ಎಚ್.ವಿಶ್ವನಾಥ್ ವಿರುದ್ದ ಪಿಐಎಲ್: ಬಿಜೆಪಿಯಲ್ಲಿ ಬಿರುಗಾಳಿ ಎಬ್ಬಿಸಿದ ಸಾ.ರಾ.ಮಹೇಶ್ ಹೇಳಿಕೆ
ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಗೆ ಸಚಿವ ಸ್ಥಾನ ನೀಡುವಂತಿಲ್ಲ ಎನ್ನುವ ಹೈಕೋರ್ಟ್ ತೀರ್ಪಿನ ನಂತರದ ಬೆಳವಣಿಗೆಗಳು ಮತ್ತು ಹೇಳಿಕೆಗಳು, ಹಲವು ಬಿಜೆಪಿ ಮುಖಂಡರ ಅಸಮಾಧಾನಕ್ಕೆ ಕಾರಣವಾಗಿದೆ. ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗುತ್ತಿದೆ ಎನ್ನುವ ಭಾವನೆ ವ್ಯಕ್ತವಾಗುತ್ತಿದೆ.
ಕೋರ್ಟ್ ತೀರ್ಪಿನ ನಂತರ, ನನ್ನ ಸೋಲಿಗೆ ಸಿ.ಪಿ.ಯೋಗೇಶ್ವರ್ ಮತ್ತು ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿ ಸಂತೋಷ್ ಕಾರಣ ಎಂದು ವಿಶ್ವನಾಥ್ ನೇರವಾಗಿ ಆಪಾದಿಸಿದ್ದಾರೆ. ಇದರ ಜೊತೆಗೆ, ಮುಖ್ಯಮಂತ್ರಿ ಯಡಿಯೂರಪ್ಪನವರ ವಿರುದ್ದವೂ ವಿಶ್ವನಾಥ್ ಬೇಸರ ವ್ಯಕ್ತಪಡಿಸಿದ್ದರು.
ಹಳ್ಳಿಹಕ್ಕಿ ಎಚ್.ವಿಶ್ವನಾಥ್ ಬಿಜೆಪಿಯಲ್ಲಿ 'ಮೂಕಹಕ್ಕಿ'ಯಾದ ಕಥೆ
ಸಂಪುಟ ವಿಸ್ತರಣೆಯಾಗದೇ ಇರುವುದು ಒಂದು ತಲೆನೋವಿಗೆ ಕಾರಣವಾಗಿದ್ದರೆ, ಎಚ್.ವಿಶ್ವನಾಥ್ ಅವರ ದಿನಕ್ಕೊಂದು ಹೇಳಿಕೆ ನೀಡುತ್ತಿರುವುದು ಪಕ್ಷಕ್ಕೆ ನುಂಗಲಾರದ ತುತ್ತಾಗುತ್ತಿದೆ. ಸುಪ್ರೀಂಕೋರ್ಟ್ ಮೇಲ್ಮನವಿ ಸಲ್ಲಿಸಲಿದ್ದೇವೆ ಎಂದು ಸಚಿವ ಆರ್.ಅಶೋಕ್ ಹೇಳಿದ್ದರೂ, ವಿಶ್ವನಾಥ್, ಬಿಜೆಪಿ ವಿರುದ್ದ ಕಿಡಿಕಾರುತ್ತಲೇ ಇದ್ದಾರೆ.
ವಿಶ್ವನಾಥ್ ಅನರ್ಹತೆ ಹಿಂದೆ ಬಾಂಬೆ ಟೀಂ ಕರಾಮತ್ತಿದೆ; ಹೊಸ ಬಾಂಬ್ ಸಿಡಿಸಿದ ಸಾರಾ ಮಹೇಶ್
ಇನ್ನು, ವಿಶ್ವನಾಥ್ ಅವರ ಪಕ್ಕಾ ರಾಜಕೀಯ ವಿರೋಧಿ, ಜೆಡಿಎಸ್ಸಿನ ಕೆ.ಆರ್.ನಗರ ಶಾಸಕ ಸಾ.ರಾ.ಮಹೇಶ್ ಅವರು ಚಾಮುಂಡೇಶ್ವರಿ ಸನ್ನಿಧಾನದಲ್ಲಿ ನೀಡಿರುವ ಹೇಳಿಕೆ ಬಿಜೆಪಿಗೆ ಇನ್ನಷ್ಟು ತಲೆಬಿಸಿ ತಂದಿದೆ. ಮಹೇಶ್ ಹೇಳಿದ್ದು ಏನು? ಮುಂದೆ ಓದಿ..
ಚಾಮುಂಡೇಶ್ವರಿ ದೇವಾಲಯಕ್ಕೆ ಆಗಮಿಸಿದ ಸಾ.ರಾ.ಮಹೇಶ್
ಎಚ್.ವಿಶ್ವನಾಥ್ ಅವರ ವಿರುದ್ದ ಹೈಕೋರ್ಟ್ ತೀರ್ಪಿನ ನಂತರ, ಮೈಸೂರಿನ ಚಾಮುಂಡೇಶ್ವರಿ ದೇವಾಲಯಕ್ಕೆ ಆಗಮಿಸಿದ ಸಾ.ರಾ.ಮಹೇಶ್, ಶಕ್ತಿಪೀಠದಲ್ಲಿ ಸುಳ್ಳು ಹೇಳಿದ ಪರಿಣಾಮ ಇದು ಎಂದು ಹೇಳಿದ್ದರು. ನಾನು ನಂಬಿದ ದೇವತೆ ನ್ಯಾಯ ಕೊಡಿಸಿದ್ದಾಳೆ. ಅಂದು ದೇವಿಯ ಮುಂದೆ ಕಣ್ಣೀರು ಹಾಕಿ ನೀನೇ ನೋಡ್ಕೊ ಅವ್ವಾ"ಎಂದು ಪ್ರಾರ್ಥಿಸಿದ್ದೆ ಎಂದು ಸಾ.ರಾ.ಮಹೇಶ್ ಹೇಳಿದ್ದಾರೆ.
