ಜಯಲಲಿತಾ ವಿರುದ್ಧ ಮೇಲ್ಮನವಿಗೆ 'ಹಸಿರು' ನಿಶಾನೆ
ಬೆಂಗಳೂರು, ಮೇ. 23 : ಹಸಿರು ಸೀರೆಯುಟ್ಟು, ಹಸಿರು ಪೆನ್ನಿನಿಂದ ಹಸಿರು ಇಂಕನ್ನು ಹರಿಸಿ, ಐದನೇ ಬಾರಿ ತಮಿಳುನಾಡು ಮುಖ್ಯಮಂತ್ರಿಯಾಗಿ ಜಯಲಲಿತಾ ಜಯರಾಂ ಅವರು ಹಸ್ತಾಕ್ಷರ ಹಾಕಿದ ಸಂದರ್ಭದಲ್ಲೇ, ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸಲು ಕರ್ನಾಟಕದ ಅಡ್ವೊಕೇಟ್ ಜನರಲ್ ಹಸಿರು ನಿಶಾನೆ ತೋರಿದ್ದಾರೆ.
ಜಯಲಲಿತಾ ಅವರನ್ನು ಅಕ್ರಮ ಆಸ್ತಿ ಗಳಿಕೆ ಕೇಸನಿಂದ ದೋಷಮುಕ್ತರನ್ನಾಗಿ ಮಾಡಿ ಕರ್ನಾಟಕ ಹೈಕೋರ್ಟ್ ಮೇ 11ರಂದು ನೀಡಿದ ತೀರ್ಪಿನ ವಿರುದ್ಧ ಕರ್ನಾಟಕದ ಅಡ್ವೊಕೇಟ್ ಜನರಲ್ ಆಗಿರುವ ರವಿ ವರ್ಮಾ ಅವರು ಸರ್ವೋಚ್ಚ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಲು ಒಪ್ಪಿಗೆ ನೀಡಿದ್ದಾರೆ. [ಐದನೇ ಬಾರಿ ಮುಖ್ಯಮಂತ್ರಿಯಾಗಿ ಜಯಾ]
ಹತ್ತು ಅಂಶಗಳ ಮೇಲ್ಮನವಿ : ಜಯಲಲಿತಾ, ಶಶಿಕಲಾ ನಟರಾಜನ್, ಇಳವರಸಿ ಮತ್ತು ಸುಧಾಕರನ್ ಅವರ ಬಿಡುಗಡೆಗೆ ಕಾರಣವಾದ ಆಸ್ತಿಯ ಕೂಡಿಕೆ ಕಳಿಕೆಯಲ್ಲಿ ಆದ ತಪ್ಪು ಲೆಕ್ಕಾಚಾರ ಸೇರಿದಂತೆ 10 ಅಂಶಗಳನ್ನು ಪಟ್ಟಿ ಮಾಡಲಾಗಿದೆ. ಮೇಲ್ಮನವಿಯನ್ನು ಆದಷ್ಟು ಬೇಗನೆ ಸಲ್ಲಿಸಬೇಕು ಎಂದು ಎಜಿ ತಮ್ಮ ಶಿಫಾರಸಿನಲ್ಲಿ ತಿಳಿಸಿದ್ದಾರೆ.
