ಕಷ್ಟವಾದರೆ ಬೆಂಬಲ ಹಿಂಪಡೆದು ಹೋಗಲಿ: ಕಾಂಗ್ರೆಸ್ ವಿರುದ್ಧ ವಿಶ್ವನಾಥ್ ಕಿಡಿ
Recommended Video
ಬೆಂಗಳೂರು, ಜೂನ್ 22: ದೇವೇಗೌಡ ಅವರು ಹೇಗೆ ಬೇಕಾದರೂ ಬದಲಾಗುತ್ತಾರೆ ಎಂಬ ಮಾಜಿ ಕೇಂದ್ರ ಸಚಿವ ಎಂ. ವೀರಪ್ಪ ಮೊಯ್ಲಿ ಅವರ ಆರೋಪಕ್ಕೆ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್ ವಿಶ್ವನಾಥ್ ಕಿಡಿಕಾರಿದ್ದಾರೆ.
ಲೋಕಸಭೆ ಚುನಾವಣೆಯ ಸೋಲಿಗೆ ಜೆಡಿಎಸ್ ಜತೆ ಮಾಡಿಕೊಂಡ ಮೈತ್ರಿಯೇ ಕಾರಣ ಎಂದು ಕಾಂಗ್ರೆಸ್ ನಾಯಕರು ಪದೇ ಪದೇ ಆರೋಪ ಮಾಡುತ್ತಿದ್ದಾರೆ. ಸರ್ಕಾರದಲ್ಲಿ ಅವರೇ ಹೆಚ್ಚಿನ ಪಾಲು ಅಧಿಕಾರ ಹೊಂದಿದ್ದಾರೆ. ಹೆಚ್ಚು ಸಚಿವರಿದ್ದಾರೆ. ನಿಗಮ ಮಂಡಳಿ ಅಧ್ಯಕ್ಷರೂ ಅವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇಷ್ಟೆಲ್ಲಾ ಇದ್ದರೂ ಜೆಡಿಎಸ್ ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ. ಅವರಿಗೆ ಕಷ್ಟವಾದರೆ ಬೆಂಬಲ ಹಿಂಪಡೆದುಕೊಂಡು ಹೋಗಲಿ ಎಂದು ವಿಶ್ವನಾಥ್ ಕೋಪದಿಂದ ನುಡಿದಿದ್ದಾರೆ.
ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಎದುರಾಗಬಹುದು ಎಂಬ ಮಾಜಿ ಪ್ರಧಾನಿ ದೇವೇಗೌಡ ಅವರ ಅಭಿಪ್ರಾಯವನ್ನು ಟೀಕಿಸಿದ ವೀರಪ್ಪ ಮೊಯ್ಲಿ ಅವರು, ದೇವೇಗೌಡರು ಹೇಗೆ ಬೇಕಾದರೂ ಬದಲಾಗುತ್ತಾರೆ ಎಂದಿದ್ದರು. ಅದಕ್ಕೆ ಖಾಸಗಿ ವಾಹಿನಿಯೊಂದಕ್ಕೆ ಪ್ರತಿಕ್ರಿಯೆ ನೀಡಿರುವ ವಿಶ್ವನಾಥ್, ಈ ಟೀಕೆಯನ್ನು ಒಪ್ಪುವುದಿಲ್ಲ. ದೇವೇಗೌಡರು ಮೊಯ್ಲಿ ಅವರಿಗಿಂತ ಅನುಭವಿ. ಅವರಿಗೆ ಮಾತನಾಡುವಾಗ ಸಮಯ ಸಂದರ್ಭದ ಅರಿವಿರುತ್ತದೆ ಎಂದಿದ್ದಾರೆ.
ದೇವೇಗೌಡರು ಹೇಗೆ ಬೇಕಾದರೂ ಬದಲಾಗುತ್ತಾರೆ: ವೀರಪ್ಪ ಮೊಯ್ಲಿ
ಪ್ರತ್ಯೇಕವಾಗಿ ಚುನಾವಣೆಗೆ ಹೋಗಿದ್ದರೆ ಕಾಂಗ್ರೆಸ್ ಹೆಚ್ಚು ಸೀಟು ಗೆಲ್ಲುತ್ತಿತ್ತು ಎಂಬ ಹೇಳಿಕೆಗೆ ಅವರು, ಜೆಡಿಎಸ್ ಕೂಡ ಹೆಚ್ಚು ಸೀಟುಗಳನ್ನು ಗೆಲ್ಲುತ್ತಿತ್ತು. ಮಂಡ್ಯದಲ್ಲಿ ಮೂರೂ ಪಕ್ಷಗಳು ಸ್ಪರ್ಧಿಸಿದ್ದರೆ ಜೆಡಿಎಸ್ ಗೆಲ್ಲುತ್ತಿತ್ತು ಎಂದಿದ್ದಾರೆ.
ಹೋಗುವುದಾದರೆ ಹೋಗಬಹುದು-ವಿಶ್ವನಾಥ್
ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಸಂಬಂಧಕ್ಕಿಂತ ಸಂಕಷ್ಟ ಜಾಸ್ತಿಯಾಗುತ್ತದೆ. ಶೇ 70ರಷ್ಟು ಅಧಿಕಾರವನ್ನು ಅವರೇ ಅನುಭವಿಸುತ್ತಿದ್ದಾರೆ. ಶೇ 30ರಷ್ಟು ಮಾತ್ರ ನಮಗೆ ಮಾತ್ರ ಇದೆ. ಅವರು ಅಧಿಕಾರ ಅನುಭವಿಸಿ ಈಗ ಇಲ್ಲ ಎನ್ನುತ್ತಿರುವುದು ವಸ್ತುಸ್ಥಿತಿಗೆ ವಿರುದ್ಧ. ಅವರೂ ಹೋಗುವಷ್ಟು ದಿನ ಹೋಗಲಿ ಎನ್ನುತ್ತಿದ್ದಾರೆ. ಬೆಂಬಲ ವಿತ್ ಡ್ರಾ ಮಾಡಿಕೊಳ್ಳುವುದಿದ್ದರೆ ಮಾಡಿಕೊಳ್ಳಲಿ ಎಂದು ಖಾಸಗಿ ವಾಹಿನಿಯೊಂದಿಗೆ ಮಾತನಾಡಿದ ಎಚ್ ವಿಶ್ವನಾಥ್ ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.
