ಎರಡು ಬಾರಿ ಕಾಂಗ್ರೆಸ್ ಸೇರಲು ಮುಂದಾಗಿದ್ದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ
ಬೆಂಗಳೂರು, ಡಿ. 25: ತಮ್ಮ ರಾಜಕೀಯ ಸಂಧ್ಯಾಕಾಲದಲ್ಲಿ ಕಾಂಗ್ರೆಸ್ ಪಕ್ಷ ಬಿಟ್ಟು ತಮ್ಮ ಸೈದ್ಧಾಂತಿಕ ವಿರೋಧಿಯಾಗಿದ್ದ ಬಿಜೆಪಿ ಸೇರುವ ಮೂಲಕ ದೇಶದಲ್ಲಿ ಅಚ್ಚರಿ ಮೂಡಿಸಿದ್ದ ಮಾಜಿ ಸಿಎಂ ಎಸ್.ಎಂ. ಕೃಷ್ಣ, ಈಗ ತಮ್ಮ ಆತ್ಮಕಥನದ ಮೂಲಕ ಮತ್ತೊಮ್ಮೆ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದ್ದಾರೆ.
ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಎರಡು ಸಲ ಆಗಿನ ಜನತಾ ಪಕ್ಷ ಬಿಟ್ಟು ಕಾಂಗ್ರೆಸ್ ಪಕ್ಷ ಸೇರಲು ಮುಂದಾಗಿದ್ದರು ಎಂಬ ವಿಚಾರವನ್ನು ಮಾಜಿ ಸಿಎಂ ಎಸ್ ಎಂ ಕೃಷ್ಣ ತಮ್ಮ ಆತ್ಮಕಥನದಲ್ಲಿ ಬಹಿರಂಗಗೊಳಿಸಿದ್ದಾರೆ. ತಮ್ಮ ರಾಜಕೀಯ ಜೀವನದ ವಿವರಗಳನ್ನು ಒಳಗೊಂಡ 'ಸ್ಮೃತಿವಾಹಿನಿ' ಜೊತೆಗೆ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ 'ಭವಿಷ್ಯ ದರ್ಶನ' ಪುಸಕ್ತಗಳು 2020ರ ಜನೇವರಿ 4ರಂದು ಬಿಡುಗಡೆ ಆಗಲಿದೆ. ಇನ್ನಷ್ಟು ಪ್ರಮುಖ ರಾಜಕೀಯ ರಹಸ್ಯಗಳು 'ಸ್ಮೃತಿವಾಹಿನಿ' ಮೂಲಕ ಬಹಿರಂಗವಾಗುವ ಸಾಧ್ಯತೆಗಳಿವೆ.
ಎಸ್.ಎಂ. ಕೃಷ್ಣ ಆತ್ಮಕಥನದಲ್ಲಿ ಹೇಳಿಕೊಂಡಿರುವ ಪೂರ್ಣರೂಪ ಹೀಗಿದೆ
ದೇಶದಲ್ಲಿ ತುರ್ತು ಪರಿಸ್ಥಿತಿ ಇದ್ದಾಗ ಮೊದಲ ಸಲ ದೇವೇಗೌಡರು ಜನತಾ ಪಕ್ಷ ಬಿಟ್ಟು ಕಾಂಗ್ರೆಸ್ ಪಕ್ಷ ಸೇರಲು ಮುಂದಾಗಿದ್ದ ವಿಚಾರವನ್ನು ಸ್ವತಃ ಮಾಜಿ ಸಿಎಂ ಎಸ್.ಎಂ. ಕೃಷ್ಣ ತಮ್ಮ ಆತ್ಮಕತೆಯಲ್ಲಿ ವಿವರಿಸಿದ್ದಾರೆ. ಎಸ್.