ಜಿಂದಾಲ್ ಸ್ಟೀಲ್ಗೆ 3677 ಎಕರೆ ಮಾರಾಟ, ಎಚ್ಡಿಕೆ ಟ್ವೀಟ್ ಬಿಚ್ಚಿಟ್ಟ ರಹಸ್ಯ
ಬೆಂಗಳೂರು, ಏಪ್ರಿಲ್ 27: ಬಳ್ಳಾರಿ ಜಿಲ್ಲೆಯ ತೋರಣಗಲ್ ಬಳಿ ಜಿಂದಾಲ್ ಕಂಪನಿಗೆ ಲೀಸ್ ಕಂ ಸೇಲ್ ಆಧಾರದ ಮೇಲೆ ನೀಡಿದ್ದ 3677 ಎಕರೆ ಭೂಮಿಯನ್ನು ಅದೇ ಕಂಪನಿಗೆ ಮಾರಾಟ ಮಾಡಲು ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಸಂಪುಟ ತೀರ್ಮಾನದ ವಿರುದ್ಧ ಸರಣಿ ಟ್ವೀಟ್ಗಳನ್ನು ಮಾಡಿರುವ ಮಾಜಿ ಸಿಎಂ ಕುಮಾರಸ್ವಾಮಿ, ಮಹತ್ವದ ಅಂಶವನ್ನು ಉಲ್ಲೇಖಿಸಿದ್ದಾರೆ.
ಜಿಂದಾಲ್ ಮುಂದೆ ಬಿಜೆಪಿ ಸರ್ಕಾರ ಮಂಡಿಯೂರಲು ಒಂದು ಕಾರಣವಿದೆ. ಅದೇನೆಂದು ಯಡಿಯೂರಪ್ಪನವರಿಗೆ ಚೆನ್ನಾಗಿ ಗೊತ್ತಿದೆ. ಅದನ್ನು ಅವರೇ ಬಹಿರಂಗಪಡಿಸಲಿ ಎಂದು ಕುಮಾರಸ್ವಾಮಿ ಟ್ವಿಟ್ನಲ್ಲಿ ಕೆಣಕಿದ್ದಾರೆ. ಜಿಂದಾಲ್ ಸಂಸ್ಥೆಗೆ ಲೀಸ್ ಕಂ ಸೇಲ್ ಆಧಾರದ ಮೇಲೆ ಭೂಮಿ ಮಾರಾಟ ಮಾಡಲು ಈ ಹಿಂದೆ ಕುಮಾರಸ್ವಾಮಿ ಮುಂದಾಗಿದ್ದರು. ಇದು ಬಹುದೊಡ್ಡ ಹಗರಣ ಎಂದು ಅಹೋರಾತ್ರಿ ಧರಣಿ ನಡೆಸಿದ್ದ ಯಡಿಯೂರಪ್ಪ ಸರ್ಕಾರ ಇದೀಗ ಅದೇ ಕೆಲಸ ಮಾಡಿ ವಿವಾದ ಮೈಮೇಲೆ ಎಳೆದುಕೊಂಡಿದೆ.
