ಪರಿಷತ್ ಸಭಾಪತಿ ಸ್ಥಾನಕ್ಕಾಗಿ ಕಾಂಗ್ರೆಸ್-ಜೆಡಿಎಸ್ ಹಗ್ಗಜಗ್ಗಾಟ!
ಬೆಂಗಳೂರು, ಜೂನ್ 22 : ಸಚಿವ ಸಂಪುಟ ರಚನೆ ಬಳಿಕ ವಿಧಾನಪರಿಷತ್ ಸಭಾಪತಿ ವಿಚಾರದಲ್ಲಿ ಕಾಂಗ್ರೆಸ್-ಜೆಡಿಎಸ್ ನಡುವೆ ಜಟಾಪಟಿ ಆರಂಭವಾಗಿದೆ. ಬಸವರಾಜ ಹೊರಟ್ಟಿ ಅವರನ್ನು ಸ್ಪೀಕರ್ ಮಾಡುವುದು ಜೆಡಿಎಸ್ ಲೆಕ್ಕಾಚಾರ. ಆದರೆ, ಕಾಂಗ್ರೆಸ್ ಇದಕ್ಕೆ ಒಪ್ಪಿಗೆ ನೀಡುತ್ತಿಲ್ಲ.
ವಿಧಾನಪರಿಷತ್ ಸಭಾಪತಿಯಾಗಿದ್ದ ಡಿ.ಎಚ್.ಶಂಕರಮೂರ್ತಿ ಅವರು ಗುರುವಾರ ನಿವೃತ್ತರಾಗಿದ್ದಾರೆ. ರಾಜ್ಯಪಾಲ ವಜುಭಾಯಿ ವಾಲಾ ಅವರು ಬಸವರಾಜ ಹೊರಟ್ಟಿ ಅವರನ್ನು ಹಂಗಾಮಿ ಸಭಾಪತಿಯಾಗಿ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.
ಚಿಂತಕರ ಚಾವಡಿ ಬಿಟ್ಟು ಹೊರಟ ಡಿ.ಎಚ್.ಶಂಕರಮೂರ್ತಿ!
ಮುಂದಿನ ಅಧಿವೇಶನ ಆರಂಭವಾದಾಗ ನೂತನ ಸಭಾಪತಿ ಆಯ್ಕೆ ನಡೆಯಲಿದೆ. ಸಭಾಪತಿ ಸ್ಥಾನಕ್ಕಾಗಿ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವೆ ಪೈಪೋಟಿ ನಡೆದಿದೆ. ಕಾಂಗ್ರೆಸ್ ಹೆಚ್ಚು ಸದಸ್ಯ ಬಲವನ್ನು ಹೊಂದಿದ್ದು, ಸಭಾಪತಿ ಸ್ಥಾನಕ್ಕಾಗಿ ಬೇಡಿಕೆ ಇಟ್ಟಿದೆ. ಆದರೆ, ಜೆಡಿಎಸ್ ಇದಕ್ಕೆ ಒಪ್ಪಿಗೆ ನೀಡುತ್ತಿಲ್ಲ.
ಪರಿಷತ್ತಿಗೆ ಒಟ್ಟಿಗೆ ಆಯ್ಕೆಯಾಗಿ ಇತಿಹಾಸ ಬರೆದ ಸಹೋದರರು!
ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಮತ್ತು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಬಸವರಾಜ ಹೊರಟ್ಟಿ ಅವರಿಗೆ ಸಭಾಪತಿಯಾಗಲು ಸೂಚಿಸಿದ್ದಾರೆ. ಅದಕ್ಕೆ ಅವರು ಸಹ ಒಪ್ಪಿಗೆ ನೀಡಿದ್ದರು. ಆದರೆ, ಕಾಂಗ್ರೆಸ್ನಿಂದ ಇನ್ನೂ ಬೆಂಬಲ ಸಿಕ್ಕಿಲ್ಲ. ಹಾಗಾಗಿ ಸ್ಪೀಕರ್ ಯಾರು? ಎಂಬುದು ಕುತೂಹಲದ ಪ್ರಶ್ನೆಯಾಗಿದೆ.
ಸಂಪುಟ ರಚನೆ ಬಳಿಕ ಮತ್ತೊಂದು ಸಮಸ್ಯೆ
ಸಚಿವ ಸಂಪುಟ ರಚನೆ ಬಳಿಕ ಕಾಂಗ್ರೆಸ್-ಜೆಡಿಎಸ್ ಮೈತ್ರಿಯಲ್ಲಿ ಮತ್ತೊಂದು ಹಗ್ಗಜಗ್ಗಾಟ ಆರಂಭವಾಗಿದೆ. ವಿಧಾನಪರಿಷತ್ ಸಭಾಪತಿ ಯಾರಾಗಬೇಕು? ಎಂದು ಎರಡೂ ಪಕ್ಷದಲ್ಲಿ ಚರ್ಚೆಗಳು ಆರಂಭವಾಗಿದೆ. ಜೆಡಿಎಸ್ ತಮಗೆ ಸಭಾಪತಿ ಪಟ್ಟಬೇಕು ಎಂದು ಬೇಡಿಕೆ ಇಟ್ಟಿದೆ. ಆದರೆ, ಕಾಂಗ್ರೆಸ್ ಇದಕ್ಕೆ ಒಪ್ಪಿಗೆ ಸಿಕ್ಕಿಲ್ಲ.
