ಬಿಜೆಪಿ-ಕಾಂಗ್ರೆಸ್ ಗೆ ಸೆಡ್ಡುಹೊಡೆಯಲಿದೆಯೇ ಪಾಂಡವಪುರದ 'ಕುಮಾರಪರ್ವ'?
Recommended Video
ಮಂಡ್ಯ, ಫೆಬ್ರವರಿ 09: ಕಾಂಗ್ರೆಸ್ ಸಾಧನಾ ಸಮಾವೇಶ, ಬಿಜೆಪಿಯ ಪರಿವರ್ತನಾ ಯಾತ್ರೆಯ ಬಳಿಕ ಇದೀಗ ಜೆಡಿಎಸ್ ನ ಕುಮಾರಪರ್ವ ಕಾರ್ಯಕ್ರಮ ನಡೆಯುತ್ತಿದ್ದು, ಪಕ್ಷದ ಮುಖಂಡರು ಮಂಡ್ಯ ಜಿಲ್ಲೆಯಲ್ಲಿ ಬೀಡು ಬಿಟ್ಟಿದ್ದಾರೆ.
ಪಾಂಡವಪುರದ ಪಾಂಡವ ಕ್ರೀಡಾಂಗಣದಲ್ಲಿ ಇಂದು(ಫೆ.9) ಸಂಜೆ 4ಕ್ಕೆ ಕುಮಾರಪರ್ವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಸಹಸ್ರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸುವ ಹಿನ್ನಲೆಯಲ್ಲಿ ಊಟ, ಕುಡಿಯುವ ನೀರು, ಆಸನದ ವ್ಯವಸ್ಥೆಗಳನ್ನು ಮಾಡಲಾಗಿದೆ.
ಮಂಡ್ಯದಲ್ಲಿ ಕುಮಾರಪರ್ವ: ಜನಬೆಂಬಲಕ್ಕೆ ಧನ್ಯರಾದ ಎಚ್ಡಿಕೆ!
ಸಮಾವೇಶದಲ್ಲಿ ಸುಮಾರು 500 ಮಂದಿ ಗಣ್ಯರು ಕುಳಿತುಕೊಳ್ಳುವಷ್ಟು ಬೃಹತ್ ವೇದಿಕೆಯನ್ನು ಸಿದ್ದಗೊಳಿಸಲಾಗುತ್ತಿದೆ. ಇನ್ನು ಕಾರ್ಯಕ್ರಮವನ್ನು ಕುಳಿತು ವೀಕ್ಷಣೆ ಮಾಡುವುದಕ್ಕಾಗಿ ಕ್ರೀಡಾಂಗಣದಲ್ಲಿ ಸುಮಾರು 20 ಸಾವಿರಕ್ಕೂ ಹೆಚ್ಚು ಆಸನ ವ್ಯವಸ್ಥೆ ಮಾಡಲಾಗಿದೆ. ಕಾರ್ಯಕರ್ತರಿಗೆ ಊಟದ ವ್ಯವಸ್ಥೆಯನ್ನು ಸಿ.ಎಸ್.ಪುಟ್ಟರಾಜು ನಿವಾಸದ ಎದುರಿನ ಮೈದಾನದಲ್ಲಿ ಮಾಡಲಾಗಿದೆ.
ಯಾವಾಗ ಕಾರ್ಯಕ್ರಮ?
ಕುಮಾರಪರ್ವ ಕಾರ್ಯಕ್ರಮವು ಮಧ್ಯಾಹ್ನ 3 ಗಂಟೆಗೆ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರು ಮೇಲುಕೋಟೆಯ ಶ್ರೀಚಲುವನಾರಾಯಣಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆಸಲ್ಲಿಸಿ ಸಿ.ಎಸ್.ಪುಟ್ಟರಾಜು ಸೇರಿದಂತೆ ಪಕ್ಷದ ಹಲವು ಗಣ್ಯರೊಡನೆ ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಸುಮಾರು 5 ಸಾವಿರಕ್ಕೂ ಅಧಿಕ ಕಾರ್ಯಕರ್ತರು ಬೈಕ್ ಜಾಥಾ ಮೂಲಕ ಪಾಂಡವಪುರ ಪಟ್ಟಣಕ್ಕೆ ಆಗಮಿಸಲಿದ್ದಾರೆ.
