ಸಿದ್ದರಾಮಯ್ಯ ಕೈಗೊಂಬೆಯಾಗಬೇಕಾಯಿತು: ರಾಜೀನಾಮೆ ಪತ್ರದಲ್ಲಿ ವಿಶ್ವನಾಥ್ ಆಕ್ರೋಶ
Recommended Video
ಬೆಂಗಳೂರು, ಜೂನ್ 4: ಲೋಕಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದ ಹೀನಾಯ ಸೋಲಿಗೆ ನೈತಿಕ ಹೊಣೆ ಹೊತ್ತು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಸ್ಥಾನಕ್ಕೆ ಎಚ್. ವಿಶ್ವನಾಥ್ ಅವರು ರಾಜೀನಾಮೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿದ ಅವರು, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ . ದೇವೇಗೌಡ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿರುವುದಾಗಿ ತಿಳಿಸಿದರು.
ಜೆಡಿಎಸ್ ರಾಜ್ಯಾಧ್ಯಕ್ಷನಾಗಿ ಇಲ್ಲಿಯವರೆಗೂ ಪ್ರಾಮಾಣಿಕವಾಗಿ ಸಂಘಟನೆಯ ಶಕ್ತಿಯಾಗಿ ಕೆಲಸ ಮಾಡಿಕೊಂಡು ಬಂದಿದ್ದೇನೆ. ಲೋಕಸಭೆ ಚುನಾವಣೆಯ ಪರಾಭವದ ಹಿನ್ನೆಲೆಯಲ್ಲಿ ನೈತಿಕ ಹೊಣೆಗಾರಿಕೆ ಹೊತ್ತು ಆ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.
ಜೆಡಿಎಸ್ ವರಿಷ್ಠರು ನನಗೆ ರಾಜ್ಯಾಧ್ಯಕ್ಷ ಸ್ಥಾನ ನೀಡಿ ಗೌರವಿಸಿದ್ದರು. ಲೋಕಸಭೆ ಚುನಾವಣೆ ಆದ ಬಳಿಕ ಪರಾಭವದ ಹಿನ್ನೆಲೆಯಲ್ಲಿ ನೈತಿಕತೆ ಹೊಣೆ ಹೊತ್ತು ರಾಜೀನಾಮೆ ಸಲ್ಲಿಸುವುದು ವಾಡಿಕೆ ಹಾಗೂ ಪದ್ಧತಿಯಾಗಿ ಬಂದಿದೆ. ಏನೇ ಇರಲಿ, ರಾಜೀನಾಮೆ ಸಲ್ಲಿಸುತ್ತಿದ್ದೇನೆ. ಅದನ್ನು ಬಹಿರಂಗವಾಗಿ ಮಾಧ್ಯಮದ ಮುಂದೆ ಹೇಳಿಕೊಡಬೇಕು ಎಂದು ಬಯಸಿದ್ದೆ ಎಂದು ತಿಳಿಸಿದ್ದಾರೆ.
ಜೆಡಿಎಸ್ ನೂತನ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ನಡೆದು ಬಂದ ದಾರಿ
ಇದೇ ಸಂದರ್ಭದಲ್ಲಿ ಅವರು ಕಾಂಗ್ರೆಸ್ ಹಾಗೂ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು. ಪಕ್ಷದ ಹೀನಾಯ ಸೋಲಿಗೆ ಕಾಂಗ್ರೆಸ್ ಕಾರಣ ಎಂದು ಹರಿಹಾಯ್ದರು.
ಅವರು ದೇವೇಗೌಡ ಅವರಿಗೆ ಬರೆದ ಪತ್ರದ ವಿವರ ಹೀಗಿದೆ...
ಎಚ್.ಡಿ. ದೇವೇಗೌಡರಿಗೆ ರಾಜೀನಾಮೆ ಪತ್ರ
ತಾವು ನನ್ನಲ್ಲಿ ವಿಶ್ವಾವಿಟ್ಟು ಜನತಾದಳದ ರಾಜ್ಯಾಧ್ಯಕ್ಷನನ್ನಾಗಿ ನೇಮಕ ಮಾಡಿದ್ದು, ನನ್ನ ರಾಜಕೀಯ ಜೀವನದ ಬಹುಮುಖ್ಯ ಘಟ್ಟ ಎಂದೇ ಭಾವಿಸಿದ್ದೇನೆ.
ಸ್ವಾಭಿಮಾನದ ಸಂಕೇತವಾಗಿ ನನ್ನ ಮಾತೃ ಪಕ್ಷ ಕಾಂಗ್ರೆಸ್ನಿಂದ ಹೊರಬರಬೇಕಾದ ಅನಿವಾರ್ಯತೆ ಎದುರಾಗಿ ಆಚೆ ಬಂದು ನಿಂತಾಗ ನನ್ನ ಅಭಿಲಾಷೆಯಂತೆ ನನಗೆ ಹುಣಸೂರು ವಿಧಾನಸಭಾ ಕ್ಷೇತ್ರದ ಶಾಸಕನಾಗಿ ಆಯ್ಕೆಯಾಗುವ ಮೂಲಕ ರಾಜಕೀಯ ಪುನರ್ಜನ್ಮಕ್ಕೆ ಆಶೀರ್ವದಿಸಿದ್ದೀರಿ. ಅದಕ್ಕಾಗಿ ನಾನು ನಿಮಗೆ ಕೃತಜ್ಞನಾಗಿದ್ದೇನೆ.
