ಮುಗಿಯದ ಕಾಂಗ್ರೆಸ್ - ಜೆಡಿಎಸ್ ಸಂಪುಟ ರಚನೆಯ ಸರ್ಕಸ್
ಬೆಂಗಳೂರು, ಮೇ 26: ರಾಜ್ಯದಲ್ಲಿ ಮೈತ್ರಿ ಸರಕಾರ ರಚನೆ ಮಾಡಿಕೊಂಡಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ನ ಸಂಪುಟ ರಚನೆಯ ಸರ್ಕಸ್ ಮಾತ್ರ ಮುಗಿದಿಲ್ಲ. 22 ಸಚಿವ ಸ್ಥಾನಗಳು ಕಾಂಗ್ರೆಸಿಗೆ, 12 ಜೆಡಿಎಸ್ ಗೆ ಎಂದು ನಿಗದಿಯಾಗಿದ್ದರೂ ಪ್ರಮುಖ ಖಾತೆಗಳು ಯಾರಿಗೆ ಎನ್ನುವುದು ಇನ್ನೂ ನಿರ್ಧಾರವಾಗಿಲ್ಲ.
ಹಣಕಾಸು, ಲೋಕೋಪಯೋಗಿ, ಸಮಾಜ ಕಲ್ಯಾಣ, ಗೃಹ, ಇಂಧನದಂಥ ಪ್ರಮುಖ ಖಾತೆಗಳಿಗೆ ಎರಡೂ ಪಕ್ಷದ ನಾಯಕರು ಪಟ್ಟು ಹಿಡಿದಿದ್ದು ಸಂಪುಟ ರಚನೆ ಕಗ್ಗಂಟಾಗಿದೆ.
ಎಚ್.ಡಿ.ಕುಮಾರಸ್ವಾಮಿ ಸಂಪುಟ ಸೇರುವ ಜೆಡಿಎಸ್ ಶಾಸಕರ ಪಟ್ಟಿ
ಏತನ್ಮಧ್ಯೆ ಕಾಂಗ್ರೆಸ್ ಮತ್ತು ಜೆಡಿಎಸ್ ನ ಸಚಿವಾಕಾಂಕ್ಷಿಗಳು ತಮ್ಮ ನಾಯಕರ ಮನೆ ಸುತ್ತುತ್ತಿದ್ದಾರೆ. ಮೇಲುಕೋಟೆ ಶಾಸಕ ಸಿ.ಎಸ್. ಪುಟ್ಟರಾಜು ಜೆ.ಪಿ. ನಗರದಲ್ಲಿರುವ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿಯವರ ನಿವಾಸಕ್ಕೆ ಇಂದು ತೆರಳಿ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ, "ನಾನೇನು ಸನ್ಯಾಸಿಯಲ್ಲ. ಸಚಿವ ಸ್ಥಾನ ನೀಡಿದರೆ ನಿಭಾಯಿಸುತ್ತೇನೆ," ಎಂದು ಹೇಳಿಕೆ ನೀಡಿದರು.
ಇನ್ನು ಸೊರಬದಲ್ಲಿ ಸೋತಿರುವ ಜೆಡಿಎಸ್ ಮುಖಂಡ ಮಧು ಬಂಗಾರಪ್ಪ ಕೂಡು ಇಂದು ಸಿಎಂ ನಿವಾಸಕ್ಕೆ ತೆರಳಿ ಚರ್ಚೆ ನಡೆಸಿದರು. ಅವರು ಸಚಿವ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದಾರಾ? ಮೇಲ್ಮನೆ ಪ್ರವೇಶಿಸುವ ಬಗ್ಗೆ ಚರ್ಚೆ ನಡೆಸಿದ್ದಾರಾ ಎಂಬುದರ ಬಗ್ಗೆ ಮಾಹಿತಿ ಸಿಕ್ಕಿಲ್ಲ.
ಜೆಡಿಎಸ್ ಪಾಳಯದಲ್ಲಿ ಈ ರೀತಿಯ ಬೆಳವಣಿಗೆಗಳು ನಡೆಯುತ್ತಿದ್ದರೆ, ಅತ್ತ ಎಐಸಿಸಿ ಪ್ರಧಾನ ಕಾರ್ಯದರ್ಶಿ ಸತೀಶ್ ಜಾರಕಿಹೊಳಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಭೇಟಿಯಾಗಿ ಮಾತುಕತೆ ನಡೆಸಿದರು. ಅವರೂ ಸಚಿವ ಸ್ಥಾನದ ಸಂಬಂಧ ಚರ್ಚೆ ನಡೆಸಿರುವ ಸಾಧ್ಯತೆ ಇದೆ.
ಮೈತ್ರಿ ಸರ್ಕಾರಕ್ಕೆ ಮೊದಲ ವಿಘ್ನ!? ಪರಮೇಶ್ವರ್ ಮಾತಿನ ಅರ್ಥವೇನು?
ಕಾಂಗ್ರೆಸ್-ಜೆಡಿಎಸ್ ನಾಯಕರ ಭೇಟಿ
ಸಚಿವ ಸಂಪುಟ ರಚನೆ ಸಂಬಂಧ ಇಂದು ರೇಸ್ ಕೋರ್ಟ್ ರಸ್ತೆಯಲ್ಲಿರುವ ಖಾಸಗಿ ಹೋಟೆಲ್ ನಲ್ಲಿ ಕಾಂಗ್ರೆಸ್ ನಾಯಕರು ಮತ್ತು ಸಿಎಂ ಕುಮಾರಸ್ವಾಮಿ ಒಳಗೊಂಡಂತೆ ಜೆಡಿಎಸ್ ನಾಯಕರು ಸಭೆ ನಡೆಸುತ್ತಿದ್ದಾರೆ. ನಂತರ ಕಾಂಗ್ರೆಸ್ ನಾಯಕರು ದೆಹಲಿಗೆ ತೆರಳಲಿದ್ದಾರೆ.
'ಕಾಂಗ್ರೆಸ್ ನಾಯಕರು ಮಾತ್ರ ದೆಹಲಿಗೆ ಹೋಗುತ್ತಿದ್ದಾರೆ' ಎಂದು ಸಿಎಂ ಕುಮಾರಸ್ವಾಮಿ ಜೆಪಿ ನಗರದ ನಿವಾಸದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಈ ಹಿಂದೆ ಕುಮಾರಸ್ವಾಮಿ ಮತ್ತು ಪರಮೇಶ್ವರ್ ದೆಹಲಿಗೆ ತೆರಳುತ್ತಾರೆಂದು ಹೇಳಲಾಗಿತ್ತು.
ಆದರೆ ಈಗ ಸಿದ್ದರಾಮಯ್ಯ, ಪರಮೇಶ್ವರ್ ಹಾಗೂ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ದೆಹಲಿಗೆ ತೆರಳಿ ಸಂಪುಟ ವಿಸ್ತರಣೆ ಸಂಬಂಧ ಹೈಕಮಾಂಡ್ ಜೊತೆ ಚರ್ಚೆ ನಡೆಸಲಿದ್ದಾರೆ.