ಜೆಡಿಎಸ್ ಶಾಸಕರ ಅನರ್ಹತೆ : ಮಾ.21ರಂದು ತೀರ್ಪು ಪ್ರಕಟಿಸಲು ಸೂಚನೆ
ಬೆಂಗಳೂರು, ಮಾರ್ಚ್ 20 : ಜೆಡಿಎಸ್ ಪಕ್ಷದಿಂದ ಅಮಾನತುಗೊಂಡಿರುವ 7 ಬಂಡಾಯ ಶಾಸಕರ ಭವಿಷ್ಯ ಬುಧವಾರ ನಿರ್ಧಾರವಾಗಲಿದೆ. ಶಾಸಕರ ಅನರ್ಹತೆ ಬಗ್ಗೆ ಮಾ.21ರಂದು ತೀರ್ಪು ನೀಡುವಂತೆ ಕರ್ನಾಟಕ ಹೈಕೋರ್ಟ್ ಸ್ಪೀಕರ್ ಕೆ.ಬಿ.ಕೋಳಿವಾಡ ಅವರಿಗೆ ಸೂಚನೆ ನೀಡಿದೆ.
ಮಂಗಳವಾರ ಕರ್ನಾಟಕ ಹೈಕೋರ್ಟ್ ನ್ಯಾಯಮೂರ್ತಿ ರಾಘವೇಂದ್ರ ಎಸ್. ಚೌಹಾಣ್ ಅವರು ಸಿ.ಎನ್. ಬಾಲಕೃಷ್ಣ ಮತ್ತು ಬಿ.ಬಿ.ನಿಂಗಯ್ಯ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದರು. ಮಾರ್ಚ್ 21ರಂದು ಸ್ಪೀಕರ್ ಅಂತಿಮ ಆದೇಶ ನೀಡಬೇಕು ಎಂದು ಸೂಚನೆ ನೀಡಿದರು.
ಬಂಡಾಯ ಶಾಸಕರ ವಿಚಾರಣೆ ಪೂರ್ಣ, ತೀರ್ಪು ಕಾಯ್ದಿರಿಸಿದ ಸ್ಪೀಕರ್
ಜೆಡಿಎಸ್ ಪಕ್ಷದಿಂದ ಅಮಾನತುಗೊಂಡಿರುವ ಜಮೀರ್ ಅಹಮದ್ ಖಾನ್, ಚೆಲುವರಾಯಸ್ವಾಮಿ, ಅಖಂಡ ಶ್ರೀನಿವಾಸಮೂರ್ತಿ, ರಮೇಶ್ ಬಂಡಿ ಸಿದ್ದೇಗೌಡ, ಇಕ್ಬಾಲ್ ಅನ್ಸಾರಿ, ಭೀಮಾನಾಯ್ಕ್, ಎಚ್.ಸಿ.ಬಾಲಕೃಷ್ಣ ಅವರಿಗೆ ರಾಜ್ಯಸಭೆ ಚುನಾವಣೆಯಲ್ಲಿ ಮತದಾನದ ಹಕ್ಕು ನೀಡಬಾರದು ಎಂದು ಅರ್ಜಿ ಸಲ್ಲಿಸಲಾಗಿದೆ.
'ಮಾರ್ಚ್ 23ಕ್ಕೆ ರಾಜ್ಯಸಭೆ ಚುನಾವಣೆ ನಡೆಯಲಿದೆ. ಶಾಸಕರು ಚುನಾವಣೆಯಲ್ಲಿ ಮತದಾನ ಮಾಡಬೇಕಿದೆ. ಇದು ರಾಜಕೀಯ ಮೇಲಾಟದ ಪ್ರಶ್ನೆಯಲ್ಲ. ಕನ್ನಡಿಗರ ಹಿತಾಸಕ್ತಿಯ ವಿಚಾರ. ಸ್ಪೀಕರ್ ತಮ್ಮ ಆದೇಶ ಕಾಯ್ದಿರಿಸಿಕೊಳ್ಳುವುದರಲ್ಲಿ ಅರ್ಥವಿಲ್ಲ' ಎಂದು ನ್ಯಾಯಪೀಠ ಹೇಳಿದೆ.
ಜೆಡಿಎಸ್ ಬಂಡಾಯ ಶಾಸಕರು ಮಾ.25ರಂದು ಕಾಂಗ್ರೆಸ್ ಸೇರ್ಪಡೆ
'ಸ್ಪೀಕರ್ ಏನು ಬೇಕಾದರೂ ತೀರ್ಮಾನವನ್ನು ತೆಗೆದುಕೊಳ್ಳಲಿ. ಅದು ಅವರ ವಿವೇಚನೆಗೆ ಬಿಟ್ಟ ವಿಚಾರ. ರಾಜಕೀಯ ಸಂಘರ್ಷವನ್ನು ಯಾವುದೇ ಕಾರಣಕ್ಕೂ ಮುಂದುವರೆಸಿಕೊಂಡು ಹೋಗಬಾರದು. ಇಲ್ಲಿನ ಆದೇಶವನ್ನು ಬೇಕಾದರೆ ಮೇಲಿನ ನ್ಯಾಯಾಲಯದಲ್ಲಿ ಪ್ರಶ್ನಿಸಲಿ' ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ಹೇಳಿದೆ.
ಯಾವ-ಯಾವ ಶಾಸಕರು : ಸೋಮವಾರ ಸ್ಪೀಕರ್ ಕಚೇರಿಯಲ್ಲಿ ನಡೆದ ವಿಚಾರಣೆಗೆ ಜಮೀರ್ ಅಹಮದ್ ಖಾನ್ (ಚಾಮರಾಜಪೇಟೆ), ಎಚ್.ಸಿ.ಬಾಲಕೃಷ್ಣ (ಮಾಗಡಿ), ಚೆಲುವರಾಯಸ್ವಾಮಿ (ನಾಗಮಂಗಲ), ಅಖಂಡ ಶ್ರೀನಿವಾಸಮೂರ್ತಿ (ಪುಲಿಕೇಶಿ ನಗರ, ಬೆಂಗಳೂರು) ಖುದ್ದಾಗಿ ಹಾಜರಾಗಿದ್ದರು.
ರಮೇಶ ಬಂಡಿಸಿದ್ದೇಗೌಡ (ಶ್ರೀರಂಗಪಟ್ಟಣ), , ಇಕ್ಬಾಲ್ ಅನ್ಸಾರಿ (ಗಂಗಾವತಿ), ಶಾಸಕ ಭೀಮಾ ನಾಯಕ್ (ಹಗರಿಬೊಮ್ಮನಹಳ್ಳಿ) ಗೈರು ಹಾಜರಾಗಿದ್ದು, ವಕೀಲರ ಮೂಲಕ ವಿಚಾರಣೆ ಎದುರಿಸಿದರು. ವಿಚಾರಣೆ ಪೂರ್ಣಗೊಳಿಸಿದ ಸ್ಪೀಕರ್ ತೀರ್ಪು ಕಾಯ್ದಿರಿಸಿದ್ದಾರೆ.