'ನಮ್ಮ ಕುಮಾರಣ್ಣ' ಎಂಬ ಪ್ರೀತಿ
ಅಸಂಗತ ಸಂದರ್ಭದಲ್ಲಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷವಾಯಿತು. ಸಾಲಮನ್ನಾದಂತಹ ಬೃಹತ್ ಯೋಜನೆಯನ್ನು ಹೆಗಲ ಮೇಲೆ ಹೊತ್ತ ಮುಖ್ಯಮಂತ್ರಿಗಳು ಆಡಳಿತದ ಅಭದ್ರತೆಯ ಸಂಕಷ್ಟದಲ್ಲಿಯೂ ಜನರ ನಡುವೆ 'ನಮ್ಮ ಕುಮಾರಣ್ಣ' ಎಂಬ ಭಾವನಾತ್ಮಕ ಸಂಪ್ರೀತಿಯಲ್ಲಿದ್ದರು.
ನಿಖಿಲ್ ಕುಮಾರಸ್ವಾಮಿ ಭೇಟಿಯಾದ ಎಚ್.ವಿಶ್ವನಾಥ್
ಪ್ರಭುತ್ವ ಮತ್ತು ಪಕ್ಷ ಜೋಡೆತ್ತಿನಂತೆ ಇರಬೇಕು
ಒಂದೆರಡು ಇಲಾಖೆಗಳನ್ನು ಬಿಟ್ಟರೆ ನಿರೀಕ್ಷಿಸಿದ ಸಾಧನೆಗಳು ಸಾಧ್ಯವಾಗಿಲ್ಲ. ಈ ವಿಚಾರದಲ್ಲಿ ಪಕ್ಷದ ಅಧ್ಯಕ್ಷನಾಗಿ ನಿರಾಸೆಯಾಗಿದೆ ಎನ್ನಲು ಸಂಕಟವಾದರೂ ಹೇಳಲು ಅನಿವಾರ್ಯವಾಗಿದೆ. ಆದರೂ ಮುಖ್ಯಮಂತ್ರಿ ಕುಮಾರಸ್ವಾಮಿಯವರು ತಮ್ಮ ಅನಾರೋಗ್ಯದ ಮತ್ತು ಮಿತ್ರರ ಕಿರುಕುಳ ನಡುವೆಯೂ ಎಲ್ಲ ವಿಶ್ವಾಸದಿಂದ ಶಕ್ತಿಮೀರಿ ಸರ್ಕಾರ ನಡೆಸುತ್ತಿದ್ದಾರೆ.
ಸಾಮಾನ್ಯವಾಗಿ ಸರ್ಕಾರ ಅಧಿಕಾರದಲ್ಲಿದ್ದಾಗ ಮಂತ್ರಿಗಳಾದವರು, ಶಾಸಕರು ಪಕ್ಷದ ಮಟ್ಟಿಗೆ ಅಷ್ಟು ಆಸಕ್ತಿಯನ್ನು ಹೊಂದಿರುವುದಿಲ್ಲ. ಪ್ರಭುತ್ವ ಮತ್ತು ಪಕ್ಷ ಜೋಡೆತ್ತಿನಂತೆ ಇರಬೇಕು. ಆದರೆ ಅದು ಸಾಧ್ಯವಾಗುತ್ತಿಲ್ಲ.
ನಿಮ್ಮ ಸೋಲು ನಾಡಿನ ಸೋಲು
ಲೋಕಸಭೆ ಚುನಾವಣೆಯಲ್ಲಿ ತಾವು ಸೋಲಿನ ನೋವುಣ್ಣಬೇಕಾಗಿ ಬಂದಿದ್ದು, ನನಗೆ ಹಾಗೂ ಪಕ್ಷಕ್ಕೆ ತೀವ್ರ ನೋವಿನ ಸಂಗತಿಯಾಗಿದೆ. ಮೈಸೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆಗೆ ಅವಕಾಶ ಕೊಡಿ ಎಂಬ ನಮ್ಮ ಕೂಗಿಗೆ ಕಾಂಗ್ರೆಸ್ಸಿಗರು ಓಗೊಡದೆ ಹಾಲಿ ಕಾಂಗ್ರೆಸ್ ಸದಸ್ಯರ ಸ್ಥಾನದಲ್ಲಿ ನಿಮ್ಮನ್ನು ಸ್ಪರ್ಧಿಸುವಂತಹ ತಂತ್ರ ಹೆಣೆಯಲಾಯಿತು. ತುಮಕೂರು ಕ್ಷೇತ್ರದ ಖೆಡ್ಡಾಕ್ಕೆ ಕೆಡವಿ ಚುನಾವಣೆಯಲ್ಲಿ ಅವಮಾನಕರ ಸೋಲು ಅನುಭವಿಸುವಂತೆ ಮಾಡಲಾಯಿತು. ನಿಮ್ಮ ಸೋಲು ನಾಡಿನ ಸೋಲಾಯಿತು. ರಾಜ್ಯದ ಹಿತಕ್ಕೆ ಮಾರಕವಾಯಿತು.
