ಭಾರೀ ಸಂಚಲನ ಮೂಡಿಸಿದ ಶೃಂಗೇರಿಯಲ್ಲಿ ಗೌಡರ 'ಅತಿರುದ್ರ ಮಹಾಯಾಗ'
ಚುನಾವಣಾ ವರ್ಷದಲ್ಲಿ ರಾಜಕೀಯ ಜಂಜಾಟವನ್ನೆಲ್ಲಾ ಬದಿಗೊತ್ತಿ ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ್ರು ದೇವರ ಮೊರೆ ಹೋಗಿದ್ದಾರೆ. ಗೌಡ್ರು, ದೇವಸ್ಥಾನ, ಹೋಮ ಹವನ ಮಾಡಿಸುವುದು ಹೊಸದೇನಲ್ಲ. ಆದರೆ, ಈಗ ಶೃಂಗೇರಿಯಲ್ಲಿ ನಡೆಯುತ್ತಿರುವ ಹೋಮಕ್ಕೆ ವಿಶೇಷ ಮಹತ್ವವಿದೆ ಎನ್ನುತ್ತಾರೆ ಋತ್ವಿಜರು. ಅದಕ್ಕೋ ಏನೋ.. ಗೌಡರ 'ಅತಿರುದ್ರ ಮಹಾಯಾಗ' ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಮೂಡಿಸಿದೆ.
ರಾಷ್ಟ್ರೀಯ ಪಕ್ಷಗಳು ಅಬ್ಬರದ ಪ್ರಚಾರ ಮಾಡುತ್ತಿದ್ದರೆ, ದೇವೇಗೌಡರು ಚಿಕ್ಕಮಗಳೂರಿನ ಶೃಂಗೇರಿ ಶಾರದಾಂಬೆಯ ಸನ್ನಿದಾನದಲ್ಲಿ ಕಳೆದ ಜನವರಿ ಮೂರರಿಂದ ವಿಶೇಷ ಪೂಜೆಯಲ್ಲಿ ತೊಡಗಿದ್ದಾರೆ. ದೇವೇಗೌಡರ ಕುಟುಂಬ ನಡೆಸುತ್ತಿರುವ 'ಅತಿರುದ್ರ ಮಹಾಯಾಗ'ಕ್ಕೆ ಬೇಡಿದ್ದನ್ನೆಲ್ಲಾ ಕೊಡುವ ಶಕ್ತಿಯಿದೆ ಎನ್ನುವುದು ನಂಬಿಕೆ.
ಶೃಂಗೇರಿಯಲ್ಲಿ ದೇವೇಗೌಡರಿಂದ ಅತಿರುದ್ರ ಯಾಗ, ಯಾವ ಕಾರಣಕ್ಕೆ
ಬೆಳಗ್ಗಿನ ಪೂಜೆಯ ನಂತರವೇ ಅಂದರೆ ಮಧ್ಯಾಹ್ನ ಹನ್ನೆರಡು ಗಂಟೆಯ ತನಕ ಕಟ್ಟುನಿಟ್ಟಿನ ಉಪವಾಸದಲ್ಲಿರುವ ಗೌಡ್ರು ನಂತರವಷ್ಟೇ ಆಹಾರ ಸೇವಿಸುತ್ತಿದ್ದಾರೆ. ಕಳೆದ ಹನ್ನೊಂದು ದಿನಗಳಿಂದ ಕುಟುಂಬದ ಕೆಲವು ಸದಸ್ಯರು ಮತ್ತು ಪಕ್ಷದ ಮುಖಂಡ ಶರವಣ ಜೊತೆ ಶೃಂಗೇರಿಯಲ್ಲೇ ಗೌಡ್ರು ತಂಗಿದ್ದಾರೆ.
