ಪಕ್ಷ ಸಂಘಟನೆಗಾಗಿ ಮಹತ್ವದ ತೀರ್ಮಾನ ಕೈಗೊಂಡ ಕರ್ನಾಟಕ ಜೆಡಿಎಸ್
ಬೆಂಗಳೂರು, ಜೂನ್ 07 : ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಕೇವಲ 1 ಸ್ಥಾನದಲ್ಲಿ ಜಯಗಳಿಸಿದೆ. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ 579 ಸದಸ್ಯರು ಗೆದ್ದು ಪಕ್ಷಕ್ಕೆ ಶಕ್ತಿ ತುಂಬಿದ್ದಾರೆ. ಈಗ ಪಕ್ಷ ಸಂಘಟನೆ ಬಗ್ಗೆ ಗಮನ ಹರಿಸಿರುವ ಜೆಡಿಎಸ್ ಪಾದಯಾತ್ರೆಯನ್ನು ಆರಂಭಿಸಲಿದೆ.
ಹೌದು, ಶುಕ್ರವಾರ ಬೆಂಗಳೂರಿನ ಅರಮನೆ ಮೈದಾನದಲ್ಲಿ 2018 ಮತ್ತು 2019 ರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಜಯಗಳಿಸಿದ ಜೆಡಿಎಸ್ ಸದಸ್ಯರಿಗೆ ಸನ್ಮಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಸಭೆಯಲ್ಲಿ ಪಕ್ಷ ಸಂಘಟನೆಗೆ ಹೆಚ್ಚಿನ ಒತ್ತು ನೀಡಲು ತೀರ್ಮಾನ ಕೈಗೊಳ್ಳಲಾಗಿದೆ.
ನಿಖಿಲ್ ಕುಮಾರಸ್ವಾಮಿ ಸೋಲಿಗೆ ಜೆಡಿಎಸ್ ನಾಯಕರೇ ಕಾರಣ!
ಸನ್ಮಾನ ಸಮಾರಂಭದಲ್ಲಿ ಮಾತನಾಡಿದ ಪಕ್ಷದ ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷ ವೈ.ಎಸ್.ವಿ.ದತ್ತಾ ಅವರು ಈ ಕುರಿತು ಮಾಹಿತಿ ನೀಡಿದರು. 'ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಜಯಗಳಿಸಿದ ನೀವು ಪಕ್ಷದ ನಿಜವಾದ ಆಸ್ತಿ, ಪಕ್ಷ ಸಂಘಟನೆ ಮಾಡಲು ನಮ್ಮ ಜೊತೆ ಕೈ ಜೋಡಿಸಿ' ಎಂದು ಕರೆ ನೀಡಿದರು.
ಲೋಕಸಭಾ ಚುನಾವಣೆ : ದೇವೇಗೌಡರ ಕುಟುಂಬದ ಕಥೆ ಏನು?
'ಲೋಕಸಭಾ ಚುನಾವಣೆ ಫಲಿತಾಂಶ ನಮ್ಮ ಪಕ್ಷದ ಕಾರ್ಯಕರ್ತರ ಆತ್ಮವಿಶ್ವಾಸವನ್ನು ಕುಗ್ಗಿಸಿದೆ. ಇನ್ನೂ ಸಂಘಟನೆ ಚುರುಕಾಗಬೇಕಿದೆ ಎಂಬ ಮಾತು ಕೇಳಿಬರುತ್ತಿದೆ. ಮುಂದಿನ ದಿನಗಳಿಗೆ ಪಕ್ಷವನ್ನು ಸಜ್ಜುಗೊಳಿಸಲು ಪಕ್ಷ ಸಂಘಟನೆ ಅನಿವಾರ್ಯವಾಗಿದೆ' ಎಂದು ವೈ.ಎಸ್.ವಿ.ದತ್ತಾ ಹೇಳಿದರು.
