'ಜವಾದ್' ಚಂಡಮಾರುತ; ಕರ್ನಾಟಕದಲ್ಲಿ 5 ದಿನ ಮಳೆ
ಬೆಂಗಳೂರು, ಅಕ್ಟೋಬರ್ 10; ಗುಲಾಬ್, ಶಾಹೀನ್ ಚಂಡಮಾರುತದ ಬಳಿಕ ಮತ್ತೊಂದು ಚಂಡಮಾರುತ ಕರ್ನಾಟಕಕ್ಕೆ ಅಪ್ಪಳಿಸುವ ಸಾಧ್ಯತೆ ಇದೆ. ಇದರ ಪ್ರಭಾವದಿಂದ ಕರ್ನಾಟಕದಲ್ಲಿ ಐದು ದಿನಗಳ ಕಾಲ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
'ಜವಾದ್' ಎಂಬ ಹೆಸರಿನ ಚಂಡಮಾರುತ ಮುಂದಿನ ವಾರ ರಾಜ್ಯಕ್ಕೆ ಅಪ್ಪಳಿಸುವ ಸಾಧ್ಯತೆ ಇದೆ. ಈ ಚಂಡಮಾರುತದ ಪ್ರಭಾವದಿಂದ 4-5 ದಿನಗಳ ಕಾಲ ಕರ್ನಾಟಕದಲ್ಲಿ ಮಳೆಯಾಗುವ ಸಾಧ್ಯತೆ ಇದೆ.
ಅ.13ರವರೆಗೂ ರಾಜ್ಯದಲ್ಲಿ ಭಾರಿ ಮಳೆ, 19 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್
ದಕ್ಷಿಣ ಭಾರತದ ಕರಾವಳಿಯಲ್ಲಿ 'ಜವಾದ್' ಚಂಡಮಾರುತದ ಪ್ರಭಾವದಿಂದ ಮಳೆಯಾಗಲಿದೆ ಎಂದು ಎಚ್ಚರಿಕೆ ನೀಡಲಾಗಿದೆ. ಆಂಧ್ರ ಪ್ರದೇಶ, ಕರ್ನಾಟಕ, ಕೇರಳ, ತಮಿಳುನಾಡು, ಪುದುಚೇರಿ, ಗೋವಾ, ಒಡಿಶಾ ಮತ್ತು ಮಹಾರಾಷ್ಟ್ರದಲ್ಲಿ ಮಳೆ ಮುನ್ಸೂಚನೆ ಕೊಡಲಾಗಿದೆ.
ಮತ್ತೊಂದು ಚಂಡಮಾರುತ ಸೂಚನೆ; ಈ ರಾಜ್ಯಗಳಲ್ಲಿ ಅ.12ರವರೆಗೂ ಮಳೆ
ಅಕ್ಟೋಬರ್ 12 ಮತ್ತು 13ರಂದು ಬೆಳಗಾವಿ, ಧಾರವಾಡ, ಹಾವೇರಿ, ಕೊಪ್ಪಳ, ಗದಗ, ಬಾಗಲಕೋಟೆ ಜಿಲ್ಲೆಗಳಲ್ಲಿ ಹೆಚ್ಚು ಮಳೆಯಾಗುವ ಸಾಧ್ಯತೆ ಇದ್ದು ಯೆಲ್ಲೊ ಅಲರ್ಟ್ ಘೋಷಣೆ ಮಾಡಲಾಗಿದೆ. ಭಾನುವಾರ ಬೆಳಗಾವಿ, ಹಾವೇರಿ, ಗದಗ, ಬಾಗಲಕೋಟೆ, ವಿಜಯಪುರ, ಕೊಪ್ಪಳ ಜಿಲ್ಲೆಗಳಲ್ಲಿ ಮಳೆಯಾಗಲಿದೆ.
ಹವಾಮಾನ ವರದಿ; ಬೆಂಗಳೂರಲ್ಲಿ ಮತ್ತೆ ಜಿಟಿ-ಜಿಟಿ ಮಳೆ
ಕರಾವಳಿ ಮತ್ತು ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆಯಾಗಲಿದೆ ಎಂದು ಮುನ್ಸೂಚನೆ ನೀಡಲಾಗಿದೆ. ಮುಂದಿನ 48 ಗಂಟೆಗಳ ಕಾಲ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗಲಿದೆ ಎಂದು ಎಚ್ಚರಿಕೆ ನೀಡಲಾಗಿದೆ.
ಬೆಂಗಳೂರು ನಗರದಲ್ಲಿ ಶನಿವಾರ ಮುಂಜಾನೆಯಿಂದ ಮಧ್ಯಾಹ್ನದ ತನಕ ಜಿಟಿ-ಜಿಟಿ ಮಳೆಯಾಗಿದೆ. ನಗರದ ವಿವಿಧ ಕಡೆಗಳಲ್ಲಿ ಸುರಿದ ಮಳೆಯಿಂದಾಗಿ ವಾಹನ ಸವಾರರು ಪರದಾಡಿದರು. ಹಲವು ರಸ್ತೆಗಳು ಜಲಾವೃತಗೊಂಡಿದ್ದವು. ಮಧ್ಯಾಹ್ನದ ಬಳಿಕ ಮಳೆ ಕಡಿಮೆಯಾಯಿತು.