ಕರ್ನಾಟಕಕ್ಕೆ ಪ್ರತಿ ನಿತ್ಯ 325 ಟನ್ ಆಕ್ಸಿಜನ್ ಪೂರೈಕೆ : ಜಿಂದಾಲ್ ಸ್ಪಷ್ಟನೆ
ಬಳ್ಳಾರಿ ಜಿಲ್ಲೆಯ ತೋರಣಗಲ್ಲು ಸಮೀಪ ಉಕ್ಕು ಕಾರ್ಖಾನೆಗೆ ರಾಜ್ಯ ಸರ್ಕಾರ 1996 ರಲ್ಲಿ ಜಿಂದಾಲ್ ವಿಜಯನಗರ ಸ್ಟೀಲ್ ಲಿ. ಸಂಸ್ಥೆಗೆ 3430 ಎಕರೆ ಭೂಮಿಯನ್ನು ಗುತ್ತಿಗೆ ಕಂ ಮಾರಾಟ ಆಧಾರದ ಮೇಲೆ ನೀಡಲಾಗಿತ್ತು. ಕಾರ್ಖಾನೆ ವಿಸ್ತರಣೆಗೆಂದು 2004ರಲ್ಲಿ ಪುನಃ ನೂರಾರು ಎಕರೆ ಜಮೀನನ್ನು ಲೀಸ್ ಕಂ ಸೇಲ್ ಆಧಾರದ ಮೇಲೆ ರಾಜ್ಯ ಸರ್ಕಾರ ಭೂಮಿ ನೀಡಿತ್ತು. ಲೀಸ್ ಒಪ್ಪಂದದ ಪ್ರಕಾರ 2012ರಲ್ಲಿ ಜಿಂದಾಲ್ ಸಂಸ್ಥೆಗೆ ಲೀಸ್ ಭೂಮಿ ಕ್ರಯವಾಗಬೇಕಿತ್ತು. ವಿವಾದ ಉಂಟಾಗಿ ಪುನಃ ಲೀಸ್ ಅವಧಿಯನ್ನು ಹತ್ತು ವರ್ಷಗಳ ಕಾಲ ವಿಸ್ತರಣೆಯಾಗಿತ್ತು.
ಜಿಂದಾಲ್ ಗೆ ಭೂ ಮಂಜೂರಾತಿ
2019 ಮೇ ನಲ್ಲಿ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಅವರು ಸದರಿ ಭೂಮಿಯನ್ನು ಲೀಸ್ ಕಂ ಸೇಲ್ ಆಧಾರದ ಮೇಲೆ ಜಿಂದಾಲ್ ಸಂಸ್ಥೆಗೆ ಭೂಮಿಯನ್ನು ಮಾರಾಟ ಮಾಡಲು ಮುಂದಾಗಿದ್ದರು. ಇದಕ್ಕೆ ಬಿಜೆಪಿ ನಾಯಕರು ವಿರೋಧ ವ್ಯಕ್ತಪಡಿಸಿದ್ದರು. ಬಿಜೆಪಿ ಮಾತ್ರವಲ್ಲ ಕಾಂಗ್ರೆಸ್ ಹಿರಿಯ ನಾಯಕ ಎಚ್.ಕೆ. ಪಾಟೀಲ್ ಸರ್ಕಾರದ ತೀರ್ಮಾನದ ವಿರುದ್ಧ ತಿರುಗಿ ಬಿದ್ದಿದ್ದರು. ಕೆಲವು ದಾಖಲೆ ಪತ್ರಗಳನ್ನು ಬಿಡುಗಡೆ ಮಾಡಿದ್ದರು. ಇದರ ಬೆನ್ನಲ್ಲೇ ಬಿ.ಎಸ್. ಯಡಿಯೂರಪ್ಪ ಅಹೋರಾತ್ರಿ ಧರಣಿ ನಡೆಸಿದ್ದರು. ಬಿಜೆಪಿ ಯುವ ಮೋರ್ಚಾ ನಾಯಕರು ವಿಧಾನಸೌಧಕ್ಕೆ ಮುತ್ತಿಗೆ ಹಾಕಿದ್ದರು. ಕುಮಾರಸ್ವಾಮಿ ವಿರುದ್ಧ ಕಿಕ್ ಬ್ಯಾಕ್ ಆರೋಪ ಮಾಡಿದ್ದರಿಂದ ಇದೀಗ ಜಿಂದಾಲ್ ಸಂಸ್ಥೆಗೆ ಲೀಸ್ ಕಂ ಸೇಲ್ ಅಡಿ ಮಂಜೂರು ಮಾಡಿರುವ 3677 ಎಕರೆ ಭೂಮಿಯನ್ನು ಜಿಂದಾಲ್ ಸ್ಟೀಲ್ ಸಂಸ್ಥೆಗೆ ಮಾರಾಟ ಮಾಡುವ ತೀರ್ಮಾನವನ್ನು ಸಚಿವ ಸಂಪುಟ ಸಭೆ ಕೈಗೊಂಡಿದೆ.