ಲೋಕಸಭಾ ಚುನಾವಣೆ 2019 : ಕರ್ನಾಟಕದಲ್ಲಿ ಗೆದ್ದವರು, ಸೋತವರು
ಸ್ಥಳೀಯ ಕಾರ್ಯಕರ್ತರೇ ಶಕ್ತಿ
ಸಮಾರಂಭದಲ್ಲಿ ಮಾತನಾಡಿ ವೈ.ಎಸ್.ವಿ.ದತ್ತಾ ಅವರು, 'ಸ್ಥಳೀಯ ಮಟ್ಟದಲ್ಲಿರುವ ನೀವೇ ಒಂದು ದೊಡ್ಡ ಶಕ್ತಿ. ಲೋಕಸಭಾ ಚುನಾವಣೆಯಲ್ಲಿ ನಾವು ಒಂದು ಸ್ಥಾನದಲ್ಲಿ ಗೆಲುವು ಸಾಧಿಸಿದೆವು. ಲೋಕಸಭೆ ಚುನಾವಣೆ ಫಲಿತಾಂಶ ಪ್ರಕಟವಾದ ಒಂದು ವಾರಕ್ಕೆ ಪ್ರಕಟಗೊಂಡ ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶದಲ್ಲಿ ಜನರು ನಮ್ಮನ್ನು ಗೆಲ್ಲಿಸಿದ್ದಾರೆ. ಜೆಡಿಎಸ್ ಎಂದರೆ ಮೈಸೂರು, ಮಂಡ್ಯ, ಹಾಸನ ಎಂದು ಲೇವಡಿ ಮಾಡಿದವರಿಗೆ ಜನರು ಸರಿಯಾದ ಉತ್ತರ ಕೊಟ್ಟಿದ್ದಾರೆ' ಎಂದರು.
ಬಲಿಷ್ಠ ಪ್ರಾದೇಶಿಕ ಪಕ್ಷವನ್ನಾಗಿ ಮಾಡೋಣ
'ಸ್ಥಳೀಯ ಸಂಸ್ಥೆಗಳ ಚುನಾವಣೆ ಬಳಿಕ ಜೆಡಿಎಸ್ ಪಕ್ಷದ ಕಾರ್ಯಕರ್ತರಲ್ಲಿ ಹೊಸ ಚೈತನ್ಯ ಬಂದಿದೆ. ಹೊಸ ಶಕ್ತಿ ಬಂದಿದೆ. ಪಕ್ಷದ ನೆಲಗಟ್ಟು ಗಟ್ಟಿಯಾಗಿದೆ ಎಂಬ ಆತ್ಮವಿಶ್ವಾಸ ಮೂಡಿದೆ. ನಮ್ಮಿಂದ ಚಿಕ್ಕ ತಪ್ಪಾಗಿರಬಹುದು ಅದಕ್ಕಾಗಿ ಪಕ್ಷಕ್ಕೆ ಲೋಕಸಭಾ ಚುನಾವಣೆಯಲ್ಲಿ ಹಿನ್ನಡೆ ಆಗಿರಬಹುದು. ಅದನ್ನು ತಿದ್ದುಕೊಂಡು ಕಾರ್ಯಕರ್ತರೊಂದಿಗೆ ಕೆಲಸ ಮಾಡೋಣ ಬೇರೆ ರಾಜ್ಯದಷ್ಟೇ ಶಕ್ತಿಯುತವಾದ ಪ್ರಾದೇಶಿಕ ಪಕ್ಷವನ್ನು ಕಟ್ಟೋಣ' ಎಂದು ವೈ.ಎಸ್.ವಿ.ದತ್ತಾ ಕರೆ ನೀಡಿದರು.