ಸ್ವಂತ ಪಕ್ಷದ ವಿರುದ್ಧವೇ ತಿರುಗಿ ಬಿದ್ದ ಜೆಡಿಎಸ್ ರಾಜ್ಯಾಧ್ಯಕ್ಷ ವಿಶ್ವನಾಥ್
ನಿಖಿಲ್ ಸೋಲಿಗೆ ಕಾರಣ
ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿಯೂ ಸಹ ಕಾಗ್ರೆಸ್ ಪಕ್ಷದ ಕಾರ್ಯಕರ್ತರು, ಮಾಜಿ ಶಾಸಕರುಗಳ, ಜೆಡಿಎಸ್ನ ಹಿರಿಯ ಜನಪ್ರತಿನಿಧಿಗಳ ಜವಾಬ್ದಾರಿಯಿಲ್ಲದ ಕೊಂಕು ನುಡಿಗಳು, ವಿಚಲಿತವಾದ ಅಹಿಂದ ಮತಗಳು ನಮ್ಮ ಸ್ಪರ್ಧಿ ನಿಖಿಲ್ ಕುಮಾರಸ್ವಾಮಿ ಅವರ ಸೋಲಿಗೆ ಕಾರಣವಾಯಿತು.
ನಾಮಕಾವಸ್ಥೆ ಸಮಿತಿ
ಜೆಡಿಎಸ್-ಕಾಂಗ್ರೆಸ್ ಸಮನ್ವಯ ಸಮಿತಿ ಕೇವಲ ನಾಮಕಾವಸ್ಥೆ ಸಮನ್ವಯ ಸಮಿತಿ ಆಯಿತೇ ಹೊರತು ಎರಡು ಪಕ್ಷಗಳ ನಡುವೆ ಸಮನ್ವಯ ಸಾಧಿಸುವಲ್ಲಿ ಸಫಲವಾಗಲೇ ಇಲ್ಲ. ಸಮನ್ವಯ ಸಮಿತಿ ಸುಲಲಿತವಾಗಿ ಸರ್ಕಾರವನ್ನು ನಡೆಸಿಕೊಂಡು ಹೋಗುವ ದೃಷ್ಟಿಯಿಂದ ಸಾಮಾನ್ಯ ಕನಿಷ್ಠ ಕಾರ್ಯಕ್ರಮವನ್ನು ಇದುವರೆಗೂ ರೂಪಿಸಲು ಸಾಧ್ಯವಾಗಿಲ್ಲ.
ಸಿದ್ದರಾಮಯ್ಯ ಕೈಗೊಂಬೆ
ಸಮನ್ವಯ ಸಮಿತಿಯಲ್ಲಿ ಜೆಡಿಎಸ್ ಅಧ್ಯಕ್ಷನಾದ ನನಗೆ ಅವಕಾಶವನ್ನೇ ನೀಡಲಿಲ್ಲ. ಸಮನ್ವಯ ಸಮಿತಿ ಸಿದ್ದರಾಮಯ್ಯ ಅವರ ಕೈಗೊಂಬೆಯಂತೆ ಕಾರ್ಯನಿರ್ವಹಿಸಬೇಕಾದ ಪರಿಸ್ಥಿತಿ ಸೃಷ್ಟಿಯಾಯಿತೇ ಹೊರತು, ಸೌಹಾರ್ದ ವಾತಾವರಣದಲ್ಲಿ ನಿರಾತಂಕವಾಗಿ ಸರ್ಕಾರವನ್ನು ನಡೆಸಿಕೊಂಡು ಹೋಗುವ ಪ್ರಾಮಾಣಿಕ ಪ್ರಯತ್ನ ನಡೆಯಲೇ ಇಲ್ಲ. ಪಕ್ಷದ ಅಧ್ಯಕ್ಷನಾದ ನನಗಾಗಲೀ, ಕಾಂಗ್ರೆಸ್ ಪಕ್ಷದ ಅಧ್ಯಕ್ಷ ದಿನೇಶ ಗುಂಡೂರಾವ್ ಅವರಿಗಾಗಲೀ ಸಮನ್ವಯ ಸಮಿತಿಯಲ್ಲಿ ಧ್ವನಿಯೇ ಇಲ್ಲದಂತಾಯಿತು.
ಇಂತಹ ಸಂದರ್ಭದಲ್ಲಿ ಪಕ್ಷದ ಹೊಣೆಗಾರಿಕೆಯಿಂದ ನನ್ನನ್ನು ಬಿಡುಗಡೆ ಮಾಡಿ ಹುಣಸೂರು ಕ್ಷೇತ್ರದ ಜನರಿಗೆ ಸೇವೆ ಮಾಡಲು ಅನುಕೂಲ ಮಾಡಿಕೊಡಬೇಕೆಂದು ವಿನಮ್ರವಾಗಿ ಕೋರುತ್ತೇನೆ.