ಎಂ. ಕೃಷ್ಣಾ ಅವರು ತಮ್ಮ ಆತ್ಮಚರಿತ್ರೆಯಲ್ಲಿ ಹೇಳಿಕೊಂಡಿರುವುದು ಹೀಗಿದೆ. ತುರ್ತು ಪರಿಸ್ಥಿಯಲ್ಲಿ ರಾಮಕೃಷ್ಣ ಹೆಗಡೆಯವರು ಜೈಲಿಗೆ ಹೋಗಿದ್ದರು. ಅವರೆಂದೂ ಪೆರೋಲ್ ಮೇಲೆ ಈಚೆಗೆ ಬಂದಿರಲಿಲ್ಲ. ಅವರು ನನಗೆ ಹೇಳಿದ್ದರು. 'ಒಂದು ನೀತಿಗೋಸ್ಕರ ಜೈಲಿಗೆ ಹೋಗಿದ್ದೇನೆ. ಆ ನೀತಿ ಮುಂದುವರೆಸಿಕೊಂಡು ಜೈಲಿನಲ್ಲೇ ಇರುತ್ತೇನೆ' ಎಂದು. ವಿಧಾನ ಪರಿಷತ್ತಿನಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದ ಅವರು ಒಮ್ಮೊಮ್ಮೆ ಸದನಕ್ಕೆ ಕೂಡ ಬರುತ್ತಾ ಇದ್ದರು.
ಸಮ್ಮಿಶ್ರ ಸರ್ಕಾರ ಬೀಳಿಸುವುದರಲ್ಲಿ ನನ್ನ ಸಣ್ಣ ಪಾತ್ರ ಇತ್ತು: ಎಸ್ಎಂ ಕೃಷ್ಣ
ಆಗ ದೇವೇಗೌಡರು ಜೈಲಿನಲ್ಲಿ ಇದ್ದರು. ಒಮ್ಮೆ ಪೆರೋಲ್ ಮೇಲೆ ಹೊರಗಡೆ ಬಂದರು. ಆಗ ನಡೆದ ಒಂದು ಘಟನೆ ಈಗ ಹೇಳಬೇಕಾಗಿದೆ. ಈ ಘಟನೆಗೆ ಸಾಕ್ಷಿಯಾಗಿ ಆಗ ಅಸಿಸ್ಟಂಟ್ ಕಮಿಷನರ್ ಆಗಿದ್ದ ಶಿವರಾಂ ಇದ್ದಾರೆ. ಅವರ ಪರಿಚಯ ನನಗೆ ಚೆನ್ನಾಗಿತ್ತು. ನಾನು ಕೈಗಾರಿಕಾ ಸಚಿವನಾಗಿದ್ದಾಗ ಅವರು ನನ್ನ ಆಪ್ತಕಾರ್ಯದರ್ಶಿ ಆಗಿದ್ದರು. ಮುಂದೆ ಐ.ಎ.ಎಸ್. ಪಡೆದು ವಾರ್ತಾ ಇಲಾಖೆಯ ನಿರ್ದೇಶಕರಾಗಿ ನಿವೃತ್ತರಾದರು. ಶಿವರಾಂರವರಿಗೆ ಒಮ್ಮೆ ದೇವೇಗೌಡರು ಸಿಕ್ಕಿದ್ದರು. ನಾನು ಕೃಷ್ಣಾ ಅವರನ್ನು ನೋಡಬೇಕು. ಖಾಸಗಿಯಾಗಿ ಮಾತನಾಡಬೇಕು ಎಂದು ಕೇಳಿಕೊಂಡಿದ್ದಾರೆ. ಅದಕ್ಕೆ ಶಿವರಾಂ, 'ಸರ್ ತಾವು ಯಾವಾಗ ಬೇಕಾದರೂ ಬನ್ನಿ, ಎಂದಾಗ ನಾನು ಅವರನ್ನು ತುಂಬಾ ಖಾಸಗಿಯಾಗಿ ಮಾತನಾಡಬೇಕು ಅಂದಿದ್ದಾರೆ, ಹಗಾದರೆ ಸಚಿವರ ಮನೆಯಲ್ಲಿ ಜನಗಳಿರುತ್ತಾರೆ. ಒಂದೂವರೆಯಿಂದ ನಾಲ್ಕೂವರೆ ಗಂಟೆಯವರೆಗೆ ಯಾರೂ ಇರುವುದಿಲ್ಲ. ಎಲ್ಲಾ ಊಟಕ್ಕೆ ಹೋಗಿರುತ್ತಾರೆ. ನೀವು ಆವಾಗ ಬನ್ನಿ' ಎಂದರಂತೆ.
