ಜೆಡಿಎಸ್ ಬಂಡಾಯ ಶಾಸಕರ ವಿಚಾರಣೆ ಪೂರ್ಣ, ತೀರ್ಪು ಕಾಯ್ದಿರಿಸಿದ ಸ್ಪೀಕರ್
ಬೆಂಗಳೂರು, ಮಾರ್ಚ್ 19 : ಜೆಡಿಎಸ್ ಪಕ್ಷದಿಂದ ಅಮಾನತುಗೊಂಡಿರುವ 7 ಶಾಸಕರ ಭವಿಷ್ಯ ಏನಾಗಲಿದೆ?. ಶಾಸಕರ ಅನರ್ಹತೆಯ ಅರ್ಜಿ ವಿಚಾರಣೆಯನ್ನು ಸ್ಪೀಕರ್ ಪೂರ್ಣಗೊಳಿಸಿದ್ದು, ತೀರ್ಪು ಕಾಯ್ದಿರಿಸಿದ್ದಾರೆ.
ಸೋಮವಾರ ಸ್ಪೀಕರ್ ಕೆ.ಬಿ.ಕೋಳಿವಾಡ ಅವರು ಶಾಸಕರನ್ನು ಅನರ್ಹಗೊಳಿಸಬೇಕು ಎಂದು ಜೆಡಿಎಸ್ ಪಕ್ಷ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನಡೆಸಿದರು. ವಿಧಾನಸೌಧದ ಸ್ಪೀಕರ್ ಕಚೇರಿಯಲ್ಲಿ ವಿಚಾರಣೆ ನಡೆಯಿತು.
ಜೆಡಿಎಸ್ ಬಂಡಾಯ ಶಾಸಕರು ಮಾ.25ರಂದು ಕಾಂಗ್ರೆಸ್ ಸೇರ್ಪಡೆ
1986ರ ಪಕ್ಷಾಂತರ ನಿಷೇಧ ಕಾಯ್ದೆಯಡಿ 7ಶಾಸಕರನ್ನು ಅನರ್ಹಗೊಳಿಸಬೇಕು ಎಂದು ಜೆಡಿಎಸ್ ಪಕ್ಷ ಮನವಿ ಮಾಡಿತ್ತು. ಈ ಅರ್ಜಿಯ ವಿಚಾರಣೆ ಇಂದು ನಡೆದಿದೆ. ಆದರೆ, ಶಾಸಕರ ಭವಿಷ್ಯ ಏನಾಗಲಿದೆ? ಎಂಬುದು ಕುತೂಹಲಕ್ಕೆ ಕಾರಣವಾಗಿದೆ.
ಶಾಸಕರ ಗೈರು : ಜಮೀರ್ ಅಹಮದ್ ಖಾನ್ (ಚಾಮರಾಜಪೇಟೆ), ಎಚ್.ಸಿ.ಬಾಲಕೃಷ್ಣ (ಮಾಗಡಿ), ಚೆಲುವರಾಯಸ್ವಾಮಿ (ನಾಗಮಂಗಲ), ಅಖಂಡ ಶ್ರೀನಿವಾಸಮೂರ್ತಿ (ಪುಲಿಕೇಶಿ ನಗರ, ಬೆಂಗಳೂರು) ಸ್ಪೀಕರ್ ಕಚೇರಿಯಲ್ಲಿ ನಡೆದ ವಿಚಾರಣೆಗೆ ಖುದ್ದಾರಿ ಹಾಜರಾಗಿದ್ದರು.
ರಮೇಶ ಬಂಡಿಸಿದ್ದೇಗೌಡ (ಶ್ರೀರಂಗಪಟ್ಟಣ), , ಇಕ್ಬಾಲ್ ಅನ್ಸಾರಿ (ಗಂಗಾವತಿ), ಶಾಸಕ ಭೀಮಾ ನಾಯಕ್ (ಹಗರಿಬೊಮ್ಮನಹಳ್ಳಿ) ಗೈರು ಹಾಜರಾಗಿದ್ದು, ವಕೀಲರ ಮೂಲಕ ವಿಚಾರಣೆ ಎದುರಿಸಿದರು.
ಮಾರ್ಚ್ 23ರಂದು ರಾಜ್ಯಸಭೆ ಚುನಾವಣೆ ನಡೆಯಲಿದೆ. ಮಾರ್ಚ್ 25ರಂದು ಬಂಡಾಯ ಶಾಸಕರು ಕಾಂಗ್ರೆಸ್ ಪಕ್ಷವನ್ನು ಸೇರಲಿದ್ದಾರೆ. ರಾಜ್ಯಸಭೆ ಚುನಾವಣೆಗೆ ಮೊದಲು ಸ್ಪೀಕರ್ ತಮ್ಮ ತೀರ್ಪನ್ನು ಪ್ರಕಟಿಸಿ, ಶಾಸಕರು ಅನರ್ಹಗೊಂಡರೆ ರಾಜ್ಯಸಭಾ ಚುನಾವಣೆಯಲ್ಲಿ ಮತದಾನ ಮಾಡುವಂತಿಲ್ಲ.