ಜೆಡಿಎಸ್ ರಾಜ್ಯಾಧ್ಯಕ್ಷ ಹುದ್ದೆ ಬಹುತೇಕ ಅಂತಿಮ: ಈ ಇಬ್ಬರಲ್ಲಿ ಯಾರಿಗೆ ಪಟ್ಟ?
ಎಚ್ ವಿಶ್ವನಾಥ್ ಅವರ ಮನವೊಲಿಸುವ ಕೆಲಸ ಮಾಡುತ್ತೇವೆ, ಅವರೇ ರಾಜ್ಯಾಧ್ಯಕ್ಷರಾಗಿ ಮುಂದುವರಿಯಲಿದ್ದಾರೆಂದು ಜೆಡಿಎಸ್ ಸಚಿವರು ಹೇಳಿಕೆಯನ್ನು ನೀಡುತ್ತಿದ್ದರೆ, ಇನ್ನೊಂದು ಕಡೆ ನಾನು ಮುಂದುವರಿಯಲಾರೆ ಎಂದು ಖಡಾಖಂಡಿತವಾಗಿ ವಿಶ್ವನಾಥ್ ಹೇಳುತ್ತಿದ್ದಾರೆ.
ವಿಶ್ವನಾಥ್ ಅವರ ದೃಢ ನಿರ್ಧಾರದಿಂದಾಗಿ ಜೆಡಿಎಸ್ ವರಿಷ್ಠ ದೇವೇಗೌಡ್ರು, ಈ ಹುದ್ದೆಗೆ ಹೆಸರನ್ನು ಅಂತಿಮಗೊಳಿಸುವ ಕೆಲಸಕ್ಕೆ ಫೈನಲ್ ಟಚ್ ನೀಡುತ್ತಿದ್ದಾರೆ.
ಹಾಗಾಗಿ, ದೇವೇಗೌಡ್ರು ಯಾರ ಹೆಸರನ್ನು ಅಂತಿಮಗೊಳಿಸಬಹುದು ಎನ್ನುವ ಕುತೂಹಲ ಸೃಷ್ಟಿಯಾಗಿದೆ. ಈ ಹುದ್ದೆಗೆ ಹಲವು ಸಂಭಾವ್ಯ ಹೆಸರುಗಳು ಕೇಳಿ ಬಂದಿದ್ದವು.
ವಿಶ್ವನಾಥ್ ಮನವೊಲಿಸುತ್ತೇವೆ: ಸಚಿವ ಸಾ ರಾ ಮಹೇಶ್
ಜೆಡಿಎಸ್ ನಲ್ಲಿ ತಮಗೆ ಗೌರವಯುತ ಸ್ಥಾನ ನೀಡಲಾಗಿದೆ, ದೇವೇಗೌಡ ಮತ್ತು ಮುಖ್ಯಮಂತ್ರಿ ಕುಮಾರಸ್ವಾಮಿ ಸೇರಿದಂತೆ ಜೆಡಿಎಸ್ಸಿನ ಇನ್ನಿತರ ನಾಯಕರನ್ನು ವಿಶ್ವನಾಥ್ ವಿದಾಯ ಭಾಷಣದಲ್ಲಿ ಸ್ಮರಿಸಿದ್ದರು. ಮೂಲಗಳ ಪ್ರಕಾರ, ರಾಜ್ಯಾಧ್ಯಕ್ಷ ಹುದ್ದೆಯ ರೇಸಿನಲ್ಲಿ ಅಂತಿಮವಾಗಿ ಉಳಿದವರು ಇಬ್ಬರು..
ಪಕ್ಷ ನಿಷ್ಠೆಗೆ ಹೆಸರಾಗಿರುವ ದೇವೇಗೌಡರ ಮಾನಸಪುತ್ರ ದತ್ತ ರೇಸ್ ನಲ್ಲಿಲ್ಲ?
