ಜೆಡಿಎಸ್ ರಾಜ್ಯಾಧ್ಯಕ್ಷರ ನೇಮಕ: ದೇವೇಗೌಡರ ಚಾಣಕ್ಷತನಕ್ಕೆ ಸವಾಲು
ಬೆಂಗಳೂರು, ಜುಲೈ 23: ರಾಜ್ಯ ಹಾಗೂ ರಾಷ್ಟ್ರ ರಾಜಕಾರಣ ಎರಡೂ ಅತ್ಯಂತ ಚುರುಕಾಗಿರುವ ಈ ಸಮಯದಲ್ಲಿ ಜೆಡಿಎಸ್ ಪಕ್ಷ ರಾಜ್ಯಾಧ್ಯಕ್ಷರನ್ನು ನೇಮಕ ಮಾಡಬೇಕಾಗಿದೆ. ಈ ಪ್ರಕ್ರಿಯೆ ಪಕ್ಷದ ವರಿಷ್ಠ ದೇವೇಗೌಡ ಅವರ ಚಾಣಾಕ್ಷತನಕ್ಕೆ ಸವಾಲಾಗಲಿದೆ.
ಮುಖ್ಯಮಂತ್ರಿ ಕುಮಾರಸ್ವಾಮಿ ಅವರೇ ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷರಾಗಿದ್ದು, ಮುಖ್ಯಮಂತ್ರಿ ಕಾರ್ಯದ ಮಧ್ಯೆ ಪಕ್ಷ ಸಂಘಟನೆ ಕಷ್ಟ ಎಂಬ ಕಾರಣಕ್ಕೆ ಪಕ್ಷದ ಅಧ್ಯಕ್ಷರನ್ನು ಆಯ್ಕೆ ಮಾಡುವಂತೆ ದೇವೇಗೌಡ ಅವರಲ್ಲಿ ಮನವಿ ಮಾಡಿದ್ದಾರೆ. ಕೆಲವೇ ದಿನಗಳಲ್ಲಿ ನೂತನ ರಾಜ್ಯಾಧ್ಯಕ್ಷರ ಆಯ್ಕೆ ಆಗಲಿದೆ.
ಜೆಡಿಎಸ್ ರಾಜ್ಯಾಧ್ಯಕ್ಷರು ಯಾರು?, ನಾಲ್ವರ ಹೆಸರು ಮುಂಚೂಣಿಯಲ್ಲಿ!
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಹೇಳಿಕೊಳ್ಳುವಂತಹಾ ಸಾಧನೆಯನ್ನೇನು ಮಾಡಿಲ್ಲ ಆದರೂ ಅಧಿಕಾರ ಅವರ ಜೋಳಿಗೆಗೆ ಬಂದಿದೆ. ಈ ಸುವರ್ಣಾವಕಾಶವನ್ನು ಸದ್ಬಳಕೆ ಮಾಡಿಕೊಳ್ಳುವ, ಮೈತ್ರಿಯಿಂದ ಸಾಧ್ಯವಾದಷ್ಟು ಲಾಭವನ್ನು ಪಡೆದುಕೊಂಡು ಹೆಚ್ಚು ಲೋಕಸಭಾ ಸ್ಥಾನಗಳನ್ನು ಗೆಲ್ಲಿಸುವ ಸಮರ್ಥನನ್ನು ರಾಜ್ಯಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಬೇಕಿರುವುದು ಪಕ್ಷದ ತುರ್ತು.
