ಜೆಡಿಎಸ್-ಕಾಂಗ್ರೆಸ್ ವಿಶ್ವಾಸಮತಕ್ಕೆ ಮುನ್ನ 7 ಪ್ರಮುಖ ಸಂಗತಿಗಳು
Recommended Video
ಬೆಂಗಳೂರು, ಮೇ 25 : ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟದ ಸರಕಾರ ಮೂರು ತಿಂಗಳಿಗಿಂತ ಹೆಚ್ಚು ಉಳಿಯುವುದಿಲ್ಲ ಎಂದು ಬಿಜೆಪಿ ಸವಾಲು ಒಡ್ಡಿದೆ. ಈಗ, ಸವಾಲನ್ನು ಸ್ವೀಕರಿಸಿ ಸಮತೋಲಿತ ಸಂಪುಟ ರಚಿಸುವುದು ಮಾತ್ರವಲ್ಲ, ಇಬ್ಬರೂ ಒಗ್ಗೂಡಿ ರಾಜ್ಯದ ಅಭಿವೃದ್ಧಿ ಮಾಡುತ್ತೇವೆ ಎಂಬುದನ್ನು ಸಾಬೀತುಪಡಿಸಿ ತೋರಿಸಬೇಕಾಗಿದೆ.
ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರಿಗೆ ಎದುರಾಗಿರುವ ಪ್ರಥಮ ಪ್ರಮುಖ ಸವಾಲು ಎಂದರೆ, ವಿಧಾನಸಭೆಯಲ್ಲಿ ವಿಶ್ವಾಸಮತದಲ್ಲಿ ಗೆಲ್ಲುವುದು. ಅದಕ್ಕಿಂತಲೂ ಮೊದಲು ಸ್ಪೀಕರ್ ಆಯ್ಕೆಯ ವಿಷಯದಲ್ಲಿಯೂ ಬಿಟ್ಟುಕೊಡಲು ಒಪ್ಪದ ಬಿಜೆಪಿ ಸುರೇಶ್ ಕುಮಾರ್ ಅವರನ್ನು ಅಭ್ಯರ್ಥಿಯಾಗಿ ನಿಲ್ಲಿಸಿದೆ.
ಕರ್ನಾಟಕ ವಿಶ್ವಾಸಮತ LIVE: ಪರೀಕ್ಷೆ ಗೆಲ್ಲುತ್ತದೆಯೇ ಜೆಡಿಎಸ್-ಕಾಂಗ್ರೆಸ್?
ವಿಶ್ವಾಸಮತದಲ್ಲಿ ವಿಜಯಿಯಾದರೆ ಮೊದಲ ಅಡೆತಡೆಯನ್ನು ಜೆಡಿಎಸ್-ಕಾಂಗ್ರೆಸ್ ಜಿಗಿದಂತೆ. ಇದನ್ನು ದಾಟುತ್ತಿದ್ದಂತೆ ಬಹುದೊಡ್ಡ ಚಾಲೆಂಜ್ ಕುಮಾರಸ್ವಾಮಿಯವರ ಮೇಲಿದೆ. ಅದು, ಸಮತೂಕದಿಂದ, ಸಾಮರಸ್ಯದಿಂದ ಕೂಡಿರುವಂಥ ಜೆಡಿಎಸ್ ಮತ್ತು ಕಾಂಗ್ರೆಸ್ ಶಾಸಕರಿರುವ ಸಂಪುಟ ರಚಿಸುವುದು.
ಇದೀಗ ವಿಶ್ವಾಸಮತ ಯಾಚಿಸುವ ಘಟ್ಟಕ್ಕೆ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಕೂಟ ಬಂದು ತಲುಪಿದೆ. ಶುಕ್ರವಾರ ಹನ್ನೆರಡು ಗಂಟೆಯ ಸುಮಾರಿಗೆ ತನ್ನ ಬಲವನ್ನು ಪ್ರದರ್ಶಿಸಬೇಕಿದೆ. ಈ ಮೈತ್ರಿಕೂಟಕ್ಕೆ ಅಷ್ಟು ಸುಲಭವಾಗಿ ಗೆಲುವುದ ಸಿಗದಂತೆ ಮಾಡಲು ಬಿಜೆಪಿ ಪ್ರಯತ್ನ ನಡೆಸುತ್ತಲೇ ಇದೆ. ಈಗ ತಿಳಿಯಬೇಕಾಗಿರುವ ಪ್ರಮುಖ ಸಂಗತಿಗಳು ಇಲ್ಲಿವೆ.
