ರಾಜ್ಯಸಭೆ, ವಿಧಾನ ಪರಿಷತ್ ಚುನಾವಣೆ: ಜೆಡಿಎಸ್ ಜೊತೆ ಬಿಜೆಪಿ ಮೈತ್ರಿ?
ಬೆಂಗಳೂರು, ಮೇ 17: ರಾಜ್ಯದಲ್ಲಿ ಮತ್ತೆ ಚುನಾವಣೆ ರಂಗು ಬರುತ್ತಿದೆ. ಬಿಜೆಪಿ ಮತ್ತು ಜೆಡಿಎಸ್ ಪರಸ್ಪರ ಆರೋಪ ಪ್ರತ್ಯಾರೋಪಗಳ ಬೆನ್ನಲ್ಲಿಯೇ ವಿಧಾನ ಪರಿಷತ್ತು ಹಾಗೂ ರಾಜ್ಯಸಭೆ ಚುನಾವಣೆ ದೃಷ್ಟಿಯಿಂದ ಎರಡೂ ಪಕ್ಷಗಳ ಮಧ್ಯೆ ಮೈತ್ರಿಯ ಮಾತುಗಳೂ ಕೇಳಿಬರುತ್ತಿವೆ.
ರಾಜ್ಯದಲ್ಲಿ ವಿಧಾನ ಪರಿಷತ್ ಚುನಾವಣೆ ಘೋಷಣೆಯಾಗಿದೆ. ಎರಡು ಪದವೀಧರ ಕ್ಷೇತ್ರಗಳು ಮತ್ತು ಎರಡು ಶಿಕ್ಷಕರ ಕ್ಷೇತ್ರಗಳಿಗೆ ಜೂ 13ರಂದು ಮತದಾನ ನಡೆಯುತ್ತದೆ. ಇದಲ್ಲದೆ, ವಿಧಾನಸಭೆಯಿಂದ ವಿಧಾನ ಪರಿಷತ್ತಿಗೆ ಆಯ್ಕೆಯಾಗುವ 7 ಮಂದಿ ಸದಸ್ಯರ ಅವಧಿ ಜೂ 14ಕ್ಕೆ ಮುಕ್ತಾಯ ಆಗಲಿದ್ದು, ಅದಕ್ಕೂ ಸಹ ಜೂ 3ರಂದು ಮತದಾನ ಪ್ರಕ್ರಿಯೆ ಘೋಷಿಸಲಾಗಿದೆ. ಈ ಮಧ್ಯೆ ರಾಜ್ಯಸಭೆಯ 4 ಸ್ಥಾನಗಳಿಗೂ ಕರ್ನಾಟಕದಿಂದ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕಿದೆ. ವಿಧಾನ ಪರಿಷತ್ತಿನ 7 ಸ್ಥಾನಗಳು ಮತ್ತು ರಾಜ್ಯಸಭೆಯ ನಾಲ್ಕು ಸ್ಥಾನಗಳು ಪಕ್ಷದ ಬಲಾಬಲದ ಮೇಲೆ ನಿಂತಿವೆ. ಈ ಕಾರಣದಿಂದ ಬಿಜೆಪಿ ಜೆಡಿಎಸ್ ಮಧ್ಯೆ ಕೊಟ್ಟು ತೆಗೆದುಕೊಳ್ಳುವ ಮಾತುಕತೆಗೆ ಮತ್ತೆ ಚಾಲನೆ ನೀಡಲಾಗಿದೆ.
Breaking: ಹಂಗಾಮಿ ಸಭಾಪತಿಯಾಗಿ ರಘುನಾಥ್ ರಾವ್ ಮಲ್ಕಾಪುರೆ ನೇಮಕ
ರಾಜ್ಯ ರಾಜಕಾರಣದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಹಾವು ಮುಂಗುಸಿಯಂತೆ ಕಂಡರೂ ಸಹ ಪ್ರಧಾನಿ ನರೇಂದ್ರ ಮೋದಿ ಮತ್ತು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಗಳಸ್ಯ ಕಂಠಸ್ಯ ಎಂಬಂತಿದ್ದಾರೆ. ಹೀಗಾಗಿ ಕೊನೆಯ ಕ್ಷಣದಲ್ಲಿ ಯಾವ ಬದಲಾವಣೆ ಬೇಕಾದರೂ ನಿರೀಕ್ಷಿಸಬಹುದಾದಂತಹ ಅಚ್ಚರಿಗಳನ್ನು ಜೆಡಿಎಸ್ ಸದಾ ಹೊಂದಿರುತ್ತದೆ.
