ಕೊನೆಗೂ ತನ್ನ ಬದುಕಿನ ಮಹತ್ವಾಕಾಂಕ್ಷೆ ಈಡೇರದೇ ಆಟ ಮುಗಿಸಿದ ಮುತ್ತಪ್ಪ ರೈ
"ಕ್ಯಾನ್ಸರ್ ನನ್ನನ್ನು ಸಾವಿನ ದವಡೆಗೆ ನೂಕಿರುವುದು ನಿಜ. ಪವಾಡ ಸದೃಶ ರೀತಿಯಲ್ಲಿ ಬದುಕುತ್ತಿದ್ದೇನೆ. ಎಷ್ಟು ದಿನ ಬದುಕಿರುತ್ತೇನೋ ಗೊತ್ತಿಲ್ಲ" ಎಂದು ಕಳೆದ ಜನವರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮುತ್ತಪ್ಪ ರೈ ಹೇಳಿದ್ದರು.
Recommended Video
ಒಂದು ಕಾಲದ ಅಂಡರ್ ವರ್ಲ್ಡ್ ಡಾನ್, ಜಯಕರ್ನಾಟಕ ಸಂಘಟನೆಯ ಸ್ಥಾಪಕ ಮುತ್ತಪ್ಪ ರೈ, ಶುಕ್ರವಾರ (ಮೇ 15) ನಿಧನರಾಗಿದ್ದಾರೆ. ಒಂದು ವಾರದ ಹಿಂದೆ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಾಗಿದ್ದರು.
ಜಯ ಕರ್ನಾಟಕ ಸಂಘಟನೆಯ ಸ್ಥಾಪಕ ಮುತ್ತಪ್ಪ ರೈ ನಿಧನ
'ಸಾವಿರಾರು ಮೈಲಿ ದೂರ ಕುಳಿತು ಬೆರಳ ಇಷಾರೆಯಲ್ಲೇ ಬೆಂಗಳೂರಿನ ಭೂಗತದ ಆಗುಹೋಗುಗಳನ್ನು ನಿರ್ದೇಶಿಸಿದ ಮೊಟ್ಟ ಮೊದಲ ವ್ಯಕ್ತಿಯೆಂದರೆ ರೈ' ಎಂದು ರವಿ ಬೆಳಗೆರೆ ತಮ್ಮ ಪುಸ್ತದಲ್ಲಿ ಬರೆದುಕೊಂಡಿದ್ದರು.
ಅಪ್ರತಿಮ ದೇವರ ಭಕ್ತರಾಗಿದ್ದ ಮುತ್ತಪ್ಪ ರೈ, ತಮ್ಮ ಕುಟುಂಬದ ಆರಾಧ್ಯ ದೇವರಾದ ಪುತ್ತೂರು ಮಹಾಲಿಂಗೇಶ್ವರನಿಗೆ ರಥವನ್ನು ಅರ್ಪಿಸಿದ್ದರು. ಇದಾದ ನಂತರ ಕುಕ್ಕೆ ಸುಬ್ರಮಣ್ಯ ದೇವಾಲಯಕ್ಕೂ ಕಳೆದ ವರ್ಷ ರಥ ಅರ್ಪಿಸಿದ್ದರು. ಕುಕ್ಕೆಯ ಸನ್ನಿಧಾನಕ್ಕೆ ರಥವನ್ನೇನೋ ಕೊಟ್ಟರು, ಆದರೆ, ಅವರ ಬದುಕಿನ ಮಹತ್ವಾಕಾಂಕ್ಷೆ ಈಡೇರಿರಲಿಲ್ಲ.
ಪುತ್ತೂರಿನ ಪುರಾಣಪ್ರಸಿದ್ದ ಮಹಾಲಿಂಗೇಶ್ವರ ದೇವಾಲಯ
ಹತ್ತು ವರ್ಷಗಳ ಹಿಂದೆ ದಕ್ಷಿಣ ಕನ್ನಡ ಜಿಲ್ಲೆ, ಪುತ್ತೂರಿನ, ಪುರಾಣಪ್ರಸಿದ್ದ ಮಹಾಲಿಂಗೇಶ್ವರ ದೇವಾಲಯಕ್ಕೆ, ಮುತ್ತಪ್ಪ ರೈ ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ಬ್ರಹ್ಮರಥ ಅರ್ಪಿಸಿದ್ದರು. ನನ್ನ ಕುಟುಂಬದ ದೇವರಿಗೆ ರಥ ನೀಡುವುದು ನನ್ನ ಬಹು ದಿನಗಳ ಕನಸಾಗಿತ್ತು ಎಂದು ಮುತ್ತಪ್ಪ ರೈ ಹೇಳಿದ್ದರು.