ಸಚಿವರಾಗಬಾರದು ಎಂದು ಹೈಕೋರ್ಟಿನಲ್ಲಿ ಪಿಐಎಲ್
"ಅವರನ್ನು ಜೆಡಿಎಸ್ಸಿಗೆ ಕರೆತಂದದ್ದು ನಾನು. ಆದರೆ, ನನ್ನ ವಿರುದ್ದವೇ ಮಾತನಾಡಿದ್ದಾರೆ. ಅವರು ಸಚಿವರಾಗಬಾರದು ಎಂದು ಹೈಕೋರ್ಟಿನಲ್ಲಿ ಪಿಐಎಲ್ ಸಲ್ಲಿಸಿದ್ದು ನಾನು ಎಂದು ಹೇಳಿದ್ದಾರೆ. ಅಸಲಿಗೆ, ಅವರ ವಿರುದ್ದ ಕೋರ್ಟಿನಲ್ಲಿ ಪಿಐಎಲ್ ಸಲ್ಲಿಕೆಯ ಹಿಂದೆ ಬಿಜೆಪಿ ಸಚಿವ ಸ್ಥಾನದ ಆಕಾಂಕ್ಷಿಯೊಬ್ಬರು ಇದ್ದಾರೆ ಎನ್ನುವ ಸತ್ಯವನ್ನು ಅರಿತುಕೊಳ್ಳಲಿ'ಎಂದು ಸಾ.ರಾ.ಮಹೇಶ್ ಹೇಳಿದ್ದಾರೆ.
ಸಾ.ರಾ.ಮಹೇಶ್ ನೀಡಿರುವ ಹೇಳಿಕೆ ಸರಿಯಾಗಿರಬಹುದೇ ಎನ್ನುವ ಅನುಮಾನ
ಮಹೇಶ್ ಹೇಳಿಕೆಯ ನಂತರ ಆ ಬಿಜೆಪಿ ಮುಖಂಡರು ಯಾರಿರಬಹುದು ಎನ್ನುವ ಚರ್ಚೆ ಆರಂಭವಾಗಿದೆ. ತಾನು ಸೋಲಲು ಸಿ.ಪಿ.ಯೋಗೇಶ್ವರ್ ನೇರ ಕಾರಣ ಎಂದು ವಿಶ್ವನಾಥ್ ಹೇಳಿದ್ದರು. ಜೊತೆಗೆ, ರಮೇಶ್ ಜಾರಕಿಹೊಳಿ ಮೂಲಕ, ಯೋಗೇಶ್ವರ್ ಸಚಿವ ಸ್ಥಾನಕ್ಕೆ ಪ್ರಯತ್ನಿಸುತ್ತಿದ್ದಾರೆ. ಹಾಗಾಗಿ, ಸಾ.ರಾ.ಮಹೇಶ್ ನೀಡಿರುವ ಹೇಳಿಕೆ ಸರಿಯಾಗಿರಬಹುದೇ ಎನ್ನುವ ಅನುಮಾನ ಕಾಡುವುದು ಸಹಜ.
ಎಚ್.ವಿಶ್ವನಾಥ್ ವಿರುದ್ದ ಪಿಐಎಲ್ ಸಲ್ಲಿಸಿರುವ ಹಿಂದೆ ಯೋಗೇಶ್ವರ್
ಈ ಎಲ್ಲಾ ಬೆಳವಣಿಗೆಯ ನಡುವೆ ಯೋಗೇಶ್ವರ್ ಗೆ ಸಚಿವ ಸ್ಥಾನ ಪಕ್ಕಾ ಎನ್ನುವ ಮಾತನ್ನು ಸಿಎಂ ಯಡಿಯೂರಪ್ಪ ಕೂಡಾ ಹೇಳಿದ್ದಾರೆ. ರಮೇಶ್ ಜಾರಕಿಹೊಳಿ ಸತತ ಪ್ರಯತ್ನದಿಂದ ಯೋಗೇಶ್ವರ್ ಗೆ ಸಚಿವ ಸ್ಥಾನ ದಕ್ಕುವ ಸಾಧ್ಯತೆಯಿದೆ. ಹಾಗಾಗಿ, ಎಚ್.ವಿಶ್ವನಾಥ್ ವಿರುದ್ದ ಪಿಐಎಲ್ ಸಲ್ಲಿಸಿರುವ ಹಿಂದೆ ಯೋಗೇಶ್ವರ್ ಅವರ ಕೈವಾಡವಿದೆಯೇ ಎನ್ನುವ ಸಂಶಯ ಮೂಡುತ್ತಿದೆ.