ನಾನು ಕಾರಲ್ಲಿ ಬರುವುದಿಲ್ಲ. ಆಟೋರಿಕ್ಷಾದಲ್ಲಿ ಬರುತ್ತೇನೆ
'ನಾನು ಕಾರಲ್ಲಿ ಬರುವುದಿಲ್ಲ. ಆಟೋರಿಕ್ಷಾದಲ್ಲಿ ಬರುತ್ತೇನೆ ಬರುತ್ತೇನೆ' ಪುನಃ ದೇವೇಗೌಡ ಅವರು ಹೇಳಿದ್ದಾರೆ. ಹಾಗೇ ಅವರು ಹೇಳಿದಂತೆ ಆಟೋರಿಕ್ಷಾದಲ್ಲಿ ನಮ್ಮ ಮನೆಗೆ ಬಂದರು. 'ಕೃಷ್ಣ, ನನಗೆ ತುಂಬಾ ಬೇಜಾರಾಗಿದೆ, ವಿರೋಧ ಪಕ್ಷದಲ್ಲಿ ಒಗ್ಗಟ್ಟಿಲ್ಲ, ಒಂದು ನೀತಿ ಇಲ್ಲ, ನಾನು ಕಾಂಗ್ರೆಸ್ಗೆ ಸೇರುವ ಮನಸ್ಸು ಮಾಡಿದ್ದೇನೆ' ಎಂದರು. ಆಗ ನಾನು ಮಾತನಾಡುತ್ತಾ 'ಗೌಡರೇ ಈಗತಾನೆ ಮುಖ್ಯಮಂತ್ರಿ ದೇವರಾಜು ಅರಸು ಮೇಲೆ ಹದಿನೆಂಟು ಗುರುತರವಾದ ಆಪಾದನೆಯನ್ನು ಮಾಡಿ ಇವುಗಳನ್ನು ನಾನು ರುಜುವಾತು ಮಾಡದೆ ಹೋದರೆ ರಾಜಕೀಯ ಸನ್ಯಾನ ತೆಗೆದುಕೊಳ್ಳುತ್ತೇವೆ ಅಂತಾ ಹೇಳಿದ್ದೀರಾ. ಈಗ ನೀವು ಕಾಂಗ್ರೆಸ್ಗೆ ಬಂದರೆ ಜನಗಳ ಮುಂದೆ ನಮ್ಮ ಘನತೆ ಏನಾಗುತ್ತದೆ, ದೇವರಾಜು ಅರಸುರವರನ್ನು ತೆಗೆದುಹಾಕಿ. ನಾವು ನಿಮ್ಮ ಜೊತೆಗೆ ಬರುತ್ತೇವೆ ಅಂಥ ನೀವು ಕಂಡೀಶನ್ ಹಾಕಿದರೆ ಅದಕ್ಕೊಂದು ಅರ್ಥವಿದೆ, ಆಗ ನೀವು ಕಾಂಗ್ರೆಸ್ ಸೇರಿದರೆ ನಿಮಗೊಂದು ಘನತೆ ಬರುತ್ತದೆಯಲ್ಲವೇ' ಎಂದೆ.
