ಕೈ ಪಡೆ ಸೇರಲು 'ಸಿದ್ದು' ಸಂಪರ್ಕದಲ್ಲಿ ಇರೋ ಬಿಜೆಪಿ ಲೀಡರ್ಸ್ ಯಾರು?
ಬೆಂಗಳೂರು, ಜೂ. 16: ರಾಜ್ಯದಲ್ಲಿ ಆಡಳಿತ ರೂಢ ಬಿಜೆಪಿ ವಿರೋಧಿ ಅಲೆ ಹಾಗೂ ಕಾಂಗ್ರೆಸ್ ವರ್ಚಸ್ಸು ಬೆಳೆಯುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ನ ಕೆಲವು ನಾಯಕರು ಕೈ ಪಡೆ ಸೇರಲು ಸಿದ್ದರಾಮಯ್ಯ ಕದ ತಟ್ಟಿದ್ದಾರಂತೆ! ಸ್ವತಃ ಸಿದ್ಧರಾಮ್ಯ ಅವರೇ ಈ ವಿಷಯವನ್ನು ಒಪ್ಪಿಕೊಂಡಿದ್ದಾರೆ.
ಪದವೀಧರರ ಕ್ಷೇತ್ರಗಳ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಜಯಭೇರಿ ಭಾರಿಸಿದ ಹಿನ್ನೆಲೆಯಲ್ಲಿ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಮಾತನಾಡಿದರು.
ಮುಂದಿನ ವಿಧಾನಸಭಾ ಕ್ಷೇತ್ರದ ಚುನಾವಣೆಯಲ್ಲಿ ವಿವಿಧ ಕ್ಷೇತ್ರಗಳಿಂದ ಸ್ಪರ್ಧಿಸಲು ಆಹ್ವಾನ ಬಂದಿದೆ ಎಂಬ ವಿಚಾರ ಪ್ರಸ್ತಾಪಿಸಿದ ಸಿದ್ದರಾಮಯ್ಯ, ಕೋಲಾರ, ಬಾದಾಮಿ, ಕೊಪ್ಪಳ, ವರುಣಾ, ಚಾಮರಾಜಪೇಟೆ ಈ ಎಲ್ಲಾ ಕಡೆ ನನಗೆ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಕರೆಯುತ್ತಿದ್ದಾರೆ. ಹತ್ತಾರು ಕಡೆ ಜನ ಕರೆಯುತ್ತಿದ್ದಾರೆ ಎಂದರೆ ನಾನು ಗೆಲ್ಲುತ್ತೇನೆ ಎಂದೇ ತಾನೇ ಕರೆಯುತ್ತಿರೋದು ಎಂದು ತಿಳಿಸಿದರು.
ಕಾಲು ಎಳೆಯುವವರು ರಾಜಕೀಯದಲ್ಲಿ ಇದ್ದೇ ಇರುತ್ತಾರೆ. ನಮ್ಮ ಪಕ್ಷದಲ್ಲಿ ಯಾರೂ ಈ ತರದವರು ಇಲ್ಲ, ಯಾರನ್ನು ಕಂಡರೆ ಭಯ ಇರುತ್ತೆ ಅಂತವರ ಕಾಲೆಳೆಯೋಕೆ ಅಂತಲೇ ಪ್ರಯತ್ನ ಮಾಡುತ್ತಾರೆ. ನನ್ನ ರಾಜಕೀಯ ಕಂಡು ಹೊಟ್ಟೆಕಿಚ್ಚು ಪಡುವವರು ಮಾತ್ರ ಈ ರೀತಿ ಮಾಡುತ್ತಾರೆ. ನಮ್ಮ ಪಕ್ಷದಲ್ಲಿ ಎಲ್ಲರೂ ಅಭಿಮಾನದಿಂದ ಕಾಣ್ತಾರೆ, ಎಲ್ಲರೂ ನನ್ನನ್ನು ಪ್ರೀತಿಸುತ್ತಾರೆ. ನಮ್ಮ ಪಕ್ಷದಲ್ಲಿ ಯಾರೂ ನನ್ನ ವಿರೋಧಿಗಳಿಲ್ಲ. ಜೆಪಿಯವರಂತೆ ನಮ್ಮ ಪಕ್ಷದವರು ಮಾತನಾಡಲ್ಲ ಎಂದು ನಾನು ಈ ಹಿಂದೆ ಹೇಳಿದ್ದೆ. ನಾನು ಏನಾದ್ರೂ ಮಾತನಾಡಿದ್ರೆ ಇಪ್ಪತ್ತು ಜನ ಬಿಜೆಪಿಯವರು ನನ್ನ ಮೇಲೆ ಬರ್ತಾರೆ. ಈ ರೀತಿ ನಮ್ಮವರು ಮಾತನಾಡಲ್ಲ ಎಂದು ಹೇಳಿದ್ದೆ ಅಷ್ಟೆ. ಬಿಜೆಪಿ ಅವರು ಸುಳ್ಳು ಹೇಳೋದರಲ್ಲಿ ಮೊದಲಿಗರು ಎಂದರು.