ಶತಾಯುಷಿ ಅತ್ತೆಯ (ಪತ್ನಿಯ ತಾಯಿ) ಸಾವಿನ ನಂತರ ಒಮ್ಮೆ ಪತ್ನಿ ಜೊತೆ ಶವಸಂಸ್ಕಾರಕ್ಕೆ ಹೋಗಿ ಅಲ್ಲಿಂದ ಮತ್ತೆ ನೇರವಾಗಿ ಶೃಂಗೇರಿಗೆ ದೇವೇಗೌಡರು ವಾಪಸ್ ಬಂದಿದ್ದಾರೆ. 121 ಋತ್ವಿಜರು ಅತಿರುದ್ರ ಮಹಾಯಾಗವನ್ನು ನಡೆಸುತ್ತಿದ್ದು, ಭಾನುವಾರ (ಜ 14) ನಡೆಯಲಿರುವ ಪೂರ್ಣಾಹುತಿ ಕಾರ್ಯಕ್ರಮದಲ್ಲಿ ಕುಮಾರಸ್ವಾಮಿ, ರೇವಣ್ಣಯಾದಿಯಾಗಿ ಗೌಡ್ರ ಕುಟುಂಬದ ಎಲ್ಲರೂ ಭಾಗವಹಿಸಲಿದ್ದಾರೆ.
ಮಾಜಿ ರಾಷ್ಟ್ರಪತಿ ಶಂಕರ್ ದಯಾಳ್ ಶರ್ಮಾ, ಮಾಜಿ ಪ್ರಧಾನಿ ರಾಜೀವ್ ಗಾಂಧಿ ಕೂಡಾ ಈ ಹಿಂದೆ ಅತಿರುದ್ರ ಮಹಾಯಾಗವನ್ನು ನಡೆಸಿದ್ದರು. ದೇವೇಗೌಡರು ಶಕ್ತಿದೇವತೆ ಶಾರದಾಂಬೆಯ ಸನ್ನಿಧಾನದಲ್ಲಿ, ಶೃಂಗೇರಿ ಶ್ರೀಗಳ ಸಮ್ಮುಖದಲ್ಲಿ ಬಹುದೊಡ್ಡ ಧಾರ್ಮಿಕ ಕಾರ್ಯಕ್ರಮದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಏನಿದು ಅತಿರುದ್ರ ಮಹಾಯಾಗ?
ಅಪರೂಪದ ಮತ್ತು ಅತ್ಯಂತ ಶಕ್ತಿಶಾಲಿ ವೈದಿಕ ಆಚರಣೆ
ಯಜುರ್ವೇದ ಪದ್ದತಿಯಂತೆ, ಅತ್ತಿರುದ್ರ ಮಹಾಯಾಗ ಪವಿತ್ರ, ಅಪರೂಪದ ಮತ್ತು ಅತ್ಯಂತ ಶಕ್ತಿಶಾಲಿ ವೈದಿಕ ಆಚರಣೆಯಾಗಿದ್ದು, ಈ ಯಾಗ ನಡೆಸಿದರೆ, ಆರೋಗ್ಯ, ಶಕ್ತಿ, ಬುದ್ಧಿವಂತಿಕೆ, ಶತ್ರು ಸಂಹಾರ ಮತ್ತು ಎಲ್ಲಾ ಪ್ರಯತ್ನಗಳಲ್ಲಿ ಯಶಸ್ಸು ಸಿಗುತ್ತದೆ ಎನ್ನುವುದು ನಂಬಿಕೆ. ಶಿವನಿಗೆ ರುದ್ರಾಭಿಷೇಕ ನಡೆಯುವ ವೇಳೆ, 121 ಋತ್ವಿಜರು. 14,641 ರುದ್ರ ಮತ್ತು ಚಮಕ ಜೊತೆಗೆ ರುದ್ರ ಹೋಮವನ್ನು ಅತ್ತಿರುದ್ರ ಮಹಾಯಾಗದ ವೇಳೆ ನಡೆಸುತ್ತಾರೆ. ಜನವರಿ ಮೂರಕ್ಕೆ ಗೌಡರು ಈ ಯಾಗ ಆರಂಭಿಸಿದರೆ, ಅತ್ತ ಡಿ ಕೆ ಶಿವಕುಮಾರ್ ಜನವರಿ ಆರಕ್ಕೆ ಶತ ಚಂಡಿಕಾ ಯಾಗ ಆರಂಭಿಸಿದ್ದಾರೆ.
