ಕಾಂಗ್ರೆಸ್ –ಜೆಡಿಎಸ್ ಪ್ರತಿಷ್ಠೆಗೆ ಜಾತ್ಯತೀತತೆ ಮಂತ್ರ ನಗಣ್ಯ!
ಮೈಸೂರು, ಜೂನ್ 10: ಜಾತ್ಯತೀತ ಮಂತ್ರ ಜಪಿಸುತ್ತಾ, ಬಿಜೆಪಿಯನ್ನು ಕೋಮುವಾದಿ ಎಂಬಂತೆ ಬಿಂಬಿಸುತ್ತಾ ಒಂದಷ್ಟು ಮತಗಳನ್ನು ಬುಟ್ಟಿಗೆ ಹಾಕಿಕೊಳ್ಳಬಹುದು ಎಂಬ ಚಿಂತನೆಯಲ್ಲಿರುವ ಜೆಡಿಎಸ್ ಮತ್ತು ಕಾಂಗ್ರೆಸ್ ರಾಜ್ಯಸಭೆ ಚುನಾವಣೆ ಬಳಿಕ ಬದ್ಧವೈರಿಗಳಾಗಿದ್ದು, ಸದ್ಯದ ಎರಡು ಪಕ್ಷಗಳ ಮನಸ್ಥಿತಿಯನ್ನು ಗಮನಿಸಿದರೆ ಎರಡು ಪಕ್ಷಗಳ ನಾಯಕರ ಪ್ರತಿಷ್ಠೆಗೆ ಜಾತ್ಯಾತೀತ ಮಂತ್ರ ನಗಣ್ಯವಾದಂತಾಗಿದೆ.
ವಿಧಾನಸಭಾಚುನಾವಣೆ ಸೇರಿದಂತೆ ಇತರೆ ಸಂದರ್ಭಗಳಲ್ಲಿ ಅವಕಾಶ ಸಿಕ್ಕಾಗಲೆಲ್ಲ ಜೆಡಿಎಸ್ ಮತ್ತು ಕಾಂಗ್ರೆಸ್ ಜಾತ್ಯಾತೀತ ಮಂತ್ರವನ್ನು ಜಪಿಸುವ ಮೂಲಕ ರಾಜಕೀಯ ದಾಳವನ್ನು ಉರುಳಿಸಿಕೊಂಡೇ ಬಂದಿದ್ದವು. ರಾಜಕೀಯ ಲಾಭ ಪಡೆಯುವ ಸಂದರ್ಭದಲ್ಲೆಲ್ಲಾ ಈ ಮಂತ್ರಗಳು ಎರಡುಪಕ್ಷಗಳ ನಾಯಕರಿಂದ ಹೊರ ಬರುತ್ತಲೇ ಇರುತ್ತದೆ. ಆದರೆ ಇದೆಲ್ಲ ಬೋಗಸ್ ಕೇವಲ ಮತದಾರರನ್ನು ಯಮಾರಿಸುವ ತಂತ್ರ ಎಂಬುದನ್ನು ರಾಜ್ಯಸಭಾ ಚುನಾವಣೆ ಸಾಬೀತು ಮಾಡಿದೆ.
ರಾಜ್ಯಸಭಾ ಚುನಾವಣೆಯಲ್ಲಿ ಜೆಡಿಎಸ್ನ ಶಾಸಕ ಶ್ರೀನಿವಾಸಗೌಡ ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿದ್ದಾರೆ. ನಾನು ಕಾಂಗ್ರೆಸ್ ಇಷ್ಟಪಡುತ್ತೇನೆ, ಹಾಗಾಗಿ ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿದ್ದೇನೆ. ಈ ಹಿಂದೆ ಕಾಂಗ್ರೆಸ್ ಸರಕಾರದಲ್ಲಿ ಮಂತ್ರಿಯಾಗಿದ್ದೆ. ಹಾಗಾಗಿ ಕಾಂಗ್ರೆಸ್ಗೆ ಮತ ಹಾಕಿದ್ದೇನೆ ಎಂದು ಬಹಿರಂಗವಾಗಿ ಹೇಳಿದ್ದರು.
