ದೇವೇಗೌಡರಿಗೆ ಕೇರಳದ ಜ್ಯೋತಿಷಿ ನುಡಿದ ಭವಿಷ್ಯವೇನು?
ಬೆಂಗಳೂರು, ನ 11: ಪಕ್ಷದ ಎಲ್ಲಾ ಪ್ರಮುಖ ನಿರ್ಧಾರ ತೆಗೆದುಕೊಳ್ಳುವ ಮುನ್ನ ಜ್ಯೋತಿಷಿಗಳ ಮತ್ತು ದೇವರ ಮೊರೆಹೋಗುವ ಮಾಜಿ ಪ್ರಧಾನಿ ದೇವೇಗೌಡ್ರು, ಪಕ್ಷದ ರಾಜ್ಯಾಧ್ಯಕ್ಷ ಹುದ್ದೆಗೆ ಯಾರನ್ನು ಆಯ್ಕೆ ಮಾಡಿದರೆ ಸೂಕ್ತ ಎನ್ನುವ ಗೊಂದಲದಲ್ಲಿದ್ದಾರೆ.
ಎಲ್ಲರದ್ದು ಒಂದು ದಾರಿಯಾದ್ರೆ, ದೇವೇಗೌಡ್ರದ್ದು ಬೇರೆನೇ ದಾರಿ ಎನ್ನುವುದು ರಾಜಕೀಯ ರಂಗದಲ್ಲಿ ಗೌಡ್ರ ಬಗ್ಗೆ ಕೇಳಿ ಬರುವ ಮಾತು. ಈ ಇಳಿ ವಯಸ್ಸಿನಲ್ಲಿ ಪಕ್ಷವನ್ನು ಪುನಶ್ಚೇತನಗೊಳಿಸಲು ಗೌಡರ ಪ್ರಯತ್ನ ಅವಿರತವಾಗಿ ಮುಂದುವರಿಯುತ್ತಲೇ ಇದೆ.
24X7 ರಾಜಕಾರಣಿ ಎಂದೇ ಹೆಸರಾಗಿರುವ ಗೌಡ್ರು ರಾಜ್ಯಾಧ್ಯಕ್ಷ ಹುದ್ದೆಗೆ ಯಾರನ್ನು ಆಯ್ಕೆ ಮಾಡಬಹುದು ಎನ್ನುವ ಕುತೂಹಲ ಜೆಡಿಎಸ್ ವಲಯದಲ್ಲಿ ಮನೆಮಾಡಿದೆ. (ಎರಡು ವಾರದಲ್ಲಿ ಜೆಡಿಎಸ್ ರಾಜ್ಯಾಧ್ಯಕ್ಷರ ನೇಮಕ)
ರಾಜ್ಯಾಧ್ಯಕ್ಷ ಹುದ್ದೆಗೆ ಯಾರು ಸೂಕ್ತ ಎಂದು ಜ್ಯೋತಿಷ್ಯ ಶಾಸ್ತ್ರದ ಮೂಲಕ ತಿಳಿದುಕೊಳ್ಳಲು ಗೌಡ್ರು ಕೇರಳಕ್ಕೆ ಹೋಗಿ ಅಭಿಪ್ರಾಯ ಪಡೆದುಕೊಂಡು ಬಂದಿದ್ದಾರೆ. ಜ್ಯೋತಿಷಿಗಳು ಗ್ರಹಗತಿಗಳ ಲೆಕ್ಕಾಚಾರ ಹಾಕಿ ಗೌಡ್ರಿಗೆ ಸೂಕ್ತ ಸಲಹೆ ನೀಡಿದ್ದಾರೆ ಎನ್ನಲಾಗುತ್ತಿದೆ.
ಈ ನಡುವೆ ಪಕ್ಷದ ಇತ್ತೀಚಿನ ಬೆಳವಣಿಗೆಗಳ ಬಗ್ಗೆ ದೇವೇಗೌಡರು ಮಂಗಳವಾರ (ನ 11) ಮಧ್ಯಾಹ್ನ 12 ಗಂಟೆಗೆ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ಕರೆದಿದ್ದಾರೆ.
ಕೇರಳದ ಜ್ಯೋತಿಷಿಗಳು ಹೇಳಿದ್ದೇನು ಮತ್ತು ರಾಜ್ಯಾಧ್ಯಕ್ಷ ಹುದ್ದೆಗೆ ರೇಸಿನಲ್ಲಿ ಇರುವವರು ಯಾರು? ಸ್ಲೈಡಿನಲ್ಲಿ ಮುಂದುವರಿಸಲಾಗಿದೆ..
ಕೇರಳದ ಜ್ಯೋತಿಷಿಗಳ ಪ್ರಕಾರ
ಕೇರಳದ ಜ್ಯೋತಿಷಿಗಳ ಪ್ರಕಾರ ರಾಜ್ಯಾಧ್ಯಕ್ಷ ಹುದ್ದೆಗೆ ಮಹಿಳೆಯೇ ಸೂಕ್ತ. ಪಕ್ಷದ ವರ್ಚಸ್ಸು ದಿನದಿಂದ ದಿನಕ್ಕೆ ಕಳೆಗುಂದುತ್ತಿದೆ. ಹಾಗಾಗಿ ಮಹಿಳೆಯನ್ನು ಈ ಆಯಕಟ್ಟಿನ ಹುದ್ದೆಗೆ ಆಯ್ಕೆ ಮಾಡುವುದು ಸೂಕ್ತ. ಪಕ್ಷ ಮತ್ತೆ ಫೀನಿಕ್ಸ್ ನಂತೆ ಮೇಲೆ ಬರಬೇಕಾದರೆ ಮಹಿಳೆಯನ್ನೇ ಅಧ್ಯಕ್ಷರನ್ನಾಗಿ ಮಾಡಿ ಎಂದು ಜ್ಯೋತಿಷಿಗಳು ಗೌಡರಿಗೆ ಸಲಹೆ ನೀಡಿದ್ದಾರೆ ಎನ್ನಲಾಗುತ್ತಿದೆ.ಇದಕ್ಕೆ ಪೂರಕ ಎನ್ನುವಂತೆ ಮಹಿಳೆಯರು ಈ ಹುದ್ದೆ ಅಲಂಕರಿಸಿದರೆ ತಪ್ಪೇನು ಎಂದು ಕುಮಾರಸ್ವಾಮಿ ಹೇಳಿಕೆ ನೀಡಿದ್ದರು.
