ವಿಧಾನಸಭಾ ಚುನಾವಣೆಗೆ ಭರ್ಜರಿ ತಯಾರಿ ಆರಂಭಿಸಿದ ಜೆಡಿಎಸ್!
ಬೆಂಗಳೂರು, ಸೆ. 27: ಮುಂದಿನ ವಿಧಾನಸಭೆ ಚುನಾವಣೆಗೆ ರಾಷ್ಟ್ರೀಯ ಪಕ್ಷಗಳಿಗಿಂತ ಮೊದಲೇ ಜೆಡಿಎಸ್ ತಯಾರಿ ಆರಂಭಿಸಿದೆ. 2023ರ ವಿಧಾನಸಭಾ ಚುನಾವಣೆಗೆ ಜಾತ್ಯತೀತ ಜನತಾದಳ ಪಕ್ಷವನ್ನು ಸಜ್ಜುಗೊಳಿಸಲು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೊಸ ಕಾರ್ಯತಂತ್ರ ರೂಪಿಸಿದ್ದಾರೆ. ಅದಕ್ಕೆ ಡಿಜಿಟಲ್ ಒತ್ತು ಕೊಟ್ಟಿದ್ದಾರೆ.
ಜೆಡಿಎಸ್ ಪಕ್ಷಕ್ಕೆ ಸ್ವತಂತ್ರವಾಗಿ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ, ಅದೊಂದು ಪರಾವಲಂಬಿ ಪಕ್ಷ ಎಂದು ಹೇಳಿಕೆ ನೀಡಿದ್ದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಪಕ್ಷ ಸಂಘಟನೆ ಮೂಲಕ ತಿರುಗೇಟು ಕೊಡಲು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಮುಂದಾಗಿದ್ದಾರೆ.
ಇಂದಿನಿಂದ (ಸೆ.27) ನಾಲ್ಕು ದಿನಗಳ ಕಾಲ ಜೆಡಿಎಸ್ ಕಾರ್ಯಾಗಾರವನ್ನು ಹೋಟೆಲ್ ಅಥವಾ ಪಕ್ಷದ ಕಚೇರಿ ಬದಲಿಗೆ ಕುಮಾರಸ್ವಾಮಿ ಅವರು ತಮ್ಮ ತೋಟದಲ್ಲಿ ಆಯೋಜಿಸಿದ್ದಾರೆ. ಇದು ಕೂಡ ಜೆಡಿಎಸ್ ನಾಯಕರಿಗೆ ಹೊಸದು. ಒಟ್ಟಾರೆ ನಾಲ್ಕು ದಿನಗಳ ಕಾರ್ಯಾಗಾರದಲ್ಲಿ ಏನೇನು ನಡೆಯಲಿದೆ ಎಂಬ ಮಾಹಿತಿ ಮುಂದಿದೆ.
'ಜನತಾ ಪರ್ವ 1.O' ಕಾರ್ಯಾಗಾರ
ಮುಂದಿನ ವಿಧಾನಸಭೆ ಚುನಾವಣೆಗೆ ಜೆಡಿಎಸ್ ಸಜ್ಜುಗೊಳಿಸುವ ನಿಟ್ಟಿನಲ್ಲಿ 'ಜನತಾ ಪರ್ವ 1.O' ಕಾರ್ಯಾಗಾರ ಇವತ್ತಿನಿಂದ (ಸೆ. 27) 4 ದಿನಗಳ ಕಾಲ ನಡೆಯಲಿದೆ. ಬಿಡದಿ ಹತ್ತಿರದ ಕೇತಗಾನಹಳ್ಳಿಯ ಹೆಚ್.ಡಿ. ಕುಮಾರಸ್ವಾಮಿ ಅವರ ತೋಟದಲ್ಲಿ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಅವರು ಕಾರ್ಯಾಗಾರದಲ್ಲಿ ಪ್ರಮುಖವಾಗಿ ಭಾಷಣ ಮಾಡಿದ್ದಾರೆ.
ಅದಕ್ಕೂ ಮೊದಲು ಜೆಡಿಎಸ್ ಕೋರ್ ಸಮಿತಿಯ ಸದಸ್ಯರು ದೀಪ ಬೆಳಗಿಸಿ, ಸಸಿಗಳಿಗೆ ನೀರು ಹಾಕುವ ಮೂಲಕ ಕಾರ್ಯಾಗಾರವನ್ನು ಉದ್ಘಾಟಿಸಿದರು. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು "ಪಕ್ಷ ಸಂಘಟನೆ ಮತ್ತು ಪಕ್ಷದ ಪರಂಪರೆ' ಕುರಿತು ಮಾತನಾಡಿದ್ದಾರೆ. ಮಾಜಿ ಸಿಎಂ ಕುಮಾರಸ್ವಾಮಿ ಕೂಡ ತಮ್ಮ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಕಾರ್ಯಾಗಾರದಲ್ಲಿ ಎಚ್ಡಿಕೆ ಮಾತು!
ಜೆಡಿಎಸ್ ನಾಯಕ ಹಾಗು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಎರಡು ವಿಚಾರಗಳ ಬಗ್ಗೆ ವಿಷಯ ಮಂಡನೆ ಮಾಡಲಿದ್ದಾರೆ. ಪ್ರಮುಖವಾಗಿ 'ಪ್ರಸ್ತುತ ರಾಜಕೀಯ ಸನ್ನಿವೇಶ'ದ ಬಗ್ಗೆ ಕುಮಾರಸ್ವಾಮಿ ಅವರು ಮಾತನಾಡಲಿದ್ದಾರೆ. ನಂತರ 'ಜೆಡಿಎಸ್ಗೆ ಇರುವ ರಾಜಕೀಯ ಮುಕ್ತ ಅವಕಾಶಗಳು' ವಿಷಯದ ಮೇಲೆ ಮಾತನಾಡಲಿದ್ದಾರೆ.
