ಮಾರ್ಚ್19ಕ್ಕೆ ಅಮಾನತ್ತಾದ ಜೆಡಿಎಸ್ ಶಾಸಕರ ವಿಚಾರಣೆ
ಬೆಂಗಳೂರು, ಮಾರ್ಚ್ 17: ಕಳೆದ ರಾಜ್ಯಸಭಾ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಿ ಪಕ್ಷದಿಂದ ಉಚ್ಛಾಟಿತರಾದ ಏಳು ಜನ ಜೆಡಿಎಸ್ ಶಾಸಕರನ್ನು ಸೋಮವಾರ ವಿಧಾನಸಭಾಧ್ಯಕ್ಷರ ಸಮಕ್ಷಮದಲ್ಲಿ ವಿಚಾರಣೆ ನಡೆಸಲಾಗುವುದು.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ | ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ವಿಪ್ ಜಾರಿ ಮಾಡಿದ್ದರೂ ಸಹ ಜೆಡಿಎಸ್ನ ಶಾಸಕರಾದ ಎನ್. ಚಲುವರಾಯಸ್ವಾಮಿ, ಅಖಂಡ ಶ್ರೀನಿವಾಸಮೂರ್ತಿ, ಜಮೀರ್ ಅಹಮದ್ ಖಾನ್, ಎಚ್.ಸಿ.ಬಾಲಕೃಷ್ಣ, ರಮೇಶ್ ಬಂಡಿಸಿದ್ದೇಗೌಡ, ಇಕ್ಬಾಲ್ ಅನ್ಸಾರಿ ಮತ್ತು ಭೀಮಾ ನಾಯಕ್ ಅವರುಗಳು ಅಡ್ಡಮತದಾನ ಮಾಡಿದ್ದ ಕಾರಣ ಅವರ ಸದಸ್ಯತ್ವವನ್ನು ರದ್ದು ಮಾಡಬೇಕು ಎಂದು ಜೆಡಿಎಸ್ ದೂರು ಸಲ್ಲಿಸಿತ್ತು.
ರಾಜ್ಯಸಭಾ ಚುನಾವಣೆ: ಇಲ್ಲಿದೆ ಅಭ್ಯರ್ಥಿಗಳ ಅಂತಿಮ ಪಟ್ಟಿ
ರಾಜ್ಯಸಭಾ ಚುನಾವಣೆ ಮತದಾನ ದಿನ ಹತ್ತಿರವಾಗುತ್ತಿದ್ದು ಕೂಡಲೇ ಉಚ್ಛಾಟಿತ ಶಾಸಕರ ಪ್ರಕರಣವನ್ನು ವಿಚಾರಣೆ ನಡೆಸಿ ಅವರ ಸದಸ್ಯತ್ವ ರದ್ದು ಮಾಡಬೇಕು ಎಂದು ಜೆಡಿಎಸ್ ಒತ್ತಡ ಹೇರಿದೆ, ಹೀಗಾಗಿ ಅಮಾನತ್ತಾದ ಶಾಸಕರಿಗೆ ವಿಧಾನಸಭಾಧ್ಯಕ್ಷರ ಅರೆನ್ಯಾಯಿಕ ಪ್ರಾಧಿಕಾರದ ಮುಂದೆ ಹಾಜರಾಗಬೇಕು ಎಂದು ಸಮನ್ಸ್ ನೀಡಲಾಗಿದೆ ಎಂದು ವಿಧಾನ ಸಭಾ ಕಾರ್ಯದರ್ಶಿ ಎಸ್.ಮೂರ್ತಿ ತಿಳಿಸಿದ್ದಾರೆ.
ಅಮಾನತ್ತಾದ ಶಾಸಕರ ವಿಚಾರಣೆ ಇನ್ನೂ ಪೂರ್ಣವಾಗಿರದ ಕಾರಣ ಈ ಬಾರಿಯ ರಾಜ್ಯಸಭಾ ಚುನಾವಣೆಯಲ್ಲಿ ಏಳೂ ಜನ ಶಾಸಕರಿಗೆ ಮತದಾನಕ್ಕೆ ಅವಕಾಶ ನೀಡಬಾರದು ಎಂದೂ ಜೆಡಿಎಸ್ ಮನವಿ ಮಾಡಿದೆ. ವಿಧಾನಸೌಧದಲ್ಲಿ ಸೋಮವಾರ ಬೆಳಿಗ್ಗೆ ವಿಚಾರಣೆ ನಡೆಯಲಿದ್ದು, ಶಾಸಕರಿಗೆ ಮತದಾನಕ್ಕೆ ಅವಕಾಶ ಸಿಗುತ್ತದೆಯೋ ಇಲ್ಲವೋ ಕಾದು ನೋಡಬೇಕಿದೆ.