ಚುನಾವಣೆಗೂ ಮುನ್ನ ಕುಮಾರಣ್ಣ ಹೇಳಿದ್ದೇನು, ಈಗ ಆಗುತ್ತಿರುವುದೇನು?
ರಾಜಕೀಯದಲ್ಲಿ ಯಾರೂ ಶತ್ರುಗಳಲ್ಲ, ಯಾರೂ ಮಿತ್ರರಲ್ಲ.. ರಾಜಕಾರಣಿಗಳಿಗೆ ಮುಖ್ಯಮಂತ್ರಿ ಆಗಬೇಕು ಎನ್ನುವ ಆಸೆಯೂ ತಪ್ಪಲ್ಲ.. ಹೊಂದಾಣಿಕೆಯೂ ಓಕೆ..ಆದರೆ, ಚುನಾವಣಾ ಪ್ರಚಾರದ ವೇಳೆ, ಮತದಾರರನ್ನು ಓಲೈಸಲು ನೀವು ನೀಡುವ ಹೇಳಿಕೆಯ ಮೇಲೆ ಸ್ವಲ್ಪವಾದರೂ ನಿಯತ್ತು ಇಲ್ಲದಿದ್ದರೆ ಹೇಗೆ..
ಇಡೀ ಕರ್ನಾಟಕ ವಿಧಾನಸಭಾ ಚುನಾವಣೆಯ ಪ್ರಚಾರವನ್ನು ಒಮ್ಮೆ ಅವಲೋಕಿಸುವುದಾದರೆ, ಬಿಜೆಪಿಯವರು ಎಲ್ಲೋ ಅಲ್ಲೊಲ್ಲೊಮ್ಮೆ ಜೆಡಿಎಸ್ ಅನ್ನು ದೂರಿದ್ದನ್ನು ಬಿಟ್ಟರೆ, ಜೆಡಿಎಸ್ ವಿರುದ್ದ ವಾಗ್ದಾಳಿ ನಡೆಸಿದ್ದು ಕಾಂಗ್ರೆಸ್ ಎನ್ನುವುದು, ಗೌಡ್ರಿಗೆ ಗೊತ್ತಿಲ್ಲದ ವಿಚಾರವೇನೂ ಅಲ್ಲ..
ಜೆಡಿಎಸ್-ಕಾಂಗ್ರೆಸ್ ಮೈತ್ರಿ ಜಾಣತನದ್ದೆ? ಮುಂದೇನಾಗಲಿದೆ?
ಅದರಲ್ಲೂ, ಸಿದ್ದರಾಮಯ್ಯ ಮತ್ತು ಕುಮಾರಣ್ಣ ಎಂತೆಂತಾ ಮುತ್ತಿನಂತಹ ಮಾತುಗಳನ್ನು ವಿನಿಮಯಿಸಿಕೊಂಡಿದ್ದರು. ಪರಸ್ಪರ ಅಪ್ಪಂದಿರನ್ನು ಮಾತಿನಲ್ಲೇ ಹೊರಗೆಳೆದಿದ್ದರು. ಈಗ ಇಬ್ಬರೂ ಒಬ್ಬರೊನ್ನೊಬ್ಬರು ಅಪ್ಪಿಕೊಳ್ಳುತ್ತಿರುವುದನ್ನು ಪ್ರಜಾಪ್ರಭುತ್ವದ ಬ್ಯೂಟಿ ಎನ್ನಬೇಕೇ ಅಥವಾ 'ಛೀ' ಅನ್ನಬೇಕೇ?
ಅದೇನೇ ಇರಲಿ.. ಇಬ್ಬರೂ ಸೇರಿ ಈಗ ಗದ್ದುಗೆ ನಿರ್ಮಿಸಲು ಹೊರಟಿದ್ದಾರೆ, ಅಗತ್ಯವಾದ ಸಂಖ್ಯಾಬಲವೂ ಇದೆ. ರಾಜ್ಯಪಾಲರನ್ನೂ ಜಂಟಿಯಾಗಿ ಭೇಟಿ ಮಾಡಿ ಮನವಿ ಸಲ್ಲಿಸಿದ್ದಾಗಿದೆ. ಇನ್ನೇನಿದ್ದರೂ ಬಿಜೆಪಿಯ ಪ್ರತಿತಂತ್ರ, ರಾಜ್ಯಪಾಲರ ನಡೆ...