ರಾಜ್ಯಸಭೆ: ಪವಾಡ ಸಂಭವಿಸಿದರೆ ಮಾತ್ರ ಬಿಜೆಪಿಗೆ ಗೆಲುವು!
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ರಮೇಶ್ ಕುಮಾರ್ ಇಬ್ಬರೂ ಶ್ರೀನಿವಾಸಗೌಡರನ್ನು ಸಂಪರ್ಕಿಸಿ ಕಾಂಗ್ರೆಸ್ಗೆ ಮತ ಹಾಕುವಂತೆ ಮನವಿ ಮಾಡಿದ್ದರು ಎನ್ನಲಾಗಿದೆ. ಕಾಂಗ್ರೆಸ್ ನಾಯಕರ ಮನವಿಗೆ ಸ್ಪಂದಿಸಿ ಶ್ರೀನಿವಾಸಗೌಡ ಕಾಂಗ್ರೆಸ್ ಅಭ್ಯರ್ಥಿಗೆ ಮತಹಾಕುವ ಮೂಲಕ ಜೆಡಿಎಸ್ ವಿರೋಧ ಕಟ್ಟಿಕೊಂಡಿದ್ದಾರೆ.
ಕಾಂಗ್ರೆಸ್-ಜೆಡಿಎಸ್ ಸಂಬಂಧ ಮುಚ್ಚಿದ ಬಾಗಿಲು
ಇಲ್ಲಿವರೆಗೆ ಕಾಂಗ್ರೆಸ್ ಮತ್ತು ಜೆಡಿಎಸ್ ನಾವು ಜಾತ್ಯಾತೀತರು ಬಿಜೆಪಿ ಕೋಮುವಾದಿ ಎನ್ನುತ್ತಲೇ ಬಂದಿವೆ. ಆದರೆ ಇವರು ನಿಜವಾಗಲೂ ಜಾತ್ಯಾತೀತರಾ? ಎಂಬುದು ಈಗ ಜನಪ್ರಶ್ನೆ ಮಾಡುವ ಕಾಲ ಬಂದಿದೆ. ರಾಜ್ಯಸಭಾ ಚುನಾವಣೆ ವೇಳೆ ಹೆಚ್ಚು ಕಿತ್ತಾಡಿಕೊಂಡಿದ್ದು, ಪ್ರತಿಷ್ಟೆಗೆ ಬಿದ್ದಿದ್ದು, ಒಬ್ಬರ ಮೇಲೆ ಒಬ್ಬರು ಆರೋಪಗಳನ್ನು ಮಾಡಿದ್ದು, ಅಡ್ಡಮತದಾನ ಮಾಡಿಸಿದ್ದು ಎಲ್ಲರೂ ಜಾತ್ಯಾತೀತ ಮಂತ್ರ ಪಠಿಸುತ್ತಾ ಬಂದಿರುವ ಜೆಡಿಎಸ್ ಮತ್ತುಕಾಂಗ್ರೆಸ್ ಎನ್ನುವುದು ಜಗಜ್ಜಾಹೀರಾಗಿದೆ.
ರಾಜ್ಯಸಭಾ ಚುನಾವಣೆ ವೇಳೆ ಆಗಿರುವ ರಾಜಕೀಯ ವಿದ್ಯಮಾನಗಳನ್ನು ಗಮನಿಸಿದರೆ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವಿನ ಸಂಬಂಧ ಹಳಸುವುದಲ್ಲದೆ, ಮುಂದೆ ಯಾವತ್ತೂ ಇವರು ಒಂದಾಗುವುದಿಲ್ಲ ಎಂಬುದು ಖಚಿತವಾಗಿದೆ. ಅಷ್ಟೇ ಅಲ್ಲ ಕಾಂಗ್ರೆಸ್ ನಡುವಿನ ಸಂಬಂಧ ಮುಚ್ಚಿದ ಬಾಗಿಲು ಎಂಬುದನ್ನು ಸ್ವತಃ ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರೇ ಹೇಳಿದ್ದಾರೆ.
