ವಿ.ಸೋಮಣ್ಣ ರಾಜೀನಾಮೆಗೆ ಆಗ್ರಹಿಸಿದ ಸಿದ್ದರಾಮಯ್ಯ: ಸಚಿವರ ಬೆನ್ನಿಗೆ ನಿಂತ ರೇವಣ್ಣ
ಬೆಂಗಳೂರು, ಮಾರ್ಚ್ 23: ಆದಾಯ ಮೀರಿ ಅಕ್ರಮ ಆಸ್ತಿಗಳಿಕೆ ಸಂಬಂಧ ಸಮನ್ಸ್ ಜಾರಿಯಾಗಿರುವ ಹಿನ್ನಲೆಯಲ್ಲಿ ವಸತಿ ಸಚಿವ ವಿ.ಸೋಮಣ್ಣ ರಾಜೀನಾಮೆ ನೀಡಬೇಕು ಇಲ್ಲವೇ ಮುಖ್ಯಮಂತ್ರಿಗಳು ಅವರ ರಾಜೀನಾಮೆ ಪಡೆಯಬೇಕೆಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
"ಕೋರ್ಟ್ ಸಮನ್ಸ್ ಜಾರಿಯಾಗಿರುವುದರಿಂದ ಸೋಮಣ್ಣ ಅವರು ಸಚಿವರಾಗಿ ಹೇಗೆ ಮುಂದುವರಿಯಲು ಸಾಧ್ಯ. ಒಂದೋ, ನೈತಿಕ ಹೊಣೆಹೊತ್ತು ಅವರು ರಾಜೀನಾಮೆ ನೀಡಬೇಕು. ಇಲ್ಲವೇ, ಮುಖ್ಯಮಂತ್ರಿಗಳು ಅವರ ರಾಜೀನಾಮೆಯನ್ನು ಪಡೆಯಬೇಕು. ಸೋಮಣ್ಣನವರು ತಪ್ಪು ಮಾಡಿಲ್ಲ ಎಂದು ಹೇಳೇ ಹೇಳುತ್ತಾರೆ"ಎಂದು ಸಿದ್ದರಾಮಯ್ಯ ಸದನದಲ್ಲಿ ಆಗ್ರಹಿಸಿದರು.
ಲೋಕಾಯುಕ್ತ 'ಬಿ' ವರದಿ ತಿರಸ್ಕಾರ: ಸೋಮಣ್ಣಗೆ ಸಮನ್ಸ್ ಜಾರಿ ಮಾಡಿದ ಕೋರ್ಟ್
ಆ ವೇಳೆ ಎದ್ದು ನಿಂತ ಹಿರಿಯ ಜೆಡಿಎಸ್ ಶಾಸಕ ಎಚ್.ಡಿ.ರೇವಣ್ಣ ಅವರು ಸೋಮಣ್ಣನವರ ಸಮರ್ಥನೆಗೆ ಇಳಿದಿದ್ದಾರೆ. "ನಾನು ಮಂತ್ರಿಯಾಗಿಯೂ ಕೆಲಸ ಮಾಡಿದ್ದೇನೆ, ದೇವೇಗೌಡ್ರು ಮುಖ್ಯಮಂತ್ರಿಯಾಗಿದ್ದಾಗ ಸಿಒಡಿ, ಲೋಕಾಯುಕ್ತ ಎಲ್ಲಾ ರೀತಿಯ ತನಿಖೆಯಾಯಿತು. ಅರ್ಜಿ ಬಂದು ನೊಟೀಸ್ ಬಂದಿದ್ದೆಕ್ಕೆಲ್ಲಾ ನಾವು ರಾಜೀನಾಮೆ ಕೇಳೋದು ಸರೀನಾ"ಎಂದು ಸಚಿವರ ಪರವಾಗಿ ರೇವಣ್ಣ ನಿಂತಿದ್ದಾರೆ.
"ಹಿಂದೆ ರಮೇಶ್ ಕುಮಾರ್ ಅವರು ಸ್ಪೀಕರ್ ಆಗಿದ್ದಾಗ ಬಚ್ಚೇಗೌಡ್ರಿಗೂ ಇದೇ ಸಮಸ್ಯೆಯಾಗಿತ್ತು. ಅವರೇನೂ ರಾಜೀನಾಮೆ ಕೊಟ್ಟಿದ್ದಾರಾ? ಹಾಗಾಗಿ ನೊಟೀಸ್ ಬಂದಿದೆ ಎಂದ ಕೂಡಲೇ ರಾಜೀನಾಮೆ ಕೇಳುವುದು ಸೂಕ್ತವಲ್ಲ"ಎಂದು ಎಚ್.ಡಿ.ರೇವಣ್ಣ ಹೇಳಿದರು.
ಆದಾಯ ಮೀರಿ ಅಕ್ರಮ ಆಸ್ತಿಗಳಿಕೆ ಮಾಡಿದ ಆರೋಪ ಸಂಬಂಧ ವಸತಿ ಸಚಿವ ವಿ. ಸೋಮಣ್ಣ ಅವರಿಗೆ ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಸಮನ್ಸ್ ಜಾರಿ ಮಾಡಿತ್ತು. ಏಪ್ರಿಲ್ 16 ರಂದು ಖುದ್ದು ಹಾಜರಾಗಬೇಕು ಎಂದು ನ್ಯಾಯಾಲಯ ಸೂಚಿಸಿತ್ತು.
ಈ ವಿಚಾರವನ್ನು ಬುಧವಾರ (ಮಾರ್ಚ್ 23) ಭೋಜನ ವಿರಾಮಕ್ಕೆ ಮುನ್ನ ಸಿದ್ದರಾಮಯ್ಯ ಸದನದಲ್ಲಿ ಪ್ರಸ್ತಾವಿಸಿದ್ದರು. ವಿರೋಧ ಪಕ್ಷಗಳು ಕಾಟಾಚಾರಕ್ಕೆ ಎಂಬಂತೆ ಸೋಮಣ್ಣನವರ ರಾಜೀನಾಮೆಯನ್ನು ಸದನದಲ್ಲಿ ಪ್ರಸ್ತಾವಿಸಿದೆ.