ಸಿಎಂ ಯಡಿಯೂರಪ್ಪ ನಿವಾಸದ ಮುಂದೆ ದೇವೇಗೌಡ್ರ ಧರಣಿ
ಬೆಂಗಳೂರು, ಜೂನ್ 25: ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಸುದೀರ್ಘ ಪತ್ರ ಬರೆದಿರುವ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ್ರು, ಸಿಎಂ ನಿವಾಸದ ಮುಂದೆ ಧರಣಿ ಕೂರುವ ನಿರ್ಧಾರಕ್ಕೆ ಬಂದಿದ್ದಾರೆ.
Recommended Video
ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾ ಮುಂದೆ, ಸೋಮವಾರ, ಜೂ.29ರಂದು ಧರಣಿ ನಡೆಸುವುದಾಗಿ ದೇವೇಗೌಡ್ರು ತಿಳಿಸಿದ್ದಾರೆ. ಜೆಡಿಎಸ್ ಮುಖಂಡರು ಮತ್ತು ಕಾರ್ಯಕರ್ತರ ಮೇಲೆ ನಡೆಯುತ್ತಿರುವ ದಬ್ಬಾಳಿಕೆಯ ವಿರುದ್ದ ಗೌಡ್ರು ಧರಣಿ ಕೂರಲಿದ್ದಾರೆ.
ಲಡಾಖ್ ಸಂಘರ್ಷ: ಪ್ರಧಾನಿ, ರಕ್ಷಣಾ ಸಚಿವರು ಸ್ಪಷ್ಟ ಮಾಹಿತಿ ನೀಡಬೇಕು: ದೇವೇಗೌಡ
ಮಂಡ್ಯ ಜಿಲ್ಲಾಡಳಿತದಿಂದ ನಮ್ಮ ಮುಖಂಡರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ಸಚಿವರಾದ ಕೆ.ಸಿ.ನಾರಾಯಣ ಗೌಡ ದ್ವೇಷ, ಹಗೆತನ ಸಾಧಿಸುತ್ತಿದ್ದಾರೆ ಎಂದು ಗೌಡ್ರು, ಪತ್ರ ಮುಖೇನ ಬೇಸರ ವ್ಯಕ್ತಪಡಿಸಿದ್ದಾರೆ.
"ನಮ್ಮ ಪಕ್ಷದ ಮುಖಂಡರು ಕಾನೂನು ಪ್ರಕಾರವಾಗಿ ನಡೆಸುತ್ತಿರುವ ಉದ್ದಿಮೆಗಳಿಗೂ, ಅಧಿಕಾರಿಗಳ ಮೂಲಕ ಕಿರುಕುಳ ನೀಡುತ್ತಿದ್ದಾರೆ. ಈಗ, ಉದ್ದಿಮೆಯನ್ನೇ ಮುಚ್ಚುವಂತಹ ಸ್ಥಿತಿ ನಿರ್ಮಾಣವಾಗಿದೆ ಎಂದು ಗೌಡ್ರು", ಸಿಎಂಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
"ಅಧಿಕಾರಿಗಳು ನಾರಾಯಣ ಗೌಡರ ಅಣತಿಯಂತೆ ನಡೆಯುತ್ತಿದ್ದಾರೆ. ಜಾತ್ಯಾತೀತ ಜನತಾದಳವನ್ನು ಸಂಪೂರ್ಣ ತುಳಿಯುವ ಕೆಲಸ ಅವರಿಂದ ನಡೆಯುತ್ತಿದೆ" ಎಂದು ಗೌಡ್ರು ಪತ್ರದಲ್ಲಿ ಹೇಳಿದ್ದಾರೆ.
"ಡಿಸಿಎಂ, ಮುಖ್ಯ ಕಾರ್ಯದರ್ಶಿಗಳು ನೀಡಿದ ಸೂಚನೆ ಪಾಲನೆಯಾಗುತ್ತಿಲ್ಲ. ನಮ್ಮ ಪಕ್ಷದ ಮುಖಂಡರಿಗೆ ಆಗುತ್ತಿರುವ ಕಿರುಕುಳ ನಿಲ್ಲಬೇಕು. ಈ ಕಾರಣಕ್ಕಾಗಿ, ನಾನು, ತಮ್ಮ ಗೃಹ ಕಚೇರಿಯ ಮುಂದೆ ಧರಣಿ ಕೂರಲಿದ್ದೇನೆ"ಎಂದು ದೇವೇಗೌಡ್ರು, ಸಿಎಂ ಯಡಿಯೂರಪ್ಪನವರಿಗೆ ಬರೆದ ಪತ್ರದಲ್ಲಿ ಹೇಳಿದ್ದಾರೆ.