ವಾಟ್ಸಪ್ ಮೂಲಕವೂ ಜನರನ್ನು ತಲುಪಲಿದ್ದಾರೆ ಎಚ್.ಡಿ.ಕುಮಾರಸ್ವಾಮಿ
ಬೆಂಗಳೂರು, ಅಕ್ಟೋಬರ್ 30 : ವಿಧಾನಸಭೆ ಚುನಾವಣೆಗೆ ಸಿದ್ಧತೆ ನಡೆಸುತ್ತಿರುವ ಜೆಡಿಎಸ್ ವಾಟ್ಸಪ್ ಮೂಲಕ ಜನರನ್ನು ತಲುಪಲು ಮುಂದಾಗಿದೆ. ಏಕಕಾಲದಲ್ಲಿ 15 ಲಕ್ಷ ಜನರನ್ನು ತಲುಪಲು ಅಗತ್ಯ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗುತ್ತಿದೆ.
ಹೆಸರು, ಮೊಬೈಲ್ ಸಂಖ್ಯೆ ಮತ್ತು ವಿಧಾನಸಭಾ ಕ್ಷೇತ್ರವನ್ನು ನಮೂದಿಸಿ ಜನರು ನೋಂದಣಿ ಮಾಡಿಕೊಳ್ಳಬಹುದು. ಕುಮಾರಸ್ವಾಮಿ ಅವರ ಸಂದೇಶಗಳನ್ನು ನೋಂದಣಿ ಮಾಡಿಕೊಂಡವರಿಗೆ ನೇರವಾಗಿ ತಲುಪಿಸಲಾಗುತ್ತದೆ.
ಸಿದ್ದರಾಮಯ್ಯ ತವರು ಕ್ಷೇತ್ರದಿಂದ ಎಚ್ಡಿಕೆ ರಾಜ್ಯ ಪ್ರವಾಸ ಆರಂಭ!
ಜೆಡಿಎಸ್ ಆರಂಭಿಸಿರುವ ಈ ಅಭಿಯಾನಕ್ಕೆ ಈಗಾಗಲೇ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮೊದಲ ದಿನವೇ 50 ಸಾವಿರ, 2ನೇ ದಿನ 30 ಸಾವಿರಕ್ಕೂ ಅಧಿಕ ಜನರು ಮೊಬೈಲ್ ನಂಬರ್ ನೀಡಿ ನೋಂದಣಿ ಮಾಡಿಕೊಂಡಿದ್ದಾರೆ.
ಕುಮಾರಸ್ವಾಮಿ ರಾಜ್ಯ ಪ್ರವಾಸಕ್ಕೆ ಹೈಟೆಕ್ ಬಸ್, ವಿಶೇಷತೆ ಏನು?
2018ರ ವಿಧಾನಸಭೆ ಚುನಾವಣೆಗೆ ಸಾಮಾಜಿಕ ಜಾಲತಾಣಗಳ ಮೂಲಕವೂ ಪ್ರಚಾರ ನಡೆಸಲು ಎಚ್.ಡಿ.ಕುಮಾರಸ್ವಾಮಿ ನಿರ್ಧರಿಸಿದ್ದಾರೆ. ಅದಕ್ಕಾಗಿ ಫೇಸ್ ಬುಕ್, ಟ್ವಿಟರ್ ಖಾತೆಗಳನ್ನು ತೆರೆದಿದ್ದಾರೆ. ಈಗ ವಾಟ್ಸಪ್ ಮೂಲಕವೂ ಜನರನ್ನು ತಲುಪಲು ಮುಂದಾಗಿದ್ದಾರೆ.
ನ.3ರಿಂದ ರಾಜ್ಯ ಪ್ರವಾಸ : ವಿಧಾನಸಭೆ ಚುನಾವಣೆಗೆ ಪಕ್ಷವನ್ನು ಸಂಘಟನೆ ಮಾಡಲು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ನವೆಂಬರ್ 3ರಿಂದ ರಾಜ್ಯ ಪ್ರವಾಸ ಆರಂಭಿಸಲಿದ್ದಾರೆ. ಮೈಸೂರಿನಲ್ಲಿ ರಾಜ್ಯ ಪ್ರವಾಸಕ್ಕೆ ಚಾಲನೆ ದೊರೆಯಲಿದೆ.