ಬಿಜೆಪಿ ಹೆಚ್ಚು ಸ್ಥಾನ ಗೆಲ್ಲಲು ಸಿದ್ದರಾಮಯ್ಯ ಕಾರಣ: ಎಚ್. ವಿಶ್ವನಾಥ್
ಬೆಂಗಳೂರು, ಮೇ 8: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅಧಿಕ ಸ್ಥಾನಗಳನ್ನು ಗೆಲ್ಲಲು ಕಾಂಗ್ರೆಸ್ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾರಣವೇ ಹೊರತು ಜೆಡಿಎಸ್ ಕಾರಣ ಅಲ್ಲ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್ ವಿಶ್ವನಾಥ್ ಹೇಳಿದರು.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಮತ್ತೆ ಮುಖ್ಯಮಂತ್ರಿ ಆಗಬೇಕು ಎಂದು ಕಾಂಗ್ರೆಸ್ಸಿಗರು ಹೇಳಿಕೆ ನೀಡುತ್ತಿರುವುದರ ವಿರುದ್ಧ ಹರಿಹಾಯ್ದರು. ಈಗಿನ ಸನ್ನಿವೇಶದಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಲು ಸಾಧ್ಯವಿಲ್ಲ. ಎಚ್ ಡಿ ಕುಮಾರಸ್ವಾಮಿ ಅವರೇ ಐದು ವರ್ಷಗಳವರೆಗೂ ಮುಖ್ಯಮಂತ್ರಿ ಆಗಿರುತ್ತಾರೆ ಎಂದು ಕಾಂಗ್ರೆಸ್ ಹೈಕಮಾಡ್ ಹೇಳಿದೆ. ಸಿದ್ದರಾಮಯ್ಯ ಅವರಿಗೆ ಮುಖ್ಯಮಂತ್ರಿ ಆಗಲು ಸದ್ಯ ಯಾವುದೇ ಮಾರ್ಗಗಳಿಲ್ಲ ಎಂದರು.
ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಬೇಕು ಎಂದು ಕಾಂಗ್ರೆಸ್ ಮುಖಂಡರು ಪದೇ ಪದೇ ಹೇಳಿಕೆ ನೀಡುತ್ತಿರುವುದು ಸಮಂಜಸವಲ್ಲ. ಇದರಿಂದ ಅನುಮಾನ, ಗೊಂದಲಗಳು ಶುರುವಾಗುತ್ತಿವೆ. ಹೀಗೆ ಮೈತ್ರಿ ಸರ್ಕಾರ ಬಿದ್ದುಹೋದರೆ ಏನು ಮಾಡಲು ಸಾಧ್ಯ? ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರಿಗೆ ಈ ರೀತಿಯ ಸನ್ನಿವೇಶ ಹೊಸತೇನಲ್ಲ. ಅವರು ಇಂತಹ ಸಂದರ್ಭಗಳನ್ನು ಎದುರಿಸಲು ಮಾನಸಿಕವಾಗಿ ಸಿದ್ಧರಾಗಿದ್ದಾರೆ ಎಂದು ತಿಳಿಸಿದರು.
ಸಿದ್ದರಾಮಯ್ಯ ಮತ್ತೆ ಸಿಎಂ ಆಗೋದನ್ನು ಕಾಯ್ತಿದ್ದೇನೆ: ಎಂಬಿ ಪಾಟೀಲ್
ಮೈಸೂರಿನಲ್ಲಿ ಸಿದ್ದರಾಮಯ್ಯ ಅವರನ್ನು ಸೋಲಿಸಿದರು. ಆದರೂ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ಪ್ರಯತ್ನಿಸುತ್ತಿದ್ದಾರೆ. ಈ ಬಗ್ಗೆ ತಾತ್ವಿಕ ಚರ್ಚೆಗಳಾಗಬೇಕು. ಉಪ ಮುಖ್ಯಮಂತ್ರಿ ಪರಮೇಶ್ವರ ಅವರೂ, ಮೈತ್ರಿ ಸರ್ಕಾರ ಕುಮಾರಸ್ವಾಮಿ ಅವರ ನೇತೃತದಲ್ಲಿ ಐದು ವರ್ಷ ಪೂರೈಸಲಿದೆ. ಸರಾಗವಾಗಿ ನಡೆಯುತ್ತಿದೆ ಎಂದು ಹೇಳಿದ್ದಾರೆ. ಹೀಗಿರುವಾಗ ಸಿಎಂ ಸ್ಥಾನದ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದರು.