ಜೆಡಿಎಸ್ ಗೆ ಕಾಂಗ್ರೆಸ್ ಅನ್ಯಾಯ
ಕಾಂಗ್ರೆಸ್ ನಾಯಕರು ಜೆಡಿಎಸ್ ಅಭ್ಯರ್ಥಿಯನ್ನು ಗೆಲ್ಲಿಸಲೇಬಾರದು ಎಂಬ ತೀರ್ಮಾನಕ್ಕೆ ಬಂದಿದ್ದಲ್ಲದೆ, ಜೆಡಿಎಸ್ ಶಾಸಕರನ್ನೇ ಹೈಜಾಕ್ ಮಾಡಿಸಿ ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಿಸಿದ್ದು, ಜೆಡಿಎಸ್ ಕಾಂಗ್ರೆಸ್ ಮೇಲೆ ಅದರಲ್ಲೂ ಸಿದ್ದರಾಮಯ್ಯ ಅವರ ಮೇಲೆ ಉರಿದು ಬೀಳುವಂತೆ ಮಾಡಿದ್ದು, ಇವತ್ತು ಜೆಡಿಎಸ್ ಗೆ ಆದ ಅನ್ಯಾಯವನ್ನು ಮರೆಯುವ ಮಾತೇ ಇಲ್ಲ. ಇಷ್ಟಕ್ಕೂ ಕಾಂಗ್ರೆಸ್ ಬೆಂಬಲ ನೀಡಿದ್ದರೆ ಜೆಡಿಎಸ್ಅಭ್ಯರ್ಥಿ ಸುಲಭವಾಗಿ ಗೆಲ್ಲಲು ಸಾಧ್ಯವಿತ್ತು. ಆದರೆ ಸಿದ್ದರಾಮಯ್ಯ ಮತ್ತು ದೇವೇಗೌಡರ ಕುಟುಂಬದ ನಡುವಿನ ವೈಮನಸ್ಸೇ ಇಂತಹ ಸ್ಥಿತಿಗೆ ತಂದುನಿಲ್ಲಿಸಿದೆ. ಈ ಹಿಂದೆ 2016ರಲ್ಲಿರಾಜ್ಯಸಭಾ ಚುನಾವಣೆ ನಡೆದಾಗಲೂ ಕಾಂಗ್ರೆಸ್ ಜೆಡಿಎಸ್ ಗೆ ಟಕ್ಕರ್ ನೀಡಿತ್ತು. ಈ ಬಾರಿಯೂ ಅದೇ ಪುನರಾವರ್ತನೆಯಾಗಿದ್ದು, ಜೆಡಿಎಸ್ ಮತ್ತು ಕಾಂಗ್ರೆಸ್ ಬದ್ಧ ವೈರಿಗಳಾಗಿಯೇ ಮುಂದುವರೆಯುವಂತೆ ಮಾಡಿದೆ.