ಮೇಲ್ಮನವಿಯನ್ನು ರಜಾ ಪೀಠದ ಮುಂದೆಯೇ ಸಲ್ಲಿಸಿ, ಕರ್ನಾಟಕ ಭ್ರಷ್ಟಾಚಾರದ ವಿರುದ್ಧವಾಗಿದೆ ಎಂಬ ದಿಟ್ಟ ಸಂದೇಶವನ್ನು ಸಾರಬೇಕು ಎಂಬುದು ಅಡ್ವೊಕೇಟ್ ಜನರಲ್ ರವಿ ವರ್ಮಾ ಅವರ ಸ್ಪಷ್ಟ ನಿಲುವಾಗಿದೆ. ಮೇಲ್ಮನವಿ ಸಲ್ಲಿಸಲು ಸರಕಾರ ಹಿಂದೆಮುಂದೆ ನೋಡುತ್ತಿದ್ದ ಹಿನ್ನೆಲೆಯಲ್ಲಿ ವಿರೋಧಪಕ್ಷಗಳಿಂದ ಮತ್ತಿತರ ಸಂಘಸಂಸ್ಥೆಗಳಿಂದ ಭಾರೀ ಪ್ರತಿರೋಧ ವ್ಯಕ್ತವಾಗಿತ್ತು. [ಜಯಾ ಬಂಧಮುಕ್ತ ಮಾಡಿದ ನ್ಯಾಯಮೂರ್ತಿ ಇವರೇ]
ಕಾನೂನು ಸಚಿವಾಲಯ ಮೇಲ್ಮನವಿಯನ್ನು ಸಿದ್ಧಪಡಿಸುತ್ತಿದ್ದು, ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿರುವ ಬಿ.ವಿ. ಆಚಾರ್ಯ ಅವರು ಈ ಮೇಲ್ಮನವಿ ರಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ. ಜಯಲಲಿತಾ ಆಸ್ತಿಯ ಗಣಿತದಲ್ಲಿ ಆದ ಪ್ರಮಾದಗಳನ್ನು ಮೊದಲಿಗೆ ಬೆರಳು ಮಾಡಿ ತೋರಿಸಿದವರೇ ಬಿವಿ ಆಚಾರ್ಯ ಅವರು. ಹೈಕೋರ್ಟ್ ತೀರ್ಪನ್ನು ಸುಪ್ರೀಂ ಕೋರ್ಟ್ ತಿರುವುಮುರುವು ಮಾಡುತ್ತದೆ ಎಂಬ ಆಶಾಭಾವನೆಯನ್ನು ಆಚಾರ್ಯ ಹೊಂದಿದ್ದಾರೆ.
ಹೈಕೋರ್ಟ್ ತೀರ್ಪನ್ನು ತಡೆದರೆ : ಕರ್ನಾಟಕ ಹೈಕೋರ್ಟ್ ನೀಡಿದ ತೀರ್ಪನ್ನು ತಡೆಹಿಡಿಯಬೇಕು ಎಂಬ ಮನವಿಯನ್ನು ಸುಪ್ರೀಂಗೆ ರಾಜ್ಯ ಸಲ್ಲಿಸಲಿದೆ. ಆದರೆ, ಇದರ ಸಾಧ್ಯತೆ ಕಡಿಮೆ. ಏಕೆಂದರೆ, ತೀರ್ಪನ್ನು ತಡೆಹಿಡಿದರೆ ವಿಚಾರಣೆ ಕೋರ್ಟ್ ನೀಡಿದ ಶಿಕ್ಷೆ ಜಾರಿಗೆ ಬರಲಿದೆ ಮತ್ತು ಜಯಲಲಿತಾ ಮತ್ತೆ ಮುಖ್ಯಮಂತ್ರಿ ಗದ್ದುಗೆಯಿಂದ ಕೆಳಗಿಳಿಯಬೇಕಾಗುತ್ತದೆ. ತೀರ್ಪಿಗೆ ಸ್ಟೇ ಕೇಳುವ ಬದಲು ಹೈಕೋರ್ಟ್ ತೀರನ್ನೇ ತಿರುವುಮುರುವು ಮಾಡಲು ರಾಜ್ಯ ಸರಕಾರ ಯತ್ನಿಸಲಿದೆ. ಈ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ಪುರಸ್ಕರಿಸುವುದೆ? ಸದ್ಯಕ್ಕೆ ಇದು ಮಿಲಿಯನ್ ಡಾಲರ್ ಪ್ರಶ್ನೆ.