ಶೃಂಗೇರಿ ಮಠದ ಭಾರತೀ ತೀರ್ಥ ಸ್ವಾಮೀಜಿ, ವಿಧುಶೇಖರ ಭಾರತೀ ಸ್ವಾಮೀಜಿಗಳ ಸಾನ್ನಿಧ್ಯ
ರುದ್ರ ಪಠಣದ ನಂತರ ಚಮಕಂ ಪಠಣದಿಂದ ಅನುಸರಿಸಲಾಗುತ್ತದೆ. ಚಮಕಂ ಎಂಬುದು ಆರೋಗ್ಯ ಮತ್ತು ಸಮೃದ್ಧತೆಗಾಗಿ ಪಠಿಸಿಸುವ ವೈದಿಕ ಶ್ಲೋಕವಾಗಿದ್ದು, ಇದರ ನಿರಂತರ ಪಠಣದ ಜೊತೆಗೆ ರುದ್ರ ಹೋಮ ನಡೆಸಿದರೆ, ಇದರ ಫಲ ತುಂಬಾ ದೊಡ್ಡಿನ ಮಟ್ಟಿನದ್ದು ಎನ್ನುವ ನಂಬಿಕೆಯಿದೆ. ಶೃಂಗೇರಿ ಮಠದ ಭಾರತೀ ತೀರ್ಥ ಸ್ವಾಮೀಜಿ ಮತ್ತು ವಿಧುಶೇಖರ ಭಾರತೀ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ಯಾಗದ ಸಂಕಲ್ಪ ನೆರವೇರಿಸಿರುವ ದೇವೇಗೌಡ್ರು ಮತ್ತು ಪತ್ನಿ ಚನ್ನಮ್ಮ, ಉಭಯ ಶ್ರೀಗಳಿಗೆ ಫಲತಾಂಬೂಲ ಸಮರ್ಪಿಸಿದ ನಂತರ ಜನವರಿ 3ರಂದು ಅತಿರುದ್ರ ಮಹಾಯಾಗ ಆರಂಭವಾಯಿತು.
ಪ್ರಾಯಶ್ಚಿತ್ತದ ಸಲುವಾಗಿ ಕೂಡ ಈ ರೀತಿಯ ಯಾಗವನ್ನು ಮಾಡಿಸುತ್ತಾರೆ
ಈಶ್ವರನ ಸಂಪ್ರೀತಿಗಾಗಿ ಅತಿರುದ್ರ ಮಹಾ ಯಾಗ ಅತಿರುದ್ರ ಮಹಾಯಾಗವನ್ನು ಮಾಡುವುದು ಈಶ್ವರನ ಸಂಪ್ರೀತಿಗಾಗಿ. ಗುರುವಿನ ಅನುಗ್ರಹ ಕಡಿಮೆ ಇದೆ ಎಂಬ ಕಾರಣಕ್ಕೆ ಕೂಡ ಈಶ್ವರನ ಅನುಗ್ರಹ ಪಡೆಯುವ ಸಲುವಾಗಿ ಅತಿರುದ್ರ ಮಹಾಯಾಗ ಮಾಡುವಂತೆ ಸೂಚಿಸಿರಬಹುದು. ಪ್ರಾಯಶ್ಚಿತ್ತದ ಸಲುವಾಗಿ ಕೂಡ ಈ ರೀತಿಯ ಯಾಗವನ್ನು ಮಾಡಿಸುತ್ತಾರೆ.