3ನೇ ಅಭ್ಯರ್ಥಿಗಾಗಿ ಜೆಡಿಎಸ್ ಬೇಕು
ಕರ್ನಾಟಕದ ನಾಲ್ಕು ಸ್ಥಾನಗಳು ಸೇರಿ ರಾಜ್ಯಸಭೆಯ ಒಟ್ಟು 57 ಸ್ಥಾನಗಳಿಗೆ ಚುನಾವಣೆ ಘೋಷಣೆಯಾಗಿದೆ. ಕರ್ನಾಟಕದಿಂದ ಆಯ್ಕೆಯಾಗಿದ್ದ ನಿರ್ಮಲಾ ಸೀತಾರಾಮನ್, ಕೆ.ಸಿ ರಾಮಮುರ್ತಿ, ಜೈರಾಮ್ ರಮೇಶ್ ಮತ್ತು ದಿ. ಆಸ್ಕರ್ ಫರ್ನಾಂಡೀಸ್ ಅವರ ಅವಧಿ ಮುಕ್ತಾಯದಿಂದ ನಾಲ್ಕು ಸ್ಥಾನಗಳು ಖಾಲಿಯಾಗಲಿವೆ. ಮೇ 24ರಿಂದ 31ರವರೆಗೆ ನಾಮಪತ್ರ ಸಲ್ಲಿಸಲು ಅವಕಾಶ ಇದೆ. ಜೂನ್ 10ರಂದು ವಿಧಾನಸೌಧದಲ್ಲಿಯೇ ಮತದಾನ ಮತ್ತು ಅದೇ ದಿನ ಸಂಜೆ ಫಲಿತಾಂಶ ಘೋಷಣೆ ಮಾಡಲಾಗುತ್ತದೆ ಎಂದು ಅಧಿಸೂಚನೆ ಹೊರಡಿಸಲಾಗಿದೆ.
ಬಿಜೆಪಿಗೆ ಹೆಚ್ಚಿನ ಸ್ಥಾನ ಗೆಲ್ಲುವ ಅನಿವಾರ್ಯತೆ
ರಾಜ್ಯಸಭೆಯಲ್ಲಿ ಬಹುಮತದ ಕೊರತೆ ಎದುರಿಸುತ್ತಿರುವ ಬಿಜೆಪಿಗೆ ಹೆಚ್ಚಿನ ಸ್ಥಾನಗಳನ್ನು ಗೆಲ್ಲಬೇಕಾದ ಅನಿವಾರ್ಯತೆ ಇದೆ. ಶಾಸಕರ ಸಂಖ್ಯಾಬಲವನ್ನು ಆಧರಿಸಿ ನೋಡುವುದಾದರೆ ಬಿಜೆಪಿಗೆ ಎರಡು ಸ್ಥಾನಗಳು ಮತ್ತು ಕಾಂಗ್ರೆಸ್ಗೆ ಒಂದು ಸ್ಥಾನ ಸುಲಭವಾಗಿ ಗೆಲ್ಲಬಹುದಾಗಿದೆ. ಬಿಜೆಪಿ ಮೂರನೇ ಅಭ್ಯರ್ಥಿಯನ್ನು ಗೆಲ್ಲಿಸಬೇಕಾದೆರೆ ಅಥವಾ ಕಾಂಗ್ರೆಸ್ ಎರಡನೇ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕಾದರೆ ಹೆಚ್ಚುವರಿ ಶಾಸಕರ ಬೆಂಬಲದ ಅಗತ್ಯ ಇದೆ. ಈ ಕಾರಣದಿಂದ ಬಿಜೆಪಿ ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಂಡು ತನ್ನ ಮೂರನೇ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಬಗ್ಗೆ ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ.