ಯಡಿಯೂರಪ್ಪದು ಅದೇ ತೀರ್ಮಾನ
ಈ ತೀರ್ಮಾನದ ಬೆನ್ನಲ್ಲೇ ಸರಣಿ ಟ್ವೀಟ್ಗಳನ್ನು ಮಾಡುವ ಮೂಲಕ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ "ಜಿಂದಾಲ್ ಭೂಮಿ ಡೀಲ್" ವೃತ್ತಾಂತವನ್ನು ಹೊರಗೆಡವಿದ್ದಾರೆ. ಜಿಂದಾಲ್ ಸಂಸ್ಥೆಯಿಂದಲೇ ಚೆಕ್ ಮೂಲಕ ಕಿಕ್ ಬ್ಯಾಕ್ ಪಡೆದುಕೊಂಡ ಆರೋಪ ಸಂಬಂಧ ದಾಖಲಾಗಿದ್ದ ಖಾಸಗಿ ದೂರು ಯಡಿಯೂರಪ್ಪ ಅವರ ಪಾಲಿಗೆ ಮಗ್ಗಲ ಮುಳ್ಳಾಗಿತ್ತು. ಇದೀಗ ಭೂ ಪರಭಾರೆ ಡೀಲ್ ಕೂಡ ಪುನಃ ವಿವಾದದ ಸ್ವರೂಪ ಪಡೆದುಕೊಂಡು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಕಂಟಕ ಎದುರಾಗಲಿದೆಯಾ ಎಂಬ ಪ್ರಶ್ನೆ ಎದ್ದಿದೆ.
ಹೀರೇಮಠ್ ಬಳಿ ದಾಖಲೆಗಳು
ಇನ್ನು ಜಿಂದಾಲ್ ಸಂಸ್ಥೆಗೆ 3677 ಎಕರೆ ಭೂಮಿಯನ್ನು ಮಂಜೂರು ಮಾಡಿರುವ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಸಾಮಾಜಿಕ ಕಾರ್ಯಕರ್ತ ಎಸ್.ಆರ್. ಹೀರೇಮಠ್ ಪ್ರಶ್ನೆ ಮಾಡಿದ್ದರು. ಈ ಕುರಿತು ಪ್ರತ್ಯೇಕ ಸುದ್ದಿಗೋಷ್ಠಿ ಕರೆದಿದ್ದ ಹೀರೇಮಠ್, ಜಿಂದಾಲ್ ಸಂಸ್ಥೆಗೆ ಸರ್ಕಾರ ಮಂಜೂರು ಮಾಡಿರುವ ಭೂಮಿ, ರೈತರಿಂದ ಖರೀದಿ ಮಾಡಿರುವ ಭೂಮಿಯ ಕುರಿತು ಸಮಗ್ರ ತನಿಖೆಯಾಗಬೇಕು. ದಕ್ಷಿಣ ಕೊರಿಯಾದಲ್ಲಿ ಪಾಸ್ಕೋ ಕಂಪನಿ 2 ಸಾವಿರ ಎಕರೆಯಲ್ಲಿಯಲ್ಲಿ ಪ್ರತಿ ವರ್ಷ 1 ಕೋಟಿ ಮೆಟ್ರಿಕ್ ಟನ್ ಉಕ್ಕು ಉತ್ಪಾದಿಸುತ್ತದೆ. ಮಿತ್ತಲ್ ಕಂಪನಿ ಇಂಗ್ಲೆಂಡ್ನಲ್ಲಿ ಎರಡು ಸಾವಿರ ಎಕರೆ ಜಾಗದಲ್ಲಿ 1 ಕೋಟಿ ಮಿಲಿಯನ್ ಮೆಟ್ರಿಕ್ ಟನ್ ಉಕ್ಕು ಉತ್ಪಾದಿಸುತ್ತದೆ. ಒಂದು ಕೋಟಿ ಮೆಟ್ರಿಕ್ ಟನ್ ಉಕ್ಕು ಉತ್ಪಾದಿಸಲು ಜಿಂದಾಲ್ ಕಂಪನಿ ಬಕಾಸುರನಂತೆ ಭೂಮಿ ಬಳಸುತ್ತಿದೆ. ಈ ಬಗ್ಗೆ ಸಮಗ್ರ ತನಿಖೆಯಾಗಬೇಕು ಎಂದು ಹೀರೇಮಠ್ ಆಗ್ರಹಿಸಿದ್ದರು.
