ಪಿತೃಪಕ್ಷದ ಕಾರಣ ಸಚಿವ ಸಂಪುಟ ವಿಸ್ತರಣೆ ಮುಂದಕ್ಕೆ?
ಬೆಂಗಳೂರು, ಸೆಪ್ಟೆಂಬರ್ 14: ಜಾರಕಿಹೊಳಿ ಸಹೋದರ ಗಲಾಟೆ, ಸಿದ್ದರಾಮಯ್ಯ ಅವರ ವಿದೇಶಿ ಪ್ರವಾಸ, ಬೆಳಗಾವಿ ಆಡಳಿತ ವಿಕೇಂದ್ರಿಕರಣ, ಡಿಕೆ ಶಿವಕುಮಾರ್ ಸವಾಲ್, ಬಿಜೆಪಿಯ ಪ್ರಯತ್ನಗಳ ನಡುವೆ ನೆನೆಗುದಿಗೆ ಬಿದ್ದಿರುವ ಕರ್ನಾಟಕ ಸಚಿವ ಸಂಪುಟ ವಿಸ್ತರಣೆ ಬಗ್ಗೆ ಒಂದಷ್ಟು ಅಪ್ಡೇಟ್ಸ್ ಇಲ್ಲಿವೆ
ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟ ಸರ್ಕಾರ ಪತನದ ಭೀತಿಯಲ್ಲಿದೆ ಎಂಬ ಸುದ್ದಿಯನ್ನು ಕಾಂಗ್ರೆಸ್ ನಾಯಕರು ತಳ್ಳಿ ಹಾಕಿದ್ದಾರೆ. ಸಚಿವ ಸ್ಥಾನ ಆಕಾಂಕ್ಷಿಗಳು ಲಾಬಿ ಜೋರಾಗಿ ನಡೆಸಿವೆ.
ಆದರೆ, ಸೆಪ್ಟೆಂಬರ್ 2ನೇ ವಾರದಲ್ಲಿ ನಡೆಯಲು ನಿಗದಿಯಾಗಿದ್ದ ಸಂಪುಟ ವಿಸ್ತರಣೆ ಪ್ರಕ್ರಿಯೆ ಇನ್ನೊಂದು ತಿಂಗಳು ಕಾಲ ಮುಂದೂಡುವಂತೆ ಜೆಡಿಎಸ್ ಕಡೆಯಿಂದ ಮನವಿ ಬಂದಿದೆ. ಇದಕ್ಕೆ ಎಂಎಲ್ಸಿ ಚುನಾವಣೆ, ಪಿತೃಪಕ್ಷ, ಅಕಾಂಕ್ಷಿಗಳ ಅಸಮಾಧಾನ ಮುಂದಾದ ಕಾರಣಗಳನ್ನು ನೀಡಲಾಗಿದೆ.
ಸಂಪುಟ ವಿಸ್ತರಣೆ : ಸಂಪುಟ ಸೇರುವ ಕಾಂಗ್ರೆಸ್ ಶಾಸಕರ ಪಟ್ಟಿ!
ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ 7 ಸಚಿವ ಸ್ಥಾನಗಳು ಖಾಲಿ ಇವೆ. ಇವುಗಳಲ್ಲಿ 6 ಸ್ಥಾನಗಳು ಕಾಂಗ್ರೆಸ್ ಪಕ್ಷಕ್ಕೆ ಮತ್ತು 1 ಸ್ಥಾನ ಜೆಡಿಎಸ್ ಪಕ್ಷಕ್ಕೆ ಮೀಸಲು. 20 ನಿಗಮ ಮತ್ತು ಮಂಡಳಿಗಳ ನೇಮಕಾತಿಯೂ ನಡೆಯಬೇಕಿದೆ.
ಸದ್ಯ ಇಂಗ್ಲೆಂಡ್ ನಲ್ಲಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರ್ನಾಟಕಕ್ಕೆ ಮರಳಿದ ಬಳಿಕ, ಸಚಿವ ಸಂಪುಟ ವಿಸ್ತರಣೆ, ಜಾರಕಿಹೊಳಿ ಸೋದರರ ಮನಸ್ತಾಪದ ಕಾರಣ ಸ್ಪಷ್ಟವಾಗಲಿದೆ. ಈ ನಡುವೆ ಸಿದ್ದರಾಮಯ್ಯ ಅವರ ಅನುಪಸ್ಥಿತಿಯಲ್ಲಿ ಡಿಕೆ ಶಿವಕುಮಾರ್ ಹಾಗೂ ಜಿ ಪರಮೇಶ್ವರ್ ಅವರು ಇಂದು ಭೇಟಿ ಮಾಡಿ, ಚರ್ಚೆ ನಡೆಸಿದ್ದಾರೆ.