ಜೆಡಿಎಸ್ ಪಕ್ಷ ಆರಕ್ಕೇರಲಿ, ಮೂರಕ್ಕಿಳಿಯಲಿ, ಪಕ್ಷ ನಿಷ್ಠೆಗೆ ಹೆಸರಾಗಿರುವ ಕಡೂರಿನ ಮಾಜಿ ಶಾಸಕ, ದೇವೇಗೌಡರ ಮಾನಸಪುತ್ರ ಎಂದೇ ಕರೆಯಲ್ಪಡುತ್ತಿದ್ದ ವೈ ಎಸ್ ವಿ ದತ್ತ ಅವರ ಹೆಸರು ಮೊದಮೊದಲು ಕೇಳಿ ಬರುತ್ತಿತ್ತು. ಸಂಪುಟದಲ್ಲಿ ತನಗೆ ಸ್ಥಾನ ಸಿಗಬಹುದೆಂದು ನಿರೀಕ್ಷೆ ಇಟ್ಟುಕೊಂಡಿದ್ದ ದತ್ತ, ಅದು ಸಿಗದೇ ಇದ್ದಾಗ ತೀವ್ರ ನಿರಾಶೆಗೊಂಡಿದ್ದರು. ಆ ನಂತರ, ಗೌಡ್ರು, ಅವರನ್ನು ಕರೆಸಿಕೊಂಡು ಸಮಾಧಾನ ಮಾಡಿ ಕಳುಹಿಸಿದ್ದರು. ಮೂಲಗಳ ಪ್ರಕಾರ, ದತ್ತಗೆ ರಾಜ್ಯಾಧ್ಯಕ್ಷ ಹುದ್ದೆ ಸಿಗುವುದು ಡೌಟು.
ಮಧು ಬಂಗಾರಪ್ಪ ಅಂತಿಮವಾಗಿರುವ ಇಬ್ಬರಲ್ಲಿ ಒಬ್ಬರು?
ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯ ಬಿ ವೈ ರಾಘವೇಂದ್ರ ವಿರುದ್ದ ಸೋಲು ಅನುಭವಿಸಿದ್ದ ಮಧು ಬಂಗಾರಪ್ಪ, ಪಕ್ಷದ ಕಾರ್ಯ ಚಟುವಟಿಕೆಯಿಂದ ಸ್ವಲ್ಪದಿನ ದೂರ ಸರಿದಿದ್ದರು. ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಪಕ್ಷದ ಅಭ್ಯರ್ಥಿಯನ್ನಾಗಿ ಅವರನ್ನು ಮತ್ತೆ ಕಣಕ್ಕಿಳಿಸಲು ದೇವೇಗೌಡರು ಹರಸಾಹಸ ಪಡಬೇಕಾಗಿತ್ತು. ಮಧು, ಮತ್ತೆ ಚುನಾವಣೆಯಲ್ಲಿ ಸೋತ ನಂತರ ಹತಾಶೆಗೊಂಡಿದ್ದರು. ಯುವ ನಾಯಕನಿಗೆ ರಾಜ್ಯಾಧ್ಯಕ್ಷ ಪಟ್ಟ ಕಟ್ಟುವ ಸಾಧ್ಯತೆ ಇರುವುದರಿಂದ, ಮಧು ಹೆಸರು, ಅಂತಿಮವಾಗಿರುವ ಇಬ್ಬರಲ್ಲಿ ಒಬ್ಬರು ಎಂದು ಹೇಳಲಾಗುತ್ತಿದೆ.
ವಿಶ್ವನಾಥ್ ರಾಜೀನಾಮೆ: ಜೆಡಿಎಸ್ ನ ಮುಂದಿನ ರಾಜ್ಯಾಧ್ಯಕ್ಷ ಯಾರಾಗಬಹುದು?