ಕುಮಾರಸ್ವಾಮಿ ಟ್ವೀಟ್ ಮರ್ಮ
ವಿರೋಧಕ್ಕಾಗಿಯೇ ವಿರೋಧ ಮಾಡುವುದು, ವಿರೋಧ ಪಕ್ಷದಲ್ಲಿದ್ದಾಗ ವಿರೋಧಿಸಿದ್ದನ್ನೇ ಆಡಳಿತಕ್ಕೆ ಬಂದಾಗ ಕದ್ದು ಮುಚ್ಚಿ ಮಾಡುವುದು ಬಿಜೆಪಿಯ 'ಸಂಸ್ಕೃತಿ'. ಜಿಂದಾಲ್ಗೆ ಭೂಮಿ ನೀಡುವ ವಿಚಾರದಲ್ಲಿ ಅಂದು ನನ್ನ ಸರ್ಕಾರದ ವಿರುದ್ಧ, ನನ್ನ ವಿರುದ್ಧ ಸಲ್ಲದ ಆರೋಪ ಮಾಡಿದ್ದ ಬಿಎಸ್ವೈ ಅದೇ ಆರೋಪಗಳನ್ನು ತಮ್ಮ ಮೇಲೆ ಹೊತ್ತುಕೊಳ್ಳುವರೇ? ಎಂದು ಪ್ರಶ್ನೆ ಮಾಡಿದ್ದಾರೆ. ಬಿಜೆಪಿ ಸರ್ಕಾರ ಜಿಂದಾಲ್ ಮುಂದೆ ಏಕಾಏಕಿ ಮಂಡಿಯೂರಲೂ ಒಂದು ಕಾರಣವಿದೆ. ಅದೇನೆಂದು ಯಡಿಯೂರಪ್ಪರಿಗೆ ಚೆನ್ನಾಗಿ ಗೊತ್ತಿದೆ. ಅದನ್ನು ಅವರೇ ಬಹಿರಂಗಪಡಿಸಲಿ. ಲೀಸ್ ಕಂ ಸೇಲ್ ಆಧಾರದ ಭೂಮಿಯನ್ನು ಅಂತಿಮವಾಗಿ ಕ್ರಯ ಮಾಡಿಕೊಡಲೇಬೇಕಾದ ಕಾನೂನು ಬಿಜೆಪಿಗೆ ಈಗಲಾದರೂ ಅರಿವಿಗೆ ಬಂದಿದ್ದರೆ ಸಾಕು. ಇನ್ನಾದರೂ ಬಿಜೆಪಿ ಸಲ್ಲದ ಕಿತಾಪತಿ ಮಾಡದಿರಲಿ ಎಂದು ಟಾಂಗ್ ಕೊಟ್ಟಿದ್ದಾರೆ.
