ಜೆಡಿಎಸ್: ಶ್ರಾವಣಕ್ಕೊಂದು ಬಣ್ಣ, ಕಾರ್ತಿಕಕ್ಕೆ ಇನ್ನೊಂದು, ಮುಂದೆ ಇನ್ನೆಷ್ಟೋ?
ದಕ್ಷಿಣಕನ್ನಡ, ಉಡುಪಿ ಜಿಲ್ಲೆಯಲ್ಲಿ ಗಾದೆ ಮಾತೊಂದು ಇದೆ. "ಕಾಲಕ್ಕೆ ತಕ್ಕ ಕೋಲ, ಕಾಲಕ್ಕೆ ತಕ್ಕ ನೇಮ" ಎಂದು. ಈ ಗಾದೆಮಾತಿನ ವಿವರಣೆ ಅಗತ್ಯವಿಲ್ಲ. ಯಾಕೆಂದರೆ, ಗಾದೆಯಲ್ಲೇ ಅರ್ಥವಿದೆ, ರಾಜ್ಯ ರಾಜಕಾರಣದಲ್ಲಿ, ಯಾವ ಪಕ್ಷಕ್ಕೆ ಈ ಮಾತು ಅನ್ವಯವಾಗುತ್ತದೆ ಎಂದು.
ರಾಜಕಾರಣದಲ್ಲಿ ಮತ್ತು ಅಧಿಕಾರದ ಸುತ್ತಮುತ್ತ ಯಾವಾಗಲೂ ಸಕ್ರಿಯವಾಗಿರಬೇಕೆನ್ನುವ ರಾಜ್ಯದ ಮೂರು ಪಕ್ಷಗಳಲ್ಲಿ ಜೆಡಿಎಸ್ ನಂಬರ್ ಒನ್. 'ರಾಜಕೀಯ ನಿಂತನೀರಲ್ಲ, ಇಲ್ಲಿ ಯಾರೂ ಶತ್ರುಗಳಲ್ಲ, ಮಿತ್ರರಿಲ್ಲ' ಎನ್ನುವ ಮಾತೇನಿದೆಯೋ, ಅದನ್ನು ಸಾಧ್ಯವಾದಷ್ಟು ಬಳಕೆ ಮಾಡಿಕೊಳ್ಳುತ್ತಿರುವುದು ಜೆಡಿಎಸ್ ಅಂದರೆ ತಪ್ಪಾಗಲಾರದು.
ಕಳೆದ ಸುಮಾರು ಇಪ್ಪತ್ತು ತಿಂಗಳಲ್ಲಿ ರಾಜ್ಯ ರಾಜಕೀಯದಲ್ಲಿ ಹಲವಾರು ಬದಲಾವಣೆಗಳಾಗಿವೆ. ಅಸೆಂಬ್ಲಿ, ಲೋಕಸಭಾ ಚುನಾವಣೆ ನಡೆದು ಹೋಗಿದೆ. ಜೊತೆಗೆ, ಸಮ್ಮಿಶ್ರ ಸರಕಾರವೂ ಪತನಗೊಂಡು, ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಿದೆ.
ಸುಪ್ರೀಂ ತೀರ್ಪು ಹೊರಬೀಳುತ್ತಲೇ ಬಿಜೆಪಿಯ ಮೊದಲ ವಿಕೆಟ್ ಡೌನ್?
