ಜೆಡಿಎಸ್ ನವರು ಸ್ವಂತಶಕ್ತಿ ಮೇಲೆ ಅಧಿಕಾರಕ್ಕೆ ಬರುವವರಲ್ಲ. ಅವರು ಗೆದ್ದೆತ್ತಿನ ಬಾಲ ಹಿಡಿದು ಹೋಗುವವರು: ಸಿದ್ದರಾಮಯ್ಯ
ದೊಡ್ಡಬಳ್ಳಾಪುರ,ಜನವರಿ24: ಜೆಡಿಎಸ್ ನವರು ಸ್ವಂತಶಕ್ತಿ ಮೇಲೆ ಅಧಿಕಾರಕ್ಕೆ ಬರುವವರಲ್ಲ. ಅವರು ಗೆದ್ದೆತ್ತಿನ ಬಾಲ ಹಿಡಿದು ಹೋಗುವವರು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ದೊಡ್ಡಬಳ್ಳಾಪುರದಲ್ಲಿ ಮಂಗಳವಾರ ಕಾಂಗ್ರೆಸ್ ಪಕ್ಷ ಆಯೋಜಿಸಿದ್ದ ಪ್ರಜಾಧ್ವನಿ ಸಮಾವೇಶದಲ್ಲಿ ಮಾತನಾಡಿದ ಅವರು, ಕುಮಾರಸ್ವಾಮಿ ಅವರು ಪಂಚರತ್ನ ಯಾತ್ರೆ ಮಾಡಿ, ಶಿಕ್ಷಣ, ಆರೋಗ್ಯ, ಗ್ರಾಮೀಣಾಭಿವೃದ್ಧಿ ಮಾಡ್ತೀನಿ ಎನ್ನುತ್ತಿದ್ದಾರೆ. ಹಿಂದೆ 2 ವರ್ಷ 10 ತಿಂಗಳು ಮುಖ್ಯಮಂತ್ರಿಯಾಗಿದ್ದಾಗ ಕುಮಾರಸ್ವಾಮಿಗೆ ಪಂಚರತ್ನದ ನೆನಪು ಬಂದಿಲ್ವಾ? ಕಳೆದ ಚುನಾವಣೆಯಲ್ಲಿ 37 ಸ್ಥಾನ ಗಳಿಸಿದ್ದ ಕುಮಾರಸ್ವಾಮಿಯನ್ನು 80 ಸ್ಥಾನ ಗೆದ್ದಿದ್ದ ನಾವು ಮುಖ್ಯಮಂತ್ರಿ ಮಾಡಿದ್ದೆವು.
Shivananda Patil : ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಬೇಕಿದ್ದ ಜೆಡಿಎಸ್ ಅಭ್ಯರ್ಥಿ ಸಾವು
ಆದರೆ ಅವರಿಗೆ ನಾವು ನೀಡಿದ್ದ ಮುಖ್ಯಮಂತ್ರಿ ಸ್ಥಾನವನ್ನು ಉಳಿಸಿಕೊಳ್ಳಲು ಆಗಲಿಲ್ಲ. ಅಲ್ಲಮಪ್ರಭು ಅವರ ವಚನದಂತೆ ಕೊಟ್ಟ ಕುದುರೆ ಏರಲಾಗದವ ವೀರನು ಅಲ್ಲ, ಶೂರನೂ ಅಲ್ಲ. ಇದು ಕುಮಾರಸ್ವಾಮಿಯ ಕಥೆ ಎಂದು ಕಿಡಿಕಾರಿದ್ದಾರೆ.
ಆಪರೇಷನ್ ಕಮಲ ಮಾಡಿ ಭ್ರಷ್ಟ ಹಣದಿಂದ ಶಾಸಕರನ್ನು ಖರೀದಿ ಮಾಡಿ ಅನೈತಿಕ ಮಾರ್ಗದ ಮೂಲಕ ರಚನೆಯಾದ ಸರ್ಕಾರ ಇದು. ಈ ಸರ್ಕಾರ ಜನರಿಗೆ ಒಳ್ಳೆಯದನ್ನು ಮಾಡಲು ಎಂದಿಗೂ ಸಾಧ್ಯವಿಲ್ಲ. ಭ್ರಷ್ಟಚಾರ ಮಾಡುವುದೊಂದೆ ಈ ಸರ್ಕಾರದ ಮುಖ್ಯ ಉದ್ದೇಶ.