ರಾಜ್ಯಪಾಲ ವಜುಭಾಯಿ ವಾಲ ಮುಂದಿರುವ ನಾಲ್ಕು ಆಯ್ಕೆಗಳು
ಅವರಪ್ಪನ ಆಣೆಗೂ, ಅವನು (ಕುಮಾರಸ್ವಾಮಿ) ಮುಖ್ಯಮಂತ್ರಿ ಆಗಲ್ಲಾ, ಕನಸು ಕಾಣೋದನ್ನು ಅವನು ಬಿಡಲಿ ಎಂದು ಏಕವಚನದಲ್ಲಿ ಹರಿಹಾಯ್ದಿದಿದ್ದ ಹಂಗಾಮಿ ಸಿಎಂ ಸಿದ್ದರಾಮಯ್ಯನವರು, ಈಗ ಅದೇ ಕುಮಾರಣ್ಣನನ್ನು ಸಿಎಂ ಮಾಡಲು ರಾಜ್ಯಪಾಲರ ಬಳಿ ಹೋಗಬೇಕಾಗಿ ಬಂದಿರುವುದು ವಿಪರ್ಯಾಸ. ಸಮ್ಮಿಶ್ರ ಸರಕಾರದ ಬಗ್ಗೆ, ಕುಮಾರಣ್ಣ ಕೆಲವೇ ಕೆಲವು ದಿನಗಳ ಹಿಂದೆ ಹೇಳಿದ ಮಾತುಗಳು ಹೀಗಿವೆ.. ಮುಂದೆ ಓದಿ..
ರಾಜಕೀಯ ನಿವೃತ್ತಿ ಪಡೆದುಕೊಳ್ಳುತ್ತೇನೆ
ವಿಕಾಸ ಪರ್ವದ ಚಿಕ್ಕಬಳ್ಳಾಪುರ ಸಮಾವೇಶದಲ್ಲಿ ಮಾತನಾಡುತ್ತಿದ್ದ ಕುಮಾರಸ್ವಾಮಿ, ಜೆಡಿಎಸ್ ಸ್ಪಷ್ಟ ಬಹುಮತ ಪಡೆಯಲು ಸಾಧ್ಯವಾಗದೇ ಇದ್ದ ಪಕ್ಷದಲ್ಲಿ ರಾಜಕೀಯ ನಿವೃತ್ತಿ ಪಡೆದುಕೊಳ್ಳುತ್ತೇನೆಯೇ ಹೊರತು ಯಾರ ಜೊತೆಗೂ ಮೈತ್ರಿ ಮಾಡಿಕೊಳ್ಳುವುದಿಲ್ಲ. ಈ ಚುನಾವಣೆಯಲ್ಲಿ ನನ್ನ ಶಕ್ತಿ ದೊಡ್ಡದೋ, ಸಿದ್ದರಾಮಯ್ಯನವರ ಶಕ್ತಿ ದೊಡ್ಡದೋ ಎನ್ನುವುದು ಸಾಬೀತಾಗಲಿದೆ ಎಂದು ಎಚ್ಡಿಕೆ ಹೇಳಿದ್ದರು.
ಅವರಪ್ಪನಾಣೆಗೂ ನಾನು ಸಿಎಂ ಆಗುವುದಿಲ್ಲ
ಜನತೆಯ ಪ್ರೀತಿಯ ಮುಂದೆ, ಸಿದ್ದರಾಮಯ್ಯ ಲೂಟಿ ಹೊಡೆದ ಹಣದಿಂದ ಚುನಾವಣೆ ನಡೆಸ್ತೀನಿ ಅನ್ಕೊಂಡ್ರೆ ಅದು ನಡೆಯೋಲ್ಲ. ಅವರಪ್ಪನಾಣೆಗೂ ನಾನು ಸಿಎಂ ಆಗುವುದಿಲ್ಲ ಎನ್ನುವ ಸಿದ್ದರಾಮಯ್ಯನವರಿಗೆ ಈ ಚುನಾವಣೆಯಲ್ಲಿ ಮತದಾರ ಪಾಠ ಕಲಿಸಲಿದ್ದಾನೆ. ನಾನು ಸಿಎಂ ಆಗೋದು, ಬಿಡೋದು.. ಜನರ ಆಶೀರ್ವಾದದಿಂದ, ಕಾಂಗ್ರೆಸ್ ಪಕ್ಷದಿಂದಲ್ಲ.
