ಕಾಂಗ್ರೆಸ್-ಜೆಡಿಎಸ್ ಮೈತ್ರಿಯ ಲಾಭ: 4ಕ್ಷೇತ್ರದಲ್ಲಿ ಬಿಜೆಪಿಗೆ ಸಿಕ್ತು ಬಂಪರ್ ಗಿಫ್ಟ್?
ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಸೀಟು ಹೊಂದಾಣಿಕೆಯ ಕಸರತ್ತು ಬುಧವಾರ (ಮಾ 13) ತಡರಾತ್ರಿ ಮುಕ್ತಾಯಗೊಂಡಿದೆ. ಕಾಂಗ್ರೆಸ್ ಇಪ್ಪತ್ತು ಕ್ಷೇತ್ರಗಳಲ್ಲಿ ಮತ್ತು ಜೆಡಿಎಸ್ ಎಂಟು ಕ್ಷೇತ್ರಗಳಲ್ಲಿ ಸ್ಪರ್ಧಿಸಲಿದೆ.
ಹಾಲೀ ಸಂಸದರು ಇರುವ ಕ್ಷೇತ್ರವನ್ನು ಜೆಡಿಎಸ್ ಪಕ್ಷಕ್ಕೆ ಕಾಂಗ್ರೆಸ್ ಬಿಟ್ಟುಕೊಟ್ಟಿದ್ದು ಅಂದರೆ ಅದು ತುಮಕೂರು. ಅಲ್ಲಿ ಮುದ್ದ ಹನುಮೇಗೌಡ ಕಳೆದ ಚುನಾವಣೆಯಲ್ಲಿ ಬಿಜೆಪಿಯ ಜಿ ಎಸ್ ಬಸವರಾಜು ಅವರನ್ನು 74,041 ಮತಗಳ ಅಂತರದಿಂದ ಸೋಲಿಸಿದ್ದರು.
ಕುಟುಂಬ ರಾಜಕಾರಣ ಬರೀ ದೇವೇಗೌಡ್ರ ಸ್ವತ್ತಾ, ಇವರದ್ದೆಲ್ಲಾ ಇನ್ನೇನು ಮತ್ತೆ?
ಕಣದಲ್ಲಿದ್ದ ಜೆಡಿಎಸ್ ಅಭ್ಯರ್ಥಿ ಎ ಕೃಷ್ಣಪ್ಪ 258,683 ಮತಗಳನ್ನು ಪಡೆದಿದ್ದರು. ಜೆಡಿಎಸ್ ನಿಂದ ಕಾಂಗ್ರೆಸ್ ಸೇರಿ ಕ್ಷೇತ್ರ ಗೆದ್ದಿದ್ದ ಮುದ್ದ ಹನುಮೇಗೌಡ ಅವರಿಗೆ ಪಾಠ ಕಲಿಸಲು, ದೇವೇಗೌಡ್ರು ತುಮಕೂರು ಕ್ಷೇತ್ರವನ್ನು ಮೈತ್ರಿಯ ಭಾಗವಾಗಿ ಆಯ್ಕೆ ಮಾಡಿಕೊಂಡಿದ್ದಾರೆ ಎನ್ನುವ ಸುದ್ದಿಯಿದೆ. ಇದರ ಜೊತೆಗೆ, ಜೆಡಿಎಸ್ ಮತ್ತೆ ಸೇರುವಂತೆ, ಮುದ್ದ ಹನುಮೇಗೌಡರಿಗೆ ಒತ್ತಡವನ್ನೂ ಹಾಕಲಾಗುತ್ತಿದೆ ಎನ್ನುವ ಮಾತೂ ಕೇಳಿಬರುತ್ತಿದೆ.
ಜೆಡಿಎಸ್ ಸ್ಪರ್ಧಿಸುತ್ತಿರುವ ಎಂಟು ಕ್ಷೇತ್ರಗಳನ್ನು ಮತ್ತು ಕಾಂಗ್ರೆಸ್ ಅಲ್ಲಿ ಸ್ಪರ್ಧಿಸದೇ ಇರುವುದರಿಂದ, ಮೇಲ್ನೋಟಕ್ಕೆ ಇದು 4ಕ್ಷೇತ್ರಗಳಲ್ಲಿ ಬಿಜೆಪಿಗೆ ವರದಾನವಾಗಲಿದೆ ಎನ್ನುವ ಲೆಕ್ಕಾಚಾರವಿದೆ. ಆ ಕ್ಷೇತ್ರಗಳು ಯಾವುವು?