ನಂತರ ಜೆಡಿಎಸ್ಗೆ ದಕ್ಷಿಣ ಭಾರತ ಹಾಗೂ ರಾಷ್ಟ್ರಮಟ್ಟದಲ್ಲಿ ಇರುವ ಬೆಂಬಲದ ಬಗ್ಗೆ ಚರ್ಚೆ ನಡೆಯಲಿದೆ. ಜೊತೆಗೆ ಸಾಮಾಜಿಕ ಜಾಲತಾಣದ ಮೂಲಕ ಪಕ್ಷದ ಪ್ರಚಾರ ಮಾಡುವ ಬಗ್ಗೆ ಜೆಡಿಎಸ್ ಐಟಿ ತಂಡದೊಂದಿಗೆ ಚರ್ಚೆ ನಡೆಯಲಿದ್ದು, ಸಂಜೆ ಸುಗಮ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ.
ಸ್ವಂತ ಬಲದ ಮೇಲೆ ಸ್ವಂತ ಸರ್ಕಾರ!
ಜನತಾ ಪರಿವಾರ ಒಡೆದ ಬಳಿಕ ತನ್ನ ಸ್ವಂತ ಶಕ್ತಿಯ ಮೂಲಕ ಜೆಡಿಎಸ್ ಅಧಿಕಾರಕ್ಕೆ ಬಂದಿಲ್ಲ. ಕಾಂಗ್ರೆಸ್ ಹಾಗೂ ಬಿಜೆಪಿ ಜೊತೆಗೆ ಮೈತ್ರಿ ಮಾಡಿಕೊಳ್ಳುವ ಮೂಲಕ ಮೂರು ಬಾರಿ ರಾಜ್ಯದಲ್ಲಿ ಜೆಡಿಎಸ್ ಆಡಳಿತ ನಡೆಸಿದೆ. ಹೀಗಾಗಿ ಪಕ್ಷದಿಂದ ಹಲವು ನಾಯಕರು ಬೇರೆ ಪಕ್ಷಗಳಿಗೆ ಹೋಗಿದ್ದಾರೆ. ಅದನ್ನು ತಡೆಯಲು ಹಾಗೂ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರಲ್ಲಿ ಆತ್ಮವಿಶ್ವಾಸ ತುಂಬಲು "2023ರ ಸ್ವಂತ ಬಲದ ಸ್ವತಂತ್ರ ಸರ್ಕಾರ' ವಿಷಯದ ಕುರಿತು ಸೆ. 28ರಂದು ಎರಡನೇ ದಿನದ ಕಾರ್ಯಾಗಾರದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಪ್ರಮುಖವಾಗಿ ಮಾತನಾಡಲಿದ್ದಾರೆ.
ನಂತರ "ಪಂಚರತ್ನ' ಹಾಗೂ "ನಾಯಕನ ಆರೋಗ್ಯ' ಎಂಬ ವಿಚಾರಗಳ ಬಗ್ಗೆ ಚರ್ಚೆ ನಡೆಯಲಿದ್ದು, ಧನಾತ್ಮಕ ರಾಜಕೀಯದ ಗುರುತೋರುವ ದಾರಿ' ಎಂಬ ವಿಚಾರದ ಮಾಜಿ ಪ್ರಧಾನಿ ದೇವೇಗೌಡರು ಮಾತನಾಡಲಿದ್ದಾರೆ.
ಪಕ್ಷ ಸಂಘಟನೆ ಮೂಲಕ ಪೂರ್ಣ ಸರ್ಕಾರ!
ಉಳಿದಂತೆ ಮೂರು ಹಾಗೂ ನಾಲ್ಕನೆ ದಿನಗಳ ಕಾರ್ಯಾಗಾರದಲ್ಲಿ ಪಕ್ಷ ಸಂಘಟನೆ ಮತ್ತು ಪಕ್ಷದ ಪರಂಪರೆ ಬಗ್ಗೆ ಚರ್ಚೆ, ಸಂವಾದ ನಡೆಯಲಿದೆ ಎಂದು ಜೆಡಿಎಸ್ ತಿಳಿಸಿದೆ.
ಒಟ್ಟಾರೆ ಮುಂದಿನ ಚುನಾವಣೆಯಲ್ಲಿ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಲು ಜೆಡಿಎಸ್ ಈಗಿನಿಂದಲೇ ಪ್ರಯತ್ನ ಹಾಗೂ ತಯಾರಿಯನ್ನು ಆರಂಭಿಸಿದೆ. ಆದರೆ ಮೂಲ ಜೆಡಿಎಸ್ ಪಕ್ಷದ ಹಾಗೂ ಈಗ ಪಕ್ಷ ತೊರೆದಿರುವ ನಾಯಕರೇ ಜೆಡಿಎಸ್ ಬಗ್ಗೆ ಟೀಕೆ ಮಾಡುತ್ತಿರುವುದು ಆ ಪಕ್ಷದ ನಾಯಕರಿಗೆ ತಲೆನೋವಾಗಿದೆ ಎನ್ನಲಾಗಿದೆ. ಈ ಎಲ್ಲದರ ಬಗ್ಗೆಯೂ ಜೆಡಿಎಸ್ ಕಾರ್ಯಾಗಾರದಲ್ಲಿ ಚರ್ಚೆ ನಡೆಯಲಿದೆ ಎಂಬ ಮಾಹಿತಿಯಿದೆ.
Recommended Video