ಉಪ ಚುನಾವಣೆ ಉಸ್ತುವಾರಿಯಿಂದ ಮಾಧುಸ್ವಾಮಿ ಔಟ್!
ಬೆಂಗಳೂರು, ನವೆಂಬರ್ 20 : ಕಾನೂನು ಸಚಿವ ಜೆ. ಸಿ. ಮಾಧುಸ್ವಾಮಿ ವಿರುದ್ಧ ಕುರುಬ ಸಮುದಾಯದ ಕೋಪ ಇನ್ನೂ ಆರಿಲ್ಲ. ಉಪ ಚುನಾವಣೆ ಮೇಲೆ ಇದು ಪರಿಣಾಮ ಬೀರಬಾರದು ಎಂದು ಚುನಾವಣಾ ಉಸ್ತುವಾರಿಯಿಂದ ಅವರನ್ನು ಕೈ ಬಿಡಲಾಗಿದೆ.
ಜೆ. ಸಿ. ಮಾಧುಸ್ವಾಮಿ ಕೆ. ಆರ್. ಪೇಟೆ ಉಪ ಚುನಾವಣೆ ಉಸ್ತುವಾರಿಯಾಗಿದ್ದರು. ಬುಧವಾರ ಸಂಜೆ ನಡೆದ ಸಭೆಯಲ್ಲಿ ಅವರನ್ನು ಉಸ್ತುವಾರಿಯಿಂದ ಕೈ ಬಿಡಲು ತೀರ್ಮಾನಿಸಲಾಗಿದೆ. ಉಪ ಮುಖ್ಯಮಂತ್ರಿ ಡಾ. ಅಶ್ವತ್ಥ್ ನಾರಾಯಣಗೆ ಉಸ್ತುವಾರಿ ವಹಿಸಲಾಗಿದೆ.
ಸ್ವಾಮೀಜಿಗೆ ಏಕವಚನ ಬಳಕೆ; ಮಾಧುಸ್ವಾಮಿ ರಾಜೀನಾಮೆಗೆ ಆಗ್ರಹ
ಅಶ್ವತ್ಥ್ ನಾರಾಯಣ ಮೊದಲು ಹೊಸಕೋಟೆ ಉಪ ಚುನಾವಣೆ ಉಸ್ತುವಾರಿಯಾಗಿದ್ದರು. ಹೊಸಕೋಟೆಗೆ ಎಸ್. ಆರ್. ವಿಶ್ವನಾಥ್ ನೇಮಿಸಿ, ಕೆ. ಆರ್. ಪೇಟೆ ಉಸ್ತುವಾರಿಯನ್ನು ಅಶ್ವತ್ಥ್ ನಾರಾಯಣ ಹೆಗಲಿಗೆ ನೀಡಲಾಗಿದೆ.
ತಮಗೆ ನೀಡಿರುವ ಖಾತೆ ಬಗ್ಗೆ ಸಚಿವ ಮಾಧುಸ್ವಾಮಿ ಏನು ಹೇಳಿದ್ರು?
ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವ ಜೆ. ಸಿ. ಮಾಧುಸ್ವಾಮಿ ವಿರುದ್ಧ ಕುರುಬ ಸಮುದಾಯದವರು ಆಕ್ರೋಶಗೊಂಡಿದ್ದಾರೆ. ತುಮಕೂರು ಜಿಲ್ಲೆಯ ಹುಳಿಯಾರು ಪಟ್ಟಣದ ಸರ್ಕಲ್ಗೆ ಹೆಸರಿಡುವ ವಿಚಾರದಲ್ಲಿ ಸಚಿವರು ಕುರುಬ ಸಮುದಾಯದ ವಿರೋಧ ಕಟ್ಟಿಕೊಂಡಿದ್ದಾರೆ.
ಕುರುಬ ಸಮುದಾಯದ ಕ್ಷಮೆ ಯಾಚಿಸಿದ ಯಡಿಯೂರಪ್ಪ
ಈ ವಿರೋಧ ರಾಜಕೀಯ ಸ್ವರೂಪ ಪಡೆದಿದೆ. ಮುಖ್ಯಮಂತ್ರಿ ಯಡಿಯೂರಪ್ಪ ಕ್ಷಮೆ ಕೇಳಿದರೂ ಆಕ್ರೋಶ ಇನ್ನೂ ತಣ್ಣಗಾಗಿಲ್ಲ. ಗುರುವಾರ ಹುಳಿಯಾರು ಬಂದ್ಗೂ ಕರೆ ನೀಡಲಾಗಿದೆ. ಆದರೆ, ಮಾಧುಸ್ವಾಮಿ ಇನ್ನೂ ಕ್ಷಮೆ ಕೇಳದಿರುವುದು ಕುರುಬ ಸಮುದಾಯದ ಆಕ್ರೋಶ ಹೆಚ್ಚಿಸಿದೆ.
ಮಂಡ್ಯ ಜಿಲ್ಲೆಯ ಕೆ. ಆರ್. ಪೇಟೆಯಲ್ಲಿ ಸುಮಾರು 45 ಸಾವಿರ ಕುರುಬ ಸಮುದಾಯದ ಮತಗಳಿವೆ. ಮಾಧುಸ್ವಾಮಿ ಉಸ್ತುವಾರಿಯಾಗಿದ್ದರೆ ಬಿಜೆಪಿ ಅಭ್ಯರ್ಥಿ ನಾರಾಯಣ ಗೌಡಗೆ ಹಿನ್ನಡೆಯಾಗುವ ಸಾಧ್ಯತೆ ಇದೆ. ಆದ್ದರಿಂದ, ಉಸ್ತುವಾರಿ ಬದಲಾವಣೆ ಮಾಡಲಾಗಿದೆ.
ಡಿಸೆಂಬರ್ 5ರಂದು ಕೆ. ಆರ್. ಪೇಟೆ ಕ್ಷೇತ್ರದ ಉಪ ಚುನಾವಣೆ ನಡೆಯಲಿದೆ. ಬಿಜೆಪಿಯಿಂದ ನಾರಾಯಣ ಗೌಡ, ಕಾಂಗ್ರೆಸ್ನಿಂದ ಕೆ. ಬಿ. ಚಂದ್ರಶೇಖರ್, ಜೆಡಿಎಸ್ನಿಂದ ಬಿ. ಎಲ್. ದೇವರಾಜ್ ಅಭ್ಯರ್ಥಿಗಳು.