ಸೀಟು ಹಂಚಿಕೆ ಬಳಿಕ ಬದಲಾದ ದೇವೇಗೌಡರ ಚುನಾವಣಾ ಲೆಕ್ಕಾಚಾರ
ಹಾಸನ ಮತ್ತು ಮಂಡ್ಯದಲ್ಲಿ ಮಾತ್ರ ಜೆಡಿಎಸ್ - ಕಾಂಗ್ರೆಸ್ ನಡುವೆ ನೇರ ಹಣಾಹಣಿ ಇದ್ದದ್ದು
ಜೆಡಿಎಸ್ ಸ್ಪರ್ಧಿಸುತ್ತಿರುವ ಎಂಟು ಕ್ಷೇತ್ರಗಳೆಂದರೆ ಹಾಸನ, ಮಂಡ್ಯ, ಬೆಂಗಳೂರು ಉತ್ತರ, ಉಡುಪಿ - ಚಿಕ್ಕಮಗಳೂರು, ಉತ್ತರಕನ್ನಡ, ವಿಜಯಪುರ, ತುಮಕೂರು ಮತ್ತು ಶಿವಮೊಗ್ಗ. ಕಳೆದ ಚುನಾವಣೆಯಲ್ಲಿ ಹಾಸನ ಮತ್ತು ಮಂಡ್ಯದಲ್ಲಿ ಮಾತ್ರ ಜೆಡಿಎಸ್ - ಕಾಂಗ್ರೆಸ್ ನಡುವೆ ನೇರ ಹಣಾಹಣಿ ಇದ್ದದ್ದನ್ನು ಬಿಟ್ಟರೆ, ಮಿಕ್ಕೆಲ್ಲಾ ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಸ್ಪರ್ಧೆ ಇದ್ದದ್ದು. ಶಿವಮೊಗ್ಗ ಉಪಚುನಾವಣೆಯಲ್ಲಿ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ನಿಲ್ಲಿಸದೇ ಇದ್ದಿದ್ದರಿಂದ ಮಧು ಬಂಗಾರಪ್ಪ, ಬಿಜೆಪಿಯ ಬಿ ವೈ ರಾಘವೇಂದ್ರ ಅವರಿಗೆ ಉತ್ತಮ ಫೈಟ್ ಅನ್ನು ನೀಡಿದ್ದರು.
ಪ್ರಜ್ವಲ್ ರೇವಣ್ಣ ಮತ್ತು ನಿಖಿಲ್ ಕುಮಾರಸ್ವಾಮಿ ಕಣದಲ್ಲಿ
ಇನ್ನು ಹಾಸನ ಮತ್ತು ಮಂಡ್ಯದಲ್ಲಿ ಬಿಜೆಪಿಗೆ ಅಷ್ಟೇನೂ ಪೂರಕವಾದ ವಾತಾವರಣವಿಲ್ಲ. ಒಂದು ವೇಳೆ ಎ ಮಂಜು, ಬಿಜೆಪಿಯಿಂದ ಸ್ಪರ್ಧಿಸಿದರೆ, ಅಲ್ಲಿನ ರಾಜಕೀಯ ಲೆಕ್ಕಾಚಾರ ತುಸು ಬದಲಾಗಬಹುದು. ಹಾಗಾಗಿ, ಹಾಸನ ಮತ್ತು ಮಂಡ್ಯ ಕ್ಷೇತ್ರವನ್ನು ಬಿಜೆಪಿ ತನ್ನ ವಿನ್ನಿಂಗ್ ಲಿಸ್ಟ್ ನಲ್ಲಿ ಸೇರಿಸಿಯೇ ಇಲ್ಲ ಎನ್ನುವುದು ಅತ್ಯಂತ ಸ್ಪಷ್ಟ. ಇನ್ನು, ಮಂಡ್ಯದಲ್ಲಿ ಬಿಜೆಪಿ ತನ್ನ ನಿಲುವನ್ನು ಇನ್ನೂ ಸ್ಪಷ್ಟ ಪಡಿಸಲಿಲ್ಲ. ಮೂಲಗಳ ಪ್ರಕಾರ, ಸುಮಲತಾ ಅಂಬರೀಶ್ ಅವರ ಅಂತಿಮ ನಿರ್ಧಾರಕ್ಕೆ ಬಿಜೆಪಿ ಕಾಯುತ್ತಿದೆ.
