ಕರ್ನಾಟಕವನ್ನು ಮಾರಬೇಡಿ: ಯಡಿಯೂರಪ್ಪಗೆ ಜೆಡಿಎಸ್ ಚಾಟಿ
ಬೆಂಗಳೂರು, ಆಗಸ್ಟ್ 15: ಪ್ರವಾಹಪೀಡಿತ ಗ್ರಾಮಗಳ ಪುನಶ್ಚೇತನಕ್ಕಾಗಿ 10 ಕೋಟಿಗಿಂತ ಅಧಿಕ ದೇಣಿಗೆ ನೀಡಿದ ಸಂಸ್ಥೆಗಳ ಹೆಸರನ್ನು ಆ ಹಳ್ಳಿಗಳಿಗೆ ಇಡುವುದಾಗಿ ಹೇಳಿಕೆ ನೀಡಿರುವ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರನ್ನು ಜೆಡಿಎಸ್ ತರಾಟೆಗೆ ತೆಗೆದುಕೊಂಡಿದೆ.
ಯಡಿಯೂರಪ್ಪ ಅವರದು ತುಘಲಕ್ ನಿರ್ಧಾರ. ಬಿಜೆಪಿ ಸರ್ಕಾರವು ರಾಜ್ಯವನ್ನು ಮಾರಾಟ ಮಾಡಲು ಹೊರಟಿದೆ ಎಂದು ಕಿಡಿಕಾರಿದೆ.
ಪ್ರವಾಹ ಪರಿಹಾರಕ್ಕೆ ದೇಣಿಗೆ ನೀಡಲು ಯಡಿಯೂರಪ್ಪ ಮನವಿ
''ಹತ್ತು ಕೋಟಿ ದೇಣಿಗೆ ನೀಡಿದ ಕಂಪೆನಿಗಳ ಹೆಸರನ್ನು ಗ್ರಾಮಗಳಿಗೆ ಇಡುವ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ನಿರ್ಧಾರ ತುಘಲಕ್ ನಿರ್ಧಾರದಂತಿದೆ. ನಮ್ಮ ರಾಜ್ಯದ ಪ್ರತಿ ಗ್ರಾಮದ ಹೆಸರಿಗೂ ಅದರದ್ದೇ ಆದ ಹಿನ್ನೆಲೆಯಿದೆ. ನೆರೆಯಿಂದ ಎಲ್ಲವನ್ನೂ ಕಳೆದುಕೊಂಡಿರುವವರಿಗೆ ತಮ್ಮ ಗ್ರಾಮದ ಹೆಸರನ್ನೂ ಕಳೆದುಕೊಳ್ಳುವಂತೆ ಮಾಡಬೇಡಿ. ಕರ್ನಾಟಕವನ್ನು ಮಾರಾಟಕ್ಕೆ ಇಡಬೇಡಿ'' ಎಂದು ಜೆಡಿಎಸ್ ಟ್ವಿಟ್ಟರ್ನಲ್ಲಿ ಆಕ್ರೋಶ ವ್ಯಕ್ತಪಡಿಸಿದೆ.
ಈ ಟ್ವೀಟ್ ಅನ್ನು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರು ರೀಟ್ವೀಟ್ ಮಾಡಿದ್ದಾರೆ.
ವಿಧಾನಸೌಧದಲ್ಲಿ ಬುಧವಾರ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಅಧ್ಯಕ್ಷತೆಯಲ್ಲಿ ಉದ್ಯಮಿಗಳ ಜತೆ ಸಭೆ ನಡೆದಿತ್ತು. ಈ ವೇಳೆ ರಾಜ್ಯದಲ್ಲಿ ತೀವ್ರ ಪ್ರವಾಹದಿಂದ ಉಂಟಾದ ಸಂಕಷ್ಟದ ಕುರಿತು ಚರ್ಚಿಸಲಾಗಿತ್ತು. ಪ್ರವಾಹದಿಂದಾಗಿ ಸಾವಿರಾರು ಕೋಟಿ ರೂಪಾಯಿ ನಷ್ಟವಾಗಿದೆ. ಈ ಪ್ರದೇಶಗಳನ್ನು ಪುನಶ್ಚೇತನಗೊಳಿಸಲು ದೊಡ್ಡ ಮೊತ್ತದ ಹಣದ ಅವಶ್ಯಕತೆ ಇದೆ ಎಂದು ಯಡಿಯೂರಪ್ಪ ಹೇಳಿದ್ದರು.
ಕರ್ನಾಟಕದಲ್ಲಿ ಮಹಾ ಪ್ರವಾಹ : ಯಡಿಯೂರಪ್ಪಗೆ ದೇವೇಗೌಡರ ಪತ್ರ
ಪರಿಹಾರ ಕಾರ್ಯಕ್ಕೆ ಉದ್ಯಮಿಗಳು ಹತ್ತು ಕೋಟಿ ರೂ.ಗಿಂತ ಅಧಿಕ ಮೊತ್ತದ ದೇಣಿಗೆ ನೀಡಿದರೆ ಆ ಗ್ರಾಮಗಳಿಗೆ ಕಂಪೆನಿಯ ಹೆಸರು ಇಡುವುದಾಗಿ ಯಡಿಯೂರಪ್ಪ ತಿಳಿಸಿದ್ದರು.
ನಿರ್ಧಾರ ತುಘಲಕ್ ನಿರ್ಧಾರದಂತಿದೆ. ನಮ್ಮ ರಾಜ್ಯದ ಪ್ರತೀ ಗ್ರಾಮದ ಹೆಸರಿಗೂ ಅದರದ್ದೇ ಆದ ಹಿನ್ನೆಲೆಯಿದೆ. ನೆರೆಯಿಂದ ಎಲ್ಲವನ್ನೂ ಕಳೆದುಕೊಂಡಿರುವವರಿಗೆ ತಮ್ಮ ಗ್ರಾಮದ ಹೆಸರನ್ನೂ ಕಳೆದುಕೊಳ್ಳುವಂತೆ ಮಾಡಬೇಡಿ. ಕರ್ನಾಟಕವನ್ನು ಮಾರಾಟಕ್ಕೆ ಇಡಬೇಡಿ.