಣ್ಯ ಇಲಾಖೆ ಕೇಂದ್ರ ಸರ್ಕಾರಕ್ಕೆ ಈ ಪ್ರಸ್ತಾವನೆ ಸಲ್ಲಿಸಿದೆ.
ಡಾ.ಕೆ.ಕಸ್ತೂರಿ ರಂಗನ್ ಸಮಿತಿಯ ವರದಿ ಆಧಾರಿಸಿ ಉತ್ತರ ಕನ್ನಡದ 3 ತಾಲೂಕುಗಳ 1,201.94 ಚದರ ಕಿ.ಮೀ. ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶ (ಇಎಸ್ಜೆಡ್) ಎಂದು ಘೋಷಿಸಿ ಕೇಂದ್ರ ಸರ್ಕಾರ ಕರಡು ಅಧಿಸೂಚನೆ ಹೊರಡಿಸಿತ್ತು. 2016ರಲ್ಲಿ ಪರಿಸರ ಸಚಿವಾಲಯ ನವೆಂಬರ್ನಲ್ಲಿ ಹೊರಡಿಸಿದ ಈ ಅಧಿಸೂಚನೆಯಲ್ಲಿ 13,796 ಹೆಕ್ಟೇರ್ ಅರಣ್ಯ ಪ್ರದೇಶವನ್ನು ಗುರುತಿಸಲಾಗಿತ್ತು.
ಇದರಲ್ಲಿ ಜೊಯಿಡಾ ತಾಲೂಕಿನ ಬಹುತೇಕ ಗ್ರಾಮಗಳು, ಹಳಿಯಾಳದ 7 ಹಾಗೂ ಯಲ್ಲಾಪುರದ 7 ಗ್ರಾಮಗಳೂ ಸೇರಿದ್ದವು. ಜೋಯಿಡಾ ತಾಲೂಕಿನ ಬಹುತೇಕ ಪ್ರದೇಶವನ್ನು ಕರಡು ಅಧಿಸೂಚನೆಯಲ್ಲಿ ಸೇರಿಸಿದ್ದನ್ನು ವಿರೋಧಿಸಿ ಸ್ಥಳೀಯರು ಭಾರೀ ಪ್ರತಿಭಟನೆ ನಡೆಸಿದ್ದರು.
ಕೊನೆಗೆ ರಾಜ್ಯ ಸರ್ಕಾರ ಸಚಿವ ಸಂಪುಟ ಉಪಸಮಿತಿ ರಚಿಸಿ, ಆ ಸಮಿತಿಯು ಫೆಬ್ರುವರಿಯಲ್ಲಿ 1,201.94 ಚದರ ಕಿ.ಮೀ.ಯಿಂದ 312.52 ಚದರ ಕಿ.ಮೀ ಗೆ ಪರಿಸರ ಸೂಕ್ಷ್ಮ ಪ್ರದೇಶದ ವ್ಯಾಪ್ತಿ ಇಳಿಸಲು ಶಿಫಾರಸು ಮಾಡಿತ್ತು.
ಕಳೆದ ತಿಂಗಳು ದೆಹಲಿಯಲ್ಲಿ ನಡೆದ ಅರಣ್ಯ, ಪರಿಸರ ಹಾಗೂ ಹವಾಮಾನ ಬದಲಾವಣೆ ಸಚಿವಾಲಯದ ತಜ್ಞರ ಸಮಿತಿ ಸಭೆಯಲ್ಲಿ ರಾಜ್ಯ ಸರ್ಕಾರ ಈ ಪ್ರಸ್ತಾವ ಮಂಡಿಸಿದೆ. ಇದನ್ನು ಪರಿಗಣನೆಗೆ ತೆಗೆದುಕೊಂಡು ಕೇಂದ್ರ ಪರಿಸರ ಸಚಿವಾಲಯ ಅಂತಿಮ ಅಧಿಸೂಚನೆ ಹೊರಡಿಸಬೇಕಿದೆ.