ಎರಡು ಹಂತಗಳಲ್ಲಿ ಪಕ್ಷ ಕಟ್ಟುವುದು
'ರಾಜ್ಯ ಪ್ರಚಾರ ಸಮಿತಿ ಅಧ್ಯಕ್ಷನಾಗಿ ವರಿಷ್ಠರ ಜೊತೆ ಪಕ್ಷ ಸಂಘಟನೆ ಬಗ್ಗೆ ಚರ್ಚೆ ಮಾಡಿದ್ದೇನೆ. ಎರಡು ಹಂತದಲ್ಲಿ ಪಕ್ಷ ಕಟ್ಟೋಣ. ಮೊದಲ ಹಂತದಲ್ಲಿ ಬೌದ್ಧಿಕವಾಗಿ ಯುವಕರಿಗೆ ಪಕ್ಷದ ಸಿದ್ದಾಂತ, ಬೆಳೆದು ಬಂದ ಹಾದಿ ಬಗ್ಗೆ ತಿಳಿಸೋಣ, ಅವರು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯರಾಗಿದ್ದು, ಜನರಿಗೆ ಅದನ್ನು ತಿಳಿಸುತ್ತಾರೆ. ಎರಡನೇ ಹಂತದಲ್ಲಿ ಪಾದಯಾತ್ರೆ ಮೂಲಕ ಜನರನ್ನು ತಲುಪುವುದು' ಎಂದು ವೈ.ಎಸ್.ವಿ.ದತ್ತಾ ಹೇಳಿದರು.
ಆಗಸ್ಟ್ನಿಂದ ನವೆಂಬರ್ ತನಕ ಪಾದಯಾತ್ರೆ
'ಸ್ವಾತಂತ್ರ ದಿನಾಚರಣೆಯ ಆಗಸ್ಟ್ ತಿಂಗಳಿನಿಂದ ಕನ್ನಡದ ರಾಜ್ಯೋತ್ಸವದ ನವೆಂಬರ್ ತನಕ ರಾಜ್ಯಾದ್ಯಂತ ಪಾದಯಾತ್ರೆ ಮಾಡೋಣ, ಕಷ್ಟವೋ, ಸುಖವೋ 30 ಜಿಲ್ಲೆಗಳಿಗೆ ಭೇಟಿ ಕೊಟ್ಟು ಜನರನ್ನು ತಲುಪೋಣ. ಈ ಬಗ್ಗೆ ಯೋಜನೆ ರೂಪಿಸಿ ಜಿಲ್ಲಾ ಕೇಂದ್ರಗಳಿಗೆ ಮಾಹಿತಿ ನೀಡುತ್ತೇವೆ' ಎಂದು ವೈ.ಎಸ್.ವಿ.ದತ್ತಾ ಹೇಳಿದರು.
ಪಾದಯಾತ್ರೆ ಮಾಡಿ ಸಿಎಂ ಆದರು
'ಪಕ್ಕದ ಆಂಧ್ರ ಪ್ರದೇಶದಲ್ಲಿ ಜಗಮೋಹನ್ ರೆಡ್ಡಿ ಅವರು ಪಾದಯಾತ್ರೆ ಮಾಡುವ ಮೂಲಕ ವಿಧಾನಸಭೆ ಚುನಾವಣೆ ಗೆದ್ದು ಮುಖ್ಯಮಂತ್ರಿಯಾದರು. ಕರ್ನಾಟಕದಲ್ಲಿ ದೇವೇಗೌಡರು ಪಾದಯಾತ್ರೆಯನ್ನು ಮಾಡಿ ಪಕ್ಷ ಸಂಘಟನೆ ಮಾಡಿದ್ದರು. ಅವರು ಪಾದಯಾತ್ರೆ ಮಾಡಿದಾಗಲೆಲ್ಲಾ ಪಕ್ಷ ಒಂದೊಂದು ಮೆಟ್ಟಿಲು ಮೇಲೆ ಹೋಗಿದೆ. ಅವರ ಆಶೀರ್ವಾದದಲ್ಲೇ ಮುಂದುವರೆಯೋಣ' ಎಂದು ವೈ.ಎಸ್.ವಿ.ದತ್ತಾ ಕರೆ ಕೊಟ್ಟರು.