ಪ್ರಮುಖ ನಾಗಕ್ಷೇತ್ರಗಳಲ್ಲೊಂದಾದ ಕುಕ್ಕೇ ಸುಬ್ರಮಣ್ಯ ದೇವಾಲಯ
ಇದಾದ ನಂತರ ಕಳೆದ ವರ್ಷದ ಅಕ್ಟೋಬರ್ ನಲ್ಲಿ ದೇಶದ ಪ್ರಮುಖ ನಾಗಕ್ಷೇತ್ರಗಳಲ್ಲೊಂದಾದ ಕುಕ್ಕೆ ಸುಬ್ರಮಣ್ಯ ದೇವಾಲಯಕ್ಕೆ ಜಂಟಿಯಾಗಿ, ಸುಮಾರು ಎರಡೂವರೆ ಕೋಟಿ ರೂಪಾಯಿ ವೆಚ್ಚದಲ್ಲಿ ಬ್ರಹ್ಮರಥವನ್ನು ನೀಡಿದ್ದರು. ಉಡುಪಿ ಜಿಲ್ಲೆ ಕೋಟೇಶ್ವರದಿಂದ ಬಂದ ರಥವನ್ನು ಅದ್ದೂರಿಯಾಗಿ ಸ್ವಾಗತಿಸಲಾಗಿತ್ತು.
ಮುತ್ತಪ್ಪ ರೈ ನಿಧನ; ಅಭಿಮಾನಿಗಳಿಗೊಂದು ಮನವಿ
ಗೆಳೆಯ ಅಜಿತ್ ಶೆಟ್ಟಿ ಜೊತೆ, ಬ್ರಹ್ಮರಥ ನೀಡುವುದಕ್ಕೆ ಎಲೆ ವೀಳ್ಯ ಸ್ವೀಕರಿಸಿ ಬಂದಿದ್ದೆವು
"ದೇವರಿಗೆ ಮತ್ತು ಸಮಾಜಕ್ಕೆ ಏನಾದರೂ ಸಮರ್ಪಿಸುತ್ತಲೇ ಬಂದವನು ನಾನು. ದೇವರಿಗೆ ಬ್ರಹ್ಮರಥ ನೀಡುವುದು ನನ್ನ ಮಹತ್ವಾಕಾಂಕ್ಷೆಯಾಗಿತ್ತು. ಶಿಥಿಲಗೊಂಡಿದ್ದ ರಥಕ್ಕೆ ಪರ್ಯಾಯ ವ್ಯವಸ್ಥೆಯಾಗಬೇಕು ಎನ್ನುವ ಮನವಿ, ನನಗೆ ಕುಕ್ಕೇ ದೇವಾಲಯದಿಂದ ಬಂದಿತ್ತು. ಸಿಕ್ಕಿದ್ದೇ ಸೌಭಾಗ್ಯ ಎಂದು ನಾನು ಮತ್ತು ನನ್ನ ಗೆಳೆಯ ಅಜಿತ್ ಶೆಟ್ಟಿ ಜೊತೆ, ಬ್ರಹ್ಮರಥ ನೀಡುವುದಕ್ಕೆ ಎಲೆ ವೀಳ್ಯ ಸ್ವೀಕರಿಸಿ ಬಂದಿದ್ದೆವು" ಎಂದು ಮುತ್ತಪ್ಪ ರೈ ಅಂದು ಹೇಳಿದ್ದರು.
ಬದುಕಿನ ಮಹತ್ವಾಕಾಂಕ್ಷೆ ಮುಗಿದಿದೆ ಎಂದು ಹೇಳಿದ್ದ ಮುತ್ತಪ್ಪ ರೈ
"ಕುಕ್ಕೇ ದೇವಾಲಯಕ್ಕೆ ಬ್ರಹ್ಮರಥ ನೀಡಿದ್ದು ನನ್ನ ಜೀವನದ ಅವಿಸ್ಮರಣೀಯ ಘಟನೆಯಲ್ಲೊಂದು. ಎಲ್ಲವೂ ಆ ಭಗವಂತನ ಕೃಪೆಯಿಂದಲೇ ಸಾಧ್ಯವಾಗಿದೆ ಎಂದು ನಂಬುವವನು ನಾನು" ಎಂದು ಬೆಂಗಳೂರಿನಲ್ಲಿ ಹೇಳಿದ್ದರು. ಆರೋಗ್ಯ ಸರಿ ಇಲ್ಲದೇ ಇದ್ದಿದ್ದರಿಂದ, ರೈ ಅವರ ಪತ್ನಿ ಮತ್ತು ಅವರ ಕುಟುಂಬದ ಸದಸ್ಯರು ಮಾತ್ರ ಬ್ರಹ್ಮರಥ ನೀಡುವ ವೇಳೆ ಹಾಜರಿದ್ದರು. ಇಂತಹ ವಿಶೇಷ ಧಾರ್ಮಿಕ ಕಾರ್ಯಕ್ರಮಕ್ಕೆ ಹೋಗಲಾಗಿಲ್ಲ ಎನ್ನುವುದು ನನಗೆ ದುಃಖದ ಸಂಗತಿ ಎಂದು ಹೇಳಿದ್ದರು. ದೇವಾಲಯಕ್ಕೆ ಬ್ರಹ್ಮರಥ ನೀಡುವ ಕಾರ್ಯಕ್ರಮದ ವೇಳೆ ವೈಯಕ್ತಿಕವಾಗಿ ರೈ ಭಾಗವಹಿಸಲು ಸಾಧ್ಯವಾಗಿರಲಿಲ್ಲ.