ಸಮ್ಮಿಶ್ರ ಸರ್ಕಾರದ ವಿಶ್ವಾಸಮತ : ಶುಕ್ರವಾರ ಸದನದಲ್ಲಿ ನಡೆಯುವುದೇನು?
ಬಲಾಬಲದ ವಿಷಯದಲ್ಲಿ ಎಚ್ಡಿಕೆ ಭದ್ರ
104 ಶಾಸಕರನ್ನು ಹೊಂದಿದ್ದರೂ ಸರಕಾರ ರಚಿಸಲು ವಿಫಲವಾದ ಬಿಜೆಪಿ, ವಿರೋಧ ಪಕ್ಷದಲ್ಲಿ ಕೂಡಲು ನಿರ್ಧರಿಸಿದೆ. ಇನ್ನು, ಕಾಂಗ್ರೆಸ್ (78) ಮತ್ತು ಜೆಡಿಎಸ್ (36) ಮತ್ತು ಬಹುಜನ ಸಮಾಜವಾದಿ ಪಕ್ಷ (1) ಸೇರಿರುವ ಮೈತ್ರಿಕೂಟದಲ್ಲಿ 115 ಶಾಸಕರ ಬಲವಿದೆ. ಜೊತೆಗೆ ಇಬ್ಬರು ಪಕ್ಷೇತ್ರರ ಬಲವೂ ಇರುವುದರಿಂದ ನಿರಾತಂಕ. ಆದರೆ, ಬಹುಮತಕ್ಕೆ ಬೇಕಾಗಿರುವುದು ಕೇವಲ 111 ಕ್ಷೇತ್ರಗಳು ಮಾತ್ರ. ಜಯನಗರ, ರಾಜರಾಜೇಶ್ವರಿ ನಗರ ಮತ್ತು ಕುಮಾರಸ್ವಾಮಿ ತೆರವುಗೊಳಿಸಿರುವ ರಾಮನಗರಕ್ಕೆ ಚುನಾವಣೆ ಇನ್ನೂ ಆಗಬೇಕಿದೆ.
ಎಚ್.ಡಿ.ಕುಮಾರಸ್ವಾಮಿ ಸಂಪುಟ ಸೇರುವ ಜೆಡಿಎಸ್ ಶಾಸಕರ ಪಟ್ಟಿ
ಕುಮಾರಸ್ವಾಮಿಯವರಿಗೆ ವಿಶ್ವಾಸಮತ ನಿರಾಯಾಸ
ಎಲ್ಲ ಪಕ್ಷಗಳು ತಮ್ಮ ಪಕ್ಷಕ್ಕೆ ನಿಷ್ಠರಾಗಿದ್ದರೆ ಬಹುಮತ ಸಾಬೀತಿಗೆ ಯಾವುದೇ ಕಷ್ಟವಾಗುವುದಿಲ್ಲ. ನಿಷ್ಠೆ ಬದಲಿಸದಿದ್ದರೆ ಕುಮಾರಸ್ವಾಮಿಯವರು ನಿರಾಯಾಸವಾಗಿ ವಿಶ್ವಾಸಮತ ಗಳಿಸಲಿದ್ದಾರೆ. ತನ್ನ ವಿಶ್ವಾಸಮತದಲ್ಲಿಯೇ ಸೋತಿರುವ ಭಾರತೀಯ ಜನತಾ ಪಕ್ಷ, ಜೆಡಿಎಸ್-ಕಾಂಗ್ರೆಸ್ ವಿಶ್ವಾಸಮತದಲ್ಲಿ ಸೋಲಿಸುವಂಥ ಯಾವುದೇ ಚಮತ್ಕಾರ ತೋರಿಸುವುದು ಅನುಮಾನ. ಆದರೆ, ಇದಕ್ಕಿಂತ ಬೃಹತ್ ಸವಾಲುಗಳು ಕುಮಾರಸ್ವಾಮಿಯವರಿಗೆ ಇರುವುದೇ ಮುಂದಿನ ದಿನಗಳಲ್ಲಿ.