ಪಿತೃಪಕ್ಷದಲ್ಲಿ ಸಚಿವ ಸಂಪುಟ ವಿಸ್ತರಣೆ ಬೇಡ
ಸೆಪ್ಟೆಂಬರ್ 2ನೇ ವಾರದಲ್ಲಿ ನಡೆಯಲು ನಿಗದಿಯಾಗಿದ್ದ ಸಂಪುಟ ವಿಸ್ತರಣೆ ಪ್ರಕ್ರಿಯೆ ಇನ್ನೊಂದು ತಿಂಗಳು ಕಾಲ ಮುಂದೂಡುವಂತೆ ಜೆಡಿಎಸ್ ನಾಯಕರು ಹೇಳಿದ್ದಾರೆ. ಸೆಪ್ಟಂಬರ್ 25ರಿಂದ ಪಿತೃಪಕ್ಷ ಆರಂಭವಾಗಲಿದೆ. ಸೆಪ್ಟೆಂಬರ್ 25 ರಿಂದ ಅಕ್ಟೋಬರ್ 09ರ ತನಕ ಯಾವುದೇ ಶುಭ ಕಾರ್ಯ ಬೇಡ ಎಂದು ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಅವರು ಆದೇಶಿಸಿದ್ದಾರೆ. ಹೀಗಾಗಿ, ಅಕ್ಟೋಬರ್ ಎರಡನೇ ವಾರದಲ್ಲಿ ಬೇಕಾದರೆ ಸಂಪುಟ ವಿಸ್ತರಣೆ ನಿರೀಕ್ಷಿಸಬಹುದು.
ಸದ್ಯಕ್ಕೆ ಹಿರಿಯರಿಗೆ ಸಂಪುಟದಲ್ಲಿ ಸ್ಥಾನವಿಲ್ಲ!
ಸತೀಶ್ ಜಾರಕಿಹೊಳಿ ಸೇರಿ ಇಬ್ಬರು ಹಿರಿಯ ನಾಯಕರಿಗೆ ಎರಡು ವರ್ಷದ ಬಳಿಕ ನಡೆಸಬಹುದಾದ ಸಂಪುಟ ಪುನಾರಚನೆ ವೇಳೆ ಅವಕಾಶ ನೀಡೋಣ ಎಂದು ಹೈಕಮಾಂಡ್ ಹೇಳಿತ್ತು. ಆದರೆ, ಈಗ ಬದಲಾದ ಪರಿಸ್ಥಿತಿಯಲ್ಲಿ ಕನಿಷ್ಟ ಮೂರು ಸ್ಥಾನಗಳನ್ನು ಹಿರಿಯರಿಗೆ ನೀಡಬೇಕಾದ ಅನಿವಾರ್ಯತೆ ಉಂಟಾಗಿದೆ.
ಹಿರಿಯ ಶಾಸಕರಾದ ಎಂ.ಬಿ.ಪಾಟೀಲ್, ರಾಮಲಿಂಗಾರೆಡ್ಡಿ, ತನ್ವೀರ್ ಸೇಠ್, ರೋಷನ್ ಬೇಗ್, ಶಾಮನೂರು ಶಿವಶಂಕರಪ್ಪ ಕೂಡ ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದು, ಸದ್ಯಕ್ಕಂತೂ ಎಲ್ಲರಿಗೂ ಸಚಿವ ಸಂಪುಟದಲ್ಲಿ ಸ್ಥಾನ ಪಡೆಯುವ ಸಾಧ್ಯತೆಗಳಿಲ್ಲ. ಜಾರಕಿಹೊಳಿ ಸೋದರರು, ರಾಮಲಿಂಗಾರೆಡ್ಡಿ ಅವರಿಗೆ ಆದ್ಯತೆ ಸಿಗಬಹುದು.
6 ಸ್ಥಾನಕ್ಕೆ 16ಕ್ಕೂ ಅಧಿಕಕ್ಕೂ ಹೆಚ್ಚು ಅಕಾಂಕ್ಷಿಗಳು
ಸಚಿವ ಸ್ಥಾನ ಆಕಾಂಕ್ಷಿ ಪಟ್ಟಿಯಲ್ಲಿ ಎಂ.ಬಿ.ಪಾಟೀಲ್ ನಂತರ ಎಚ್.ಕೆ.ಪಾಟೀಲ್ , ಸತೀಶ್ ಜಾರಕಿಹೊಳಿ, ಆನಂದ್ ಸಿಂಗ್, ಬಿಸಿ ಪಾಟೀಲ್ ಹೆಸರು ಕೇಳಿ ಬಂದಿವ್ವೆ. ಇನ್ನುಳಿದಂತೆ ಹೊಸಕೋಟೆ ಶಾಸಕ ಎಂಟಿಬಿ ನಾಗರಾಜು, ಚಿಕ್ಕಬಳ್ಳಾಪುರ ಶಾಸಕ ಡಾ.ಸುಧಾಕರ್, ಶಿಡ್ಲಘಟ್ಟ ಶಾಸಕ ವಿ.ಮುನಿಯಪ್ಪ, ಎನ್ಎ ಹ್ಯಾರಿಸ್, ತನ್ವೀರ್ ಸೇಠ್ ಅಲ್ಲದೆ, ರಮೇಶ್ ಜಾರಕಿಹೊಳಿ ಸಹ ಕೆಲವು ಆಪ್ತ ಶಾಸಕರಿಗೆ ಸಚಿವ ಸ್ಥಾನ ಕೊಡಿಸಲು ಯತ್ನಿಸುತ್ತಿದ್ದಾರೆ.