ಕುಟುಂಬ ಪಕ್ಷ ಹಣೆಪಟ್ಟಿ ತೊಲಗಿಸುವ ಅವಕಾಶ
ಕೇವಲ ಇಷ್ಟೆ ಅಲ್ಲ, ರಾಜ್ಯಾಧ್ಯಕ್ಷ ಆಯ್ಕೆ ಪ್ರಕ್ರಿಯೆಯಲ್ಲಿ ಜೆಡಿಎಸ್ ಪಕ್ಷವು, 'ಕುಟುಂಬದ ಪಕ್ಷ' ಎಂಬ ಹಣೆಪಟ್ಟಿಯನ್ನು ಕಳೆದುಕೊಳ್ಳುವ ಅವಕಾಶವೂ ದೇವೇಗೌಡರ ಮುಂದಿದೆ. ಗೌಡರು ಈ ಸಮಯ ಉಪಯೋಗಿಸಿಕೊಂಡು ಕುಟುಂಬದವರನ್ನು ಬಿಟ್ಟು ನಿಷ್ಠಾವಂತ ಮುಖಂಡರನ್ನು ಪಕ್ಷದ ಅಧ್ಯಕ್ಷರನ್ನಾಗಿ ಮಾಡಿದರೆ ಮುಂಬರುವ ಸಹಸ್ರಾರು ಟೀಕೆಗಳಿಂದ ಪಾರಾಗಬಹುದು, ಅಲ್ಲದೆ ಜನರಲ್ಲಿ ನಂಬಿಕೆಯನ್ನೂ ಬಿತ್ತಬಹುದು. ಪಕ್ಷದ ಮುಖ್ಯ ಹುದ್ದೆಯನ್ನು ಕುಟುಂಬದಿಂದ ಹೊರಕ್ಕೆ ನೀಡುವುದು ದೇವೇಗೌಡರಿಗೆ ಸವಾಲೆ ಆಗಲಿದೆ.
ರಾಹುಲ್ ಗಾಂಧಿ ಪ್ರಧಾನಿ ಅಭ್ಯರ್ಥಿಯಾದರೆ ಅಭ್ಯಂತರವಿಲ್ಲ: ದೇವೇಗೌಡ
ಉತ್ತರ ಕರ್ನಾಟಕದ ಮುಖಂಡರಿಗೆ ಸ್ಥಾನ
ಜೆಡಿಎಸ್ ಪಕ್ಷ ಹಳೆ ಮೈಸೂರು ಭಾಗದ ಪಕ್ಷ ಎಂಬ ಆರೋಪ ಸಹ ಇದೆ. ಈ ಆರೋಪವನ್ನು ತೊಡೆದುಕೊಳ್ಳಲು ಸಹ ಇದು ಸಕಾಲವೆಂದೇ ಪರಿಗಣಿತವಾಗಿದೆ. ಕರಾವಳಿ ಅಥವಾ ಉತ್ತರ ಕರ್ನಾಟಕದ ಭಾಗಗಳ ಮುಖಂಡರಿಗೆ ಅವಕಾಶ ನೀಡುವ ಸಾಧ್ಯತೆಯ ಬಗ್ಗೆಯೂ ಈಗಾಗಲೇ ದೇವೇಗೌಡರು ಚಿಂತಿಸಿದ್ದಾರಂತೆ. ಹಾಗಾದಲ್ಲಿ ಹಳೆ ಮೈಸೂರು ಭಾಗದ ಮುಖಂಡರು ಗೌಡರ ನಿರ್ಣಯವನ್ನು ಒಪ್ಪುತ್ತಾರೆಯೇ ಎಂಬುದು ಪ್ರಶ್ನೆ. ಗೌಡರು ಹುಷಾರಾಗಿ ಹೆಜ್ಜೆ ಇಡಬೇಕಿದೆ.