ಭಿನ್ನಾಭಿಪ್ರಾಯ ಇದ್ದರೂ ಜೆಡಿಎಸ್ ನಿಷ್ಠೆ ಮೆರೆದ ಅರಸೀಕೆರೆ ಶಿವಲಿಂಗೇಗೌಡ
ಜೆಡಿಎಸ್-ಕಾಂಗ್ರೆಸ್ ಒಂದಾಗುವ ಸಾಧ್ಯತೆಯಿಲ್ಲ
ಹಾಗೆನೋಡಿದರೆಅಧಿಕಾರಕ್ಕಾಗಿ ಹಲವು ಸಂದರ್ಭಗಳಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ನಾಯಕರು ಹೊಂದಾಣಿಕೆ ಮಾಡಿಕೊಂಡು ಆಡಳಿತ ನಡೆಸಿದ್ದರೂ ಹೆಚ್ಚು ದಿನ ಅವರ ದೋಸ್ತಿ ಮುಂದುವರೆದಿಲ್ಲ. ಜತೆಗೆ ಮೇಲ್ಮಟ್ಟದಲ್ಲಿ ಜೆಡಿಎಸ್ ಮತ್ತು ಕಾಂಗ್ರೆಸ್ ದೋಸ್ತಿಯಾಗಿ ಆಡಳಿತ ನಡೆಸುತ್ತಿದ್ದರೂ ತಳಮಟ್ಟದಲ್ಲಿ ಕಾರ್ಯಕರ್ತರು ಬದ್ಧ ವೈರಿಗಳಾಗಿಯೇ ಮುಂದುವರೆದಿದ್ದರು. ಈಗಿನ ರಾಜ್ಯಸಭಾ ಚುನಾವಣೆಯಲ್ಲಿ ಆದ ಬೆಳವಣಿಗೆಯನ್ನು ಗಮನಿಸಿದರೆ ಜೆಡಿಎಸ್ ಮತ್ತುಕಾಂಗ್ರೆಸ್ ಮುಂದೆ ಯಾವತ್ತೂ ಒಂದಾಗಿ ಮುಂದುವರೆಯುವ ಸಾಧ್ಯತೆಗಳು ಕಡಿಮೆಯೇ ಎನ್ನಬೇಕು.
ಕಾಂಗ್ರೆಸ್ ಸೋಲಿಸುವ ಶಪಥ
ಬಹುಶಃ ಸಿದ್ದರಾಮಯ್ಯ ಅವರು ಮುಂದಿನ ವಿಧಾನಸಭಾ ಚುನಾವಣೆಗೆ ಜೆಡಿಎಸ್ ನ್ನು ದುರ್ಬಲಗೊಳಿಸಲೆಂದೇ ಈ ತಂತ್ರ ಹೂಡಿದ್ದಾರಾ ಎಂಬ ಸಂಶಯವೂ ಮೂಡತೊಡಗಿದೆ. ಏಕೆಂದರೆ ಅಲ್ಪಸಂಖ್ಯಾತರ ಮನವೊಲಿಕೆಗೆ ಜೆಡಿಎಸ್ ಮುಂದಾಗಿತ್ತು. ಇದು ಹೀಗೆಯೇ ಮುಂದುವರೆದರೆ ಕಾಂಗ್ರೆಸ್ ಗೆ ಮುಂದಿನ ದಿನಗಳು ಕಷ್ಟವಾಗಲಿದ್ದು, ಆದ್ದರಿಂದಲೇ ಜೆಡಿಎಸ್ ನ್ನು ಮುಗಿಸಲು ಈಗಿನಿಂದಲೇ ತಯಾರಿ ಆರಂಭಿಸಿದ್ದರಾ? ಎಂಬ ಪ್ರಶ್ನೆಗಳು ಮೂಡುತ್ತಿವೆ. ಆದರೆ ಕೈ ನಾಯಕರ ತಂತ್ರಕ್ಕೆ ದಳಪತಿಗಳು ಕೆರಳಿದ್ದು, ಮುಂದಿನ 2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಸುವ ಶಪಥ ಮಾಡಿದ್ದಾರೆ. ಮುಂದಿನ ಕೈ-ದಳಗಳ ಹೋರಾಟ ಹೇಗಿರಲಿದೆ ಎಂಬುದನ್ನು ಕಾದು ನೋಡಬೇಕಾಗಿದೆ.
(ಒನ್ಇಂಡಿಯಾ ಸುದ್ದಿ)
Recommended Video