ಹಿಂದೆ ನಾನು ಮುಖ್ಯಮಂತ್ರಿಯಾಗಿರುವಾಗ ವೆಂಕಟರಮಣಯ್ಯ ಅವರು ತೆಗೆದುಕೊಂಡು ಬರುತ್ತಿದ್ದ ಕಾಮಗಾರಿಗಳಿಗೆ ಸಂಬಂಧಿಸಿದ ಎಲ್ಲಾ ಮನವಿ ಪತ್ರಗಳನ್ನು ಅನುಮೋದನೆ ಮಾಡಿ, 1600 ಕೋಟಿ ಅನುದಾನ ನೀಡಿದ್ದೆ. ದೊಡ್ಡಬಳ್ಳಾಪುರಕ್ಕೆ 32,000 ಮನೆಗಳನ್ನು ಕೊಟ್ಟಿದ್ದೆ. ಬಿಜೆಪಿಯವರು ಚುನಾವಣೆ ಹತ್ತಿರ ಬಂದಿರುವುದರಿಂದ 1000 ಮನೆ ಕೊಟ್ಟಿದ್ದಾರೆ, ಮಂಜೂರು ಮಾಡುವುದು ಯಾವಾಗಲೋ ಗೊತ್ತಿಲ್ಲ.
ನಮ್ಮ ಸರ್ಕಾರ ಇದ್ದಾಗ 5 ವರ್ಷಗಳಲ್ಲಿ 15 ಲಕ್ಷ ಮನೆಗಳನ್ನು ನಿರ್ಮಾಣ ಮಾಡಿ ಕೊಟ್ಟಿದ್ದೆವು. ನೇಕಾರರಿಗೆ ಮನೆ, 20ಹೆಚ್,ಪಿ ವರೆಗೆ 1 ರೂಪಾಯಿ 25 ಪೈಸೆಯಂತೆ ವಿದ್ಯುತ್ ನೀಡಿದ್ದೆವು. ಇದನ್ನು ಬಿಜೆಪಿ ಸರ್ಕಾರ 20 ಹೆಚ್,ಪಿ ಇಂದ 5 ಹೆಚ್,ಪಿ ಗೆ ಇಳಿಸಿದೆ. ನಾವು ಅಧಿಕಾರಕ್ಕೆ ಬಂದ ನಂತರ 20 ಹೆಚ್,ಪಿ ವರೆಗೆ ಉಚಿತವಾಗಿ ವಿದ್ಯುತ್ ನೀಡುತ್ತೇವೆ. ನೇಕಾರ ಸಮುದಾಯಕ್ಕೆ ಬಿಜೆಪಿ ಏನಾದರೂ ಮಾಡಿಕೊಟ್ಟಿದೆಯಾ? ಹಾಗಾಗಿ ದಯವಿಟ್ಟು ಯಾರೊಬ್ಬರೂ ಬಿಜೆಪಿಗೆ ಮತ ಹಾಕಬೇಡಿ.
ಬಿಜೆಪಿ ಒಂದು ಸುಳ್ಳಿನ ಫ್ಯಾಕ್ಟರಿ. ನರೇಂದ್ರ ಮೋದಿ ಅವರು ಹೊರದೇಶದಲ್ಲಿರುವ ಕಪ್ಪುಹಣವನ್ನು ತಂದು ಪ್ರತಿಯೊಬ್ಬರ ಅಕೌಂಟಿಗೆ 15 ಲಕ್ಷ ಹಾಕುತ್ತೇನೆ ಎಂದಿದ್ದರು, ಪ್ರತೀ ವರ್ಷ 2 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದಿದ್ದರು, ರೈತರ ಆದಾಯ ದುಪ್ಪಟ್ಟು ಮಾಡುತ್ತೇನೆ ಎಂದಿದ್ದರು, ನ ಖಾವೂಂಗ ನ ಖಾನೆದೂಂಗ ಎಂದಿದ್ದರು, ರೈತರ ಸಾಲ ಮನ್ನಾ ಮಾಡಿದ್ದಾರ? ಇದರಲ್ಲಿ ಯಾವುದಾದರೂ ಒಂದು ಭರವಸೆ ಈಡೇರಿಸಿದ್ದಾರ? ಎಂದು ಪ್ರಶ್ನೆ ಮಾಡಿದ್ದಾರೆ.