ನಿಖಿಲ್ ಹೆಸರು ಅಂತಿಮ ಪಟ್ಟಿಯಲ್ಲಿಲ್ಲ ಎನ್ನುವ ಮಾತು ಕೇಳಿಬರುತ್ತಿದೆ
ಮಂಡ್ಯ ಲೋಕಸಭಾ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿದ್ದ ನಿಖಿಲ್ ಕುಮಾರಸ್ವಾಮಿಯ ಹೆಸರೂ ರಾಜ್ಯಾಧ್ಯಕ್ಷ ಹುದ್ದೆಗೆ ಕೇಳಿಬರುತ್ತಿತ್ತು. ಯುವ ಮುಖಂಡನಿಗೆ ಪಟ್ಟ ಕಟ್ಟಬಹುದು, ಜೊತೆಗೆ, ನಿಖಿಲ್ ಗೆ ಜವಾಬ್ದಾರಿಯುತ ಸ್ಥಾನ ನೀಡಲಿದ್ದೇವೆ ಎನ್ನುವ ಗೌಡರ ಹೇಳಿಕೆಯ ನಂತರ, ನಿಖಿಲ್ ಹೆಸರು ಚಾಲ್ತಿಯಲ್ಲಿತ್ತು. ಆದರೆ, ಕುಟುಂಬ ರಾಜಕಾರಣ ಎನ್ನುವ ಅಪವಾದ ಮತ್ತೆ ಬರಬಾರದು ಎನ್ನುವ ದೂರಾಲೋಚನೆಯಿಂದ, ನಿಖಿಲ್ ಹೆಸರು ಅಂತಿಮ ಪಟ್ಟಿಯಲ್ಲಿಲ್ಲ ಎನ್ನುವ ಮಾತು ಕೇಳಿಬರುತ್ತಿದೆ.
ಸಕಲೇಶಪುರದ ಶಾಸಕ ಎಚ್ ಕೆ ಕುಮಾರಸ್ವಾಮಿಯ ಹೆಸರು ಕೂಡಾ ಒಬ್ಬರು
ದೇವೇಗೌಡರ ಮೇಲಿನ ನಿಯತ್ತಿಗೆ ಇನ್ನೊಂದು ಹೆಸರಾಗಿರುವ ಸಕಲೇಶಪುರದ ಶಾಸಕ ಎಚ್ ಕೆ ಕುಮಾರಸ್ವಾಮಿಯ ಹೆಸರೂ, ಅಂತಿಮವಾಗಿರುವ ಇಬ್ಬರಲ್ಲಿ ಇನ್ನೊಬ್ಬರು ಎನ್ನುವ ಮಾತು ಚಾಲ್ತಿಯಲ್ಲಿದೆ. ಎಚ್ ಕೆ ಕುಮಾರಸ್ವಾಮಿ ಅಥವಾ ಮಧು ಬಂಗಾರಪ್ಪ ಇಬ್ಬರಲ್ಲಿ ಒಬ್ಬರಿಗೆ ದೇವೇಗೌಡರು ಮಣೆ ಹಾಕುವುದು ಖಚಿತ ಎನ್ನುವ ಮಾಹಿತಿ ಓಡಾಡುತ್ತಿದೆ.
ಕುಟುಂಬದ ಯಾರನ್ನೂ ದೇವೇಗೌಡರು ಪರಿಗಣಿಸುವ ಸಾಧ್ಯತೆ ಇಲ್ಲ
ರಾಜ್ಯಾಧ್ಯಕ್ಷ ಹುದ್ದೆಗೆ ಮುಖ್ಯಮಂತ್ರಿ ಕುಮಾರಸ್ವಾಮಿಯ ಹೆಸರೂ ಕೇಳಿಬಂದಿತ್ತು. ಇದರ ಜೊತೆಗೆ, ಎಚ್ ಡಿ ರೇವಣ್ಣ ಹೆಸರು ಕೂಡಾ ಚಾಲ್ತಿಯಲ್ಲಿತ್ತು. ಆದರೆ, ಕುಟುಂಬದ ಯಾರನ್ನೂ ದೇವೇಗೌಡರು ಪರಿಗಣಿಸುವ ಸಾಧ್ಯತೆ ಇಲ್ಲದಿರುವುದರಿಂದ, ಫ್ಯಾಮಿಲಿಯಿಂದ ಹೊರತಾಗಿ, ಇನ್ನೊಬ್ಬರಿಗೆ ಈ ಹುದ್ದೆ ಸಿಗುವುದು ಬಹುತೇಕ ಅಂತಿಮ.