ಕ್ಯಾಸಿನೋ: ರಾಜ್ಯ ಸರ್ಕಾರಕ್ಕೆ ಜೆಡಿಎಸ್ ಶಾಸಕರ ವಿಚಿತ್ರ ಸಲಹೆ!
ಬೆಂಗಳೂರು, ಸೆ. 15: ಕರ್ನಾಟಕದಲ್ಲಿ ಡ್ರಗ್ಸ್ ಮಾಫಿಯಾ ವಿರುದ್ಧ ಪೊಲೀಸರ ತನಿಖೆ ತೀವ್ರಗೊಂಡಿರುವ ಸಂದರ್ಭದಲ್ಲಿ ಮಂಡ್ಯ ಜಿಲ್ಲೆ ನಾಗಮಂಗಲ ಜೆಡಿಎಸ್ ಶಾಸಕ ಕೆ. ಸುರೇಶಗೌಡ ಅವರು ವಿಚಿತ್ರ ಹೇಳಿಕೆ ಕೊಟ್ಟಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಕರ್ನಾಟಕದ ದುಡ್ಡೆಲ್ಲಾ ಶ್ರೀಲಂಕಾ ಕ್ಯಾಸಿನೋಗೆ ಹೋಗುತ್ತಿದೆ. ರಾಜ್ಯದಲ್ಲಿ ಯಾರೆಲ್ಲ ಯಥೇಚ್ಛವಾಗಿ ಹಣ ಮಾಡಿದ್ದಾರೋ? ಅವರೆಲ್ಲರೂ ಶ್ರೀಲಂಕಾದ ಕ್ಯಾಸಿನೋಗಳಲ್ಲಿ ದುಡ್ಡು ಕಳೆಯುತ್ತಿದ್ದಾರೆ. ಹೀಗಾಗಿ ಕ್ಯಾಸಿನೋವನ್ನು ರಾಜ್ಯದಲ್ಲಿಯೇ ಆರಂಭಿಸಿ. ನಮ್ಮ ದುಡ್ಡು ನಮ್ಮಲ್ಲೇ ಇರಲಿ ಎಂದಿದ್ದಾರೆ.
Recommended Video
ಕಾಂಗ್ರೆಸ್ ಎಂಎಲ್ಎ ಜಮೀರಣ್ಣ ಒಬ್ಬರೇ ಅಲ್ಲ, ಇಡೀ ಒಂದು ಟೀಂ ಕ್ಯಾಸಿನೋಗೆ ಹೋಗುತ್ತೆ. ಎಲ್ಲರ ಪಾಸ್ಪೋರ್ಟ್ ತೆಗೆದು ನೋಡಿದ್ರೆ ಎಲ್ಲಾ ಮಾಹಿತಿ ಸಿಕ್ಕಿಬಿಡುತ್ತೆ. ಕ್ಯಾಸಿನೋದಲ್ಲಿ ಎಲ್ಲವೂ ಸಿಗಲಿದೆ. ದುಡ್ಡೊಂದಿದ್ದರೆ ಪ್ರಪಂಚದಲ್ಲಿ ಸಿಗುವ ಎಲ್ಲಾ ವಸ್ತು ಕ್ಯಾಸಿನೋದಲ್ಲಿ ಸಿಗುತ್ತದೆ ಎಂದು ಕ್ಯಾಸಿನೋ ಬಗ್ಗೆ ವಿವರಿಸಿದ್ದಾರೆ.
ರಾಜಕಾರಣಿಗಳು ಡ್ರಗ್ಸ್ ತೆಗೆದುಕೊಳ್ಳುವ ಬಗ್ಗೆ ನನಗೆ ಗೊತ್ತಿಲ್ಲ. ಆದರೆ ಒಂದು ಮಾತ್ರ ನಿಜ. ಡ್ರಗ್ಸ್ ದಂಧೆಗೆ ಸರ್ಕಾರದ ಸ್ಪಾನ್ಸರ್ ಇದೆ. ರಾಜ್ಯ ಬಿಜೆಪಿ ಸರ್ಕಾರ ತನ್ನ ತಪ್ಪುಗಳನ್ನು ಮುಚ್ಚಿಕೊಳ್ಳಲು ಕೆಜಿ, ಡಿಜೆ ಹಳ್ಳಿ ಅಂತ ಶುರು ಮಾಡಿತು. ಈಗ ಡ್ರಗ್ ವಿಚಾರ ಶುರು ಮಾಡಿದ್ದಾರೆ. ಇವೆಲ್ಲವೂ ಸರ್ಕಾರದ ಪ್ರಾಯೋಜಿತ ಕಾರ್ಯಕ್ರಮಗಳು.
ರಾಜ್ಯದಲ್ಲಿ ಕಷ್ಟಕರ ಸಮಸ್ಯೆಗಳಿವೆ. ಜನರ ಗಮನ ಬೇರೆಡೆ ಸೆಳೆಯಲು ಈ ರೀತಿ ಮಾಡಲಾಗ್ತಿದೆ.
ಡ್ರಗ್ಸ್ ದಂಧೆ ಇರೋದು ಪೊಲೀಸರಿಗೆ ಮೊದಲೇ ಗೊತ್ತಿರಲಿಲ್ವ? ಜೆಡಿಎಸ್-ಬಿಜೆಪಿ ಜಮೀರ್ ಟಾರ್ಗೆಟ್ ಮಾಡಿದ್ದಾರೆಂಬ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಸುರೇಶ್ ಗೌಡ ಅವರು, ನಾವು ಕಾಂಗ್ರೆಸ್ ಪರ ಇದ್ದೇವೆ. ಕಾಂಗ್ರೆಸ್ ಜೊತೆ ಸರ್ಕಾರ ಮಾಡಿದ್ದವರು ನಾವ್ಯಾಕೆ ಜಮೀರ್ ಅವ್ರನ್ನು ಟಾರ್ಗೆಟ್ ಮಾಡ್ತೀವಿ? ಇದೆಲ್ಲಾ ಊಹಾಪೋಹಗಳು ಮಾತ್ರ ಎಂದಿದ್ದಾರೆ.