ಲೀಲಾವತಿ ಆರ್ ಪ್ರಸಾದ್
ಮಹಿಳೆಯರಿಗೆ ಈ ಪಟ್ಟ ಸಿಗಬಹುದು ಎನ್ನುವ ಸುದ್ದಿಯ ನಡುವೆ ಮಾಜಿ ಸಚಿವೆ ಲೀಲಾವತಿ ಆರ್ ಪ್ರಸಾದ್ ಅವರ ಹೆಸರು ಚಾಲ್ತಿಯಲ್ಲಿದೆ. ಶ್ರೇಷ್ಠ ಸಾಹಿತಿ ಮತ್ತು ಸಾಮಾಜಿಕ ಕಾರ್ಯಕರ್ತೆಯಾಗಿರುವ ಲೀಲಾವತಿ ಪ್ರಸಾದ್ ಅವರು ಹೆಸರು ಅಧ್ಯಕ್ಷ ಸ್ಥಾನದ ಹೆಸರಿನಲ್ಲಿ ಕೇಳಿ ಬರುತ್ತಿದ್ದರೂ, ಇದು ಗೌಡ್ರ ಕೊನೆಯ ಆಯ್ಕೆಯಾಗಬಹುದು ಎನ್ನುವ ಮಾತಿದೆ.
ಭವಾನಿ ರೇವಣ್ಣ
ಗೌಡ್ರ ಕುಟುಂಬದ ಸೊಸೆ ಭವಾನಿ ರೇವಣ್ಣ ಅವರಿಗೆ ರಾಜಕೀಯದಲ್ಲಿ ಆಸಕ್ತಿ ತುಸು ಜಾಸ್ತಿಯೇ. ಕಳೆದ ಅಸೆಂಬ್ಲಿ ಚುನಾವಣೆಯಲ್ಲೂ ಟಿಕೆಟ್ ಆಕಾಂಕ್ಷಿಯಾಗಿದ್ದ ಭವಾನಿಗೆ ಪಕ್ಷ ಟಿಕೆಟ್ ನೀಡಿರಲಿಲ್ಲ. ನಂತರ ಹೊಳೇನರಸೀಪುರದಲ್ಲಿ ಪತಿ ರೇವಣ್ಣ ಪರವಾಗಿ ಪ್ರಚಾರ ಮಾಡಿದ್ದರು. ಗೌಡರಿಗೆ ಆಪ್ತೆಯಾಗಿರುವ ಸೊಸೆ ಭವಾನಿ ಅವರ ಹೆಸರು ಕೂಡ ಕೇಳಿ ಬರುತ್ತಿದೆ.
ಎಚ್ ಡಿ ಕುಮಾರಸ್ವಾಮಿ
ಮಹಿಳೆಯನ್ನು ಅಧ್ಯಕ್ಷರನ್ನಾಗಿ ಗೌಡ್ರು ಆಯ್ಕೆ ಮಾಡಬಹುದು ಎನ್ನುವ ಸುದ್ದಿಯ ನಡುವೆ, ಪಕ್ಷದ ಪ್ರಮುಖರು ಕುಮಾರಸ್ವಾಮಿಯವರನ್ನೇ ರಾಜ್ಯಾಧ್ಯಕ್ಷರನ್ನಾಗಿ ಮಾಡಬೇಕೆಂದು ಗೌಡರಿಗೆ ದಂಬಾಲು ಬಿದ್ದಿದ್ದಾರೆ. ಶಾಸಕಾಂಗ ಪಕ್ಷದ ನಾಯಕರೇ ರಾಜ್ಯಾಧ್ಯಕ್ಷರಾಗ ಬೇಕೆಂದು ಪಕ್ಷದ ಪ್ರಮುಖರು ಹಠ ಹಿಡಿದಿದ್ದಾರೆ.
ಅನಿತಾ ಕುಮಾರಸ್ವಾಮಿ
ಅನಿತಾ ಕುಮಾರಸ್ವಾಮಿಗೆ ಸಕ್ರಿಯ ರಾಜಕಾರಣದಲ್ಲಿ ಇತ್ತೀಚಿನ ದಿನಗಳಲ್ಲಿ ಆಸಕ್ತಿ ಕಮ್ಮಿಯಾಗುತ್ತಿದ್ದರೂ, ಪಕ್ಷ ಅವರನ್ನು ಬಿಡಲೊಪ್ಪುತ್ತಿಲ್ಲ. ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಮನಸ್ಸಿಲ್ಲದ ಮನಸ್ಸಿನಿಂದ ಚುನಾವಣೆಗೆ ಸ್ಪರ್ಧಿಸಿ ಸೋತ ನಂತರ ಅನಿತಾ ರಾಜಕಾರಣದಿಂದ ದೂರವಾಗಿದ್ದರು. ಅನಿತಾ ಕುಮಾರಸ್ವಾಮಿ, ದೇವೇಗೌಡ್ರ ಮೊದಲ ಆಯ್ಕೆಯಾದರೂ ಆಗಬಹುದು ಎನ್ನಲಾಗುತ್ತಿದೆ.