ಸಂಪರ್ಕದಲ್ಲಿರೋದು ನಿಜ
ಬಿಜೆಪಿ ಮತ್ತು ಜೆಡಿಎಸ್ ನವರು ನನ್ನ ಸಂಪರ್ಕದಲ್ಲಿರೋದು ನಿಜ. ಆದರೆ ಅದನ್ನು ಈಗಾಗಲೇ ಹೇಳೋಕ ಅಗೋದಿಲ್ಲ. ಮುಂದೆ ಸಮಯ ಬಂದಾಗ ಹೇಳುತ್ತೇನೆ ಎಂದು ಹೇಳುವ ಮೂಲಕ ಯಾರು ಸಿದ್ದು ಪಡೆ ಸೇರುತ್ತಾರೆ ಎನ್ನುವ ಗುಟ್ಟು ಮಾತ್ರ ಬಿಟ್ಟು ಕೊಟ್ಟಿಲ್ಲ. ಆದರೆ ಸದ್ಯ ಕಾಂಗ್ರೆಸ್ ಪಾಳದಲ್ಲಿರುವ ಮಾಹಿತಿ ಪ್ರಕಾರ, ಯಡಿಯೂರಪ್ಪ ಸರ್ಕಾರ ರಚನೆಗೆ ಸಹಾಯ ನೀಡಿದ್ದ ಕಾಂಗ್ರೆಸ್ ನ ಕೆಲವು ನಾಯಕರು ವಾಪಸು ಕಾಂಗ್ರೆಸ್ ಬರಲಿದ್ದಾರೆ ಎಂದು ಹೇಳಲಾಗುತ್ತಿದೆ. ಇದರ ಜತೆಗೆ ಜೆಡಿಎಸ್ ನ ಜಿ. ಟಿ. ದೇವೇಗೌಡ, ಗುಬ್ಬಿ ಶಾಸಕ ಎಸ್.ಆರ್ ಶ್ರೀನಿವಾಸ್, ಅರಸೀಕೆರೆ ಶಾಸಕ ಶಿವಲಿಂಗೇಗೌಡ, ಕೋಲಾರ ಶ್ರೀನಿವಾಸಗೌಡ ಸೇರಿದಂತೆ ಜೆಡಿಎಸ್ ನ ಹಲವು ನಾಯಕರು ಕೈ ಪಕ್ಷ ಸೇರಲಿದ್ದಾರೆ ಎಂದು ಹೇಳಲಾಗುತ್ತಿದೆ.
ಸದ್ಯದ ಪರಿಸ್ಥಿತಿಯಲ್ಲಿ ಸಿದ್ದು ಅವರ ರಾಜಕೀಯ ತಂತ್ರಗಳು ದೇವೇಗೌಡರ ತಂತ್ರವನ್ನೇ ಮೀರಿಸುತ್ತಿವೆ. ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದ ವರ್ಚಸ್ಸು ಹೆಚ್ಚಿಸಿರುವುದರಲ್ಲಿ ಎರಡು ಮಾತಿಲ್ಲ. ಮಿ. ಕ್ಲೀನ್ ಇಮೇಜ್ ಹೊಂದಿರುವ ಸಿದ್ದು ಬಿಜೆಪಿಯನ್ನು ಅಣಕಿಸಿ ಹೊಡೆಯುವ ಡೈಲಾಗ್ ಗಳು ಅಂತೂ ಜನ ಮಾನಸದಿಂದ ದೂರವೇ ಆಗಿಲ್ಲ. ಇನ್ನು ಹಿಜಾಬ್, ಪಠ್ಯ ಪುಸ್ತಕ, ಮೇಕೆದಾಟು ಹೋರಾಟದಲ್ಲಿ ಸಿದ್ದು ನಿರ್ವಹಿಸಿದ ರೋಲ್ ಅವರ ನಾಯಕತ್ವವನ್ನು ಮತ್ತಷ್ಟು ಗಟ್ಟಿಗೊಳಸಿದೆ. ಸಿದ್ದರಾಮಯ್ಯ ಅವರಿಗೆ ರಾಜಕೀಯ ನಾಯಕರ ಅಭಿಮಾನಿ ಬಳಗವೇ ಸೃಷ್ಟಿಯಾಗುತ್ತಿದ್ದು, ಮುಂದಿನ ಚುನಾವಣೆ ವೇಳೆಗೆ ಬಿಜೆಪಿ ಮತ್ತು ಜೆಡಿಎಸ್ ನ ಗೆಲ್ಲುವ ಕುದುರೆಗಳು ಸಿದ್ದು ಬಣ ಸೇರವುದರಲ್ಲಿ ಅನುಮಾನವೇ ಇಲ್ಲ. ಇದು ಎದುರಾಳಿ ಪಕ್ಷಗಳಿಗೂ ಕಾಂಗ್ರೆಸ್ ಪಕ್ಷದ ಆಂತರಿಕ ಶತೃಗಳಿಗೆ ಮಂದಿನ ದಿನಗಳಲ್ಲಿ ನಡುಕ ಹುಟ್ಟಿಸಿದರೂ ಅಚ್ಚರಿ ಪಡುವಂತಿಲ್ಲ.
ಬಿಜೆಪಿಯಿಂದ ಪ್ರಜಾಪ್ರಭುತ್ವ ನೇಣು:
ರಾಜಕೀಯ ದ್ವೇಷದಿಂದ ಸುಳ್ಳು ಮೊಕದ್ದಮೆ ಹಾಕಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರಿಗೆ ಕಿರುಕುಳ ನೀಡುತ್ತಿದ್ದಾರೆ, ಪ್ರಜಾಪ್ರಭುತ್ವಕ್ಕೆ ನೇಣು ಹಾಕುತ್ತಿದ್ದಾರೆ. ಸಂವಿಧಾನದ ರೀತಿ ನಡೆದುಕೊಳ್ಳುತ್ತಿಲ್ಲ ಇದರ ವಿರುದ್ಧ ನಾವು ಹೋರಾಟ ಮಾಡುತ್ತಿದ್ದೇವೆ. ಇಂದು ಪ್ರಜಾಪ್ರಭುತ್ವದ ಕಗ್ಗೊಲೆ ಆಗುತ್ತಿದೆ ಎಂದು ಸಿದ್ದರಾಮಯ್ಯ ಇದೇ ವೇಳೆ ತಿಳಿಸಿದರು.