ಮಧ್ಯಂತರ ಚುನಾವಣೆ ಮಾತೇ ಇಲ್ಲ: ಯೂ ಟರ್ನ್ ಹೊಡೆದ ದೇವೇಗೌಡ
ಯಡವಟ್ಟಾಗಿದ್ದು ನಿಜ
ಮೈತ್ರಿ ಮಾಡಿಕೊಳ್ಳುವ ಸಂದರ್ಭದಲ್ಲಿ ಅದರ ಸಾಧಕ ಬಾಧಕಗಳ ಬಗ್ಗೆ ಚರ್ಚೆ ಆಗಲಿಲ್ಲ ಏಕಾಏಕಿ ಮೈತ್ರಿ ಮಾಡಿಕೊಂಡು ಹೋಗಿದ್ದರಿಂದ ಎರಡೂ ಪಕ್ಷಗಳು ಇದಕ್ಕೆ ಜವಾಬ್ದಾರರು. ಇದರಿಂದ ಕಾಂಗ್ರೆಸ್ ಅಥವಾ ಜೆಡಿಎಸ್ಗೆ ನಷ್ಟ ಎಂದು ಹೇಳುವಂತಿಲ್ಲ. ಅದನ್ನು ಒಪ್ಪುವುದಿಲ್ಲ. ಪ್ರತ್ಯೇಕವಾಗಿ ಹೋಗಿದ್ದರೆ ಜೆಡಿಎಸ್ಗೆ 4-5 ಸ್ಥಾನ ಸಿಗುತ್ತಿತ್ತು, ಕಾಂಗ್ರೆಸ್ಗೆ 8-10 ಸ್ಥಾನ ಲಭಿಸುತ್ತಿತ್ತು. ಒಟ್ಟಾಗಿ ಹೋಗಿ ಯಡವಟ್ಟಾಗಿರುವುದು ನಿಜ ಎಂದರು.
ಮೊಯ್ಲಿ ಹೇಳಿಕೆ ಒಪ್ಪೊಲ್ಲ
ವೀರಪ್ಪ ಮೊಯ್ಲಿ ಅವರ ಬಗ್ಗೆ ಗೌರವವಿದೆ. ಆದರೆ, ದೇವೇಗೌಡರು ಹೇಗೆ ಬೇಕಾದರೂ ಮಾತನಾಡುತ್ತಾರೆ ಎನ್ನುವ ಆರೋಪವನ್ನು ಒಪ್ಪಲಾಗದು. ಮೊಯ್ಲಿ ಅವರ ಅನುಭವಕ್ಕಿಂತ ದೇವೇಗೌಡರ ಅನುಭವ ದೊಡ್ಡದು, ಸಮಯ ಸಂದರ್ಭಕ್ಕೆ ಅನುಗುಣವಾಗಿ ಅವರು ಮಾತನಾಡುತ್ತಾರೆ ಎಂದರು.
ನಮಗೇನು ಆಸೆ ಇರಲಿಲ್ಲ, ದೆಹಲಿ ನಾಯಕರು ನಿಮ್ಮ ಮಗನನ್ನು ಸಿಎಂ ಮಾಡ್ಬೇಕು ಅಂದಿದ್ರು: ದೇವೇಗೌಡ
ವಿಶ್ವಾಸ ಕಡಿಮೆ ಆಗುತ್ತಿದೆ
ಎರಡೂ ಪಕ್ಷಗಳ ನಡುವೆ ವಿಶ್ವಾಸ ಕಡಿಮೆ ಆಗುತ್ತಲೆ ಇದೆ. ಸಿದ್ದರಾಮಯ್ಯ ಅವರೇ ದೆಹಲಿಗೆ ಹೋಗಿ ಹೈಕಮಾಂಡ್ ವಿರುದ್ಧ ಆರೋಪಪಟ್ಟಿ ನೀಡಿದ್ದಾರೆ. ಕಾಂಗ್ರೆಸ್ ನಾಯಕರು ದಿನವೂ ಹೇಳಿಕೆ ನೀಡುತ್ತಿರುವುದರಿಂದ ಬಾಂಧವ್ಯ ಸಂಕಷ್ಟಕ್ಕೆ ಸಿಲುಕುತ್ತಿದೆ. ಮುಂದೆ ಎರಡೂ ಪಕ್ಷಗಳ ನಾಯಕರು ಹಿರಿಯರು ಕುಳಿತು ಚರ್ಚಿಸಬೇಕಿದೆ. ಸಾಧಕ ಬಾಧಕಗಳ ಪರಿಣಾಮದ ಬಗ್ಗೆ ಸಮಾಲೋಚನೆ ನಡೆಸಬೇಕಿದೆ. ಮುಂದೆ ಏನಾಗುತ್ತದೆಯೋ ನೋಡೋಣ ಎಂದು ವಿಶ್ವನಾಥ್ ಹೇಳಿದ್ದಾರೆ.