ರಾಹುಲ್ ಗಾಂಧಿ 'ಬಿ' ಟೀಂ ಹೇಳಿಕೆಗೆ ಜೆಡಿಎಸ್ ತೀವ್ರ ಖಂಡನೆ
ಹುಬ್ಬಳ್ಳಿ, ಮಾರ್ಚ್ 23: ಹಾಸನದಲ್ಲಿ ಮಾತನಾಡಿದ್ದ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಜಾತ್ಯಾತೀತ ಜನತಾದಳವನ್ನು ಬಿ.ಜೆ.ಪಿಯ 'ಬಿ' ಟೀಂ ಎಂದು ಹೇಳಿದ್ದರು. ಇದಕ್ಕೆ ಜೆಡಿಎಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
"ಈ ರೀತಿಯ ಹೇಳಿಕೆ ನೀಡುವ ಮೂಲಕ ರಾಹುಲ್ ಗಾಂಧಿ ರಾಜಕೀಯ ಅಪ್ರಬುದ್ಧತೆಯನ್ನು ಎತ್ತಿ ತೋರಿಸಿದ್ದಾರೆ. ಕರ್ನಾಟಕದಲ್ಲಿ ಪ್ರಬಲವಾಗಿ ಬೆಳೆದಿರುವ ಜೆ.ಡಿ.ಎಸ್. ಪಕ್ಷದ ಏಳಿಗೆಯನ್ನು ಸಹಿಸದೇ ಸ್ಥಳೀಯ ಕಾಂಗ್ರೆಸ್ ನಾಯಕರು ಹೇಳಿದ ಗಿಳಿಪಾಠವನ್ನಾಗಿ ಒಪ್ಪಿಸಿ ತಮಗೆ ರಾಜಕೀಯ ನೈಪುಣ್ಯತೆ ಇಲ್ಲ, ಕರ್ನಾಟಕದ ರಾಜಕೀಯದ ಮಾಹಿತಿ ಗೊತ್ತಿಲ್ಲ ಎಂದುದನ್ನು ಅವರು ಸ್ಪಷ್ಟಪಡಿಸಿದ್ದಾರೆ," ಎಂದು ಜೆಡಿಎಸ್ ನಾಯಕ ಬಸವರಾಜ್ ಹೊರಟ್ಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜೆಡಿಎಸ್ ಪಕ್ಷವು ಬಿಜೆಪಿಗೆ ಬೆಂಬಲ ನೀಡುತ್ತಿದೆ: ರಾಹುಲ್ ಗಾಂಧಿ
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಅವರು, "ದೇಶದ ಪ್ರಧಾನ ಮಂತ್ರಿಯಂತಹ ಉನ್ನತ ಹುದ್ದೆಯನ್ನು ಜೆ.ಡಿ.ಎಸ್ ಪಕ್ಷ ಹೊಂದಿತ್ತೆಂಬುದನ್ನು ಅವರು ಮರೆತಂತೆ ಕಾಣುತ್ತದೆ. ರಾಜ್ಯದ ಅಲ್ಪಸಂಖ್ಯಾತರ ಮತಗಳು ಕಾಂಗ್ರೆಸ್ಗೆ ಬರಬೇಕೆಂಬ ದುರುದ್ದೇಶದಿಂದ ಜೆ.ಡಿ.ಎಸ್ ಬಿ.ಜೆ.ಪಿಯ 'ಬಿ' ಟೀಂ ಎಂದು ಅರ್ಥವಿಲ್ಲದ ಹೇಳಿಕೆ ನೀಡಿದ್ದಾರೆ," ಎಂದು ಕಿಡಿಕಾರಿದ್ದಾರೆ.
"ಇದೇ ಕಾಂಗ್ರೆಸ್ ಪಕ್ಷವು ಜೆ.ಡಿ.ಎಸ್ನೊಂದಿಗೆ ಸಮ್ಮಿಶ್ರ ಸರಕಾರ ನಡೆಸಿತ್ತು ಎಂಬುದನ್ನು ರಾಹುಲ್ ಗಾಂಧಿಯವರು ಕೇಳಿ ತಿಳಿದುಕೊಳ್ಳುವುದು ಸೂಕ್ತ. ಬಿ.ಬಿ.ಎಂ.ಪಿಯಲ್ಲಿ ಜೆ.ಡಿ.ಎಸ್ ಬೆಂಬಲದೊಂದಿಗೆ ಆಡಳಿತ ನಡೆಸುತ್ತಿರುವ ಇವರು, ನಂಜನಗೂಡಿನ ಚುನಾವಣೆಯಲ್ಲಿ ಜೆ.ಡಿ.ಎಸ್ ಬೆಂಬಲಕ್ಕೆ ಅಂಗಲಾಚಿದ್ದನ್ನು ಮರೆತಂತೆ ಕಾಣುತ್ತದೆ. ಕಾಂಗ್ರೆಸ್ ಪಕ್ಷದ ನಾಯಕರು ಹಲವಾರು ಸಲ ಜೆ.ಡಿ.ಎಸ್ ಬೆಂಬಲಕ್ಕಾಗಿ ಎಡತಾಕಿದ್ದನ್ನು ಮರೆತಿರುವ ಕಾಂಗ್ರೆಸ್ ಅಧ್ಯಕ್ಷರು ರಾಷ್ಟ್ರದ ಹಾಗೂ ರಾಜ್ಯದ ರಾಜಕೀಯದ ಆಳ-ಅಗಲಗಳ ಬಗ್ಗೆ ತಿಳಿದುಕೊಂಡು ಮಾತನಾಡುವದು ಅವರ ಪಕ್ಷಕ್ಕೆ ಹಾಗೂ ಅವರಿಗೆ ಶೋಭೆ ತರಬಲ್ಲದು," ಎಂದು ಹೊರಟ್ಟಿ ಅಭಿಪ್ರಾಯಪಟ್ಟಿದ್ದಾರೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
"ಕರ್ನಾಟಕದ ಮತದಾರರು ಪ್ರಬುದ್ಧರಿದ್ದು, ಇವರ ರಾಜಕೀಯ ವರಸೆಯ ಹೇಳಿಕೆಗಳ ಬಗ್ಗೆ ತಿಳಿದುಕೊಳ್ಳದವರೇನಲ್ಲ. ಕಾಂಗ್ರೆಸ್ ಪಕ್ಷದ ಅಧ್ಯಕ್ಷರು ರಾಜಕೀಯ ರಂಗದ ಹಲವಾರು ಮಜಲುಗಳ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳದೇ ತಪ್ಪು ಹೇಳಿಕೆಗಳನ್ನು ನೀಡಿ ನಗೆಪಾಟಲಿಗೀಡಾಗುವುದನ್ನು ಇನ್ನಾದರೂ ಕೈಬಿಡಲಿ. ಅವರ ಹೇಳಿಕೆಯನ್ನು ಅತ್ಯಂತ ಕಠಿಣವಾಗಿ ನಾನು ವಿರೋಧಿಸುತ್ತೇನೆ," ಎಂದು ಅವರು ಹೇಳಿದ್ದಾರೆ.