ಉತ್ತರ ಕರ್ನಾಟಕ ಭಾಗಕ್ಕೆ ಅನ್ಯಾಯ ಎಂಬ ಕೂಗು
ಕಾಂಗ್ರೆಸ್ -ಜೆಡಿಎಸ್ ದೋಸ್ತಿ ಸರ್ಕಾರದಲ್ಲಿ ಉತ್ತರ ಕರ್ನಾಟಕ ಭಾಗಕ್ಕೆ ಸರಿಯಾದ ಮಾನ್ಯತೆ ಸಿಕ್ಕಿಲ್ಲ. ಕುಮಾರಸ್ವಾಮಿ ಅವರು ಮಂಡಿಸಿದ ಚೊಚ್ಚಲ ಬಜೆಟ್ ನಲ್ಲೂ ಅನ್ಯಾಯವಾಗಿದೆ ಎಂಬ ಕೂಗು ಬಲವಾಗಿ ಎದ್ದಿದೆ. ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಭಾಗದ ಜನರ ಆಶೋತ್ತರಕ್ಕೆ ತಕ್ಕಂತೆ ಹೆಸರುಗಳನ್ನು ಆಯ್ಕೆ ಮಾಡಬೇಕಿದೆ. ಅಲ್ಲದೆ, ಪ್ರಮುಖವಾಗಿ ಜಾತಿ ಲೆಕ್ಕಾಚಾರದಂತೆ ದಲಿತರಿಗೆ ಡಿಸಿಎಂ, ಒಕ್ಕಲಿಗರಿಗೆ ಪ್ರಮುಖ ಖಾತೆ, ಬ್ರಾಹ್ಮಣ ಸಮುದಾಯಕ್ಕೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಿಕ್ಕಿದೆ. ಲಿಂಗಾಯತ/ವೀರಶೈವ, ಹಿಂದುಳಿದ ಹಾಗೂ ಅಲ್ಪಸಂಖ್ಯಾತರಿಗೆ ಮನ್ನಣೆ ಸಿಗಬೇಕು ಎಂಬುದು ಈಗಿನ ಬೇಡಿಕೆಯಾಗಿದೆ.
ಕಾಂಗ್ರೆಸ್ ಮುಖಂಡರಿಗೆ ತಲೆನೋವು
ಎಸ್.ಟಿ.ಸೋಮಶೇಖರ್, ಎಸ್.ಆರ್.ಪಾಟೀಲ್, ಲಕ್ಷ್ಮೀ ಹೆಬ್ಬಾಳ್ಕರ್, ಎಚ್.ಎಂ.ರೇವಣ್ಣ, ಬಿ.ಸಿ.ಪಾಟೀಲ್, ಎಂ.ಟಿ.ಬಿ.ನಾಗರಾಜ್, ಬಿ.ಕೆ.ಸಂಗಮೇಶ್, ಶಿವಳ್ಳಿ, ಪಿ.ಟಿ.ಪರಮೇಶ್ವರ್ ನಾಯ್ಕ್, ಎನ್.ಎ.ಹ್ಯಾರಿಸ್, ರೂಪಾ ಶಶಿಧರ್, ಶರಣ ಬಸಪ್ಪ ದರ್ಶನಾಪುರ, ಭೀಮಾ ನಾಯಕ್ ಅವರು ಸಚಿವ ಸ್ಥಾನ ಬಯಸಿದ್ದಾರೆ. ಹಲವು ಶಾಸಕರು ನಿಗಮ, ಮಂಡಳಿ ಸ್ಥಾನ ಬೇಡವೆ ಬೇಡ, ಸಚಿವ ಸ್ಥಾನವೆ ಬೇಕು ಎಂದು ವರಾತ ಹಿಡಿದಿರುವುದು ಕಾಂಗ್ರೆಸ್ ಮುಖಂಡರಿಗೆ ತಲೆನೋವಿನ ವಿಷಯವಾಗಿದೆ.