ಆಗವರು ಸ್ವಲ್ಪಹೊತ್ತು ಮೌನಿಗಳಾದರು, ಕೃಷ್ಣ 'ನೀನು ಹೇಳುವುದರಲ್ಲಿಯೂ ಸತ್ಯ ಇದೆ ನಾನು ಏಕಾಏಕಿ ದುಡುಕುವುದಿಲ್ಲ' ಎಂದರು. ಒಮ್ಮೊಮ್ಮೆ ಯಾವುದೇ ಮನುಷ್ಯನಿಗೆ ಅಸ್ಥಿರತೆ ಕಾಡುತ್ತದೆ. ಆತ್ಮವಿಶ್ವಾಸ ಕಡಿಮೆಯಾಗುತ್ತದೆ. ದೇವೇಗೌಡರಿಗೂ ಹಾಗಾಗಿರಬಹುದು. 'ಅಂಧಕಾರದಲ್ಲಿದ್ದ ವಿರೋಧಪಕ್ಷಗಳಿಗೆ ಭವಿಷ್ಯ ಇಲ್ಲದೇ ಇದ್ದರೆ ನಾವೆಲ್ಲ ಎಲ್ಲಿಗೆ ಹೋಗಬೇಕು' ಅನಿಸಿರಬೇಕು ಎಂದು ಮಾಜಿ ಸಿಎಂ ಎಸ್.ಎಂ. ಕೃಷ್ಣಾ ತಮ್ಮ ಆತ್ಮಕಥನದಲ್ಲಿ ಹೇಳಿಕೊಂಡಿದ್ದಾರೆ. ಮತ್ತೊಂದು ಬಾರಿ ಕೂಡ ದೇವೇಗೌಡರು ಕಾಂಗ್ರೆಸ್ ಪಕ್ಷ ಸೇರುವ ಬಯಕೆಯನ್ನು ವ್ಯಕ್ತಪಡಿಸಿದ್ದರಂತೆ.
ದೇವೇಗೌಡ ಮತ್ತು ಬೊಮ್ಮಯಿ - ಕಾಂಗ್ರೆಸ್ ಸೇರುವ ಬಯಕೆ
ತುರ್ತು ಪರಿಸ್ಥಿತಿಯ ಬಳಿಕ ಮತ್ತೊಮ್ಮೆ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ದೇವೇಗೌಡ ಕಾಂಗ್ರೆಸ್ ಬಾಗಿಲು ತಟ್ಟಿದ್ದನ್ನೂ ಮಾಜಿ ಸಿಎಂ ಎಸ್.ಎಂ. ಕೃಷ್ಣ ತಮ್ಮ ಆತ್ಮಕಥನದಲ್ಲಿ ಬರೆದುಕೊಂಡಿದ್ದಾರೆ. ಎರಡನೇ ಬಾರಿಯೂ ದೇವೇಗೌಡರು ಕಾಂಗ್ರೆಸ್ ಸೇರುವ ಕನಸು ನನಸಾಗಲಿಲ್ಲ. ದೇವೇಗೌಡರು ಎರಡನೇ ಸಲ ಕಾಂಗ್ರೆಸ್ ಸೇರಲು ಮಾಡಿದ್ದ ಪ್ರಯತ್ನವನ್ನು ಎಸ್.ಎಂ. ಕೃಷ್ಣ ಹೀಗೆ ಹೇಳಿಕೊಂಡಿದ್ದಾರೆ.
