'ಜಯಾ ಕೇಸ್ : ಮೇಲ್ಮನವಿ ಸಲ್ಲಿಸದೆ ವಿಶ್ವಾಸದ್ರೋಹ ಮಾಡಬೇಡಿ'
ಬೆಂಗಳೂರು, ಮೇ. 30 : ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಮೇಲ್ಮನವಿ ಸಲ್ಲಿಸಲು ಕರ್ನಾಟಕ ಸರಕಾರ ವಿಫಲವಾದರೆ ಕರ್ನಾಟಕದ ನ್ಯಾಯಾಂಗದ ಮೇಲೆ ಸರ್ವೋಚ್ಚ ನ್ಯಾಯಾಲಯ ಇಟ್ಟಿರುವ ನಂಬಿಕೆ ಕಳೆದುಕೊಂಡಂತಾಗುತ್ತದೆ ಎಂದು ಅಡ್ವೊಕೇಟ್ ಜನರಲ್ ರವಿ ವರ್ಮಾ ಕುಮಾರ್ ಅವರು ಸರಕಾರವನ್ನು ಎಚ್ಚರಿಸಿದ್ದಾರೆ.
ಜಯಲಲಿತಾ, ಶಶಿಕಲಾ ನಟರಾಜನ್, ಇಳವರಸಿ ಮತ್ತು ಸುಧಾಕರನ್ ನಿರ್ದೋಷಿಗಳೆಂದು ಕರ್ನಾಟಕ ಹೈಕೋರ್ಟ್ ಮೇ 11ರಂದು ತೀರ್ಪು ನೀಡಿದ್ದರ ವಿರುದ್ಧ ಮೇಲ್ಮನವಿ ಸಲ್ಲಿಸಲು ಕರ್ನಾಟಕ ಹಿಂದೆಮುಂದೆ ನೋಡುತ್ತಿದೆ. ಈ ಪ್ರಕರಣದಲ್ಲಿ ಯಾರೂ ಆಸಕ್ತಿ ತೋರಿಸುತ್ತಿಲ್ಲ. ನಿರ್ಧಾರವನ್ನು ಕ್ಯಾಬಿನೆಟ್ಟಿಗೆ ಬಿಟ್ಟಿದ್ದೇನೆ ಎಂದು ಸಿದ್ದರಾಮಯ್ಯ ಅವರು ಕೂಡ ಕೈತೊಳೆದುಕೊಂಡಿದ್ದಾರೆ.
ಈ ಕುರಿತಂತೆ ಸುದೀರ್ಘವಾದ ಅಭಿಪ್ರಾಯವನ್ನು ಮಂಡಿಸಿರುವ ರವಿವರ್ಮಾ ಅವರು, ಈ ಕೇಸನ್ನು ತಮಿಳುನಾಡಿನಿಂದ ಕರ್ನಾಟಕಕ್ಕೆ ಸುಪ್ರೀಂ ಕೋರ್ಟ್ ವರ್ಗಾವಣೆ ಮಾಡಿದಾಗ, ಇಲ್ಲಿನ ನ್ಯಾಯಾಂಗ ಮೇಲೆ ವಿಶ್ವಾಸವಿಟ್ಟು ವರ್ಗಾವಣೆ ಮಾಡಿತ್ತು. ಆ ನಂಬಿಕೆಯನ್ನು ನಾವು ಉಳಿಸಿಕೊಳ್ಳಬೇಕು. ಇಲ್ಲದಿದ್ದರೆ ನಂಬಿಕೆ ದ್ರೋಹ ಮಾಡಿದಂತಾಗುತ್ತದೆ ಎಂದು ಟೀಕಿಸಿದ್ದಾರೆ. [ಈ ದೇಶವನ್ನು ಆ ದೇವರೇ ಕಾಪಾಡಬೇಕು!]
ಹೈಕೋರ್ಟ್ ತೀರ್ಪು ನಿಲ್ಲುವುದಿಲ್ಲ
ಆರೋಪಿಗಳನ್ನು ಬಿಡುಗಡೆ ಮಾಡಿ ಕರ್ನಾಟಕ ಹೈಕೋರ್ಟ್ ನೀಡಿದ ತೀರ್ಪು ನಿಲ್ಲುವುದಿಲ್ಲ. ವಿಚಾರಣೆ ಕೋರ್ಟಿನಲ್ಲಿಯೇ ನ್ಯಾಯವಾದ ರೀತಿಯಲ್ಲಿ ಶಿಕ್ಷೆ ಪ್ರಕಟಿಸಲಾಗಿದೆ. ನನ್ನ ಅಭಿಪ್ರಾಯದ ಪ್ರಕಾರ, ಹೈಕೋರ್ಟ್ ತೀರ್ಪಿನಲ್ಲಿ ಸತ್ವ ಇಲ್ಲ. ಹಾಗಾಗಿ, ಸುಪ್ರೀಂ ಕೋರ್ಟಿನಲ್ಲಿ ಮೇಲ್ಮನವಿ ಸಲ್ಲಿಸಲು ಇದು ತಕ್ಕದಾದ ಪ್ರಕರಣ ಎಂದು ಅವರು ಬರೆದ ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ. [ಮೇಲ್ಮನವಿ ಸಲ್ಲಿಸಲು ಆಚಾರ್ಯ ಶಿಫಾರಸು]
ಮೇಲ್ಮನವಿ ಸಲ್ಲಿಸಿದ ನಂತರ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ಬಿ.ವಿ. ಆಚಾರ್ಯ ಅವರನ್ನೇ ನೇಮಕ ಮಾಡಬೇಕು. ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ಕೊನೆಯ ಹಂತ ತಲುಪಿದಾಗ ಕೇಸಿನಿಂದ ಹಿಂದೆ ಸರಿಯುವ ಮುನ್ನ ಬಿವಿ ಆಚಾರ್ಯ ಅವರು ಸಮರ್ಥವಾಗಿ ವಾದ ಮಂಡಿಸಿದ್ದರು. ಕೇಸಿನ ಸಾಧಕ ಬಾಧಕಗಳು ಅವರಿಗೆ ಚೆನ್ನಾಗಿ ತಿಳಿದಿದೆ ಎಂದು ಶಿಫಾರಸು ಮಾಡಿದ್ದಾರೆ.
ಮೇಲ್ಮನವಿಗೆ ಅನುಮತಿಯೂ ಬೇಕಾಗಿಲ್ಲ
ಜಯಲಲಿತಾ ಅವರು ರಾಜ್ಯವೊಂದರ ಮುಖ್ಯಮಂತ್ರಿಯಾಗಿದ್ದರಿಂದ ಅವರ ವಿರುದ್ಧ ಮೇಲ್ಮನವಿ ಸಲ್ಲಿಸಲು ಯಾವುದೇ ಅನುಮತಿ ಮತ್ತೆ ಪಡೆಯುವ ಅಗತ್ಯವಿಲ್ಲ. ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ನೇಮಕ ಮಾಡಲು ಕೂಡ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಯ ಅನುಮತಿ ಅಗತ್ಯವಿಲ್ಲ ಎಂದು ರವಿವರ್ಮಾ ಅವರು ಕರ್ನಾಟಕ ಸರಕಾರಕ್ಕೆ ಎಲ್ಲ ರೀತಿಯ ವಿವರಣೆ ನೀಡಿದ್ದಾರೆ.