ಜೆಡಿಎಸ್ ಬಿಜೆಪಿಯ 'ಬಿ ಟೀಂ' ಎಂದಿದ್ದರು
ಅಸೆಂಬ್ಲಿ ಚುನಾವಣೆಯಲ್ಲಿ ಬಿಜೆಪಿ ಹೆಚ್ಚು ಸ್ಥಾನ ಗೆಲ್ಲಲು ಸಿದ್ದರಾಮಯ್ಯ ಕಾರಣ, ಜೆಡಿಎಸ್ ಅಲ್ಲ. ಸಿದ್ದರಾಮಯ್ಯ ಮತ್ತು ರಾಹುಲ್ ಗಾಂಧಿ ಅವರು ಜೆಡಿಎಸ್ಅನ್ನು ಬಿಜೆಪಿಯ ಬಿ ಟೀಂ ಎಂದು ಟೀಕಿಸಿದ್ದರು. ಜೆಡಿಎಸ್ಗೆ ಮತ ಹಾಕಬೇಡಿ ಎಂದಿದ್ದರು. ಹಾಗಾಗಿ ಜೆಡಿಎಸ್ ಮತಗಳು ಬಿಜೆಪಿಗೆ ಹೋದವು ಎಂದು ವಿಶ್ವನಾಥ್ ಆರೋಪಿಸಿದರು.
ಸಿದ್ದರಾಮಯ್ಯ ಮತ್ತೆ ಸಿಎಂ ಆದರೆ ಒಳ್ಳೆಯದು: ಶಾಸಕ ಸುಧಾಕರ್
ಮಧ್ಯಂತರ ಚುನಾವಣೆ ಬಯಸುತ್ತಿದ್ದಾರೆಯೇ?
ಸಿದ್ದರಾಮಯ್ಯ ಅವರು ಮಧ್ಯಂತರ ಚುನಾವಣೆ ಬಯಸುತ್ತಿದ್ದಾರೆಯೇ? ಅವರೇ ಇದಕ್ಕೆ ಸ್ಪಷ್ಟನೆ ಕೊಡಬೇಕು. ಈಗಿನ ಸನ್ನಿವೇಶದಲ್ಲಿ ಸಿದ್ದರಾಮಯ್ಯ ಸಿಎಂ ಆಗಲು ಸಾಧ್ಯವಿಲ್ಲ. ಅದಕ್ಕೆ ಮಾರ್ಗಗಳು ಬೇರೆ ಥರ ಇವೆ. ಪ್ರಸ್ತುತದಲ್ಲಿ ಯಾವ ಮಾರ್ಗವೂ ಇಲ್ಲ. ಕಾಂಗ್ರೆಸ್ನ ಎಲ್ಲ ಸಮಾನ ಮನಸ್ಕರು ಸೇರಿದರೂ ಅವರ ಒಟ್ಟು ಬಲ 79 ಆಗುತ್ತದೆಯೇ ಹೊರತು 113ರ ಸಂಖ್ಯೆ ತಲುಪುವುದಿಲ್ಲ ಎಂದರು.
ಕುತೂಹಲ ಮೂಡಿಸಿದ ವಿಶ್ವನಾಥ್- ಶ್ರೀನಿವಾಸ್ ಪ್ರಸಾದ್ ಭೇಟಿ
ಸಂಶಯಕ್ಕೆ ಎಡೆ ಮಾಡಿಕೊಡುತ್ತಿದೆ
ಮುಂದಿನ ಐದು ವರ್ಷಗಳವರೆಗೂ ಕುಮಾರಸ್ವಾಮಿ ಅವರ ನಾಯಕತ್ವದಲ್ಲಿ ಸಮ್ಮಿಶ್ರ ಸರ್ಕಾರ ನಡೆಯಬೇಕೆಂದು ಕಾಂಗ್ರೆಸ್ ಹೈಕಮಾಂಡ್ ಮೊದಲೇ ಹೇಳಿದೆ. ಅಲ್ಲಿಗೆ ಮಾತು ಮುಗಿದುಹೋಗಿದೆ. ಅದನ್ನು ಮುರಿಯುವ ಮಾತುಗಳನ್ನಾಡುತ್ತಿರುವುದು ಸರಿಯಲ್ಲ. ಲೋಕಸಭೆ ಚುನಾವಣೆಯಲ್ಲಿ ಯಾರು ಗೆಲ್ಲುತ್ತಾರೆ, ಯಾರ ಸರ್ಕಾರ ಬರಲಿದೆ ಎಂಬ ಚರ್ಚೆ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ಸಿಎಂ ಸ್ಥಾನದ ಕುರಿತಾದ ಹೇಳಿಕೆಗಳು ಅನವಶ್ಯಕವಾದದ್ದು. ಇವು ಸಂಶಯಕ್ಕೆ ಎಡೆಮಾಡಿಕೊಡುವಂತಿವೆ ಎಂದು ಹೇಳಿದರು.