ನಾವೇ ಸಿಹಿಸುದ್ದಿ ಕೊಡ್ತೇವೆಂದು ಖರ್ಗೆಗೆ ಟಾಂಗ್ ಕೊಟ್ಟ ಎಸ್.ಎಂ.ಕೃಷ್ಣ
ಎಂಬತ್ತರ ದಶಕದಲ್ಲಿ ಜನತಾ ಪಕ್ಷದ ಸರ್ಕಾರದ ಪ್ರಧಾನಿ ಚರಣ್ ಸಿಂಗ್ ಅವರು ಲೋಕಸಭೆಯಲ್ಲಿ ವಿಶ್ವಾಸಮತ ಪಡೆದರೆ ಮಾತ್ರ ಅವರುಬ ಅಧಿಕಾರದಲ್ಲಿ ಮುಂದುವರೆಯಬಹುದೆಂದು ರಾಷ್ಟ್ರಪತಿ ನೀಲಂ ಸಂಜೀವ ರೆಡ್ಡಿ ಷರತ್ತು ವಿಧಿಸಿ ಅವರನ್ನು ಪ್ರಧಾನ ಮಂತ್ರಿ ಮಾಡಿದ್ದರು. ಆಗ ನಾನು ಲೋಕಸಭೆ ಸದಸ್ಯರನಾಗಿರಲಿಲ್ಲ. ಪ್ರೇಕ್ಷಕರ ಗ್ಯಾಲರಿ ತುಂಬಿ ತುಳುಕುತ್ತಿತ್ತು. ವಿ.ಐ.ಪಿ. ಗ್ಯಾಲರಿಯಲ್ಲಿ ಕುಳಿತಿದ್ದೆ. ನನ್ನ ಜೊತೆ ಕರ್ನಾಟಕ ಜನತಾ ಪಕ್ಷದ ಮುಖಂಡರುಗಳಾದ ಎಚ್.ಡಿ. ದೇವೇಗೌಡ ಹಾಗೂ ಎಸ್.ಆರ್. ಬೊಮಮ್ಮಾಯಿ ಅವರುಗಳಿದ್ದರು. ಲೋಕಸಭೆಗೆ ನಿಗದಿತ ಸಮಯದಲ್ಲಿ ಪ್ರಧಾನಿ ಚರಣಸಿಂಗ್ ಆಗಮಿಸಲಿಲ್ಲ, ಎಲ್ಲರಿಗೂ ತಳಮಳ. ಅವರು ರಾಷ್ಟ್ರಪತಿ ಭವನಕ್ಕೆ ಹೋಗಿದ್ದಾರೆ ಎಂಬ ಗುಸುಗುಸು ಸುದ್ದಿ ಕೇಳಿ ಬಂತು. ಲೋಕಸಭೆಯನ್ನು ಎದುರಿಸದೆ ಚರಣಸಿಂಗ್ ಪ್ರಧಾನಿ ಹುದ್ದೆಗೆ ರಾಜೀನಾಮೆ ಕೊಟ್ಟಿದ್ದರು.
ಸಂಸತ್ ಭವನದ ಸೆಂಟ್ರಲ್ ಹಾಲ್ನಲ್ಲಿ ನಡೆದಿದ್ದ ಮಾತುಕತೆ
ಆ ಸಂದರ್ಭದಲ್ಲಿ ನನ್ನ ಜೊತೆ ಇದ್ದ ಕರ್ನಾಟಕದ ಜನತಾ ಪಕ್ಷದ ನಾಯಕರುಗಳು ದಿಗ್ಭ್ರಮೆಗೊಂಡರು. ಮುಂದೇನೆಂಬುದು ಎಲ್ಲರ ಪ್ರಶ್ನೆಯಾಗಿತ್ತು. ಸೆಂಟ್ರಲ್ ಹಾಲ್ನಲ್ಲಿ ನಾವುಗಳು ಕಾಫಿ ಕುಡಿಯುತ್ತಾ ಇದ್ದಾಗ 'ದೇವೇಗೌಡ್ರೇ, ಬೊಮ್ಮಾಯಿ ಸಾಹೇಬರೇ ತಾವುಗಳು ಇನ್ನೂ ಏಕೆ ಜನತಾ ಪಾರ್ಟಿ ಅಂತಾ ಬಡಿದಾಡುತ್ತೀರಾ, ಈಗಾಗಲೇ ಕಾಂಗ್ರೆಸ್ ಸೇರಿರುವ ಚರಣಸಿಂಗ್ರಂತಹ ನಾಯಕರನ್ನು ಕಟ್ಟಿಕೊಂಡು ಏನೂ ಮಾಡಲು ಸಾಧ್ಯ, ನೀವು ನಿಮ್ಮ ರಾಜಕೀಯ ಭವಿಷ್ಯವನ್ನು ಪುನರ್ಚಿಂತನೆ ಮಾಡಬೇಕು' ಎಂದು ಒತ್ತಾಯಿಸಿದೆ. ಅದಕ್ಕೆ ಅವರಿಬ್ಬರೂ ಸಮ್ಮತಿಸಿದರು. ಅನಂತರ ಕಾಂಗ್ರೆಸಿನ ಹಿರಿಯ ನಾಯಕರಾದ ಪ್ರಣಬ್ ಮುಖರ್ಜಿಯವರನ್ನು ವಿಶ್ವಾಸಕ್ಕೆ ತೆತೆದುಕೊಳ್ಳುವುದಾದರೆ ನಮ್ಮ ಸಮ್ಮತಿ ಎಂದು ಅವರಿಬ್ಬರೂ ಹೇಳಿದರು. ಅಂದು ಸಂಜೆಯೇ ನಾನು ಲೋಕಸಭಾ ಸದಸ್ಯರಾಗಿದ್ದ ತುಮಕೂರಿನ ಕೆ. ಲಕ್ಕಪ್ಪ ಅವರು ಪ್ರಣಬ್ ಮುಖರ್ಜಿ ಅವರನ್ನು ಕಂಡು ಕರ್ನಾಟಕದ ಜನತಾ ಪಕ್ಷದ ನಾಯಕರ ಜೊತೆ ನನ್ನ ಮಾತುಕತೆಯ ವಿವರವನ್ನು ತಿಳಿಸಿದೆ. ಪ್ರಣಬ್ ಮುಖರ್ಜಿ ಅವರು ಈ ಪ್ರಸ್ತಾವಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದರು.
ಸಿದ್ಧಾರ್ಥ ನಾಪತ್ತೆ: ಕೃಷ್ಣರನ್ನು ಭೇಟಿ ಮಾಡಿ ಧೈರ್ಯ ಹೇಳಿದ ದೇವೇಗೌಡ್ರು
ಮಾರನೆಯ ದಿವಸ ನಾನು ತಂಗಿದ್ದ ಗೊಟೇಲ್ ಅಂಬಾಸಿಡರ್ಗೆ ದೇವೇಗೌಡ ಮತ್ತು ಬೊಮ್ಮಾಯಿ ಅವರುಗಳನ್ನು ಬರ ಹೇಳಿದೆ. ಅದೇ ಸಮಯಕ್ಕೆ ಪ್ರಣಬ್ ಮುಖರ್ಜಿ ಅವರು ಸಹ ಆಗಮಿಸಿದರು. ನಮ್ಮೆಲ್ಲರ ಜೊತೆ ಪ್ರಣಬ್ ಮುಖರ್ಜಿ ಚರ್ಚೆ ಮಾಡಿದರು. ಕೊನೆಗೆ ಶ್ರೀಮತಿ ಇಂದಿರಾ ಗಾಂಧಿಯವರಿಗೆ ಈ ವಿಚಾರವನ್ನು ರಿಪೋರ್ಟ್ ಮಾಡ್ಲಾ ಎಂದು ದೇವೇಗೌಡ ಮತ್ತು ಬೊಮ್ಮಾಯಿ ಅವರನ್ನು ಪ್ರಣಬ್ ಮುಖರ್ಜಿ ಅವರು ಕೇಳಿದರು. ಅದಕ್ಕೆ ಸಮ್ಮತಿಸಿದ ಅವರಿಬ್ಬರೂ ಬೆಂಗಳೂರಿಗೆ ಹೋಗಿ ತಮ್ಮ ಒಡನಾಡಿಗಳನ್ನು ಸಂಪರ್ಕಿಸಿ ನಿರ್ಣಯವೊಂದನ್ನು ತಮಗೆ ಕಳುಹಿಸುತ್ತೇವೆಂದು