ಸುಪ್ರೀಂಕೋರ್ಟ್, ಅನರ್ಹ ಶಾಸಕರ ವಿಚಾರದಲ್ಲಿ, ಬಹುನಿರೀಕ್ಷಿತ ತೀರ್ಪನ್ನು ಪ್ರಕಟಿಸಿದೆ. ಹಾಗಾಗಿ, ಉಪಚುನಾವಣೆಯ ಕಾವು ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದೆ. ಯಾಕೆಂದರೆ, ಬಿಜೆಪಿ ನಿರೀಕ್ಷಿತ ಸ್ಥಾನ ಗೆಲ್ಲದಿದ್ದರೆ, ಮತ್ತೊಂದು, ಸುತ್ತಿನ ರಾಜಕೀಯ ಪ್ರಹಸನಕ್ಕೆ ರಾಜ್ಯ ಸಾಕ್ಷಿಯಾಗಬೇಕಾಗಿದೆ. ಜೆಡಿಎಸ್ ಪಕ್ಷದ ಅನುಕೂಲಕರ ರಾಜಕಾರಣಕ್ಕೆ ಕೊಡಬಹುದಾದ ಒಂದೇಳು ಜ್ವಲಂತ ಉದಾಹರಣೆಗಳ ಪಟ್ಟಿ:
2018ರ ಅಸೆಂಬ್ಲಿ ಚುನಾವಣೆಯ ಪ್ರಚಾರದ ವೈಖರಿ
2018ರ ಅಸೆಂಬ್ಲಿ ಚುನಾವಣೆಯ ಪ್ರಚಾರದ ವೈಖರಿಯ ಬಗ್ಗೆ ಅವಲೋಕನ ಮಾಡುವುದಾದರೆ, ಜೆಡಿಎಸ್-ಕಾಂಗ್ರೆಸ್, ಇನ್ನಿಲ್ಲದಂತೇ ವಾಗ್ದಾಳಿ ನಡೆಸಿದ್ದವು. ಸಿದ್ದರಾಮಯ್ಯನವರಂತೂ, ಒಂದು ಕೈಮೇಲು ಎನ್ನುವಂತೆ, "ಅವರಪ್ಪನಾಣೆಗೂ ಕುಮಾರಸ್ವಾಮಿ ಸಿಎಂ ಆಗಲ್ಲ" ಎಂದಿದ್ದರು. ಅದಕ್ಕೆ ಗೌಡ್ರ ಕುಟುಂಬ ಅಷ್ಟೇ ತೀಕ್ಷ್ಣವಾಗಿ ಪ್ರತಿಕ್ರಿಯೆಯನ್ನೂ ನೀಡಿತ್ತು. ಬದಲಾದ ಪರಿಸ್ಥಿತಿಯಲ್ಲಿ ಆಗಿದ್ದೇನು?
ಸಿದ್ದರಾಮಯ್ಯ, ಭಾರವಾದ ಮುಖದಿಂದ, ಅವರೇ ನಮ್ಮ ಸಿಎಂ ಎಂದರು
ಯಾವಾಗ, ಅಸೆಂಬ್ಲಿ ಚುನಾವಣೆಯ ಫಲಿತಾಂಶ ಹೊರಬಿತ್ತೋ, ನೇರವಾಗಿ ಕಾಂಗ್ರೆಸ್ಸಿನವರು ಗೌಡ್ರ ಮನೆಬಾಗಿಲಿಗೆ ಬಂದು, ಕುಮಾರಸ್ವಾಮಿಯೇ ಸಿಎಂ ಅಂದ್ಬಿಟ್ಟರು. "ನಾನೇ ಕಿಂಗ್ ಮೇಕರ್" ಎಂದು ಅದ್ಯಾವ ಗಳಿಗೆಯಲ್ಲಿ ಎಚ್ಡಿಕೆ ನುಡಿದರೋ, ಅವರೇ ಸಿಎಂ ಆದರು. ಅವರಪ್ಪನಾಣೆಗೂ ಸಿಎಂ ಆಗಲ್ಲ ಎಂದಿದ್ದ ಸಿದ್ದರಾಮಯ್ಯ, ಭಾರವಾದ ಮುಖದಿಂದ, ಅವರೇ ನಮ್ಮ ಸಿಎಂ ಎಂದರು.