ಅತೃಪ್ತರನ್ನು ನಿಭಾಯಿಸುವ ಸವಾಲು
ಕಾಂಗ್ರೆಸ್ಗೆ ಹೋಲಿಸಿದಲ್ಲಿ ಜೆಡಿಎಸ್ನಲ್ಲಿ ಅತೃಪ್ತರ ಸಂಖ್ಯೆ ಕಡಿಮೆಯೇ ಆದರೆ ಶೂನ್ಯವಂತೂ ಅಲ್ಲ. ಹಿರಿಯರಾದ ಎಚ್.ವಿಶ್ವನಾಥ್, ಅತೃಪ್ತರಾದ ಬಸವರಾಜ ಹೊರಟ್ಟಿ, ಸ್ವಪಕ್ಷದವರ ಕುತಂತ್ರದಿಂದಲೇ ಸೋತು ಬೇಸರಗೊಂಡಿರುವ ವೈ.ಎಸ್.ವಿ.ದತ್ತ, ವಿಧಾನಸಭೆ ಚುನಾವಣೆ ಟಿಕೆಟ್ ವಂಚಿತರಾಗಿರುವ ಶರವಣ, ಕುಮಾರಸ್ವಾಮಿ ಆಪ್ತ ಮಧು ಬಂಗಾರಪ್ಪ ಹೀಗೆ ಇನ್ನೂ ಹಲವು ಅತೃಪ್ತರು ಪಕ್ಷದಲ್ಲಿದ್ದು ದೇವೇಗೌಡರು ಇವರ ಅತೃಪ್ತಿ ಹೇಗೆ ನಿವಾರಿಸಿ ರಾಜ್ಯಾಧ್ಯಕ್ಷರ ಆಯ್ಕೆ ಮಾಡುತ್ತಾರೆನ್ನುವುದು ಕುತೂಹಲ.
ಕುಟುಂಬಕ್ಕೆ ನಿಷ್ಠರನ್ನಾಗಿರುವವರನ್ನೇ ಆಯ್ಕೆ?
ಯಾರು ಏನೇ ಹೇಳಿದರು ಅಂತಿಮವಾಗಿ ಪಕ್ಷದ ಮೇನ್ ಸ್ವಿಚ್ ದೇವೇಗೌಡರ ಬಳಿಯೇ ಇರುತ್ತದೆ ಎಂಬುದರಲ್ಲಿ ಸಂಶಯವಿಲ್ಲ. ಹಾಗಾಗಿ ಅವರು ತಮಗೆ ನಿಷ್ಠರಾಗಿರುವ ಮುಖಂಡನನ್ನೇ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡುವ ಸಾಧ್ಯತೆಯೇ ಹೆಚ್ಚು. ಹಾವೂ ಸಾಯದ, ಕೋಲೂ ಮುರಿಯದ ನ್ಯಾಯಕ್ಕೆ ದೇವೇಗೌಡರು ಬದ್ಧರಾಗುತ್ತಾರಾ? ಕಾದು ನೋಡಬೇಕಿದೆ.
ಕುಟುಂಬದ ಅಸಮಾಧಾನ ಶಮನದ ಸವಾಲು
ಈಗಾಗಲೇ ರೇವಣ್ಣ ಅವರ ಪುತ್ರ ಪ್ರಜ್ವಲ್ ರೇವಣ್ಣ ಅವರಿಗೆ ಕಾರ್ಯದರ್ಶಿ ಸ್ಥಾನ ನೀಡಿದ್ದಾರೆ, ನಿಖಿಲ್ ಕುಮಾರಸ್ವಾಮಿ ಸಹ ಚುನಾವಣೆಯಲ್ಲಿ ಜೆಡಿಎಸ್ ಪರ ಭರ್ಜರಿ ಪ್ರಚಾರ ಮಾಡಿ ತಾವೂ ರಾಜಕೀಯ ರೇಸಿನ ಕುದುರೆ ಎಂದು ಸೂಚ್ಯಗೊಳಿಸಿದ್ದಾರೆ. ಈ ಸಂದರ್ಭದಲ್ಲಿ ಅಪ್ಪನಿಂದ ತೆರವಾದ ಸ್ಥಾನವನ್ನು ನಿಖಿಲ್ ಕುಮಾರಸ್ವಾಮಿಗೆ ನೀಡಲಾಗುತ್ತದೆಯೇ. ಕುಟುಂಬ ಸದಸ್ಯರನ್ನು ಬಿಟ್ಟು ಹೊರಗಿನವರಿಗೆ ಹುದ್ದೆ ನೀಡಿದರೆ ಕುಟುಂಬದ ಒಳಗೆ ಉಂಟಾಗುವ ಅಸಮಾಧಾನವನ್ನು ಹೇಗೆ ಆರಿಸುತ್ತಾರೆ ಇದೆಲ್ಲವೂ ದೊಡ್ಡಗೌಡರಿಗೆ ಸವಾಲೇ ಆಗಲಿದೆ.