ಮೋದಿ ಬೆಂಬಲಿಸಲು ಕರೆ ನೀಡಿದ ಜೆಡಿಎಸ್ ನಾಯಕ
ಮಂಗಳವಾರ ಬಿಜಾಪುರ ಜಿಲ್ಲೆಯ ತಾಳಿಕೋಟೆಯಲ್ಲಿ ಸಾರ್ವಜನಿಕ ಸಮಾವೇಶದಲ್ಲಿ ಮಾತನಾಡಿದ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಬಸವನಗೌಡ ಪಾಟೀಲ್ ಯತ್ನಾಳ್, ನರೇಂದ್ರ ಮೋದಿ ಅವರಿಗೆ ಬೆಂಬಲ ನೀಡಿ ಎಂದು ಜನರಿಗೆ ಕರೆ ನೀಡಿದರು. ಈ ಮೂಲಕ ಕುತೂಹಲ ಮೂಡಿಸಿದರು.
ಸಮಾವೇಶದಲ್ಲಿ ಯತ್ನಾಳ್ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದರು. "ಯುಪಿಎ ಸರ್ಕಾರ ಭಾರತ ದೇಶವನ್ನು ಪಾಕಿಸ್ತಾನ ಮಾಡುವ ಮುನ್ನ ನರೇಂದ್ರ ಮೋದಿಗೆ ಬೆಂಬಲ ನೀಡಬೇಕಿದೆ" ಎಂದು ಬಹಿರಂಗ ಸಭೆಯಲ್ಲಿ ಘೋಷಿಸಿದರು.
ಪಾಕಿಸ್ತಾನದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ನಡೆಯುತ್ತಿದೆ. ಆದರೂ, ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ. ಕೋಮುಗಲಭೆಗಳು ಸಂಭವಿಸುವುದಕ್ಕೆ ಪೂರಕವಾದ ಹೇಳಿಕೆ ನೀಡುತ್ತಿದ್ದಾರೆ ಎಂದು ಯತ್ನಾಳ್ ಆರೋಪಿಸಿದರು.
ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಬಸನಗೌಡ ಯತ್ನಾಳ್ ನರೇಂದ್ರ ಮೋದಿಯನ್ನು ಬೆಂಬಲಿಸಿ ಎಂದು ಹೇಳಿಕೆ ನೀಡಿದ್ದು, ರಾಜ್ಯ ರಾಜಕೀಯ ವಲಯದಲ್ಲಿ ಭಾರೀ ಹೊಸ ಚರ್ಚೆ ಹುಟ್ಟುಹಾಕಿದೆ. ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ ಒಪ್ಪಂದ ಮಾಡಿಕೊಳ್ಳಬಹುದೇ ಎಂಬ ಉಹೆಗಳನ್ನು ಇದು ಹುಟ್ಟು ಹಾಕಿದೆ.
ಜೆಡಿಎಸ್ ತೊರೆಯುವರೆ : ಬಸವನಗೌಡ ಪಾಟೀಲ್ ಯತ್ನಾಳ್ ಮೂಲತಃ ಬಿಜೆಪಿಯವರು. ನರೇಂದ್ರ ಮೋದಿ ಅವರನ್ನು ಬೆಂಬಲಿಸಿ ಅವರು ಹೇಳಿಕೆ ನೀಡಿದ್ದರಿಂದ ಅವರು ತವರು ಪಕ್ಷಕ್ಕೆ ಮರಳುವರೇ ಎಂಬ ಕುತೂಹಲವನ್ನು ಈ ಹೇಳಿಕೆ ಹುಟ್ಟು ಹಾಕಿದೆ.
ವಿವಿಧ ರಾಜ್ಯಗಳ ಪ್ರಾದೇಶಿಕ ಪಕ್ಷಗಳು ನರೇಂದ್ರ ಮೋದಿಗೆ ಬೆಂಬಲ ಸೂಚಿಸುತ್ತಿವೆ. ಜೆಡಿಎಸ್ ಸಹ ನರೇಂದ್ರ ಮೋದಿಗೆ ಬೆಂಬಲ ನೀಡಿ ಚುನಾವಣೆಯಲ್ಲಿ ಎನ್ ಡಿಎ ಮೈತ್ರಿಕೂಟದ ಭಾಗವಾಗುತ್ತದೆಯೇ ಎಂದು ಕಾದು ನೋಡಬೇಕು. (ಮೋದಿ ಬೆಂಬಲಿಸಿದರೆ ಬಿಜೆಪಿ-ಜೆಡಿಎಸ್ ದೋಸ್ತಿ?)