ಹೊಸಕೋಟೆಯಲ್ಲಿ ಜೆಡಿಎಸ್ ಸ್ಪರ್ಧೆ: ಕುಮಾರಸ್ವಾಮಿ ಅಚ್ಚರಿಯ ನಿರ್ಧಾರ
ಗೌಡ್ರ ಕುಟುಂಬ, ಡಿಕೆಶಿ ನಡುವಿನ ಜಿದ್ದಿಗೆ, ಹಲವು ಬಾರಿ ರಾಜ್ಯವೇ ಬೆರಗಾಗಿತ್ತು
ತನ್ನ ತಾಯಿಗೆ ಕುಮಾರಸ್ವಾಮಿ ಏನೋ ಅಂದರು ಎಂದು, ಡಿ.ಕೆ.ಶಿವಕುಮಾರ್, ಕನಕಪುರದಲ್ಲಿ ನಡೆದ ಸಾರ್ವಜನಿಕ ಸಭೆಗೆ ತಾಯಿಯನ್ನೇ ಕರೆದುಕೊಂಡು ಬರುವುದೇ.. ಈ ಮಾತು ಇಲ್ಲಿಯಾಕೆ ಅಂದರೆ, ಗೌಡ್ರ ಕುಟುಂಬ ಮತ್ತು ಡಿಕೆಶಿ ನಡುವಿನ ಜಿದ್ದಿಗೆ, ಹಲವು ಬಾರಿ ರಾಜ್ಯವೇ ಬೆರಗಾಗಿತ್ತು. ಈಗ, ಈ ಎರಡು ಕುಟುಂಬ ಹೇಗೆ ಅನ್ಯೋನ್ಯವಾಗಿದೆ... ಟಚ್ ವುಡ್ ಹೀಗೇ.. ಇರಲಿ..
ಮಂಡ್ಯದ ಸೋಲಿಗೆ ಕಾಂಗ್ರೆಸ್ ಡಬಲ್ ಗೇಮ್ ಕಾರಣ
ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರ ಅಧಿಕಾರದಲ್ಲಿದ್ದಾಗಲೇ, ಲೋಕಸಭಾ ಚುನಾವಣೆ ಎದುರಾಯಿತು. ಕಾಂಗ್ರೆಸ್ ಮತ್ತು ಜೆಡಿಎಸ್ ಹೊಂದಾಣಿಕೆ ಮಾಡಿಕೊಂಡಿತು. ಎರಡೂ ಪಕ್ಷದವರು, ಒಂದೊಂದು ಸ್ಥಾನವನ್ನು ಗೆದ್ದರು. ಮಂಡ್ಯದ ಸೋಲಿಗೆ, ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಕಾಂಗ್ರೆಸ್ ಡಬಲ್ ಗೇಮ್ ಕಾರಣ ಎನ್ನುವ ಆರೋಪ ಜೆಡಿಎಸ್ಸಿನಿಂದ ಬಂತು..
ಕುಮಾರಸ್ವಾಮಿ ಸರಕಾರ ಪತನ
ಹದಿನೇಳು ಕಾಂಗ್ರೆಸ್-ಜೆಡಿಎಸ್ ಶಾಸಕರು ಕೈಕೊಟ್ಟ ನಂತರ, ಕುಮಾರಸ್ವಾಮಿ ಸರಕಾರ ಪತನಗೊಂಡಿತು. ಒಂದು ಕಾಲದ ದುಷ್ಮನ್ ಡಿಕೆಶಿ, ಸರಕಾರ ಉಳಿಸಿಕೊಳ್ಳಲು ಸಾಧ್ಯವಾದ ಪ್ರಯತ್ನವನ್ನೆಲ್ಲಾ ಮಾಡಿದರು. ಸರಕಾರ ಪತನಗೊಂಡ ನಂತರ, ಅದೇ ರಾಗ ಅದೇ ಹಾಡು ಎನ್ನುವಂತೆ, ಎರಡು ಪಕ್ಷಗಳ ನಾಯಕರ ನಡುವೆ ವಾಕ್ಸಮರ ಮುಂದುವರಿಯಿತು.