ಸಮನ್ವಯ ಸಮಿತಿಯೊಳಗೆ ನನಗೆ ಪ್ರವೇಶವಿಲ್ಲ
ಸಿದ್ದರಾಮಯ್ಯ ಸಮನ್ವಯ ಸಮಿತಿ ಅಧ್ಯಕ್ಷರಾಗಿದ್ದಾರೆ. ಅವರೇ ಹೀಗಾದಾಗ ಸರ್ಕಾರ ನಗೆಪಾಟಲಿಗೆ ಒಳಗಾಗುತ್ತದೆ. ಇದೆಲ್ಲವೂ ರಾಜಕಾರಣ. ಇವೆಲ್ಲವೂ ರಾಜಕಾರಣದಲ್ಲಿ ನಡೆಯುತ್ತದೆ. ಸಮನ್ವಯ ಸಮಿತಿ ಒಳಕ್ಕೆ ಸಿದ್ದರಾಮಯ್ಯ ನನ್ನನ್ನು ಬಿಟ್ಟುಕೊಡುತ್ತಿಲ್ಲ. ನಾನು ಇದ್ದಿದ್ದರೆ ಕೆಲವು ವಿಚಾರ ಪ್ರಸ್ತಾಪ ಮಾಡುತ್ತಿದ್ದೆ. ಹಲವಾರು ಸತ್ಯಗಳ ಬಗ್ಗೆ ಅಲ್ಲಿ ಚರ್ಚೆ ನಡೆದು ತೀರ್ಮಾನಗಳಾಗಬೇಕಿದೆ ಎಂದರು.
ಯಾವುದೇ ಚರ್ಚೆ ಆಗದಿದ್ದರೂ ಹೀಗೇಕೆ?
ಸಿದ್ದರಾಮಯ್ಯ ಅವರನ್ನು ಮೆಚ್ಚಿಸಲು ಕಾಂಗ್ರೆಸ್ನ ಕೆಲವು ಮುಖಂಡರು ಈ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಇದರಿಮದ ಸಾರ್ವಜನಿಕರ ಮನಸಿನಲ್ಲಿ ಏನೇನೋ ಅಲೋಚನೆಗಳು ಮೂಡುತ್ತಿವೆ. ಮೈತ್ರಿ ಧರ್ಮದ ಒಪ್ಪಂದದಂತೆ ಸರ್ಕಾರ ನಡೆಯುತ್ತಿದೆ. ಇದೆಲ್ಲ ಇದ್ದರೂ ಯಾವುದೇ ಚರ್ಚೆ ಆರಂಭವಾಗದೆಯೇ ಏಕ್ದಂ ಕಾಂಗ್ರೆಸ್ನ ಸ್ನೇಹಿತರು ಅವರವರೇ ಹೇಳಿಕೆ ನೀಡಿದರೆ ಏನಾಗುತ್ತದೆ. ಸಾರ್ವಜನಿಕರಲ್ಲಿ ಯಾವ ಅಭಿಪ್ರಾಯ ವ್ಯಕ್ತವಾಗುತ್ತದೆ? ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯ ಸಿಎಂ ಆಗಬೇಕು
ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಆಗಬೇಕು ಎಂದು ಸಚಿವ ಪರಮೇಶ್ವರ್ ನಾಯ್ಕ್ ಹೇಳಿದರು. ಬಳ್ಳಾರಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ರಾಷ್ಟ್ರ ರಾಜಕಾರಣಕ್ಕ ಹೋಗುವುದು ನನಗೆ ಇಷ್ಟವಿಲ್ಲ. ಅವರು ನಮ್ಮೆಲ್ಲರ ಸಲುವಾಗಿ ಸಿಎಂ ಆಗಬೇಕು ಎಂದರು. ಕಾಂಗ್ರೆಸ್ ಮುಖಂಡರಾದ ಕೆ. ಸುಧಾಕರ್, ಗೃಹ ಸಚಿವ ಎಂಬಿ ಪಾಟೀಲ್ ಇತ್ತೀಚೆಗಷ್ಟೇ ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಆಗಬೇಕೆಂದು ಹೇಳಿಕೆ ನೀಡಿದ್ದರು.