ರಾಜ್ಯಸಭೆಯ ಒಂದು ಸ್ಥಾನಕ್ಕೆ 45 ಮತ ಅನಿವಾರ್ಯ:
ರಾಜ್ಯಸಭೆಯ ಚುನಾವಣೆಯಲ್ಲಿ ಒಬ್ಬ ಅಭ್ಯರ್ಥಿ ಗೆಲುವಿಗೆ 45 ಮತಗಳ ಅಗತ್ಯ ಇದೆ. ಸದ್ಯ ವಿಧಾನಸಭೆಯಲ್ಲಿ ಬಿಜೆಪಿ 121 ಶಾಸಕರ ಸಂಖ್ಯಾ ಬಲ ಹೊಂದಿದೆ. ಬಿಜೆಪಿ ಎರಡು ಸ್ಥಾನಗಳನ್ನು ಸುಲಭವಾಗಿ ಗೆಲ್ಲುತ್ತದೆಯಾದರೂ, ಮೂರನೇ ಅಭ್ಯರ್ಥಿಗೆ 14 ಮತಗಳ ಕೊರತೆ ಕಾಡುತ್ತದೆ. ಸದ್ಯ ವಿಧಾನಸಭೆಯಲ್ಲಿ 32 ಶಾಸಕರ ಸಂಖ್ಯಾಬಲ ಹೊಂದಿರುವ ಜೆಡಿಎಸ್ ತನ್ನ ಒಬ್ಬ ಅಭ್ಯರ್ಥಿಯನ್ನೂ ಸಹ ಗೆಲ್ಲಿಸಿಕೊಳ್ಳವುದಕ್ಕೆ ಸಾಧ್ಯ ಇಲ್ಲ. ಮತ್ತೊಂದೆಡೆ ಕಾಂಗ್ರೆಸ್ 70 ಶಾಸಕರ ಸಂಖ್ಯಾಬಲ ಹೊಂದಿದ್ದು, ಒಂದು ಸ್ಥಾನ ಗೆದ್ದರೂ ಸಹ ಎರಡನೇ ಸ್ಥಾನ ಗೆಲ್ಲಬೇಕಾದರೆ 25 ಮತಗಳ ಕೊರತೆ ಕಾಡುತ್ತದೆ. ಹೀಗಾಗಿ ಜೆಡಿಎಸ್ನ ಮತಗಳಿಗೆ ಬೇಡಿಕೆ ಇದೆ.
ಜೆಡಿಎಸ್ಗೆ ಲಾಭವೇನು?
ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳುವ ಸಂಬಂಧ ಬಿಜೆಪಿ ಈಗಾಗಲೇ ಒಂದು ಹೆಜ್ಜೆ ಮುಂದೆ ಇಟ್ಟಿದೆ. ಬೆಂಗಳೂರಿನ ಪ್ರಭಾವಿ ಸಚಿವ ಆರ್. ಅಶೋಕ್ ಜೆಡಿಎಸ್ ಜೊತೆ ಈಗಾಗಲೇ ಸಭೆಗಳನ್ನು ಆರಂಭಿಸಿದ್ದಾರೆ ಎಂದು ಹೇಳಲಾಗುತ್ತದೆ. ಒಂದು ವೇಳೆ ಜೆಡಿಎಸ್ ಶಾಸಕರು ಬಿಜೆಪಿಯ ರಾಜ್ಯಸಭಾ ಮೂರನೇ ಅಭ್ಯರ್ಥಿಯನ್ನು ಬೆಂಬಲಿಸಿದರೆ ವಿಧಾನ ಪರಿಷತ್ತಿನ ಚುನಾವಣೆಯಲ್ಲಿ ಜೆಡಿಎಸ್ಗೆ ಬಿಜೆಪಿಯಿಂದ ಲಾಭವಾಗುವಂತಹ ಪ್ರಸ್ತಾಪ ಇಡಲಾಗಿದೆ.
ವಿಧಾನಸಭೆಯಿಂದ ವಿಧಾನ ಪರಿಷತ್ತಿಗೆ 7 ಮಂದಿ ಸದಸ್ಯರನ್ನು ಆಯ್ಕೆ ಮಾಡುವ ಸಂಬಂಧ ಜೂನ್ 3ಕ್ಕೆ ಮತದಾನ ಪ್ರಕ್ರಿಯೆ ನಡೆಯುತ್ತದೆ. ಬಿಜೆಪಿ ಶಾಸಕರ ಸಂಖ್ಯಾಬಲದ ಆಧಾರದ ಮೇಲೆ 7ರಲ್ಲಿ 4 ಸ್ಥಾನಗಳನ್ನು ಬಿಜೆಪಿ ಸುಲಭವಾಗಿ ಗೆಲ್ಲಬಹುದು. ಆದರೆ, ಇದರಲ್ಲಿ 3 ಸ್ಥಾನಗಳನ್ನು ಗೆದ್ದರೂ ಸಹ ವಿಧಾನ ಪರಿಷತ್ತಿನ ಬಹುಮತದಲ್ಲಿ ಯಾವುದೇ ವ್ಯತ್ಯಾಸ ಆಗುವುದಿಲ್ಲ. ಈ ಕಾರಣದಿಂದ ಒಂದು ಸ್ಥಾನವನ್ನು ಜೆಡಿಎಸ್ಗೆ ಬಿಟ್ಟುಕೊಡಲು ಬಿಜೆಪಿ ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ.
Recommended Video