ಚಿತ್ರಗಳು : ಕುಮಾರಸ್ವಾಮಿಯ ವಿಕಾಸ ವಾಹಿನಿ ಯಾತ್ರೆ
ಎಲ್ಲೆಲ್ಲೂ ಜೆಡಿಎಸ್ ಬಾವುಟ, ಫ್ಲೆಕ್ಸ್
ಸಂಜೆ 4 ಗಂಟೆಗೆ ಪಾಂಡವಪುರ ಪಟ್ಟಣದ ಪಾಂಡವ ಕ್ರೀಡಾಂಗಣದಲ್ಲಿ ಬೃಹತ್ ಬಹಿರಂಗ ಸಮಾವೇಶ ನಡೆಯಲಿದೆ. ಈಗಾಗಲೇ ಪಟ್ಟಣದಾದ್ಯಂತ ಜೆಡಿಎಸ್ ನ ಬಾವುಟ, ಫೆಕ್ಸ್, ಬ್ಯಾನರ್ ಗಳನ್ನು ಅಳವಡಿಸಲಾಗಿದ್ದು, ಇಡೀ ಪಟ್ಟಣ ಜೆಡಿಎಸ್ ಮಯವಾಗಿದೆ.
ಘಟಾನುಘಟಿಗಳ ಉಪಸ್ಥಿತಿ
ಕುಮಾರಪರ್ವ ಕಾರ್ಯಕ್ರಮದಲ್ಲಿ ಜೆಡಿಎಸ್ ರಾಷ್ಟ್ರಾಧ್ಯಕ್ಷ ಎಚ್.ಡಿ.ದೇವೇಗೌಡ, ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ, ರಾಜ್ಯಸಭಾ ಸದಸ್ಯ ಕುಪೇಂದ್ರರೆಡ್ಡಿ, ಮಾಜಿ ಸಚಿವರಾದ ಎಚ್.ಡಿ.ರೇವಣ್ಣ, ಎಚ್.ವಿಶ್ವನಾಥ್, ಬಂಡಪ್ಪಕಾಶಂಪೂರ್, ಫಾರೋಕ್, ಬಸವರಾಜುಹೊರಟಿ, ವಿಧಾನಪರಿಷತ್ ಉಪಸಭಾಪತಿ ಮರಿತಿಬ್ಬೇಗೌಡ, ಶಾಸಕರಾದ ಮಧುಬಂಗಾರಪ್ಪ, ಜಿ.ಟಿ.ದೇವೇಗೌಡ, ಡಿ.ಸಿ.ತಮ್ಮಣ್ಣ, ಸಾ.ರಾ.ಮಹೇಶ್, ನಾರಾಯಣಗೌಡ, ಜಫ್ರುಲ್ಲಖಾನ್, ವಿಧಾನಪರಿಷತ್ ಸದಸ್ಯರಾದ ಕೆ.ಟಿ.ಶ್ರೀಕಂಠೇಗೌಡ, ಅಪ್ಪಾಜಿಗೌಡ, ಮಾಜಿ ಶಾಸಕರಾದ ಎಂ.ಶ್ರೀನಿವಾಸ್, ಕೆ.ಅನ್ನದಾನಿ, ಸುರೇಗೌಡ, ಶಿವರಾಮೇಗೌಡ, ಜಿ.ಬಿ.ಶಿವಕುಮಾರ್, ಪ್ರಭಾವತಿ ಜಯರಾಮ್, ಬಿ.ಪ್ರಕಾಶ್, ಜೆಡಿಎಸ್ ಜಿಲ್ಲಾಧ್ಯಕ್ಷ ಡಿ.ರಮೇಶ್, ತಾಲೂಕು ಅಧ್ಯಕ್ಷ ಧರ್ಮರಾಜು, ಜಿಪಂ ಸದಸ್ಯರಾದ ಸಿ.ಅಶೋಕ್, ತಿಮ್ಮೇಗೌಡ, ಶಾಂತಲ, ಅನುಸೂಯ, ತಾಪಂ ಅಧ್ಯಕ್ಷೆ ಪೂರ್ಣಿಮಾ, ಪುರಸಭೆ ಅಧ್ಯಕ್ಷೆ ತಾಯಮ್ಮ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.
ಬಿಜೆಪಿ-ಕಾಂಗ್ರೆಸ್ ಗೆ ಸೆಡ್ಡು?
ಒಟ್ಟಾರೆ ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಅವರು ಬಿಜೆಪಿ ಹಾಗೂ ಕಾಂಗ್ರೆಸ್ ಗೆ ಕುಮಾರಪರ್ವದ ಮೂಲಕ ಸೆಡ್ಡು ಹೊಡೆಯಲು ತಯಾರಿ ನಡೆಸಿರುವುದು ಎದ್ದು ಕಾಣುತ್ತಿದೆ. ಬಿಜೆಪಿಯ ಪರಿವರ್ತನಾ ಯಾತ್ರೆ ಮತ್ತು ಕಾಂಗ್ರೆಸ್ ನ ಸಾಧನಾ ಸಮಾವೇಶಗಳನ್ನು ಮರೆಸುವಂತೆ ಕುಮಾರಸ್ವಾಮಿಯವರ ಕುಮಾರಪರ್ವ ಕರ್ನಾಟಕ ಚುನಾವಣೆಯಲ್ಲಿ ಹೊಸ ಅಲೆ ಎಬ್ಬಿಸಲಿದೆಯಾ ಎಂಬುದನ್ನು ಕಾದುನೋಡಬೇಕು!