3 ತಿಂಗಳಲ್ಲಿ ಸರಕಾರವೇ ಇರುವುದಿಲ್ಲ : ಬಿಎಸ್ವೈ
ಕೇವಲ 55 ಗಂಟೆಗಳ ಕಾಲ ಮುಖ್ಯಮಂತ್ರಿಯಾಗಿ, ಅಷ್ಟರಲ್ಲಿಯೇ ರೈತರ ಸಾಲಮನ್ನಾ ಮಾಡುವುದಾಗಿ ಘೋಷಿಸಿ, ವಿಶ್ವಾಸಮತದಲ್ಲಿ ಗೆಲ್ಲುವ ವಿಶ್ವಾಸವಿಲ್ಲದಿದ್ದರೂ ಕುದುರೆ ವ್ಯಾಪಾರಕ್ಕೆ ಪ್ರಯತ್ನಿಸಿ ಸೋತು ರಾಜೀನಾಮೆ ನೀಡಿದ ಯಡಿಯೂರಪ್ಪನವರು, ಜೆಡಿಎಸ್-ಕಾಂಗ್ರೆಸ್ ಸರಕಾರ ಮೂರು ತಿಂಗಳುಗಳಿಗಿಂತ ಹೆಚ್ಚು ಇರುವುದಿಲ್ಲ. ರೈತರ ಸಾಲ ಮನ್ನಾ ಮಾಡದೇ ಹೋದರೆ ರಾಜ್ಯಾದ್ಯಂತ ಪ್ರತಿಭಟನೆ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ಇದನ್ನು ಕುಮಾರಸ್ವಾಮಿಯವರು ಸವಾಲಾಗಿ ಸ್ವೀಕರಿಸಿ, ಐದು ವರ್ಷ ಪೂರೈಸಿಯೇ ತೀರುತ್ತೇನೆ ಎಂದು ತೊಡೆತಟ್ಟಿದ್ದಾರೆ.
ಕಾಂಗ್ರೆಸ್ ಹಿರಿಯ ನಾಯಕರ ಕಣ್ಣು ಕೆಂಪು
ಇದಾದ ಮೇಲೆ ಮುಂದಿರುವುದೇ ಸಂಪುಟ ರಚನೆಯ ಕಸರತ್ತು ಮತ್ತು ಅಧಿಕಾರವನ್ನು ಸರಿಸಮನಾಗಿ ಹೇಗೆ ಹಂಚಿಕೊಳ್ಳುವ ಸವಾಲು. ಡಾ. ಜಿ ಪರಮೇಶ್ವರ ಅವರನ್ನು ಉಪಮುಖ್ಯಮಂತ್ರಿ ಮಾಡಿದಾಗಲೇ ಹಲವಾರು ಹಿರಿಯ ನಾಯಕರ ಮುಖಗಳು ಕೆಂಪಾಗಿವೆ, ಕೆಲವರು ಬುಸುಬುಸು ಗುಟ್ಟಿದ್ದಾರೆ, ಕೆಲವರು ತಿರುಗೇಟು ನೀಡಲು ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಇದರಲ್ಲಿ ಕುಮಾರಸ್ವಾಮಿಯವರು ಗೆದ್ದರೆ, ಬಹುದೊಡ್ಡ ಆತಂಕ ನಿವಾರಣೆಯಾದಂತಾಗುತ್ತದೆ.
ಎಲ್ಲಿದೆ ಜೆಡಿಎಸ್-ಕಾಂಗ್ರೆಸ್ ಒಗ್ಗಟ್ಟು?
ಜೆಡಿಎಸ್ ಮತ್ತು ಕಾಂಗ್ರೆಸ್ ಒಗ್ಗಟ್ಟಿನಿಂದಲೇ ಸರಕಾರ ರಚಿಸುತ್ತಿದ್ದರೂ, ವಿಶ್ವಾಸಮತ ಯಾಚನೆಗೆ ಮುನ್ನ ಎರಡೂ ಪಕ್ಷಗಳು ಬೇರೆಬೇರೆಯಾಗಿಯೇ ಬೀಡುಬಿಟ್ಟಿವೆ. ಎರಡೂ ಪಕ್ಷಗಳಲ್ಲಿ ಒಗ್ಗಟ್ಟಿನ ಯಾವ ಲಕ್ಷಣಗಳೂ ಕಾಣಿಸುತ್ತಿಲ್ಲ. ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಮಮತಾ ಬ್ಯಾನರ್ಜಿ ಅವರಿಂದ ಪೊಲೀಸ್ ವರಿಷ್ಠಾಧಿಕಾರಿ ನೀಲಮಣಿ ರಾಜು ಅವರಿಗೆ ಅವಮಾನವಾದಾಗ ಕಾಂಗ್ರೆಸ್ ಎಲ್ಲಿಯೂ ತಲೆಹಾಕಿಲ್ಲ. ಕಾಂಗ್ರೆಸ್ಸಿನ ಸಲಹೆ ಕೇಳುವುದಕ್ಕೂ ಜೆಡಿಎಸ್ ಹೋಗಿಲ್ಲ. ಇನ್ನೆಲ್ಲಿ ಒಗ್ಗಟ್ಟು?