ಜೆಡಿಎಸ್-ಕಾಂಗ್ರೆಸ್ಗೆ ಎಷ್ಟು ಸೀಟು?, ಮಾ.16ರಂದು ಅಧಿಕೃತ ಘೋಷಣೆ
ದೇವೇಗೌಡರು ಇಲ್ಲಿಂದ ಸ್ಪರ್ಧಿಸದಿದ್ದರೆ, ವಾಣಿಜ್ಯೋದ್ಯಮಿಯೊಬ್ಬರು ಸ್ಪರ್ಧಿಸುವ ಸಾಧ್ಯತೆ
ಬೆಂಗಳೂರು ಉತ್ತರ ಕ್ಷೇತ್ರವನ್ನು ಕಾಂಗ್ರೆಸ್, ಜೆಡಿಎಸ್ಸಿಗೆ ಬಿಟ್ಟುಕೊಟ್ಟಿದೆ. ಈ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಎಂಟು ಅಸೆಂಬ್ಲಿ ಕ್ಷೇತ್ರಗಳಲ್ಲಿ ಐದರಲ್ಲಿ ಕಾಂಗ್ರೆಸ್, ಎರಡರಲ್ಲಿ ಜೆಡಿಎಸ್ ಮತ್ತು ಒಂದರಲ್ಲಿ ಬಿಜೆಪಿ ಗೆದ್ದಿದೆ. ಒಂದು ವೇಳೆ ದೇವೇಗೌಡರು ಇಲ್ಲಿಂದ ಸ್ಪರ್ಧಿಸದಿದ್ದರೆ, ವಾಣಿಜ್ಯೋದ್ಯಮಿಯೊಬ್ಬರು ಸ್ಪರ್ಧಿಸುವ ಸಾಧ್ಯತೆಯಿದೆ ಎನ್ನುವ ಮಾತು ಕೇಳಿಬರುತ್ತಿದೆ. ಹಾಗಾದಲ್ಲಿ, ಬಿಜೆಪಿಗೆ ಬೆಂಗಳೂರು ಉತ್ತರ ಸುಲಭ ತುತ್ತಾಗುವ ಸಾಧ್ಯತೆಯಿಲ್ಲದಿಲ್ಲ.
ಇಲ್ಲಿನ ಯಾವ ಕ್ಷೇತ್ರಗಳಲ್ಲೂ ಜೆಡಿಎಸ್ ಆಶಾದಾಯಕ ಸಾಧನೆ ಮಾಡಿಲ್ಲ
ಇನ್ನು ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಜೆಡಿಎಸ್ ಪಕ್ಷಕ್ಕೆ ನೆಲೆಯಿಲ್ಲ ಎನ್ನುವುದು ಅತ್ಯಂತ ಸ್ಪಷ್ಟ. ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಎಂಟು ಅಸೆಂಬ್ಲಿ ಕ್ಷೇತ್ರದಲ್ಲಿ ಬಿಜೆಪಿ ಏಳರಲ್ಲಿ ಮತ್ತು ಕಾಂಗ್ರೆಸ್ ಒಂದು ಸ್ಥಾನದಲ್ಲಿ ಗೆದ್ದಿತ್ತು. ಇಲ್ಲಿನ ಯಾವ ಕ್ಷೇತ್ರಗಳಲ್ಲೂ ಜೆಡಿಎಸ್ ಆಶಾದಾಯಕ ಸಾಧನೆಯನ್ನು ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಮಾಡಿಲ್ಲ. ಬಿಜೆಪಿಯ ಭದ್ರಕೋಟೆಯಾಗಿರುವ ಈ ಕ್ಷೇತ್ರದಿಂದ ಜೆಡಿಎಸ್ ನಿಂದ ಎಸ್ ಎಲ್ ಭೋಜೆಗೌಡ ಮತ್ತು ಆರತಿ ಕೃಷ್ಣ ಅವರ ಹೆಸರು ಕೇಳಿಬರುತ್ತಿದೆ.
ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ: ಸಂಭಾವ್ಯ ಬಿಜೆಪಿ, ಕಾಂಗ್ರೆಸ್ ಅಭ್ಯರ್ಥಿಗಳು
ಕಾಂಗ್ರೆಸ್ ಅಭ್ಯರ್ಥಿ ಇಲ್ಲಿ ಇಲ್ಲದೇ ಇರುವುದು, ಬಿಜೆಪಿಗೆ ಲಾಭವಾಗುವ ಸಾಧ್ಯತೆ
ಇನ್ನು ಶಿವಮೊಗ್ಗ ಕ್ಷೇತ್ರದಲ್ಲಿ ಮಧು ಬಂಗಾರಪ್ಪ, ದೇವೇಗೌಡರ ಒತ್ತಾಯದ ಮೇರೆಗೆ ಸ್ಪರ್ಧಿಸಲು ಒಪ್ಪಿದ್ದಾರೆ ಎನ್ನುವ ಮಾತಿದೆ. ಕ್ಷೇತ್ರದ ವ್ಯಾಪ್ತಿಯ ಅಸೆಂಬ್ಲಿ ಕ್ಷೇತ್ರಗಳಲ್ಲಿ ಬಿಜೆಪಿ ಆರರಲ್ಲಿ ಮತ್ತು ಎರಡರಲ್ಲಿ ಕಾಂಗ್ರೆಸ್ ಗೆದ್ದಿತ್ತು. ಶಿವಮೊಗ್ಗ ಗ್ರಾಮೀಣ, ಭದ್ರಾವತಿ, ತೀರ್ಥಹಳ್ಳಿ ಮತ್ತು ಸೊರಬದಲ್ಲಿ ಜೆಡಿಎಸ್ ಉತ್ತಮ ಮತವನ್ನೇನ್ನೋ ಪಡೆದಿತ್ತು. ಈ ಬಾರಿ ಮಧು ಬಂಗಾರಪ್ಪ ಅವರೇ ಇಲ್ಲಿನ ಅಭ್ಯರ್ಥಿ. ಕಾಂಗ್ರೆಸ್ ಅಭ್ಯರ್ಥಿ ಇಲ್ಲಿ ಇಲ್ಲದೇ ಇರುವುದು, ಬಿಜೆಪಿಗೆ ಲಾಭವಾಗುವ ಸಾಧ್ಯತೆ ಹೆಚ್ಚು.
ಕ್ಷೇತ್ರ ಪರಿಚಯ : ಶಿವಮೊಗ್ಗ ನಗರದಲ್ಲಿ ಈ ಬಾರಿ ಕಮಲ ಅರಳುವುದೇ?
ಉತ್ತರಕನ್ನಡ ಮತ್ತು ವಿಜಯಪುರ ಕ್ಷೇತ್ರದಲ್ಲೂ ಜೆಡಿಎಸ್ ಅಭ್ಯರ್ಥಿ ಸ್ಪರ್ಧಿಸಲಿದ್ದಾರೆ.