ಹೇಳಿದರು. ಒಮ್ಮತದ ನಿರ್ಧಾರಕ್ಕೆ ಬರಲು ಸಾಧ್ಯವಾಗದೆ ಹೋಗಿರಬಹುದು. ಸರಿಯಾಗಿ ಪ್ಲಾನ್ ಮಾಡಿದ್ದರೆ ವೀರೇಂದ್ರ ಪಾಟೀಲರಂತೆ ದೇವೇಗೌಡ ಮತ್ತು ಬೊಮ್ಮಾಯಿ ಅವರುಗಳು ಆ ಕಾಲದಲ್ಲಿಯೆ ಕಾಂಗ್ರೆಸ್ ಸೇರಿಬಿಡುತ್ತಿದ್ದರು. ಅವರು ಕಾಂಗ್ರೆಸ್ ಮನಸ್ಥಿತಿಯಲ್ಲಿದ್ದರೆಂಬುದು ಸ್ಪಷ್ಟವಾಗುತ್ತದೆ. ಈ ಘಟನೆಯನ್ನು ಬಲ್ಲವರು ನನ್ನನ್ನು ಹೊರತು ಪಡಿಸಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಹಾಗೂ ಮಾಜಿ ಪ್ರಧಾನಿ ದೇವೇಗೌಡರು ಮಾತ್ರವಿದ್ದೇವೆ. ಎಂದು ಎಸ್ಎಂಕೆ ವಿವರಿಸಿದ್ದಾರೆ.
ಬಹಿರಂಗವಾಗಲಿವೆಯಾ ಮತ್ತಷ್ಟು ರಾಜಕೀಯ ರಹಸ್ಯಗಳು
ಬರುವ ಜನೇವರಿ 4ರಂದು ಮಾಜಿ ಮುಖ್ಯಮಂತ್ರಿ, ಬಿಜೆಪಿ ಹಿರಿಯ ನಾಯಕ ಎಸ್.ಎಂ. ಕೃಷ್ಣ ಅವರ ಆತ್ಮಕಥನ ಸ್ಮೃತಿ ವಾಹಿನಿ ಬೆಂಗಳೂರಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ಬಿಡುಗಡೆ ಆಗಲಿದೆ. ಎಲ್ಲ ಪಕ್ಷಗಳ ನಾಯಕರು ಕಾರ್ಯಕ್ರಮದಲ್ಲಿ ಭಾಗವಹಿಸುವ ಸಾಧ್ಯತೆಗಳಿವೆ. ಅವರ ಆತ್ಮಕತೆಯಲ್ಲಿ ಮತ್ತಷ್ಟು ರಾಜಕೀಯ ನಾಯಕರ ರಹಸ್ಯಗಳು ಅಡಗಿರುವ ಸಾಧ್ಯತೆಗಳಿವೆ ಎಂದು ರಾಜಕೀಯ ವಿಶ್ಲೇಶಕರು ವಿಶ್ಲೇಷಣೆ ಮಾಡುತ್ತಿದ್ದಾರೆ. ರಾಜಕೀಯ ಸಂಧ್ಯಾಕಾಲದಲ್ಲಿ ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಸೇರುವ ಮೂಲಕ ರಾಜಕೀಯ ಸಂಚಲನವನ್ನು ಮಾಜಿ ಸಿಎಂ ಎಸ್.ಕೆ. ಕೃಷ್ಣ ಉಂಟುಮಾಡಿದ್ದರು. ಇದೀಗ ತಮ್ಮ ಆತ್ಮಕಥನ ಬರೆಯುವ ಮೂಲಕ ಮತ್ತೊಮ್ಮೆ ರಾಜಕೀಯ ಸಂಚಲನಕ್ಕೆ ಮುನ್ನುಡಿ ಹಾಡಿದ್ದಾರೆ.