ಈಸ್ಟ್ ಇಂಡಿಯಾ ಕಂಪನಿ
ಈಗ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿರುವ ಆನಂದ್ ಸಿಂಗ್ ಜಿಂದಾಲ್ಅನ್ನು'ಈಸ್ಟ್ ಇಂಡಿಯಾ ಕಂಪನಿ' ಎಂದಿದ್ದರು. ಜಿಂದಾಲ್ ವಿರುದ್ಧ ಅಂದಿನ ಗೃಹ ಸಚಿವರಿಗೆ ಪತ್ರ ಬರೆದಿದ್ದರು. ಅವರೇ ಇರುವ ಈಗಿನ ಸಂಪುಟ ಸಭೆ ಜಿಂದಾಲ್ಗೆ ಭೂಮಿ ನೀಡಿದೆ. ಆನಂದ್ ಸಿಂಗ್ ಈಗ ಈಸ್ಟ್ ಇಂಡಿಯಾ ಕಂಪನಿ ಪರವಾಗಿದ್ದಾರಾ? ಎಂದು ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ. ಜೆಡಿಎಸ್ ಮತ್ತು ಕಾಂಗ್ರೆಸ್ ನೇತೃತ್ವದ ಸಮ್ಮಿಶ್ರ ಸರ್ಕಾರ ಭೂಮಿ ಕೊಡೋಕೆ ಬಹು ವಿರೋಧ ವ್ಯಕ್ತವಾಗಿತ್ತು. ಕೋವಿಡ್ ಸಂಕಷ್ಟ ಕಾಲದಲ್ಲಿ ಇದೀಗ ಏಕಾಏಕಿ ಯಡಿಯೂರಪ್ಪ ಸರ್ಕಾರ ಸಚಿವ ಸಂಪುಟದಲ್ಲಿ ಈ ತೀರ್ಮಾನ ಕೈಗೊಂಡಿದೆ. ಜಿಂದಾಲ್ಗೆ ಭೂ ಮಂಜೂರಾತಿ ಸಂಬಂಧ ಈ ಹಿಂದೆಯೂ ಅಕ್ರಮದ ವಾಸನೆ ಕೇಳಿ ಬಂದಿತ್ತು. ಇದೀಗ ಯಡಿಯೂರಪ್ಪ ಸರ್ಕಾರ ತೆಗೆದುಕೊಂಡಿರುವ ತೀರ್ಮಾನದ ವಿರುದ್ಧ ಹೀರೇಮಠ್ ನ್ಯಾಯಾಲಯದ ಮೊರೆ ಹೋದರೂ ಅಚ್ಚರಿ ಪಡಬೇಕಿಲ್ಲ.
Recommended Video
ಶುದ್ಧ ಕ್ರಯದ ವಿವರ ಗೃಹ ಸಚಿವರಿಗೆ ಇಲ್ಲ
ಜಿಂದಾಲ್ ಕಂಪನಿಗೆ 3,677 ಎಕರೆ ಭೂಮಿ ಮಾರಾಟ ಮಾಡಲು ಬಿಜೆಪಿ ಸರ್ಕಾರದ ಸಂಪುಟ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ. ಆದರೆ, ಎಕರೆವಾರು ಶುದ್ಧ ಕ್ರಯಕ್ಕೆ ನಿಗದಿ ಮಾಡಿದ ಮೊತ್ತವೆಷ್ಟು ಎಂಬ ಪ್ರಶ್ನೆಗೆ ಗೃಹ ಸಚಿವರೇ 'ಗೊತ್ತಿಲ್ಲ' ಎಂಬ ಉತ್ತರ ನೀಡಿದ್ದಾರೆ. ಸ್ವತಃ ಗೃಹ ಸಚಿವರಿಗೇ ಮಾಹಿತಿ ಇಲ್ಲ ಎಂದರೆ ಏನು ಅರ್ಥ? ಇದನ್ನು ನಂಬಲು ಸಾಧ್ಯವೇ ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. ಜಿಂದಾಲ್ ಕಂಪನಿ ಲ್ಯಾಂಡ್ ಡೀಲ್ ಯಡಿಯೂರಪ್ಪ ಅವರಿಗೆ ಉರುಳಾಗಲಿದೆ ಎಂಬುದು ಕುಮಾರಸ್ವಾಮಿ ಅವರ ಪರೋಕ್ಷ ಸಂದೇಶ ಎಂಬುದು ಚರ್ಚೆಗೆ ನಾಂದಿ ಹಾಡಿದೆ.