ಉಪಚುನಾವಣೆ: ಐದು ಕ್ಷೇತ್ರಗಳ ಮೇಲಷ್ಟೆ ಜೆಡಿಎಸ್ ಕಣ್ಣು
ಬೆಂಗಳೂರು, ಅಕ್ಟೋಬರ್ 03: ಹದಿನೈದು ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆ ಆಗಿದೆ. ಆದರೆ ಜೆಡಿಎಸ್ ಕೇವಲ ಐದು ಕ್ಷೇತ್ರಗಳ ಮೇಲಷ್ಟೆ ಹೆಚ್ಚಿನ ಆಸಕ್ತಿ ವಹಿಸಿ ಚುನಾವಣೆ ಎದುರಿಸಲು ನಿಶ್ಚಯಿಸಿದೆ.
ಜೆಡಿಎಸ್ ಪಕ್ಷವು ಎಲ್ಲ ಹದಿನೈದು ಕ್ಷೇತ್ರದಲ್ಲಿ ಚುನಾವಣೆಗೆ ಸ್ಪರ್ಧೆ ಮಾಡುತ್ತದೆಯಾದರೂ ಅದರ ಮುಖ್ಯ ಗುರಿ ಐದು ಕ್ಷೇತ್ರಗಳನ್ನು ಗೆಲ್ಲವುದೇ ಆಗಿದೆ. ಈ ಬಗ್ಗೆ ದೇವೇಗೌಡ ಸೇರಿದಂತೆ ಪಕ್ಷದ ಪ್ರಮುಖರು ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ.
ತಮ್ಮ ಪಕ್ಷದ ಟಿಕೆಟ್ನಿಂದ ಗೆದ್ದು ಪಕ್ಷಕ್ಕೆ ದ್ರೋಹ ಬಗೆದಿರುವ ಎಚ್.ವಿಶ್ವನಾಥ್, ನಾರಾಯಣಗೌಡ ಮತ್ತು ಗೋಪಾಲಯ್ಯ ಅವರ ಕ್ಷೇತ್ರಗಳಾದ ಹುಣಸೂರು, ಕೆ.ಆರ್.ಪೇಟೆ ಮತ್ತು ಮಹಾಲಕ್ಷ್ಮಿ ಲೇವೌಟ್ ಕ್ಷೇತ್ರಗಳ ಮೇಲೆ ಜೆಡಿಎಸ್ ಹೆಚ್ಚಿನ ಗಮನ ವಹಿಸಿದೆ. ಈ ಮೂರು ಕ್ಷೇತ್ರಗಳನ್ನು ಹೇಗಾದರೂ ಸರಿ ಗೆಲ್ಲಲೇ ಬೇಕೆಂದು ಸ್ವತಃ ದೇವೇಗೌಡ ಅವರೇ ಆಸಕ್ತಿವಹಿಸಿದ್ದಾರೆ.
ಉಪ ಚುನಾವಣೆ ದಿನ ಮರುನಿಗದಿ: ಡಿ. 5ಕ್ಕೆ ಚುನಾವಣೆ
ಈ ಮೂರು ಕ್ಷೇತ್ರಗಳನ್ನು ಹೊರತುಪಡಿಸಿದರೆ ಯಶವಂತಪುರ ಮತ್ತು ಚಿಕ್ಕಬಳ್ಳಾಪುರ ಕ್ಷೇತ್ರಗಳ ಮೇಲೂ ಜೆಡಿಎಸ್ ಕಣ್ಣಿಟ್ಟಿದೆ. ಈ ಎರಡೂ ಕ್ಷೇತ್ರದಲ್ಲಿ ಜೆಡಿಎಸ್ಗೆ ನೆಲೆ ಇರುವ ಕಾರಣ ಜೆಡಿಎಸ್ ಪಕ್ಷವು ಈ ಎರಡು ಕ್ಷೇತ್ರಗಳ ಬಗ್ಗೆ ಆಸಕ್ತಿವಹಿಸಿದೆ.