ಜೆಡಿಎಸ್ ಮೈತ್ರಿ ಮಾಡಿಕೊಳ್ಳುವ ಪ್ರಶ್ನೆಯೇ ಉದ್ಭವವಾಗುವುದಿಲ್ಲ
ಇದಾದ ನಂತರ, ಮಂಗಳೂರಿನಲ್ಲಿ ಮಾತನಾಡುತ್ತಿದ್ದ ಕುಮಾರಸ್ವಾಮಿ, ಯಾವ ಪಕ್ಷದ ಜೊತೆಗೂ ಜೆಡಿಎಸ್ ಮೈತ್ರಿಯಾಗಲಿ, ಒಳಒಪ್ಪಂದವನ್ನು ಮಾಡಿಕೊಳ್ಳುವುದಿಲ್ಲ. ಜೆಡಿಎಸ್ ಕೆಲವೊಂದು ಸಿದ್ದಾಂತವನ್ನು ಪಾಲಿಸಿಕೊಂಡು ಬರುತ್ತಿರುವ ಪಕ್ಷ. ಯಾವ ಕಾರಣಕ್ಕೂ ರಾಷ್ಟ್ರೀಯ ಪಕ್ಷಗಳ ಜೊತೆ ಜೆಡಿಎಸ್ ಮೈತ್ರಿ ಮಾಡಿಕೊಳ್ಳುವ ಪ್ರಶ್ನೆಯೇ ಉದ್ಭವವಾಗುವುದಿಲ್ಲ.
ಇದು ನನ್ನ ಸಾರ್ವಜನಿಕ ಘೋಷಣೆ. ಇದರಿಂದ ನಾನು ಹಿಂದೆ ಸರಿಯುವುದಿಲ್ಲ
ಒಂದು ವೇಳೆ ಅತಂತ್ರ ಫಲಿತಾಂಶ ಬಂದರೂ, ಚುನಾವಣಾ ಮೈತ್ರಿ ಮಾಡಿಕೊಳ್ಳುವುದಿಲ್ಲ, ಇದು ನನ್ನ ಸಾರ್ವಜನಿಕ ಘೋಷಣೆ. ಇದರಿಂದ ನಾನು ಹಿಂದೆ ಸರಿಯುವುದಿಲ್ಲ. ಬೇಕಾದರೆ ಇನ್ನೊಂದು ಚುನಾವಣೆಗೆ ಹೋಗಲು ನಾವು ಸಿದ್ದವೇ ಹೊರತು, ಮೈತ್ರಿಯ ಮಾತೇ ಇಲ್ಲ - ಕುಮಾರಸ್ವಾಮಿ.
ಬಿಜೆಪಿ ಅಧಿಕಾರದಲ್ಲಿದ್ದಾಗ 8ಚುನಾವಣೆಯಲ್ಲಿ 7ರಲ್ಲಿ ಗೆದ್ದಿದ್ದೆವು
ಬಿಜೆಪಿ ಮತ್ತು ಕಾಂಗ್ರೆಸ್ ಜೊತೆ ಈಗಾಗಲೇ ಒಡಂಬಡಿಕೆ ಮಾಡಿ ನೋಡಿದ್ದೇವೆ, ಅದರ ಅನುಭವ ನಮಗಿದೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದಾಗ ಎಂಟು ಚುನಾವಣೆಯಲ್ಲಿ ಏಳರಲ್ಲಿ ಗೆದ್ದಿದ್ದೆವು. ಈ ಎರಡು ರಾಷ್ಟ್ರೀಯ ಪಕ್ಷಗಳ ಜೊತೆ ಹೊಂದಾಣಿ ಯಾವುದೇ ಕಾರಣಕ್ಕೂ ನಡೆಯದು. ಇದನ್ನು ಬಹಳಷ್ಟು ಬಾರಿ ಚುನಾವಣಾ ಪ್ರಚಾರದ ವೇಳೆ ಹೇಳಿದ್ದೇನೆ ಎಂದು ಕುಮಾರಸ್ವಾಮಿ ಹೇಳಿದ್ದರು.