ಯಡಿಯೂರಪ್ಪ ಸರಕಾರಕ್ಕೆ ಬೆಂಬಲ ನೀಡುವ ವಿಚಾರ
ಯಾವಾಗ, ಬಿಜೆಪಿ ಸರಕಾರ ಉರುಳಿದರೆ, ಮತ್ತೆ ಚುನಾವಣೆ ನಡೆಯುತ್ತದೆ. ಇದರ ಲಾಭ ಕಾಂಗ್ರೆಸ್ಸಿಗೆ, ತಾನು ಮತ್ತೆ ಸಿಎಂ ಆಗಬಹುದು ಎನ್ನುವ ಲೆಕ್ಕಾಚಾರವನ್ನು ಸಿದ್ದರಾಮಯ್ಯ ಹಾಕಿಕೊಂಡರೋ, ಗೌಡ್ರ ಕುಟುಂಬದ ಮತ್ತೊಂದು ರಾಜಕೀಯ ಹೊರಬಿತ್ತು. ಅದು ಯಡಿಯೂರಪ್ಪ ಸರಕಾರಕ್ಕೆ ಬೆಂಬಲ ನೀಡುವ ವಿಚಾರ. ಇದಕ್ಕೆ ಜೆಡಿಎಸ್ ಕೊಟ್ಟ ಕಾರಣ, "ಪ್ರವಾಹದ ಈ ಪರಿಸ್ಥಿತಿಯಲ್ಲಿ ರಾಜ್ಯಕ್ಕೆ ಇನ್ನೊಂದು ಚುನಾವಣೆ ಬೇಡ" ಎಂದು.
ಬಚ್ಬೇಗೌಡ್ರ ಮತ್ತು ದೇವೇಗೌಡ್ರ ಕುಟುಂಬದ ವೈಮನಸ್ಸಿಗೆ ಇತಿಹಾಸ
ಈಗ ಉಪಚುನಾವಣೆ ಎದುರಾಗುತ್ತಿದೆ. ಬಿಜೆಪಿಗೆ ನಿಭಾಯಿಸಲಾಗದ (ಭಿನ್ನಮತ) ಕ್ಷೇತ್ರವೆಂದರೆ, ಹೊಸಕೋಟೆ. ಬಿಜೆಪಿ ಸಂಸದ ಬಚ್ಚೇಗೌಡ್ರ ಪುತ್ರ ಶರತ್ ಗೆ ಜೆಡಿಎಸ್ ಬೆಂಬಲ ನೀಡಲಿದೆ ಎನ್ನುವ ಮಾತನ್ನು ಕುಮಾರಸ್ವಾಮಿಯವರು ಹೇಳಿದ್ದಾರೆ. ನಿಖಿಲ್ ಕುಮಾರಸ್ವಾಮಿ ಪ್ರಚಾರಕ್ಕೆ ಬರುತ್ತಾರೆ ಎಂದೂ ಹೇಳಿದ್ದಾರೆ. ಬಚ್ಬೇಗೌಡ್ರ ಮತ್ತು ದೇವೇಗೌಡ್ರ ಕುಟುಂಬದ ವೈಮನಸ್ಸಿಗೆ ಇತಿಹಾಸವೇ ಇದೆ. ಗೌಡ್ರನ್ನು ಕಾಳಸರ್ಪ ಎಂದಿದ್ದ ಬಚ್ಚೇಗೌಡ್ರರ ಮಗನಿಗೆ ಜೆಡಿಎಸ್ ಈಗ ಬೆಂಬಲ ನೀಡಲು ಮುಂದಾಗಿದೆ. ಹಾಗಾಗಿ, ಜೆಡಿಎಸ್ಸಿನ ಶ್ರಾವಣಕ್ಕೊಂದು ಬಣ್ಣ, ಕಾರ್ತಿಕಕ್ಕೆ ಇನ್ನೊಂದು: ಮುಂದೆ ಇನ್ನೆಷ್ಟೋ ..