ಆಂಧ್ರ ಪ್ರದೇಶ, ತಮಿಳುನಾಡು ಮತ್ತು ಪುದುಚೇರಿಯಲ್ಲಿ ಅಕ್ಟೋಬರ್ 10 ರಿಂದ 12ರ ತನಕ ಮಳೆಯಾಗಲಿದೆ. ಗೋವಾ, ಮಹಾರಾಷ್ಟ್ರ, ಕರ್ನಾಟಕ, ಆಂಧ್ರ ಪ್ರದೇಶ, ತಮಿಳುನಾಡು ರಾಜ್ಯಗಳಲ್ಲಿ 4 ರಿಂದ 5 ದಿನಗಳ ತನಕ ಭಾರೀ ಮಳೆಯಾಗುವ ನಿರೀಕ್ಷೆ ಇದೆ.
ಹೈದರಾಬಾದ್ನಲ್ಲಿ ಭಾರೀ ಮಳೆಯಾಗುತ್ತಿದೆ. ಮಳೆಯಲ್ಲಿ ಇಬ್ಬರು ಕೊಚ್ಚಿ ಹೋಗಿದ್ದು, ಹವಾಮಾನ ವೈಫರಿತ್ಯದಿಂದಾಗಿ ವಿಮಾನ ಸಂಚಾರಕ್ಕೆ ಸಹ ಅಡ್ಡಿಯಾಗಿದೆ. ಸೋಮವಾರದ ತನಕ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ನೈಋತ್ಯ ಮುಂಗಾರು ಕರ್ನಾಟಕದಲ್ಲಿ ಅಂತ್ಯಗೊಂಡಿದೆ. ಆದರೆ ಮುಂಗಾರು ಅಂತ್ಯಕ್ಕೂ ಮೊದಲು ಗುಲಾಬ್ ಚಂಡಮಾರುತದ ಪ್ರಭಾವದಿಂದ ಮಳೆಯಾಗಿತ್ತು. ಬಳಿಕ ಶಾಹೀನ್ ಚಂಡಮಾರುತದ ಪ್ರಭಾವದಿಂದ ವಿವಿಧ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿತ್ತು.
ಮುಂದಿನ 48 ಗಂಟೆಗಳಲ್ಲಿ ಗುಜರಾತ್, ಮಧ್ಯಪ್ರದೇಶ, ರಾಜಸ್ಥಾನ್, ಪಂಜಾಬ್, ಹರ್ಯಾಣ, ಚಂಡೀಗಢ್, ದೆಹಲಿ, ಜಮ್ಮು ಮತ್ತು ಕಾಶ್ಮೀರ, ಲಡಾಖ್, ಹಿಮಾಚಲ ಪ್ರದೇಶ, ಉತ್ತರಾಖಂಡ್ ರಾಜ್ಯದ ಕೆಲವು ಭಾಗಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ.
ಎಲ್ಲೆಲ್ಲಿ ಮಳೆಯಾಗಿದೆ; ಶನಿವಾರ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಮಳೆಯಾಗಿದೆ. ಕಲಬುರಗಿಯ ಗುಂಡರ್ತಿಯಲ್ಲಿ 13 ಸೆಂ. ಮೀ. ಮಳೆಯಾಗಿದೆ. ರಾಯಚೂರು ಮತ್ತು ಕೊಳ್ಳೇಗಾಲದಲ್ಲಿ 5 ಸೆಂ. ಮೀ. ಮಳೆಯಾಗಿದೆ.
ಶಿರಾದಲ್ಲಿ 5, ಮಂಗಳೂರು, ಚಿಂಚೋಳಿ, ವಿರಾಜಪೇಟೆಯಲ್ಲಿ 3 ಸೆಂ. ಮೀ. ಮಳೆಯಾಗಿದೆ. ಸುಳ್ಯ, ಮಡಿಕೇರಿ, ನೆಲಮಂಗಲ, ಶಿಢ್ಲಘಟ್ಟ, ಕುಣಿಗಲ್ನಲ್ಲಿ ತಲಾ 1 ಸೆಂ. ಮೀ. ಮಳೆಯಾಗಿದೆ.
ಎಷ್ಟು ಹಾನಿಯಾಗಿದೆ?; ಕಲಬುರಗಿ ಮತ್ತು ಬೀದರ್ ಜಿಲ್ಲೆಯಲ್ಲಿ ಸುರಿದ ಮಳೆಯಿಂದಾಗಿ ಇದುವರೆಗೂ 2.64 ಲಕ್ಷ ಹೆಕ್ಟೇರ್ ಬೆಳೆ ಹಾನಿಯಾಗಿದೆ. ಕಲಬುರಗಿ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ 5.3 ಲಕ್ಷ ಹೆಕ್ಟೇರ್ ಬಿತ್ತನೆ ಮಾಡಲಾಗಿತ್ತು. ಇದರಲ್ಲಿ 1.04 ಲಕ್ಷ ಹೆಕ್ಟೇರ್ ಬೆಳೆ ನಾಶವಾಗಿದೆ.
ಬೀದರ್ ಜಿಲ್ಲೆಯಲ್ಲಿ ಬಿತ್ತನೆ ಮಾಡಿದ್ದ 3.70 ಲಕ್ಷ ಹೆಕ್ಟೇರ್ನಲ್ಲಿ 1.60 ಲಕ್ಷ ಹೆಕ್ಟೇರ್ ಬೆಳೆ ನೀರು ಪಾಲಾಗಿದೆ. ಸೆಪ್ಟೆಂಬರ್ ತಿಂಗಳಿನಲ್ಲಿ ಸರಾಸರಿ 179 ಮಿ. ಮೀ. ಮಳೆಯಾಗಬೇಕಿತ್ತು. ಆದರೆ 261 ಮಿ. ಮೀ. ಮಳೆಯಾಗಿದೆ.