ಜೆಡಿಎಸ್ನಿಂದ ಬಸವರಾಜ ಹೊರಟ್ಟಿ ಅವರ ಹೆಸರು ಕೇಳಿಬರುತ್ತಿದೆ. ಬೋಸರಾಜು, ಪ್ರತಾಪ್ ಚಂದ್ರಶೆಟ್ಟಿ, ಕೆ.ಸಿ.ಕೊಂಡಯ್ಯ, ವಿ.ಎಸ್.ಉಗ್ರಪ್ಪ, ಎಸ್.ಆರ್.ಪಾಟೀಲ್ ಅವರ ಹೆಸರು ಕೇಳಿಬರುತ್ತಿದೆ. ಯಾರು ಸಭಾಪತಿಯಾಗಲಿದ್ದಾರೆ?. ಕಾದು ನೋಡಬೇಕು.
ಪರಿಷತ್ ಸದಸ್ಯ ಬಲ
ಕಾಂಗ್ರೆಸ್ ವಿಧಾನಪರಿಷತ್ತಿನಲ್ಲಿ ಹೆಚ್ಚಿನ ಸದಸ್ಯ ಬಲ ಹೊಂದಿದೆ. ಆದ್ದರಿಂದ, ಸಭಾಪತಿ ಸ್ಥಾನ ನಮಗೆ ಬೇಕು ಎಂದು ಬೇಡಿಕೆ ಇಟ್ಟಿದೆ. ಸಚಿವ ಸ್ಥಾನ ವಂಚಿತರಾದ ಹಿರಿಯ ನಾಯಕರನ್ನು ಸಭಾಪತಿಗಳಾಗಿ ಮಾಡಿ, ಅಸಮಾಧಾನ ಶಮನಗೊಳಿಸುವುದು ಕಾಂಗ್ರೆಸ್ನ ತಂತ್ರವಾಗಿದೆ.
ವಿಧಾನಪರಿಷತ್ತಿನ ಸದಸ್ಯ ಬಲ 75. ಸದ್ಯ ಕಾಂಗ್ರೆಸ್ನ 34, ಬಿಜೆಪಿಯ 20, ಜೆಡಿಎಸ್ನ 14 ಮತ್ತು 2 ಪಕ್ಷೇತರ ಸದಸ್ಯರಿದ್ದಾರೆ. ಐದು ಸ್ಥಾನಗಳು ಖಾಲಿ ಇವೆ. ಹೆಚ್ಚಿನ ಸದಸ್ಯರು ಇರುವ ಕಾರಣ ಕಾಂಗ್ರೆಸ್ ಬೇಡಿಕೆ ಮುಂದಿಡುತ್ತಿದೆ.
ಬಸವರಾಜ ಹೊರಟ್ಟಿ ಹೇಳಿದ್ದೇನು?
'ಎಚ್.ಡಿ.ದೇವೇಗೌಡ ಮತ್ತು ಎಚ್.ಡಿ.ಕುಮಾರಸ್ವಾಮಿ ಅವರು ನನಗೆ ಸಭಾಪತಿ ಸ್ಥಾನ ವಹಿಸಿಕೊಳ್ಳುವುವಂತೆ ಸೂಚಿಸಿದ್ದಾರೆ. ಇದಕ್ಕೆ ನಾನು ಒಪ್ಪಿಗೆ ಸೂಚಿಸಿದ್ದೇನೆ. ದೇವೇಗೌಡರನ್ನು ಭೇಟಿಯಾದಾಗಲೂ ಸಚಿವ ಸ್ಥಾನ ನೀಡದಿರುವುದಕ್ಕೆ ವಿಷಾದ ವ್ಯಕ್ತಪಡಿಸಿದರು. ನೀವು ಹಿರಿಯ ನಾಯಕರು ಸಭಾಪತಿ ಸ್ಥಾನ ವಹಿಸಿಕೊಳ್ಳವಂತೆ ಸೂಚಿಸಿದರು' ಎಂದು ಬಸವರಾಜ ಹೊರಟ್ಟಿ ಹೇಳಿದ್ದಾರೆ.
ಪರಿಷತ್ ಸಭಾಪತಿ ಡಿ.ಎಚ್.ಶಂಕರಮೂರ್ತಿ ಅವರು ಗುರುವಾರ ನಿವೃತ್ತರಾಗಿದ್ದಾರೆ. ರಾಜ್ಯಪಾಲ ವಜುಭಾಯಿ ವಾಲಾ ಅವರು ಬಸವರಾಜ ಹೊರಟ್ಟಿ ಅವರನ್ನು ಹಂಗಾಮಿ ಸಭಾಪತಿಯಾಗಿ ನೇಮಿಸಿದ್ದಾರೆ.
ಎಸ್.ಆರ್.ಪಾಟೀಲ್ ಪರ ಬ್ಯಾಟಿಂಗ್
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಸ್.ಆರ್.ಪಾಟೀಲ್ ಪರವಾಗಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಎಸ್.ಆರ್.ಪಾಟೀಲ್ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದರು. ಆದರೆ, ಪರಿಷತ್ತಿನಿಂದ ಡಾ.ಜಯಮಾಲಾ ಅವರು ಮಾತ್ರ ಸಚಿವರಾಗಿದ್ದಾರೆ. ಬಾದಾಮಿಯಲ್ಲಿ ತಮ್ಮನ್ನು ಗೆಲ್ಲಿಸಿದ ಎಸ್.ಆರ್.ಪಾಟೀಲ್ ಅವರನ್ನು ಸಭಾಪತಿ ಮಾಡಬೇಕು ಎಂಬುದು ಸಿದ್ದರಾಮಯ್ಯ ಲೆಕ್ಕಾಚಾರವಾಗಿದೆ.