ದೇವೇಗೌಡರ ಮತ್ತು ಕುಮಾರಸ್ವಾಮಿಯವರ ಆರೋಗ್ಯ ಸುಧಾರಣೆ
ಧನುರ್ಮಾಸದಲ್ಲಿ ಈ ಯಾಗ ನಡೆಸುವುದು ಅತ್ಯಂತ ಶ್ರೇಷ್ಠ. ದೇವೇಗೌಡರ ಮತ್ತು ಕುಮಾರಸ್ವಾಮಿಯವರ ಆರೋಗ್ಯ ಸುಧಾರಣೆ, ಮುಂದಿನ ಚುನಾವಣೆಯಲ್ಲಿ ಪಕ್ಷದ ಶ್ರೇಯಸ್ಸು, ಹೋರಾಡಲು ಶಕ್ತಿ ಮತ್ತು ಹಾಗೂ ರಾಜಕೀಯ ಶ್ರೇಯಸ್ಸು, ಜೊತೆಗೆ ರಾಜ್ಯದ ಜನರ ಹಿತವನ್ನೂ ಬಯಸಿ ಈ ಮಹಾಯಾಗವನ್ನು ಹಮ್ಮಿಕೊಳ್ಳಲಾಗಿದೆ ಎಂದು ದೇವೇಗೌಡರ ಜೊತೆಗಿರುವ ಜೆಡಿಎಸ್ ವಿಧಾನಪರಿಷತ್ ಸದಸ್ಯ ಟಿ ಶರವಣ ಹೇಳಿದ್ದಾರೆ.
ಮಠದ ಪರಮ ಭಕ್ತರಾಗಿರುವ ದೇವೇಗೌಡ್ರು
ಆರು ದಶಕಗಳ ಹಿಂದೆ, ಹಾಸನ ಜಿಲ್ಲೆ ಹೊಳೆನರಸೀಪುರದ ಶಾಸಕರಾಗಿದ್ದ ರಾಮಚಂದ್ರ ರಾಯರು, ದೇವೇಗೌಡರನ್ನು ಮೊದಲ ಬಾರಿಗೆ ಶೃಂಗೇರಿಗೆ ಕರೆದುಕೊಂಡು ಬಂದಿದ್ದರು. ಅಂದಿನಿಂದ ಮಠದ ಪರಮ ಭಕ್ತರಾಗಿರುವ ದೇವೇಗೌಡ್ರು ಕ್ಷೇತ್ರಕ್ಕೆ ವರ್ಷದಲ್ಲಿ ಕನಿಷ್ಠ ಒಂದು ಬಾರಿಯಾದರೂ ಬಂದು ವಿಶೇಷ ಪೂಜೆ, ಹೋಮಗಳಲ್ಲಿ ಪಾಲ್ಗೊಳ್ಳುತ್ತಾರೆ.
ಮೂಕಾಂಬಿಕಾ ದೇವಸ್ಥಾನದಲ್ಲಿ ಡಿಕೆಶಿ ಶತಚಂಡಿಕಾ ಹೋಮ
ಗೌಡ್ರು ಶಾರದಾಂಬೆಯ ಸನ್ನಿಧಾನದಲ್ಲಿ ಅತಿರುದ್ರ ಮಹಾಯಾಗದಲ್ಲಿ ನಿರತರಾಗಿದ್ದರೆ, ಅತ್ತ ಇಂಧನ ಸಚಿವ ಡಿ ಕೆ ಶಿವಕುಮಾರ್ ಉಡುಪಿ ಜಿಲ್ಲೆ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದಲ್ಲಿ ಶತಚಂಡಿಕಾ ಹೋಮ ನಡೆಸಿದ್ದಾರೆ. ಅರ್ಚಕ ನರಸಿಂಹ ಅಡಿಗರ ನೇತೃತ್ವದಲ್ಲಿ ಮೂರು ದಿನಗಳ ಕಾಲ ನಡೆದ ಈ ಹೋಮ, ಜನವರಿ ಎಂಟರಂದು ಸಂಪನ್ನಗೊಂಡಿದೆ.