ಕಾಂಗ್ರೆಸ್ಸಿನಲ್ಲಿ ಭಿನ್ನಮತ ಸ್ಫೋಟ : ಶೋಭಾ
ಕಾಂಗ್ರೆಸ್ಸಿನ ಹಲವಾರು ಶಾಸಕರು ಪರಮೇಶ್ವರ ಅವರನ್ನು ಉಪಮುಖ್ಯಮಂತ್ರಿ ಮಾಡಿರುವ ಬಗ್ಗೆ ಮತ್ತು ಅನೈತಿಕ ಮೈತ್ರಿಕೂಟ ರಚಿಸಿರುವ ಬಗ್ಗೆ ಅಸಮಾಧಾನಗೊಂಡಿದ್ದು, ವಿಶ್ವಾಸಮತ ಯಾಚನೆಯ ಸಂದರ್ಭದಲ್ಲಿಯೇ ಕಾಂಗ್ರೆಸ್ಸಿನಲ್ಲಿ ಭಿನ್ನಮತ ಸ್ಫೋಟವಾಗಲಿದೆ ಎಂದು ಯಡಿಯೂರಪ್ಪನವರ ಬಲಗೈಯಂತಿರುವ ಸಂಸದೆ ಶೋಭಾ ಕರಂದ್ಲಾಜೆ ಅವರು ಸ್ಫೋಟಕ ಸುದ್ದಿಯನ್ನು ಹೇಳಿದ್ದಾರೆ. ಇದು ಸದ್ಯಕ್ಕೆ ಸಾಧ್ಯವಾಗದೆ ಇದ್ದರೂ, ಕಾಂಗ್ರೆಸ್ಸಿನಲ್ಲಿ ಆಕ್ರೋಶ ಬೂದಿ ಮುಚ್ಚಿದ ಕೆಂಡದಂತಿರುವುದು ಸುಳ್ಳಲ್ಲ.
ಡಿಕೆ ಶಿವಕುಮಾರ್ ಸಿಡಿದೆದ್ದರೆ ಕಥೆ ಅಷ್ಟೇ
ತಮ್ಮನ್ನು ಉಪಮುಖ್ಯಮಂತ್ರಿ ಸ್ಥಾನಕ್ಕೆ ಪರಿಗಣಿಸದಿದ್ದಕ್ಕೆ ಡಿಕೆ ಶಿವಕುಮಾರ್ ಅವರು ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದರು. ನಂತರ ತಿಪ್ಪೆಸಾರಲು ಯತ್ನಿಸಿದರೂ ಅವರ ಹಾವಭಾವವೇ ವಿಭಿನ್ನ ಕಥೆಯನ್ನು ಹೇಳುತ್ತಿರುತ್ತದೆ. ಈ ನಡುವೆ, ಅವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಮತ್ತು ಪ್ರಮುಖ ಸಚಿವ ಸ್ಥಾನ ನೀಡುವ ಬಗ್ಗೆಯೂ ಮಾತುಕತೆಗಳು ನಡೆದಿವೆ. ಶಿವಕುಮಾರ್ ಅವರು ಕಾಂಗ್ರೆಸ್ಸಿನ ಅಡಿಗಂಭ ಎನ್ನುವುದರಲ್ಲಿ ಅನುಮಾನವೇ ಇಲ್ಲ. ಅವರು ಅಲ್ಲಾಡಿದರೆ, ಇಡೀ ಮೈತ್ರಿಕೂಟವೇ ಅಲ್ಲಾಡುವ ಸಾಧ್ಯತೆ ಇರುತ್ತದೆ.