ಇನ್ನು ಉತ್ತರಕನ್ನಡ ಮತ್ತು ವಿಜಯಪುರ ಕ್ಷೇತ್ರದಲ್ಲೂ ಜೆಡಿಎಸ್ ಅಭ್ಯರ್ಥಿ ಸ್ಪರ್ಧಿಸಲಿದ್ದಾರೆ. ಉತ್ತರಕನ್ನಡದ ಎಂಟು ಅಸೆಂಬ್ಲಿಯಲ್ಲಿ ಬಿಜೆಪಿ ಐದು, ಕಾಂಗ್ರೆಸ್ ಮೂರರಲ್ಲಿ ಗೆದ್ದಿತ್ತು. ಇಲ್ಲಿ ಜೆಡಿಎಸ್ ಪಕ್ಷಕ್ಕೆ ನೆಲೆಯಿಲ್ಲ ಎಂದೇ ಹೇಳಬಹುದು. ಬಿಜೆಪಿಯಿಂದ ಜೆಡಿಎಸ್ ಪಕ್ಷಕ್ಕೆ ಜಿಗಿದಿದ್ದ ಆನಂದ್ ಅಸ್ನೋಟಿಕರ್ ಅಲ್ಲಿನ ಸಂಭಾವ್ಯ ಅಭ್ಯರ್ಥಿ. ಇನ್ನು ವಿಜಯಪುರ ಕ್ಷೇತ್ರದಲ್ಲಿನ ಎಂಟು ಅಸೆಂಬ್ಲಿ ಕ್ಷೇತ್ರಗಳಲ್ಲಿ ಬಿಜೆಪಿ ನಾಲ್ಕು, ಕಾಂಗ್ರೆಸ್ ಮತ್ತು ಜೆಡಿಎಸ್ ತಲಾ ಎರಡು ಕ್ಷೇತ್ರವನ್ನು ಗೆದ್ದಿದೆ. ಮೂವರ ಹೆಸರು ಸಂಭಾವ್ಯರ ಪಟ್ಟಿಯಲ್ಲಿದೆ. ಇಲ್ಲಿ ಮೇಲ್ನೋಟಕ್ಕೆ ಬಿಜೆಪಿಗೆ ಅನುಕೂಲವಾಗುವ ಸಾಧ್ಯತೆಯೇ ಹೆಚ್ಚು.
4ಕ್ಷೇತ್ರವನ್ನು ಚುನಾವಣೆಗೆ ಮುನ್ನವೇ ಬಿಜೆಪಿಗೆ ಬಿಟ್ಟುಕೊಟ್ಟಿತೇ, ಜೆಡಿಎಸ್, ಕಾಂಗ್ರೆಸ್?
ಈ ಎಲ್ಲಾ ಲೆಕ್ಕಾಚಾರಗಳನ್ನು ನೋಡಿದಾಗ, ಉಡುಪಿ-ಚಿಕ್ಕಮಗಳೂರು, ಉತ್ತರಕನ್ನಡ, ವಿಜಯಪುರದಲ್ಲಿ ಬಿಜೆಪಿ ಸುಲಭವಾಗಿ ಜಯ ಸಾಧಿಸಬಹುದು. ಇನ್ನು ಬೆಂಗಳೂರು ಉತ್ತರದಲ್ಲಿ ದೇವೇಗೌಡ್ರು ಸ್ಪರ್ಧಿಸದೇ ಇದ್ದಲ್ಲಿ, ಇಲ್ಲೂ ಕೂಡಾ ಬಿಜೆಪಿಗೆ ಅನುಕೂಲವಾಗಬಹುದು. ಒಂದು ವೇಳೆ, ಇಲ್ಲಿ ಸ್ಪರ್ಧಿಸಿದರೆ ತುಮಕೂರಿನಲ್ಲಿ ಬಿಜೆಪಿಗೆ ಗೆಲುವಿನ ಸಾಧ್ಯತೆ ದಟ್ಟವಾಗಬಹುದು. ಕಾಂಗ್ರೆಸ್ ಇಲ್ಲೆಲ್ಲಾ ಜೆಡಿಎಸ್ ಪರ ಪ್ರಚಾರ ಮಾಡಿದರೂ, ನೇರವಾಗಿ ಕಾಂಗ್ರೆಸ್ ಅಭ್ಯರ್ಥಿ ಇರುವುದೇ ಬೇರೆ ಲೆಕ್ಕ, ಪ್ರಚಾರದಲ್ಲಿ ತೊಡಗಿಸಿಕೊಳ್ಳುವುದು ಬೇರೆಯೇ ಲೆಕ್ಕ.
ಕಣ್ಣೀರ 'ಹೊಳೆ' ಹರಿಸಿ, ಪ್ರಜ್ವಲ್ ರೇವಣ್ಣ ಅಭ್ಯರ್ಥಿ ಎಂದ ದೇವೇಗೌಡ್ರು