ಜೆಡಿಎಸ್ಗೆ ನೆಲೆ ಇಲ್ಲದ ಭಾಗ ಕಡೆಗಣನೆ
ಉತ್ತರ ಕರ್ನಾಟಕ ಭಾಗ ಮತ್ತು ಕರಾವಳಿಯ ಕ್ಷೇತ್ರಗಳ ಬಗ್ಗೆ ಜೆಡಿಎಸ್ ಹೆಚ್ಚೇನು ಆಸಕ್ತಿ ತೋರುತ್ತಿಲ್ಲ. ಅಲ್ಲಿ ಜೆಡಿಎಸ್ಗೆ ಹೆಚ್ಚಿನ ನೆಲೆ ಇಲ್ಲದ ಕಾರಣ, ಕೇವಲ ನಾಮ್ಕೇ ವಾಸ್ತೆ ಅಷ್ಟೆ ಚುನಾವಣೆ ಸ್ಪರ್ಧಿಸಿ 'ನಾವೂ ಇದ್ದೇವೆ' ಎಂಬ ಸಂದೇಶ ದಾಟಿಸುವ ಪ್ರಯತ್ನವನ್ನಷ್ಟೆ ಮಾಡಲಿದೆ.
ಸಣ್ಣ ಗುರಿಯ ಮೇಲೆ ಪರಿಣಾಮಕಾರಿ ಕಾರ್ಯ
ಸಣ್ಣ ಗುರಿ ಹೊಂದುವ ಜೆಡಿಎಸ್ನ ತಂತ್ರ ಪರಿಣಾಮಕಾರಿಯಾಗಿದ್ದೆ ಎನ್ನಲಾಗಿದೆ. ಸೀಮಿತ ಗುರಿ ಇಟ್ಟುಕೊಂಡು ಅದರ ಈಡೇರಿಕೆಗೆ ಪೂರ್ಣ ಶಕ್ತಿ ವ್ಯಯಿಸಿದಲ್ಲಿ ಹೆಚ್ಚಿನ ಫಲ ದೊರಕುವ ಸಾಧ್ಯತೆ ಇದೆ.
ಹೊಸಕೋಟೆ ಉಪ ಚುನಾವಣೆ; ಕಾಂಗ್ರೆಸ್ ಅಭ್ಯರ್ಥಿ ಅಂತಿಮ?
ಉತ್ತರ ಕರ್ನಾಟಕದಲ್ಲಿ ಸಂಪನ್ಮೂಲ ವ್ಯಯ ಇಲ್ಲ
ನೆಲೆ ಇಲ್ಲದ ಉತ್ತರ ಕರ್ನಾಟಕ ಭಾಗದಲ್ಲಿ ವೃಥಾ ಶಕ್ತಿ ಮತ್ತು ಸಂಪನ್ಮೂಲವನ್ನು ವ್ಯಯ ಮಾಡುವುದಕ್ಕಿಂತಲೂ ಸಂಘಟನೆ ಇರುವ ದಕ್ಷಿಣದ ಕೆಲವು ಕ್ಷೇತ್ರಗಳ ಮೇಲೆ ನಿಗಾವಹಿಸಿ ಗೆಲ್ಲುವುದು ಸೂಕ್ತವೆಂಬುದು ಜೆಡಿಎಸ್ ವರಿಷ್ಠರ ಲೆಕ್ಕಾಚಾರ.
ಕೆ.ಆರ್.ಪೇಟೆ ಉಪಚುನಾವಣೆ: ಇಕ್ಕಟ್ಟಿಗೆ ಸಿಲುಕಿದ ಸುಮಲತಾ
ಡಿಸೆಂಬರ್ 5 ರಂದು ಮತದಾನ
ಹದಿನೈದು ವಿಧಾನಸಭಾ ಕ್ಷೇತ್ರಗಳಿಗೆ ಡಿಸೆಂಬರ್ 5 ರಂದು ಮತದಾನ ನಡೆಯಲಿದ್ದು, ಡಿಸೆಂಬರ್ 9 ರಂದು ಫಲಿತಾಂಶ ಪ್ರಕಟವಾಗಲಿದೆ. ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಮೂರೂ ಪಕ್ಷಗಳಿಗೆ ಈ ಉಪಚುನಾವಣೆ ಅತ್ಯಂತ ಮಹತ್ವದ್ದಾಗಿದೆ.